ಇಂಧನ ಸ್ವಾವಲಂಬನೆಗೆ ಹೊಂಗೆ ಮರ

ಇಂಧನ ಸ್ವಾವಲಂಬನೆಗೆ ಹೊಂಗೆ ಮರ

ಹೊಂಗೆ ಮರ (Pongamia pinnata) ಭಾರತಾದ್ಯಂತ ಬೆಳೆಯಬಲ್ಲ ಒಂದು ಮರವಾಗಿದ್ದು ಇಂಧನ ಸ್ವಾವಲಂಬನೆ, ಗ್ರಾಮೀಣ ಅಭಿವೃದ್ಧಿ, ಅರಣ್ಯೀಕರಣ, ಸಾವಯವ ಕೃಷಿಗೆ ಪೂರಕವಾದ ಮರವಾಗಿ ಕಂಡುಬರುತ್ತದೆ.  ಹೊಂಗೆ ಮರವು ನೆಟ್ಟ ನಾಲ್ಕೈದು ವರ್ಷಗಳಲ್ಲಿ ಇಳುವರಿಯನ್ನು ಕೊಡಲು ಆರಂಭಿಸುತ್ತದೆ.  ಹತ್ತು ವರ್ಷಗಳ ನಂತರ ಒಂದು ಮರವು 10ರಿಂದ 100 ಕೆಜಿ ಬೀಜವನ್ನು ಕೊಡಬಲ್ಲದು.  ಈ ಮರದ ಬೇರುಗಳು 10 ಮೀಟರ್ ಅಳಕ್ಕೂ ಇಳಿದು ನೀರನ್ನು ಪಡೆಯಬಲ್ಲುದಾದುದರಿಂದ ಒಣಪ್ರದೇಶಗಳಲ್ಲೂ ಬೆಳೆಯಬಲ್ಲದು.  ಉತ್ತಮವಾಗಿ ಬೆಳವಣಿಗೆಯಾದ  ಹತ್ತು ಹೊಂಗೆ ಮರಗಳಿಂದ ನೆಟ್ಟ ಹತ್ತು ವರ್ಷದ ನಂತರ ವಾರ್ಷಿಕ 250 ಲೀಟರ್ ಎಣ್ಣೆ, 600 ಕೆಜಿ ಹಿಂಡಿ, 1250 ಕೆಜಿ ಸಾವಯವ ಬಯೋಮಾಸ್ ಗೊಬ್ಬರ ದೊರಕಬಲ್ಲದು.  ಒಂದು ಗ್ರಾಮದಲ್ಲಿ ಕೃಷಿಗೆ ಬಳಸದ ಒಣ ಪ್ರದೇಶ/ಬೀಳು ಭೂಮಿಯಲ್ಲಿ ಹೊಂಗೆ ಮರಗಳನ್ನು ಬೆಳೆಸಿ ಅದರಿಂದ ಲಭ್ಯವಾಗುವ ಬೀಜಗಳಿಂದ ಎಣ್ಣೆಯನ್ನು ಸ್ಥಳೀಯವಾಗಿಯೇ ತೆಗೆದು ಡೀಸೆಲ್ ಜನರೇಟರ್ ಬಳಸಿ ವಿದ್ಯುತ್ ತಯಾರಿಸಿ ಗ್ರಾಮೀಣ ನೀರಾವರಿ, ಮನೆ ಉಪಯೋಗಕ್ಕೆ ವಿದ್ಯುತ್ ಪಡೆಯಲು ಸಾಧ್ಯವಿದೆ ಅಥವಾ ಗ್ರಾಮೀಣರು ಹೊಂದಿರುವ ಡೀಸೆಲ್ ವಾಹನಗಳಿಗೆ ಇಂಧನವಾಗಿ ಬಳಸಬಹುದು, ಟ್ರಾಕ್ಟರ್ ಇತ್ಯಾದಿಗಳಲ್ಲೂ ಇಂಧನವಾಗಿ ಬಳಸಿ ಸ್ವಾವಲಂಬನೆಯನ್ನು ಸಾಧಿಸಬಹುದು.


