ಇಡಗುಂಜಿ ಗಣಪತಿ ದೇವಸ್ಥಾನ

ಇಡಗುಂಜಿ ಗಣಪತಿ ದೇವಸ್ಥಾನ

ಬರಹ

ಕರಾವಳಿಯ ಪ್ರಸಿದ್ಧ ಆರು ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿಗೆ ವಿಶೇಷ ಸ್ಥಾನ. ಏಕೆಂದರೆ ಇಲ್ಲಿಗೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಚೌತಿಯಂದು ಹಾಗೂ ಸಂಕಷ್ಟಿಯಂದು ೫೦೦೦೦ ಕ್ಕೂ ಮೇಲ್ಪಟ್ಟಿನ ಜನಸಾಗರ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ೧೪ ಕಿ.ಮೀ ದೂರವಿರುವ ನಿಸರ್ಗ ರಮಣೀಯ ಕ್ಷೇತ್ರ. ಹಿಂದೆ ಈ ಕ್ಷೇತ್ರಕ್ಕೆ ಇಡಕುಂಜಾವನ, ಕುಂಜವನ, ಗುಂಜಾವನ ಎಂಬ ಪುರಾತನ ಹೆಸರುಗಳಿವೆ. ಕರಾವಳಿಯ ಹಲವು ಕ್ಷೇತ್ರಗಳಂತೆ ಈ ಕ್ಷೇತ್ರಕ್ಕೂ ಪುರಾತನ ಹೆಸರುಗಳಿವೆ.

ಸುತ್ತಲೂ ಬೆಟ್ಟಗಳಿಂದ ಆವರಿಸಿರುವ ಇಡಗುಂಜಿ ದೇವಸ್ಥಾನವು ಇಳಿಜಾರಿನ ಪ್ರದೇಶದಲ್ಲಿದೆ. ಇಲ್ಲಿನ ದ್ವಿಬಾಹುಗಣಪತಿಯ ವಿಗ್ರಹವು ಪೂರ್ವಾಭಿಮುಖವಾಗಿ ಪ್ರತಿಷ್ಠೆಗೊಂಡಿದೆ. ಬಲಗೈಯಲ್ಲಿ ಪದ್ಮ ಹಾಗೂ ಎಡಗೈಯಲ್ಲಿ ಮೋದಕ ಹಿಡಿದಿರುವ, ನಿಂತಿರುವ ವಿಶೇಷ ಗಣಪತಿ. ಕಪ್ಪು ಕಲ್ಲಿನ ವಿಗ್ರಹ ಮೂರ್ತಿಯಿದು. ಪಕ್ಕದಲ್ಲಿ ಯಾವುದೇ ಈಶ್ವರನ ದೇವಸ್ಥಾನ ಇದ್ದಂತಿಲ್ಲ. ದೇವಸ್ಥಾನದ ಮುಂಭಾಗದಲ್ಲಿ ವಾಲಖಿಲ್ಯ ಎಂಬ ಪಾಠಶಾಲೆಯಿದೆ. ಇನ್ನೂ ಸ್ವಲ್ಪ ಮುಂದೆ ಪುಷ್ಕರಿಣಿ ಇದೆ. ಎಡಭಾಗದಲ್ಲಿ ಯಾಗಶಾಲೆ ಇದೆ. ಮೇಲಿನ ಪ್ರದೇಶದಲ್ಲಿ ಮಯೂರ ಪ್ರಸಾದ ಭೋಜನ ಶಾಲೆಯಿದೆ.

