ಈ ದೇಶ ರಾಜಕೀಯ ದೊಂಬರಾಟದ ಆಡುಂಬುಲವಾಗಿದೆಯೇ ; ಗೊಂದಲಗಳ ಗೂಡಾಗಿದೆಯೇ...
ಈವರೆಗೆ ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಯಾವೊಂದು ಸಂಘಟನೆಗಳೂ ಸವಾಲಾಗಿ ಪ್ರಶ್ನಿಸಿ ಗೆಲವು ಕಂಡ ಉದಾಹರಣೆಗಳೇ ಇಲ್ಲ!! ಯಾಕೆಂದರೆ, ಇಡೀ ನಮ್ಮ ದೇಶದ ರಾಜಕೀಯ ವ್ಯವಸ್ಥೆಯೇ ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ಅವಲಂಬಿಸಕೊಂಡೇ ಬಂದಿದೆ;ಬೆಳೆದಿದೆ ಹಾಗೂ ಅದನ್ನು ಪೋಷಿಸಿಕೊಂಡರೇನೆ ತಾವು ಅಧಿಕಾರಕ್ಕೆ ಬರುವುದಲ್ಲದೇ ಅಧಿಕಾರಕ್ಕೆ ಸಂಚಕಾರ ಬಂದಾಗಲೆಲ್ಲ ತಾವು ಆರೋಪಿಗಳಾದಾಗ, ತಮ್ಮನ್ನು ತಮ್ಮ ಅಧಿಕಾರವನ್ನೂ ತಾವು ಗಳಿಸಿದ ಕಪ್ಪು ಹಣದಿಂದಲೇ ಉಳಿಸಿಕೊಳ್ಳಲೂ ಸಾಧ್ಯ ಎಂಬುದೇ ರಾಜಕೀಯ ನೀತಿ ಎನಿಸಿಬಿಟ್ಟಿದೆ. ಅದೇ ಕಪ್ಪು ಹಣದಿಂದ ಮತ್ತೆ ಮತ್ತೆ ಚುನಾವಣೆಯಲ್ಲಿ ಗೆಲ್ಲುತ್ತ ಅಧಿಕಾರದಲ್ಲಿ ಮುಂದುವರೆಯುತ್ತ, ಕಡುಸ್ವಾರ್ಥಿಗಳಾಗಿ ಕಪ್ಪು ಧನ ದಾಹಿಗಳೇ ಆಗಿರುವ ರಾಜಕಾರಣಿಗಳು ಬೆಳೆಯುತ್ತಲೆ ಇರುವುದು ದೇಶಕ್ಕೆ ಅದರ ರಕ್ಷಣೆಗೇ ಹಿತಕರವಲ್ಲ. ಯಾವ ಸಚಿವರು ಭ್ರಷ್ಟಾಚಾರದಿಂದ ಎಷ್ಟು ಹೆಚ್ಚು ಕಪ್ಪು ಹಣಗಳಿಸಿದ್ದಾರೆ? ಯಾವ ಪಕ್ಷ ಯಾವೊಂದು ಮಹೋದ್ಯಮಿಯ ಗರಿಷ್ಠ "ಕೊಡುಗೆ"ಯಿಂದಾಗಿ ಅವನ ಕಪಿಮುಷ್ಟಿಯಲ್ಲಿದೆ? ಎಂಬಿತ್ಯಾದಿ ಲೆಕ್ಕಾಚಾರಗಳು ಊಹೆಗೂ ನಿಲುಕಲಾರದಷ್ಟಿವೆಯಲ್ಲ..!