ಹೊಂಗೆ ಮರವು ಬರನಿರೋಧಕವಾಗಿದ್ದು ವ್ಯವಸಾಯಕ್ಕೆ ಬಳಸದ ಒಣ ಬೀಳು ಭೂಮಿಯಲ್ಲೂ ಬೆಳೆಯಬಲ್ಲುದಾದುದರಿಂದ ಇದನ್ನು ಅಂಥ ಪ್ರದೇಶಗಳಲ್ಲಿ ಬೆಳೆಸಿ ರೈತರು ತಮ್ಮ ಇಂಧನ ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದು.  ಇದು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಹೀರಿ ಬೆಳೆಯುವುದರಿಂದ ಇಂಗಾಲದ ಡೈ ಆಕ್ಸೈಡ್ ಹೆಚ್ಚಳದಿಂದ ಉಂಟಾಗುವ ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಸಹಾಯಕ.  ಹೊಂಗೆಯ ಎಣ್ಣೆಯನ್ನೇ ಡೀಸೆಲ್ ವಾಹನಗಳಲ್ಲಿ, ಪಂಪುಗಳಲ್ಲಿ, ವಿದ್ಯುಜ್ಜನಕ, ಟ್ರ್ಯಾಕ್ಟರ್ಗಳಲ್ಲಿ ಬಳಸುವುದರಿಂದ ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್ ಅನ್ನು ಪಳೆಯುಳಿಕೆ ಇಂಧನ ಉಪಯೋಗಿಸಿದಾಗ ಆಗುವಂತೆ ಹೆಚ್ಚುವರಿಯಾಗಿ ಸೇರಿಸುವುದನ್ನು ನಿವಾರಿಸಿದಂತೆ ಆಗುತ್ತದೆ.  ಕರ್ನಾಟಕದಲ್ಲಿ ವ್ಯವಸಾಯಕ್ಕೆ ಬಳಸದ ಲಕ್ಷಾಂತರ ಎಕರೆಗಳ ಪಾಳು ಭೂಮಿ ಇದೆ.  ಇಲ್ಲೆಲ್ಲಾ ಹೊಂಗೆಯನ್ನು ಬೆಳೆಸಿ ಕೃಷಿಕರ ಆದಾಯವನ್ನು ಹೆಚ್ಚಿಸಲು ಸಾಧ್ಯವಿದೆ.  ಹೊಂಗೆ ಮರವು ಲೆಗ್ಯೂಮ್ ಜಾತಿಗೆ ಸೇರಿದ ಮರವಾದುದರಿಂದ ಇದರ ಬೇರುಗಳಲ್ಲಿ ಸಾರಜನಕ ಸ್ಥಿರೀಕರಿಸುವ ಗಂಟುಗಳು ಇರುವ ಕಾರಣ ನೆಲದ ಫಲವತ್ತತೆಯನ್ನು ಹೆಚ್ಚಿಸಲು ಸಹಾಯಕ.  ಇದರ ಬೇರುಗಳು ಇತರ ಬೆಳೆಗಳೊಂದಿಗೆ ಸ್ಪರ್ಧಿಸುವುದಿಲ್ಲವಾದ ಕಾರಣ ಇದನ್ನು ಹೊಲಗಳ ಬದಿಯಲ್ಲಿಯೂ ಬೆಳೆಸಬಹುದು.  ಈ ಮರವು 100 ವರ್ಷಗಳವರೆಗೆ ಬದುಕುವುದರಿಂದ ದೀರ್ಘ ಕಾಲ ಫಸಲನ್ನು ಪಡೆಯಬಹುದು.  ಕೃಷಿಕರಿಗೆ ಇಂಧನ ಸ್ವಾವಲಂಬನೆಗೆ ಸಹಾಯಕವಾಗಬಲ್ಲ ಹೊಂಗೆ ಮರವನ್ನು ರಾಜ್ಯದ ಎಲ್ಲೆಡೆ ಬೆಳೆಸುವ ಕುರಿತು ಮಾಧ್ಯಮಗಳು ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ.  ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಹೊಂಗೆ ಮರದ ಹೆಚ್ಚು ಇಳುವರಿ ಕೊಡುವ ಬೀಜ ಹಾಗೂ ಸಸಿಗಳನ್ನು ಒದಗಿಸಲು ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಕೃಷಿ ವಿಶ್ವ ವಿದ್ಯಾನಿಲಯಗಳು ಹಾಗೂ ಸ್ವಯಂಸೇವಾ ಸಂಘಟನೆಗಳು ಮುಖ್ಯ ಪಾತ್ರ ವಹಿಸಬಹುದಾಗಿದೆ.