ಪೌರಾಣಿಕ ಹಿನ್ನೆಲೆ:
ಒಮ್ಮೆ ಲೋಕಸಂಚಾರಿಯಾದ ನಾರದರು ಪರಶುರಾಮ ಕ್ಷೇತ್ರಗಳಲ್ಲಿ ಅಡ್ಡಾಡಿದರು. ಅಲ್ಲಿನ ಕ್ಷೇತ್ರ, ತೀರ್ಥ, ತಪೋವನಗಳು ಅವರ ಕಣ್ಣಿಗೆ ಬಿದ್ದವು. ಆದರೆ ಈ ಕ್ಷೇತ್ರಗಳ ಮಹತ್ವವನ್ನು ವರ್ಣಿಸುವವರು ಬಹಳ ವಿರಳವಾಗಿದ್ದರು. ನಂತರ ನಾರದರು ಹಿಮಾಲಯದ ಕಡೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರಿಗೆ ವಾಲಖಿಲ್ಯ ಋಷಿಗಳ ಭೇಟಿಯಾಯಿತು. ಅನೇಕ ವರ್ಷಗಳಿಂದ ಉಗ್ರ ತಪಸ್ಸು ಮಾಡಿದ್ದರೂ, ಸಿದ್ಧಿ ಇಲ್ಲದೆ ಅತೃಪ್ತರಾಗಿ ಬಳಲುತ್ತಿದ್ದರು. ಇದಕ್ಕೆ ಕಾರಣವನ್ನು ನಾರದ ಮುನಿಗಳು ಕೇಳಿದಾಗ ’ನನ್ನ ತಪಸ್ಸು ಪ್ರಖ್ಯಾತಿಯನ್ನು ಪಡೆದಿದ್ದರೂ ಸಿದ್ಧಿ ಪಡೆಯಲಾಗಲಿಲ್ಲ. ತಮ್ಮ ಸಲಹೆಯನ್ನು ನೀಡಿ’ ಎಂದು ವಿನಂತಿಸಿಕೊಂಡರು. ನಾರದರು ಧನ್ಯಮಗ್ನರಾದಾಗ ಅವರ ಮನಸ್ಸಿಗೆ ಮೂಡಿದ್ದು ಶ್ರೀ ರಾಮನ ಶರದಿಂದ ಉದ್ಭವಿಸಿದ ಶರಾವತಿ ನದಿಯ ತೀರದೊಳಗಿನ ಪ್ರದೇಶಗಳು. ಅಂತೆಯೇ ವಾಲಖಿಲ್ಯ ಮುನಿಯನ್ನು ಅಲ್ಲಿಗೆ ಕರೆದುಕೊಂಡು ಹೋದರು. ’ಶ್ರೀ ಮಹಾಗಣಪತಿಯನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ’ ಎಂದು ಹೇಳಿ ವಾಲಖಿಲ್ಯರನ್ನು ಅಲ್ಲೇ ಬಿಟ್ಟು ನಾರದರು ಕೈಲಾಸದ ಕಡೆಗೆ ಹೊರಟರು. ಕೈಲಾಸಕ್ಕೆ ನಾರದರು ತಲುಪಿದರು. ’ಪರಶುರಾಮ ಕ್ಷೇತ್ರದಲ್ಲಿ ಶರಾವತಿ ನದಿಯ ಬಳಿ ನನ್ನ ಯೋಗದಿಂದಾಗಿ ಇಡಕುಂಜಾವನ ಎಂದು ಪ್ರಸಿದ್ಧಿಯಾಗಲಿದೆ. ಅಲ್ಲಿ ವಾಲಖಿಲ್ಯ ಮುನಿಯನ್ನು ಬಿಟ್ಟು ಬಂದಿದ್ದೇನೆ. ಅವರು ತಪೋಸಿದ್ಧಿಯಿಲ್ಲದೆ ಬಳಲುತ್ತಿದ್ದಾರೆ. ಆದ್ದರಿಂದ ವಿಘ್ನನಾಶಕನಾದ ಶ್ರೀ ಮಹಾಗಣಪತಿಯು ಅಲ್ಲಿ ಕ್ಷೇತ್ರಾಧೀಶನಾಗಿ ನಿಲ್ಲಬೇಕು’ ಎಂದು ಶಿವ-ಪಾರ್ವತಿಯರನ್ನು ನಾರದರು ಬೇಡಿಕೊಂಡರು. ಇದರ ಪರಿಣಾಮವಾಗಿ ಇಡಗುಂಜಿಯಲ್ಲಿ ಗಣಪತಿಯು ಕ್ಷೇತ್ರಾಧೀಶನಾದನು. ಪರಮೇಶ್ವರ ಪರಿವಾರದ ದರ್ಶನ ಭಾಗ್ಯದಿಂದ ವಾಲಖಿಲ್ಯರು ಮಹಾಗಣಪತಿಯ ಸ್ತೋತ್ರ ಮಾಡಿದರು. ಅಂತೆಯೇ ’ನಿಮ್ಮ ಕೀರ್ತಿಯು, ಈ ಸ್ಥಾನ ಮಹಿಮೆಯು ಲೋಕ ಪ್ರಸಿದ್ಧಿಯಾಗಲಿ’ ಎಂದು ಗಣಪನು ಹರಸಿದನು.

ಹೋಗುವುದು ಹೇಗೆ:
ಉಡುಪಿಯ ಕಡೆಯಿಂದ ಬರುವವರಿಗೆ ಮೊದಲು ಮಂಕಿ ಎಂಬ ಊರು ಸಿಗುತ್ತದೆ. ಅಲ್ಲಿಂದ ನಾಲ್ಕು ಕಿಲೋಮೀಟರ್ ಹೆದ್ದಾರಿಯಲ್ಲಿ ಸಂಚರಿಸಿದರೆ ಇಡಗುಂಜಿಯ ಸ್ವಾಗತ ಗೋಪುರ ಸಿಗುತ್ತದೆ. ಇಲ್ಲಿಂದ ಒಳಹಾದಿಯಾಗಿ ನಾಲ್ಕು ಕಿಲೋಮೀಟರ್ ಸಂಚರಿಸಿದರೆ ದೇವಸ್ಥಾನ ಸಿಗುತ್ತದೆ