ಹೀಗಾಗಿ ನಮ್ಮ ಪ್ರಜಾಪ್ರಭುತ್ವವು ಬರು ಬರುತ್ತ ವಿರೂಪಗೊಳ್ಳುತ್ತಾ ನರಳುತ್ತಲೇ ಇದೆ. ಅದರ ಸ್ವರೂಪವನ್ನು ಸುಸ್ಥಿತಿಗೆ ತರುವುದಾಗಲೀ ಅಥವಾ ಪೂರ್ಣ ಬದಲಿಸಿ ಹೊಸರೂಪ ಕೊಡುವುದಾಗಲೀ ಸಲಭ ಸಾಧ್ಯವೇನಲ್ಲ. ಹಾಗೆ ನೋಡಿದರೆ, ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವವರಲ್ಲಿ ಬಹುತೇಕ ಕೆಳವರ್ಗದ ಮುಗ್ದರು, ಅನಕ್ಷರಸ್ಥರು ಅಂತಿರಲಿ, ಈಗೀಗ ಹಳ್ಳಿ ಹಳ್ಳಿಗಳಲ್ಲಿ ಪ್ರಬುದ್ಧರಾಗಿರುವ "ನಾಗರೀಕರು" ಸಹ ಯಥಾರಾಜಾ ತಥಾ ಪ್ರಜಾ ಆಗಿಬಿಟ್ಟಿದ್ದಾರೆ! ಇನ್ನು ನಗರ, ಮಹಾನಗರಗಳ ಬೀದಿ ಬೀದಿಗಳಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳು, ಆಟೋ ಚಾಲಕರೂ ಧರ್ಮಕರ್ಮದ ಅಂಜಿಕೆ ತೊರೆದವರೇ ಬಹು ಮಂದಿ ಎಲ್ಲೆಲ್ಲೂಳ ಕಣ್ಣಿಗೆ ರಾಚುತ್ತಾರೆ. ಅಕ್ರಮದಿಂದ ಅನ್ಯಾಯವಾಗಿ ಹಣಗಳಿಸಿದರೇನೂ ತಪ್ಪಲ್ಲ; ಅದೇ ಈಗಿನ ಕಾಲಕ್ಕೆ ಸರಿ ಎಂಬ ನಿಲವು ಅವರದು. ಆದರೇನು ಎಲ್ಲೋ ಒಬ್ಬಿಬ್ಬರು ಸರ್ಕಾರಿ ಉದ್ಯೋಗದಲ್ಲಿರುವ ಗುಮಾಸ್ತರು, ಅಧಿಕಾರಿಗಳು ಹಳ್ಳಿ ಪಟ್ಟಣಗಳಲ್ಲಿ ವ್ಯಾಪಾರಿಗಳು, ನಗರದ ಆಟೊ ಚಾಲಕರು ಮೋಸ ವಂಚನೆಯಿಲ್ಲದೆ ನ್ಯಾಯ ನಿಷ್ಠೂರರಾಗಿ ನಡೆದುಕೊಳ್ಳುವುದನ್ನು ನಾವು ಕಂಡಾಗ ಇನ್ನೂ ಇಲ್ಲಿ ನಂಬಿಕೆ ಎಂಬುದು ಉಳಿದಿದೆ ಅನ್ನಿಸದೇ ಇರುವುದಿಲ್ಲ!. ಅಂಥ ಅಪರೂಪದ ಮನುಷ್ಯರೂ ಅಸಾಹಯಕರಾಗಿ ನಮ್ಮ ದೇಶದ ರಾಜಕೀಯ ವ್ಯವಸ್ಥೆಯನ್ನು ಕಂಡು ವ್ಯಥೆ ಪಡುವಾಗ ನಮ್ಮ ಬಾಯಿಕಟ್ಟಿ ಸಹ ಹೋಗುತ್ತದೆ; ಮೂಕಪ್ರೇಕ್ಷಕರಾಗುತ್ತೇವೆ.