ದಾಂಡೇಲಿಯ ಫೆರ್ರೋಅಲ್ಲೋಯ್ ಕಾರ್ಖಾನೆಯ ಒಂದು ಮೆಗಾವ್ಯಾಟ್ ಸಾಮರ್ಥ್ಯದ ಐದು ಡೀಸೆಲ್  ವಿದ್ದ್ಯುಜ್ಜನಕಗಳನ್ನು ಹೊಂಗೆ ಎಣ್ಣೆಯಿಂದಲೇ ನಡೆಯುವಂತೆ ಬದಲಾಯಿಸಿ 2001ರಲ್ಲಿ 7,60,000 ಕಿಲೋವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗಿದೆ.  ಇದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ ಅವರ ಹೊಂಗೆ ಎಣ್ಣೆಯನ್ನು ಇಂಧನವಾಗಿ ಬಳಸುವ ಕುರಿತಾದ ಪ್ರಯೋಗಗಳಿಂದ ಪ್ರೇರಿತವಾಗಿತ್ತು.  ಇವರೇ ಕಗ್ಗನಹಳ್ಳಿಯಲ್ಲಿ 63 ಕೆ.ವಿ.ಎ. ಸಾಮರ್ಥ್ಯದ ಎರಡು ವಿದ್ದ್ಯುಜ್ಜನಕಗಳನ್ನು ಸ್ಥಳೀಯವಾಗಿ ಬೆಳೆದ ಹೊಂಗೆ ಬೀಜದ ಎಣ್ಣೆಯಿಂದಲೇ ನಡೆಸಿ 440 ವೋಲ್ಟಿನ ಪ್ರತ್ಯೇಕ ಗ್ರಿಡ್ದನ್ನು ಸ್ಥಾಪಿಸಿ 40 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 20 ಬೋರುವೆಲ್ಲುಗಳನ್ನು ಕೊರೆಯಿಸಿ ಇದೇ ವಿದ್ಯುತ್ತಿನಿಂದ ನೀರಾವರಿ ವ್ಯವಸ್ಥೆಯನ್ನು ಮಾಡಿ ತೋರಿಸಿದ್ದಾರೆ.  ಇಂಥ ಪ್ರಯೋಗಗಳನ್ನು ರಾಜ್ಯದ ಎಲ್ಲೆಡೆ ಮಾಡಬೇಕಾದ ಅಗತ್ಯ ಇದೆ.  ಇದರಿಂದ ವಿದ್ಯುತ್ತಿಗೆ ಕೃಷಿ ವಲಯದಿಂದ ಇರುವ ಬೇಡಿಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಾಧ್ಯ.

