ಇದೆಲ್ಲಾ ಸಾಧ್ಯವಾದದ್ದೇ ಆದರೆ...

ಇದೆಲ್ಲಾ ಸಾಧ್ಯವಾದದ್ದೇ ಆದರೆ...

ನೊಂದವರ ನೋವ ನೋಯದವರೆತ್ತ ಬಲ್ಲರೋ,

ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ,

ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ,

ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ,

ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ,

ಸಮಾನತೆಯನ್ನು ಮೂಡಿಸಲಾಗದ ಚರ್ಚೆ,

ಅಮಾನವೀಯತೆಯನ್ನು ದಿಕ್ಕರಿಸಲಾಗದ ಕವಿತೆ,

ಪರಿಸರ ನಾಶವನ್ನು ತಡೆಯಲಾಗದ ಕಥೆ,

ಭ್ರಷ್ಟತೆಯನ್ನು ಹೋಗಲಾಡಿಸಲಾಗದ ಅಂಕಣಗಳು,

ಸಂಬಂಧಗಳನ್ನು ಬೆಸೆಯಲಾಗದ ಕಾದಂಬರಿ,

ವಿಷವಿಕ್ಕುವ ಜನರನ್ನು ಗುರುತಿಸಲಾಗದ ಅಕ್ಷರಗಳು,

ಪ್ರೀತಿಯನ್ನು ಪ್ರೀತಿಸಲಾಗದ ಮನಸ್ಸುಗಳು,

ಮೌಲ್ಯಗಳನ್ನು ನಾಶ ಮಾಡುವ ಪದಗಳು,

ಇತರರ ಮನ ನೋಯಿಸುವ ವಾಕ್ಯಗಳು,

ಕಷ್ಠಗಳನ್ನು ನಿವಾರಿಸಲಾಗದ ಪ್ರವಚನಗಳು,

ದುಷ್ಟತನವನ್ನು ಮೆಟ್ಟಿ ನಿಲ್ಲದ ಭಾಷಣಗಳು,

ಭ್ರಮೆಗಳನ್ನು ಸೃಷ್ಟಿ ಮಾಡುವ ಹರಿಕಥೆಗಳು,

ಸತ್ಯವನ್ನು ಹೇಳಲಾಗದ ಚಿತ್ರಕಲೆ,

ಮಾನವೀಯ ಮೌಲ್ಯಗಳಿಲ್ಲದ ಸಿನಿಮಾ,

ಅವಾಸ್ತವಿಕ ಆದರ್ಶಗಳನ್ನು ತುಂಬುವ ಗ್ರಂಥಗಳು,

ಮನಸ್ಸಿನ ದುಗುಡವನ್ನು ಕಡಿಮೆ ಮಾಡಲಾಗದ ಜ್ಞಾನ,

ಭಾವನೆಗಳನ್ನು ನಿಯಂತ್ರಿಸಲಾಗದ ಭಕ್ತಿ,

ಇವು ನಿಮ್ಮ ಅಭಿವ್ಯಕ್ತಿಯ ಮಾಧ್ಯಮಗಳಾದರೂ,

ಅದನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಿದ್ದರೂ,

ಅದು ಕೇವಲ ನಿಮ್ಮ ಬುದ್ದಿಯ ಪ್ರದರ್ಶನ,

ಸ್ವಾರ್ಥದ ಪ್ರತಿಬಿಂಬ, ಅಹಂನ ತೋರ್ಪಡೆ, 

ಅಂತರಾಳದ ಅಸಹಿಷ್ಣುತೆಯ ಪ್ರಕಟಣೆ,

ಪ್ರಶಸ್ತಿ, ಬಿರುದು ಬಾವಲಿಗಳ ಆಸೆ ಅಷ್ಟೇ,

ಮೇಲೆ ಹೇಳಿದ ಎಲ್ಲವೂ ವ್ಯಕ್ತಿಯ, ಸಮಾಜದ, ದೇಶದ, ವಿಶ್ವದ,

ಜೀವಪರ ಹಿತದೃಷ್ಟಿ ಹೊಂದಿದ್ದರೆ ಮಾತ್ರ ಅದು ನಿಜಕ್ಕೂ,

ನಿಸ್ವಾರ್ಥ ಹೃದಯಗಳ ಆತ್ಮಸಾಕ್ಷಿಯ ಪ್ರತಿಬಿಂಬ,

ಅದು ಸಾಧ್ಯವಾದದ್ದೇ ಆದರೆ, 

ನಿಮ್ಮ ವ್ಯಕ್ತಿತ್ವ, ಉತ್ಕೃಷ್ಟ ಮಟ್ಟದಲ್ಲಿದೆ ಎಂದೇ ಅರ್ಥ.

ಇಲ್ಲದಿದ್ದರೆ....

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