ಅಂದಿಗೂ ಇಂದಿಗೂ ಅಜ್ಞಾನ ಅನಕ್ಷರತೆ ಮತ್ತು ಬಡತನ ವನ್ನು ಬುಡ ಸಹಿತ ಕಿತ್ತೊಗೆಯಲು ಅಸಮರ್ಥವಾಗಿರುವ, ಜನಸಂಖ್ಯಾ ಸ್ಫೋಟದಲ್ಲಿ ಮಾತ್ರ ನಾಗಾಲೋಟ ಕಂಡಿರುವ ಈ ದೇಶವನ್ನು ಭಾರೀ ಬಂಡವಾಳ ಶಾಹಿಗಳು ಮತ್ತು ಕೋಟ್ಯಾನು ಕೋಟಿ ಕಪ್ಪು ಹಣವನ್ನು ವಿದೇಶದ ಬ್ಯಾಂಕುಗಳಲ್ಲಿ ಹೊಂದಿರುವ ಬಹುಮಂದಿ ಆಧಿಕಾರಸ್ಥ ರಾಜಕೀಯ ಹೆಬ್ಬುಲಿಗಳು ತಮ್ಮ ಕಪಿ ಮುಷ್ಟಿಯಲ್ಲಿಟ್ಟು ಕೊಂಡಿದ್ದಾರೆ. ಅವರೇ ನಮ್ಮ ದಿನೇ ದಿನೇ ಪ್ರಜಾಪ್ರಭುತ್ವವನ್ನು ನಗೆಪಾಟಲಾಗೀಡು ಮಾಡಿದ್ದಾರೆ. ನಮ್ಮ ಕಾನೂನು ವ್ಯವಸ್ಥೆಯೂ ಹಾಗೆಯೆ ಇದೆ. ಯಾವೊಂದು ಕ್ರಿಮಿನಲ್ ಕೇಸ್ ಇರಲಿ, ಸಣ್ಣ ಪುಟ್ಟ ಸಿವಿಲ್ ಕೇಸ್ ಗಳೂ ಕೂಡ ಬೇಗ ಇತ್ಯರ್ಥವಾಗದೇ ವರ್ಷಗಟ್ಟಲೇ ತೆಗೆದುಕೊಳ್ಳುತ್ತವೆ. ಎಷ್ಟೋ ಕ್ರಿಮಿನಲ್ ಕೇಸ್ ಗಳು ಕಡತದಲ್ಲೇ ದೂಳು ಹಿಡಿದು ಕಾಣೆಯಾಗಿ ಬಿಡುತ್ತವೆ. ಈಗಿತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ನಮ್ಮ ರಾಜಕೀಯ ವ್ಯವಸ್ಥೆಗೆ ಕನ್ನಡಿ ಹಿಡಿದಿವೆ. ಕಂಪ್ಯೂಟರ್ ಲೆಕ್ಕಾಚಾರಗಳಿಗೂ ಮಿಗಿಲಾಗಿ ಹಿಂದಿನ ಕೈಗಳು ಕೆಲಸಮಾಡುತ್ತಿವೆ. ಹಾಗೇ ತಮ್ಮ ಕೆಲಸ ಆಗುಮಾಡಿಕೊಳ್ಳುವಷ್ಟು ಚತುರ ಚಾಣಕ್ಷತೆಯನ್ನು ಅಹರ್ನಿಶಿ ಕೆಲಸಮಾಡುವ ಕಂಪ್ಯೂಟರ್ ಗಳೂ ಕೂಡ ಸ್ಥಗಿತಗೊಂಡು ತೆಪ್ಪಗಾಗುವಷ್ಟು ಬಂಡವಾಳಶಾಹಿಗಳು ಮೈಗೂಡಿಸಿಕೊಂಡಿದ್ದಾರೆ. ಇದಕ್ಕೊಂದು ಜ್ವಲಂತ ಸಾಕ್ಷಿಯೆಂದರೆ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ಪ್ರತಿ ವರ್ಷವೂ ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರದ ನಡುವೆ ನಡೆಯುವ ಜಟಾಪಟಿಯೇ ರಾಚುತ್ತಿರುತ್ತದೆ. ಸಿಇಟಿ ಕೌನ್ಸಿಲಿಂಗ್ ಕಂಪ್ಯೂಟರೈಸ್ ಆದ ಹೊಸತರಲ್ಲಿ ಪ್ರತಿಭವಂತ ವಿದ್ಯಾರ್ಥಿಗಳಿಗೆ ಅವರ ಬಡ ತಂದೆ ತಾಯಿಗಳು ಪೋಷಕರಿಗೆ ದೊರಕುತ್ತಿದ್ದ ನ್ಯಾಯ ಸಮ್ಮತ ಸೀಟುಗಳ ಹಂಚಿಕೆ ಇಂದಿಗೆ ಕಂಡುಬರುತ್ತಿಲ್ಲವೆಂಬುದೇ.... ಶಿಕ್ಷಣ ಶುಲ್ಕ ಯದ್ವಾ ತದ್ವ ಏರಿಸುವಲ್ಲಿ ಅವರುಗಳು ಯಶಸ್ವಿಯಾಗುತ್ತಿದ್ದಾರೆ.
