ಈ ಮಗುವಿನ ಕೈನಲ್ಲಿ ಅವನ ತಂದೆಯ ಕೊಲೆ ಆಗುತ್ತದೆ

ಈ ಮಗುವಿನ ಕೈನಲ್ಲಿ ಅವನ ತಂದೆಯ ಕೊಲೆ ಆಗುತ್ತದೆ

ಬರಹ

ಆಕೆ ನಡುಗಿ ಹೋದಳು. ಅವಳ ಗಂಡ ಜೋರಾಗಿ ನಕ್ಕು ಮಗುವನ್ನು ಹತ್ತಿರಕ್ಕೆಳೆದುಕೊಂಡ . ಜ್ಯೋತಿಷಿ ಮಾತ್ರ ಗಂಭೀರವಾಗಿ ಮೇಲಿನ ಮಾತನ್ನು ಹೇಳಿದ.
"ಸ್ವಾಮಿ ನೀವು ಹೇಳ್ತಿರೋದು ನಿಜಾನಾ? ಇನ್ನೊಂದು ಸಲ ನೋಡಿ . ಎಲ್ಲೋ ಜಾತಕ ಬದಲಾಗಿರಬೇಕು" ಆಕೆ ಗಡಿಬಿಡಿಯಿಂದ ಹೇಳಿದಳು.
"ಇಲ್ಲ ನಿಮ್ಮ ಮಗುವಿನ ರಾಶೀನೆ ಹಾಗಿದೆ.
ಅವನ ಜಾತಕದಲ್ಲೇ ಈ ಥರ ಇದೆ."
ಅವಳು ಜೋರಾಗಿ ಉಸಿರೆಳೆದುಕೊಂಡಳು
ಒಮ್ಮೆ ಮಗುವನ್ನು ಗಂಡನನ್ನು ನೋಡಿದಳು . ತನ್ನ ಮಾಂಗಲ್ಯವನ್ನು ತನ್ನ ಕರುಳ ಕುಡಿಯೇ ಕೀಳುತ್ತಾನೆಯೇ?. ಇನ್ನೂ ಹಾಲುಗಲ್ಲದ ಮಗು .ಹತ್ತು ವರ್ಷ ಮಕ್ಕಳಿಲ್ಲದೆ ದೇವರಲ್ಲಿ ಬೇಡಿ ಕೊನೆಗೆ ಹುಟ್ಟಿದ ಮಗು. ತನ್ನ ಅಪ್ಪನನ್ನೇ ಕೊಲ್ಲುತ್ತಾನೆಯೇ?
ಆತನೋ ಪ್ರಖ್ಯಾತ ಜ್ಯೋತಿಷಿ . ಅವನ ಮಾತು ಎಂದಿಗೂ ಸುಳ್ಳಾದದ್ದು ಇಲ್ಲ
ಹೋಗಲಿ ಕೊಲೆ ಯಾವಾಗ ನಡೆಯುತ್ತದೆ ಎಂಬ ಅವಳ ಪ್ರಶ್ನೆಗೆ ಮಗುವಿಗೆ ಐದು ತುಂಬುವುದರೊಳಗಾಗಿ ಎಂದು ಉತ್ತರ ಬಂತು
ಅವಳ ಗಂಡ ಆ ಜ್ಯೊತಿಷಿಗೆ ತಲೆ ಕೆಟ್ಟಿದೆ ಎಂದ. ಯಾಕೆಂದರೆ ಮಾರನೆಯ ದಿನವೇ ಮಗುವಿನ ಐದನೆಯ ಹುಟ್ಟಿದ ಹಬ್ಬ.
ಅವಳು ಮಗುವನ್ನು ಶಪಿಸಿಕೊಂಡಳು. ಇಂಥ ಕೊಲೆಗಾರ ಮಗು ಏಕೆ ಹುಟ್ಟಿತು ಎಂದು ಬೈದುಕೊಂಡಳು.
ಮಗು ಮಾತ್ರ ಮುಗ್ದವಾಗಿ ನಕ್ಕಿತು. ಗಂಡ ಅವಳಿಗೆ ಸಮಾಧಾನ ಮಾಡಿದ . ಇದನ್ನೆಲ್ಲಾ ನಂಬಬೇಡ . ದುಡ್ದು ಮಾಡುವುದಕ್ಕೆ ಒಂದು ಸುಳ್ಳು ಎಂದ.
ಆಕೆ ಮಾತ್ರ ಅಳುತ್ತಲೇ ಇದ್ದಳು.

ಮಾರನೆಯ ದಿನ

ಮಗು ಬಾಲ್ಕನಿಯಲ್ಲಿ ಆಟವಾಡುತ್ತಿತ್ತು.