ಬೆಂಗಳೂರಿನಿಂದ ಬರುವವರು ಹೊನ್ನಾವರದಲ್ಲಿ ಇಳಿದುಕೊಂಡು ಅಲ್ಲಿಂದ ದಕ್ಷಿಣಕ್ಕೆ ೧೦ ಕಿ.ಮೀ ಹೆದ್ದಾರಿಯಲ್ಲಿ ಸಂಚರಿಸಿದರೆ ದೇವಸ್ಥಾನದ ಸ್ವಾಗತ ಗೋಪುರ ಕಾಣಿಸುತ್ತದೆ

ಇಡಗುಂಜಿಗೆ ಹೊನ್ನಾವರದಿಂದ ಸರಕಾರಿ ಬಸ್ಸುಗಳು ಆಗಾಗ ಇದೆ. ಹೆಚ್ಚಾಗಿ ಮ್ಯಾಕ್ಸಿ-ಕ್ಯಾಬ್‍ಗಳನ್ನು ಅವಲಂಭಿಸಬೇಕು. ಖಾಸಗಿ ವಾಹನ/ಟ್ಯಾಕ್ಸಿಯಲ್ಲಿ ಬಂದರೆ ಒಳ್ಳೆಯದು.

ದರ್ಶನದ ಸಮಯ: ಬೆಳಿಗ್ಗೆ ೮ ರಿಂದ ರಾತ್ರಿ ೮. ಮಧ್ಯಾಹ್ನ ೧೨:೩೦ ಇಂದ ೩ ಘಂಟೆಯವರೆಗೆ ದೇವಸ್ಥಾನ ಮುಚ್ಚಿರುತ್ತದೆ.

ಹತ್ತಿರದ ರೈಲು ನಿಲ್ದಾಣ: ಹೊನ್ನಾವರ

ಹತ್ತಿರದ ವಿಮಾನ ನಿಲ್ದಾಣ: ಮಂಗಳೂರು ಹಾಗೂ ಗೋವಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೆಚ್ಚು-ಕಮ್ಮಿ ಸಮಾನ ದೂರದಲ್ಲಿದೆ. ಶಿವಮೊಗ್ಗ ವಿಮಾನ ನಿಲ್ದಾಣವಾದ ನಂತರ, ಅದೇ ಹತ್ತಿರವಾಗುವುದು.

ಮಧ್ಯಾಹ್ನ ಊಟ: ಭಕ್ತಾದಿಗಳೆಲ್ಲರಿಗೂ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ ಇದೆ. ಮಧ್ಯಾಹ್ನ ಮಹಾಪೂಜೆಗೆ ಒಂದು ಘಂಟೆ ಮುಂಚೆ ದೇವಾಲಯದ ಸೇವಾ ಕಚೇರಿಯಲ್ಲಿ ಉಚಿತ ಊಟದ ಪಾಸುಗಳನ್ನು ವಿತರಿಸುತ್ತಾರೆ. ಅದನ್ನು ಪಡೆದೆ ಊಟಕ್ಕೆ ತೆರಳಬೇಕು. ಇದರ ಬಗ್ಗೆ ದೇವಸ್ಥಾನದಲ್ಲಿ ಪ್ರಕಟಣೆ ಕೂಡ ನೀಡುತ್ತಾರೆ.

ಅತಿಥಿ ಗೃಹಗಳು: ಉಳಿದುಕೊಳ್ಳಲು ದೇವಸ್ಥಾನದಲ್ಲೇ ಅತಿಥಿ ಗೃಹವಿದೆ. ಇಲ್ಲವಾದಲ್ಲಿ ಹೊನ್ನಾವರದಲ್ಲಿ ಅನೇಕ ಅತಿಥಿ ಗೃಹಗಳಿವೆ.

ಹತ್ತಿರದ ಪ್ರೇಕ್ಷಣೀಯ ಸ್ಥಳಗಳು: ಅಪ್ಸರಕೊಂಡ ಸಮುದ್ರ ತೀರ, ಮುರ್ಡೇಶ್ವರ, ಶರಾವತಿ ನದಿ ತೀರ, ಗೋಕರ್ಣ, ಓಂ ಸಮುದ್ರ ತೀರ

ಹೆಚ್ಚಿನ ಮಾಹಿತಿ: http://www.idagunjidevaru.com/home.php

-------------------------------------------------------------------------------------------------------------

ಪೌರಾಣಿಕ ಹಿನ್ನೆಲೆ ಮಾಹಿತಿ: ಕ್ಷೇತ್ರ ಪರಿಚಯ ಪುಸ್ತಕ

ಚಿತ್ರ: ನಂದಕುಮಾರ