ಹಾಗಾದರೆ, ನಮ್ಮ ಪ್ರಜಾಪ್ರಭುತ್ವ ಯಶಸ್ವಿಯಾಗಿಲ್ಲವೇ? ಎಂದರೆ ಖಂಡಿತಾ ಆಗಿದೆ. ಸ್ವಾತಂತ್ರ್ಯಾನಂತರದ ಪಂಚವಾರ್ಷಿಕ ಯೋಜನೆಗಳೇ ಮುಂತಾದ ಅಭಿವೃದ್ಧಿಕಾರ್ಯಗಳಿಂದ ಹಿಡಿದು ನಾನಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ವೈಜ್ಞಾನಿಕವಾಗಿಯೂ ಅಷ್ಟೇ, ಉಪಗ್ರಹ ಉಡಾವಣೆಯಿಂದ ಹಿಡಿದು ನಮ್ಮ ದೇಶಕ್ಕೆ ಕಂಪ್ಯೂಟರ್ ಬರುವುದು ಅದು ಜನಸಾಮಾನ್ಯರ ಕೈಗೆಟಕುವುದೂ ದೂರವೇ ಉಳಿದಿದೆ ಅಂದುಕೊಂಡರೂ ಅದೂ ಅಷ್ಟೇ ಬೇಗನೆ ದೇಶದ ಮೂಲೆ ಮೂಲೆಯನ್ನು ಆಕ್ರಮಿಸಿಕೊಂಡಿದೆ.! ಹೌದು, ಕಾಲದ ಪ್ರವಾಹವೇ ಹಾಗೆ, ಅದರ ಎದುರು ಯಾರೂ ಈಜಿ ಜಯಿಸಲು ಸಾಧ್ಯವಿಲ್ಲ. ಅದರೊಂದಿಗೇ ಸಾಗುತ್ತ ಹೆಜ್ಚೆ ಹಾಕಬೇಕು;ಅಂತೆಯೆ ಯಾವಾಗ ನಮ್ಮ ಆಡಳಿತದಲ್ಲೂ ಹೊಸ ಬದಲಾವಣೆ ತರಬೇಕು. ಹೊಸ ಕಾಯಿದೆ ಕಟ್ಟಳೆಗಳು ಜಾರಿಯಾಗಬೇಕೆಂಬ ಮಾತು ಕೇಳಿಬಂದಾಗಲೆಲ್ಲ ನಮ್ಮ ಪ್ರಜಾಪ್ರಭುತ್ವ ಹೊಸ ಹೊಳವು ಹೊಸಬೆಳಕು ಕಂಡಿದೆ. ಹೌದು, ಪ್ರಜಾಪ್ರಭುತ್ವದ ಯಶಸ್ಸಿರುವುದೇ ಅದರ ಪ್ರಗತಿಪರ ಮಾರ್ಗದಲ್ಲಿ. ದೇಶದ ಹಿತಾಸಕ್ತಿಯಲ್ಲಿ ಬದಲಾಗಬೇಕೆಂಬುದೇ ಅದೆಲ್ಲವು