Comments

Submitted by H A Patil Thu, 10/04/2012 - 12:32

ಆನಂದ ರವರಿಗೆ ವಂದನೆಗಳು ಹೊಂಗೆಯ ಮರದ ಕುರಿತು ಮನಮುಟ್ಟುವಂತೆ ಬರೆದಿದ್ದೀರಿ, ಹೊಂಗೆಯ ಎಣ್ಣೆ ಪರ್ಯಾಯ ಇಂಧನಕ್ಕೆ ಹೆಳಿ ಮಾಡಿಸಿದ ಸಸ್ಯ ಪ್ರಬೇಧದ ಪೈಕಿ8 ಒಂದು, ಇದಕ್ಕೆ ಆಡು ಭಾಷೆಯಲ್ಲಿ ಹುಲುಗಲ ಮರ ಎಂದೂ ಕರೆಯುತ್ತಾರೆ. ನಾವು ಬಾಲ್ಯದ ದಿನಮಾನಗಳಲ್ಲಿ ಹುಲುಗಲ ಬೀಜ ಗಳನ್ನು ಸಂಗ್ರಹಿಸಿ ತಗರುತ್ತಿದ್ದೆವು. ಹೊಂಗೆ ಮರದ ಬುಡದಲ್ಲಿಯ ಶಯನ ಒಂದು ಸೊಗಸಾದ ಅನುಭವ. ಇದು ಕವಿಗಳಿಗೂ ಸಹ ಪ್ರಿಯ ಅದಕೆ ಅಲ್ಲವೆ ಕವಿ ಬೇಂದ್ರೆ " ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ " ಎಂದು ಹಾಡಿದ್ದು. ಸೊಗಸಾದ ಲೇಖನ ಧನ್ಯವಾದಗಳು.
Submitted by Shreekar Thu, 10/04/2012 - 12:50

ಕುತೂಹಲಕಾರಿ, ಉಪಯೋಗಕರ ಬರಹ ! ಸೋಲಾರ್ ಪವರ್, ವಿಂಡ್ ಪವರ್ ಪ್ರಾಜೆಕ್ಟ್ ಗಳು ಜನಪ್ರಿಯವಾಗಿವೆ. ಆದರೆ, ಇವುಗಳಿಗೆ ಕೋಟ್ಯಾಂತರ ರೂಪಾಯಿಗಳ ಬಂಡವಾಳ ಬೇಕಾಗುತ್ತದೆ. ಉದಾಹರಣೆಗೆ ಬಂಗಾರಪೇಟೆ ಬಳಿಯ ಯೆಳೆಸಂದ್ರದಲ್ಲಿ KPCL ನವರು ಸ್ಥಾಪಿಸಿರುವ 3 MW ಉತ್ಪಾದನಾ ಸಾಮರ್ಥ್ಯದ ಘಟಕಕ್ಕೆ 59 ಕೋಟಿ ರೂಪಾಯಿ ಖರ್ಚಾಯಿತು. ಆದ್ದರಿಂದಲೇ, ಸೋಲಾರ್ ಪವರ್, ವಿಂಡ್ ಪವರ್ ಪ್ರಾಜೆಕ್ಟ್ ಗಳಿಗೆ ಆಕರ್ಷಕ ಸಬ್ಸಿಡಿಗಳು, ಕಡಿಮೆ ಬಡ್ಡಿಯ ದೀರ್ಘಾವಧಿ ಸಾಲಗಳು ಲಭ್ಯವಿವೆ. ಇವುಗಳಿಗೆ ಹೋಲಿಸಿದರೆ, ಹೊಂಗೆಮರದ ಇಂಧನಮೂಲಕ್ಕೆ ಬೇಕಾದುದು ಜಮೀನು ಮತ್ತು ಐದು ವರ್ಷಗಳ ತಾಳ್ಮೆ ಮಾತ್ರ. ಈ ಬರಹವನ್ನು ಸೋಲಾರ್ ಪವರ್ ಕನ್ಸಲ್ಟೆಂಟ್ ಇಬ್ಬರಿಗೆ ಕಳಿಸಿದ್ದೇನೆ.
Submitted by sathishnasa Thu, 10/04/2012 - 12:51

ನೀವು ಹೇಳಿರುವುದೆಲ್ಲ ಸರಿ ಆದರೆ ಇದನ್ನು ನಮ್ಮ ಆಳುವ ವರ್ಗದವರು ಅಳವಡಿಸಿಕೊಳ್ಳಲು ಬಿಡುವುದಿಲ್ಲ ಯಾಕೆಂದರೆ ಅವರುಗಳಿಗೆ ನಾವು "ಸ್ವಾವಲಂಭಿ" ಗಳಾಗುವುದು ಬೇಕಿಲ್ಲ.ಒಳ್ಳೆಯ ಜಾಗೃತಿ ಮೂಡಿಸುವ ಲೇಖನ. ಧನ್ಯವಾದಗಳೊಂದಿಗೆ .....ಸತೀಶ್
Submitted by anand33 Fri, 10/05/2012 - 10:30