ಅವಳು ದೇವರ ಮುಂದೆ ಕುಳಿತಿದ್ದಳು.
ಗಂಡ ಟಿ.ವಿ ನೋಡುತ್ತಿದ್ದ.
ದೊಡ್ಡ ಬಂಗಲೆ ಅದು.
ಮನೆಯಲ್ಲಿ ಹಲವಾರು ಜನ ಕೆಲಸ ಮಾಡುತ್ತಿದ್ದರು.
ತೋಟದಾಳು ಸಿದ್ದ ಬೆಳಗ್ಗೆ ಏನೂ ತರಲೆಂದು ಹೋದವನು ಇನ್ನೂ ಬಂದಿರಲಿಲ್ಲ. ಹೆಂಡತಿ ದೇವರ ಪೂಜೆಗೆ ಸಾಮಾನು ತರಲು ಕಳಿಸಿದ್ದಳು.. ಪರಿಹಾರಕ್ಕಾಗಿ ದೊಡ್ಡ ಹೋಮ ಮಾಡಬೇಕಿತ್ತು

ಗಂಡ ಇದ್ದಕಿದ್ದಂತೆ ಎದ್ದ . ಮಗುವನ್ನು ಪಾರ್ಕಿಗೆ ಕರೆದುಕೊಂಡು ಹೋಗುತ್ತೇನೆ ಎಂದ.
ಅವಳು ಇಂದು ಮಾತ್ರ ಬೇಡ . ಇಂದು ಕಳೆದರೆ ಸಾಕು ಎಂದು ಗೋಗರೆದಳು
ಗಂಡ ಕೇಳಲಿಲ್ಲ
ಅದೇನಾಗುತ್ತೋ ನೋಡೋಣ ಎಂದು ಮಗುವನ್ನು ಕರೆದುಕೊಂಡು ಹೊರಟೇ ಬಿಟ್ಟ.
ಹೆಂಡತಿ ಅಳು ಜೋರಾಯ್ತು.

ಇತ್ತ ಪಾರ್ಕಿನಲ್ಲಿ ಮಗುವನ್ನು ಆಟವಾಡಿಸುತ್ತಾ ಅವಳ ಗಂಡ ಆ ಘಳಿಗೆಗಾಗಿ ಕಾಯುತ್ತಿದ್ದ.
ಕೊನೆಗೂ ವ್ಯಕ್ತಿ ಕಾಣಿಸಿದ
ಅವನನ್ನು ಮಾತಾಡಿಸಿದ
"ಯಾಕೋ ಸಿದ್ದ ಮಾರ್ಕೆಟಿಗೆ ಹೋಗಿ ಬಾ ಅಂದರೆ ಇಲ್ಲೇನು ಮಾಡ್ತಾ ಇದ್ದೀಯಾ?"
ಸಿದ್ದ ಮಾತಾಡಲಿಲ್ಲ