ರಾಜಕಾರಣಿಗಳ ಭಾಷಣ ಮತ್ತು ಪೊಳ್ಳು ಆಶ್ವಾಸನೆಯಲ್ಲಷ್ಟೇ. ಹೀಗೇ ಪ್ರಗತಿ ಪಥದಲ್ಲಿ ನಡೆಯುತ್ತದೆ ಎಂದೇನೂ ನಿಖರವಾಗಿ ಹೇಳುವಂತಿಲ್ಲ. ಏನೂ ಬೇಕಾದರೂ ನಡೆಯಬಹುದು; ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಮನಾದದ್ದು ಏನೇ ಘಟಿಸಲೂ ಬಹುದು. ಅದು ಹೇಗೆ ಭ್ರಷ್ಟ ಮಾರ್ಗವೇ ಅಲಿಖಿತ ಸರ್ವ ಸಮ್ಮತವೆಂಬಂತೆ ನಮ್ಮ ದೇಶದ ರಾಜಕಾರಣಕ್ಕೆ ಭೂತದಂತೆ ಹಿಡಿಯಿತೋ ಹಿಡಿಯಿತು ನಮ್ಮ ದೇಶದ ರಾಜಕಾರಣ ಅಲ್ಲಿಂದ ಹಿಂತಿರುಗಿ ನೋಡಲಾಗದೇನೆ ಹಾಗೆಯೇ ಬೆಳೆಯುತ್ತಲೇ ಉಳಿದಿರುವುದೇ ಅದರ ಇತ್ತೀಚಿನ ಯಶಸ್ಸು!! ಅದನ್ನು ಹಾಗೇ ಉಳಿಸಿ ಬೆಳೆಸುತ್ತಿರುವವರಲ್ಲಿ ಮುಗ್ದರು ದಡ್ಡರಷ್ಟೇ ಅಲ್ಲ ಪ್ರಬುದ್ಧರೂ ವಿದ್ಯಾವಂತರು ಸೇರಿರುವುದೇ ಈ ನಮ್ಮ ಘನ ಪ್ರಜಾಪ್ರಭತ್ವದ ವೈಪರಿತ್ಯ- ದೊಡ್ಡ ಅಣಕವೇ! ಹಾಗಾದರೆ ಅದನ್ನು ಎಂದಿಗಾದರೂ ಸುಸ್ಥಿತಿಯಲ್ಲಿಟ್ಟು ಅಮೂಲಾಗ್ರ ಬದಲಾವಣೆಗೆ ತರುಲು ಸಾಧ್ಯವಿಲ್ಲವೇ ಎಂಬ ಬೃಹತ್ ಪ್ರಶ್ನೆ ನಮ್ಮನ್ನು ಕಾಡುತ್ತದೆಯಲ್ಲವೇ.? ಇದೀಗ ಅದು ಸಾಧ್ಯವಿದೆ ಎಂಬ ಸುಳಿವು ಗೋಚರ ವಾಗುತ್ತಿದೆಯಲ್ಲ.
