"ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ನುಡಿಸುತ್ತಿದ್ದನಂತೆ. ಈಗ ಆ ನೀರೋ ಯಾರಿರಬಹುದು? ಈ ಪ್ರಶ್ನೆಗೆ ಉತ್ತರ ಹುಯಡುಕಲು ಯಾರೂ ತಡಕಾಡುವುದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ರಾವ್ ದೇಶ್ಮುಖ್ ಅಂತ ಸುಲಭವಾಗಿ ಹೇಳಿಬಿಡ್ತಾರೆ. ನೂರಾರು ಜನರು ಪ್ರಾಣ ತೆತ್ತು, ದಕ್ಷ ಪೊಲೀಸ್ ಅಧಿಕಾರಿಗಳನ್ನು ಕಳೆದುಕೊಂಡು, ನಮ್ಮ ಸ್ವಾಭಿಮಾನದ ಸಂಕೇತವಾಗಿರುವ ತಾಜ್ ಹೊಟೇಲ್ ದುಸ್ಥಿತಿ ತಲುಪಿರುವಂತ ಸಂದರ್ಭದಲ್ಲಿ ಯಾರು ತಾನೆ ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಗೆ ಯೋಚಿಸುತ್ತಾರೆ ನೀವೇ ಹೇಳಿ.
ಉಗ್ರರ ದಾಳಿಗೆ ಸಿಲುಕಿ ತತ್ತರಿಸುದ್ದ ತಾಜ್ ಹೊಟೇಲ್ನ ಕಥಾವಸ್ತು ಆಧರಿಸಿ ರಾಮ್ಗೋಪಾಲ್ ವರ್ಮಾ ನಿರ್ದೇಶನದಲ್ಲಿ, ತಮ್ಮ ಮಗನನ್ನು ನಾಯಕನಟನನ್ನಾಗಿಸಿ ಸಿನೇಮಾ ಮಾಡಲು ಹೋಗಿದ್ದರಂತೆ ನಮ್ಮ ಮಹಾರಾಷ್ಟ್ರ ಸಿಎಮ್ಮು. ಅಯ್ಯಯ್ಯೋ. ಸಿನಿಮಾ ಮಾಡಲಿಕ್ಕೆ ಇನ್ಯಾವ ಜಾಗನೂ ಸಿಗಲಿಲ್ಲವೇ. ಸಿನಿಮಾ ತೆಗೆಯೋದ್ ಬಿಟ್ರೆ ಇನ್ನೇನು ಹೊಳಿಲೇ ಇಲ್ವಾ. ಜನಸಾಮಾನ್ಯರೂ ಸಹ ಉಗ್ರರು ಜಲಮಾರ್ಗದ ಮೂಲಕ ಹೇಗೆ ಬಂದರು. ಪ್ರತಿಷ್ಠಿತ ಹೊಟೇಲ್ಗಳೇ ಯಾಕೆ ಅವರ ಟಾರ್ಗೆಟ್ ಆದವು. ಅವರ ಬೇಡಿಕೆ ಏನಿತ್ತು. ಹೊಟೇಲ್ ಒಳಗೆ ಸೇರಿಕೊಂಡು ಒತ್ತೆಯಾಳಾಗಿ ಇಟ್ಟುಕೊಳ್ಳಲು ಕಾರಣವೇನು. ಅದರಲ್ಲೂ ಉಗ್ರರು ಬ್ರಿಟನ್ ಮತ್ತು ಅಮೆರಿಕಾದ ಜನರನ್ನೇ ಹುಡುಕಿ ಹುಡುಕಿ ಕೊಂದಿದ್ದೇಕೆ ಎಂಬೆಲ್ಲಾ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿವೆ.
ತಮ್ಮ ಬಂಧು ಬಾಂಧವರನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿರುವ ಕುಟುಂಬಗಳು, ತಂದೆ-ತಾಯಿಯ ಅಗಲಿಕೆಯಿಂದ ಅನಾಥವಾದ ಮಕ್ಕಳು, ಘಟನೆಯಲ್ಲಿ ಉಗ್ರರ ಗುಂಡಿಗೆ ಬಲಿಯಾದ ವೀರಯೋಧರ ಕುಟುಂಬದ ಸ್ಥಿತಿಗತಿ ಈ ದೇಶ್ಮುಖ್ಗೆ ಅರ್ಥವಾಗಲಿಲ್ವಾ. ಈಗ ಆಗಬಾರದ ಅನಾಹುತ ಆಗಿ ಹೋಯಿತು. ಮುಂದಾದರೂ ವಾಣಿಜ್ಯ ನಗರಿಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಯಾವ ಕ್ರಮಕೈಗೊಳ್ಳಬೇಕು ಅನ್ನೋದರ ಬಗ್ಗೆ ಯೋಚಿಸಬೇಕು ಅನ್ನಿಸಲಿಲ್ಲವೇ.
ಮುಂದುವರಿಯುವುದು