ಮಗು ಸಿದ್ದನ್ನನ್ನು ಕಂಡಕೂಡಲೆ "ಸಿದ್ದಾ" ಎಂದು ತಬ್ಬಿಕೊಂಡಿತು. ಆತ ಮಗುವನ್ನು ದೂರ ತಳ್ಳಿದ." ಸಿದ್ದ ಯಾಕೋ ಕೋಪ " ಮತ್ತೆ ಅವನ ಮೇಲೆ ಬಿದ್ದಿತು . ಅವನಿಗೊ ಮಗುವಿಗೂ ತುಂಬಾ ಪ್ರೀತಿ .
ಆತ ಮತ್ತೆ ಗಾಭರಿಯಿಂದ ನೂಕಿದ.
ಮಗುವಿಗೂ ಕೋಪ ಬಂತು . ತಂದೆಯ ಕೈ ಹಿಡಿದುಕೊಂಡು ನಿಂತಿತು
ಗಂಡ ಸಿದ್ದನನ್ನು ಮನೆಗೆ ಕರೆದ . ಸಿದ್ದನಿಗೆ ಒಪ್ಪದೆ ವಿಧಿ ಇರಲಿಲ್ಲ ವಾದ್ದರಿಂದ ಅವನೊಂದಿಗೆ ಹೊರಟ
ದಾರಿಯಲ್ಲಿ
"ಸಿದ್ದ ನಂಗೆಲ್ಲಾ ಗೊತ್ತು. ಏನು ಗೊತ್ತಾಗಬಾರದು ಅಂತಿದ್ರೋ ಅದು ನಂಗೆ ತಿಳೀತು ಆದರೆ ನಾನೇನು ಮಾಡಲ್ಲ ಹೆದರ್ಕೋಬೇಡ" ಸಿದ್ದ ಬೆವೆತಿದ್ದ ಗಡ ಗಡ ನಡುಗುತ್ತಿದ್ದ.
ಆ ತೋಟದ ಮನೆಯ ಹತ್ತಿರ ಬರುತ್ತಿದ್ದಂತೆ "ಬುದ್ದಿ ತಪ್ಪಾಯ್ತು ನಾನೆಷ್ಟು ಹೇಳಿದರು ಅಮ್ಮಾವ್ರು ಕೇಳಲಿಲ್ಲ" ಕಾಲಿಗೆ ಬಿದ್ದ.
ಹೋಗಲಿ ಬಿಡು ಅಳಬೇಡ ಆಗಿದ್ದಾಗಿ ಹೋಯ್ತು . ಇನ್ನು ಇವತ್ತು ಮಗುವಿನ ಐದನೇ ಹುಟ್ಟುಹಬ್ಬ .ಫಂಕ್ಶ್ನ‌ಗೆ ರೆಡಿ ಮಾಡೋಣ"
ಮೇಲೆದ್ದ ಸಿದ್ದನಿಗೆ ಯಾರೋ ನೂಕಿದಂತಾಯ್ತು . ಆಯ ತಪ್ಪಿದ ಆತ ಬಾವಿಗೆ ಬಿದ್ದ. ಬೀಳುವಾಗ ಆ ಮಗು ಕೇಕೆ ಹಾಕಿ ನಕ್ಕಿದ್ದು ಕಂಡಿತು.
ಒಂದೇ ಚೀತ್ಕಾರದ ನಂತರ ಇಡೀ ತೋಟ ನಿಶ್ಯಬ್ಧವಾಯ್ತು .
ಸಿದ್ದ ಬಿದ್ದ ಸಿದ್ದ ಬಿದ್ದ ಎಂದು ಮಗು ನಗುತ್ತಿತ್ತು
ಆಗಲೆ ಅವನು ತನ್ನನ್ನು ನೂಕಿದ ಸೇಡನ್ನು ಮಗು ತೀರಿಸಿಕೊಂಡಿತ್ತು.
ಸ್ವಲ್ಪ ಸಮಯದ ನಂತರ ಆತ ಮೊಬೈಲ್ ತೆಗೆದು ಫೋನ್ ಮಾಡಿದ
"ಸಾರ್ ನಿಮ್ಮಿಂದ ದೊಡ್ಡ ಸಹಾಯವಾಯ್ತು . ನನ್ನ ಮಗುವಿನ ತಂದೆಯನ್ನು ಮಗುವಿನ ಕೈನಲ್ಲೇ ಕೊಲ್ಲಿಸಿದೆ.ನನಗೆ ಈಗ ತೃಪ್ತಿಯಾಯ್ತು "
"ಒಕೆ ಒಕೆ" ಅದು ಜ್ಯೋತಿಷಿಯ ದನಿ

ಸ್ವಲ್ಪ ಹೊತ್ತಿನ ನಂತರ ಮಗುವಿನ ಕೈ ಹಿಡಿದುಕೊಂಡು ಮನೆಗೆ ಬಂದ
"ಆ ಜ್ಯೋತಿಷಿ ಹೇಳಿದ್ದೆಲ್ಲಾ ಸುಳ್ಳು. ಪಾಪು ಸಿದ್ದನನ್ನು ಬಾವಿಗೆ ಬೀಳಿಸ್ತು. ಸುಮ್ಮನ್ದೆ ನನ್ನ ಕೊಲೆ ಮಾಡುತ್ತೆ ಅಂತ ಹೇಳಿದ"
ಅವಳ ಮುಖ ಬಿಳುಚಿಕೊಂಡಿತು.
"ಮಗು ಸಾಯ್ಸಿದ್ದ್ದು ಅಂತ ಯಾರಿಗೂ ಹೇಳಬೇಡ . ಸುಮ್ಮನ್ದೆ ಇಲ್ಲ ಸಲ್ಲದ ತೊಂದರೆ . ಆಯ್ತಾ "
ಅವಳ ಕಂಗಳು ಕಣ್ಣೀರಿನಿಂದ ತುಂಬಿತ್ತು . ಆಯಿತು ಎನ್ನುವಂತೆ ತಲೆ ಆಡಿಸಿದಳು

ಕೊನೆ ಕೊಸರು: ಸಿದ್ದನನ್ನು ಬಾವಿಗೆ ಬೀಳಿಸಿದ್ದು ಮಗು ಅಲ್ಲ ಮಗುವಿನ ತಾಯಿಯ ಗಂಡ . ಆ ಸತ್ಯ ರಹಸ್ಯವಾಗಿಯೇ ಉಳಿಯಿತು ಹಾಗೆಯೇ ಆ ಮಗುವಿನ ತಂದೆ ಸಿದ್ದ ನೆಂಬ ರಹಸ್ಯ ತಾಯಿಗಲ್ಲದೆ ಬೇರಾರಿಗೂ ಗೊತ್ತಿಲ್ಲವೆಂದು ಅವಳು ತಿಳಿದಿದ್ದಳು ಕೊನೆಯವರೆಗೂ