ಸೂರ್ಯ ಮುಳುಗದ ಸಾಮ್ಯಾಜ್ಯವೆಂಬ ಬ್ರಿಟಿಷ್ ಆಧಿಪತ್ಯವನ್ನು ಗಡ ಗಡ ನಡುಗಿಸಿದ್ದು ನಮ್ಮ ದೇಶದ ಆಧ್ಯಾತ್ಮಿಕ ಶಕ್ತಿಯೇ. ಆ ಶಕ್ತಿಯ ಪ್ರತಿಪಾದಕರಾಗಿ ಚಳುವಳಿಗಿಳಿದರು ಗಾಂಧೀಜಿ! ಮಹಾನ್ ಸಂತ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದು ಶಾಂತ ರೀತಿಯಿಂದ ಉಪವಾಸ ಸತ್ಯಗ್ರಹ ಚಳುವಳಿಯನ್ನು ಆರಂಭಿಸಿದರು. ಛಲಬಿಡದೇನೆ ತಮ್ಮ ಹೋರಾಟ ನಡೆಸಿದರೆ. ಅವರಿಗೆ ಅಂದಿನ ಸರ್ಕಾರ ಕೊಟ್ಟ ಕಿರುಕೊಳ ಹಿಂಸೆ ಜೈಲುವಾಸಗಳನ್ನೆಲ್ಲ ಅನುಭವಿಸಿದರು. ಅವರ ಅಹಿಂಸಾ ಚಳುವಳಿಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ತಂಡೋಪ ತಂಡವಾಗಿ ಬೆಂಬಲಿಸುತ್ತಲೆ ಬಂದರು. ಅವರು ತಮ್ಮ ವೀರವಾಣಿಯಿಂದ ಆಧ್ಯಾತ್ಮಿಕ ಶಕ್ತಿ ಎಂದರೇನೆಂಬುದನ್ನು ಮರೆದರೋ ಅಥವಾ ಸುಮ್ಮನೆ ಮೌನವಾಗಿ ಉಪವಾಸ ಸತ್ಯಾಗ್ರಹ ಮಾಡಿದರೋ ಎಂಬುದು ಇಲ್ಲಿ ಅಪ್ರಸ್ತುತವೇ ಸರಿ. ಇದೀಗ ಸಂತ ಯೋಗ ಗುರು ಬಾಬಾ ರಾಮದೇವ್ ಆ ಕೆಲಸದಲ್ಲಿ ಮುಂದಾಗಿದ್ದಾರೆ; ಅವರು ಮೊದಲಿಗೆ ಗಾಂಧೀಜಿಯಂತೆ ಶಾಂತಿಯುತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಅವರೊಂದಿಗೆ ಆರ್ ಎಸ್ ಎಸ್ ಬೆಂಬಲ ನಿಂತಿತ್ತು ಎಂಬ ಕಾರಣಕ್ಕೆ ಸರ್ಕಾರ ಅವರ ಏಕಾಗ್ರತೆಗೆ ಭಂಗ ತಂದು ಅವರ ಗುಂಪನ್ನು ರಾತ್ರೋ ರಾತ್ರಿ ದೌರ್ಜನ್ಯದಿಂದ ಕ್ರೌರ್ಯದಿಂದ ಚದುರಿಸಿತು.
ಇದೀಗ ಬಾಬಾ ರಾಮ್ ದೇವ್ ತಮ್ಮ ಶಾಂತಿ ಮಂತ್ರದ ಹೋರಾಟಕ್ಕೆ ಹೊಸ ತಿರುವು ಕೊಡುವಂತೆ ತಾವು ಹನ್ನೊಂದು ಸಾವಿರ ಶಸ್ತ್ರ ಸಜ್ಜಿತ ಸೇನೆಯನ್ನು ಸಜ್ವುಗೊಳಿಸುತ್ತೇನೆ ಎಂಬ ಉದ್ರೇಕಕಾರಿ ಹೇಳಿಕೆ ನೀಡಿದ್ದಾರೆ. ಅವರ ಹೋರಾಟ ಯಾವ ರೂಪ ಪಡೆಯುತ್ತದೆ; ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಬೇಕು. ಈ ನಡುವೆ ಭ್ರಷ್ಟರ ವಿರುದ್ದ ಮೊಟ್ಟ ಮೊದಲಿಗೆ ಸಿಡಿದೆದ್ದ ಅಣ್ಣಾ ಹಜಾರೆ ಅವರು ತಾವು ಆರ್ ಎಸ್ ಎಸ್., ಕಾಂಗ್ರೇಸ್ ಹೀಗೆ ಯೊವೊಂದೂ ಗುಂಪಿನೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ತಮ್ಮ ಹೋರಾಟ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ದ ಎಂದು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.