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ೨೦೦೧ರಲ್ಲಿಯೆ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ ಅವರು ಹೊಂಗೆ ಎಣ್ಣೆಯ ಇಂಧನ ಸಾಧ್ಯತೆಗಳ ಬಗ್ಗೆ ಪ್ರಯೋಗ ಮಾಡಿ ತೋರಿಸಿದ್ದರೂ ಇದರ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಜಾಗೃತಿ ಹಾಗೂ ಮಾಹಿತಿ ಜನರಿಗೆ ತಲುಪಿಲ್ಲ. ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ಜನರನ್ನು ತಲುಪುವ ಟಿವಿ ಮಾಧ್ಯಮ ಇಂಥ ಯಶೋಗಾಥೆಗಳನ್ನು ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ ತೋರಿಸಲು ಸಾಧ್ಯವಿದೆ. ಡಾ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗ ಬಯೋಡೀಸೆಲ್ ಕುರಿತು ಹೆಚ್ಚಿನ ಆಸಕ್ತಿ ವಹಿಸಿದ್ದರು. ಜತ್ರೋಪ ಗಿಡದ ಬಯೋ ಡೀಸೆಲ್ ಬಗ್ಗೆ ಒಮ್ಮೆ ಹೆಚ್ಚಿನ ಪ್ರಚಾರ ಕಂಡುಬಂದಿತ್ತು. ಆದರೆ ಜತ್ರೋಪ ನಿರೀಕ್ಷಿತ ಇಳುವರಿ ನೀಡುತ್ತಿಲ್ಲ ಹಾಗೂ ಎಲ್ಲ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ ಎಂದು ಕಂಡುಬಂದಿದೆ. ಬಹುಶ: ಹೊಂಗೆ ಮರವು ಎಲ್ಲ ಕಡೆ ಬೆಳೆಯಬಲ್ಲುದು (ಈ ಕುರಿತು ಪ್ರಯೋಗ ಮಾಡಿಯೇ ಹೇಳಬೇಕಷ್ಟೆ). ಇದು ತನಗೆ ಬೇಕಾದ ಸಾರಜನಕವನ್ನು ತನ್ನ ಬೇರಿನ ಗಂಟುಗಳಲ್ಲಿ ನೆಲೆಸುವ ಬ್ಯಾಕ್ಟೀರಿಯದಿಂದ ಪಡೆಯಬಲ್ಲುದಾದುದರಿಂದ ಇದರ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಹಾಗೂ ಇದಕ್ಕೆ ಈ ಕಾರಣದಿಂದಾಗಿ ಸಾರಜನಕ ಗೊಬ್ಬರ ನೀಡಬೇಕಾದ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಬಯೋಡೀಸೆಲ್ ನೀಡಬಲ್ಲ ಮರಗಳನ್ನು ಬೆಳೆಸುವ ಪ್ರಾತ್ಯಕ್ಷಿಕೆ ತೋರಿಸುವ ಕಾರ್ಯಕ್ರಮ ನಡೆಯುತ್ತಿದೆಯಾದರೂ ಇದಕ್ಕೆ ಸಾಕಷ್ಟು ಪ್ರಚಾರ ನೀಡಲಾಗುತ್ತಿಲ್ಲ. ಉದಾಹರಣೆಗೆ ಹಾಸನದ ಮಡೆನೂರಿನಲ್ಲಿ ಜೈವಿಕ ಇಂಧನ ಪಾರ್ಕ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದರ ಬಗ್ಗೆ ಟಿವಿ ವಾಹಿನಿಗಳು ಕಾರ್ಯಕ್ರಮ ಮಾಡಿ ಪ್ರಸಾರ ಮಾಡಿದರೆ ಹೆಚ್ಚಿನ ಜನರಿಗೆ ತಿಳಿಯಲು ಸಾಧ್ಯ.