ಸ್ವಾತಂತ್ರ್ಯ ಪೂರ್ವದ ಭಾರತ ಇದಲ್ಲವೇ ಅಲ್ಲವೆಂಬುದು ನಮಗೆಲ್ಲರಿಗೂ ಗೊತ್ತು. ಆಗ ಗಾಂಧೀಜಿಯ ಸ್ವಾತಂತ್ರದ ಹೋರಾಟಕ್ಕೆ ನಮ್ಮ ದೇಶದಲ್ಲಿ ಜಾತಿ ಬೇಧವಿಲ್ಲದ ಐಕಮತ್ಯವಿತ್ತು; ಬೆಂಬಲವಿತ್ತು. ಈಗ ಅಂಥ ಗಾಂಧೀಜಿ ಮತ್ತೊಮ್ಮೆ ಹುಟ್ಟಿ ಬಂದರೂ ಅಂಥ ಸಂಘಟನೆ ಹೋರಾಟ ಕನಸಿನ ಮಾತೇ ಎಂಬುದು ಆಳುವವರಷ್ಟೇ ಅಲ್ಲ ವಿರೋಧ ಪಕ್ಷಗಳೂ ಹಾಗೂ ಜನಸಾಮನ್ಯರಿಗೂ ತಿಳಿದಿರುವಂತಿದೆ. ಆದರೆ, ಯಾರೇ ಬಂದರೂ ಗಾಂಧೀಜಿಯವರಂತಾಗುವುದಿಲ್ಲ; ಅವರನ್ನು ಅನುಕರಣೆ ಮಾಡಿ ಗೆಲ್ಲುವುದೂ ಈಗ ಸಾಧ್ಯವಿಲ್ಲ. ಯಾಕೆಂದರೆ, ಈ ದೇಶದೊಳಗೇ ರಾಜಕೀಯ ಪಕ್ಷಗಳಲ್ಲಿ ಮಾತ್ರವೇ ಭಿನ್ನ ಮತೀಯರಿಲ್ಲ; ದೇಶದ ಮೂಲೆ ಮೂಲೆ ಗಳಲ್ಲಿರುವ ಕಛೇರಿಗಳಲ್ಲಿ ಅಧಿಕಾರಿಗಳಲ್ಲಿ, ಜನಸಾಮಾನ್ಯರಲ್ಲಿ, ವಿದ್ಯಾವಂತರಲ್ಲಿ ಬುದ್ಧಿಜೀವಿಗಳಲ್ಲಿ, ವಿದ್ವಾಂಸರಲ್ಲಿ , ಅನೇಕಾನೇಕ ಸಂಘನೆಗಳ ಹೋರಾಟ ಗಾರರಲ್ಲಿ ಭಿನ್ನ ಮತೀಯರಿದ್ದಾರೆ. ಪ್ರತಿಯೊಂದು ಪತ್ರಿಕೆಯೂ ಯಾವುದೋ ಒಂದು ಪಕ್ಷದ ಅಥವಾ ಸಂಘನೆಯ ಮುಖವಾಣಿಯಾಗಿರುತ್ತದೆ ಎಂಬುದೀಗ ಎಲ್ಲರಿಗೂ ತಿಳಿದಂತಿದೆ. ಹಾಗೆ ತಮ್ಮನ್ನು ತಮ್ಮದೇ ಆದ ಗುಂಪೊಂದರಲ್ಲಿ ಗುರುತಿಸಿಕೊಂಡವರಿದ್ದಾರೆ. ಗುರುತಿಸಿಕೊಳ್ಳದವರೂ ಸಹ ಹಾಗೆ ಗುರುತಿಸಿಕೊಂಡರೇನೆ ಇಲ್ಲಿ ಬದುಕಿನಲ್ಲಿ ಬದುಕಲು, ಮತ್ತು ದುಡ್ಡು ಹೆಸರು ಮಾಡಲು ಸಾಧ್ಯ ಮೇಲೇರಲು ಸಾಧ್ಯವೇನೋ ಎಂಬ ಗೊಂದಲದಲ್ಲಿದ್ದಾರೆ.... ಒಟ್ಟಿನಲ್ಲಿ ಈ ದೇಶ ರಾಜಕೀಯ ದೊಂಬರಾಟದ ಆಡುಂಬುಲವಾಗಿದೆಯೇ ; ಗೊಂದಲಗಳ ಗೂಡಾಗಿದೆಯೇ...