ಈ ವರ್ಷದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ - ಶ್ಯಾಮ್ ಬೆನೆಗಲ್ !

ಈ ವರ್ಷದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ - ಶ್ಯಾಮ್ ಬೆನೆಗಲ್ !

ಬರಹ

" ಅಂಕುರ್" ಚಿತ್ರ ನೋಡಿದ ಪ್ರೇಕ್ಷಕರಿಗೆ, ಶ್ಯಾಮ್, ಹೊಸಬರೇನಲ್ಲ. ಭೂಮಾಲೀಕತ್ವದ ಅನೇಕ ಜನರು ಬಡವರನ್ನು, ಶೋಷಿತರನ್ನು ಕಾಡುವ ಚಿತ್ರವಾದ ಇದು ; ಭೂಮಾಲೀಕರ ಮತ್ತು ಅವರ ಜೀವನದಒಳ-ನೋಟಗಳನ್ನು ವಿಸ್ತರಿಸುತ್ತಾ ಸಾಗುತ್ತದೆ. ಅದನ್ನು ತಯಾರಿಸಿದಾಗ ಅವರಿಗೆ ೩೭ ವರ್ಷ. ಮುಂದೆ 'ಚರಣದಾಸ್ ಚೋರ್,' ಎಂಬ ಮಕ್ಕಳ ಚಿತ್ರ ತಯಾರಿಸಿದರು.
ಆಮೇಲೆ 'ನಿಶಾಂತ್', 'ಭೂಮಿಕ', 'ಮಂಥನ್', 'ಜುನೂನ್', 'ಕಲಿಯುಗ್', 'ಆರೋಹಣ್', 'ಮಂಡಿ', 'ತ್ರಿಕಾಲ್',ಮೆಗಾ ಟೀ. ವಿ ಧಾರಾವಾಹಿ " ಯಾತ್ರಾ," ಚಿತ್ರಗಳನ್ನು ಮರೆಯಲು ಸಾಧ್ಯವೇ ? ಜವಾಹರ್ಲಾಲರ ಪುಸ್ತಕ, " The Discovery of India," ಆಧಾರದಮೇಲೆ ನಿರ್ಮಿಸಿದ ಸೀರಿಯಲ್, ಅತ್ಯಂತ ಯಶಸ್ವೀ ಪ್ರಯೋಗಗಳಲ್ಲೊಂದಾಗಿತ್ತು ! ವಾಸ್ತವಿಕತೆ, ಮತ್ತು ವೈವಿಧ್ಯತೆ ಅವರ ಚಿತ್ರಗಳಲ್ಲಿ ಎದ್ದು ತೋರುತ್ತವೆ. ಭಾರತ್ ಏಕ್ ಖೋಜ್, ಟೀ. ವಿ ಗಾಗಿಯೇ ಮಾಡಿದ ಚಿತ್ರಕಥೆ. ಪ್ರಾದೇಶಿಕತೆಯನ್ನು ಅವರಷ್ಟು ಗಾಢವಾಗಿ ಚಿತ್ರಿಸುವವರು ಕಡಿಮೆ. ಶಿಕ್ಷಕನ ಕಣ್ಣಿನಲ್ಲಿ, ಭಾರತದ ಗ್ರಾಮೀಣ ಚಿತ್ರಣವನ್ನು, ನಿಶಾಂತ್ ಚಿತ್ರದಲ್ಲಿ ಕಾಣುತ್ತೇವೆ. ಮಂಥನ್ ಚಿತ್ರ, ಗುಜರಾತಿನ ಹಾಲಿನ ಕ್ರಾಂತಿಯಹಿನ್ನೆಲೆಯಲ್ಲಿ ಕಂಡುಕೊಂಡ ಕಟುಸತ್ಯಗಳ ನಿರೂಪಣೆಯಾಗಿದೆ. ಒಬ್ಬ ನಟಿಯು ತನ್ನ ಜೀವನದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಆ ತಾರೆಯ ಜೀವನವನ್ನು ಮರುಸೃಷ್ಟಿಮಾಡುವ ಪ್ರಯತ್ನ, 'ಭೂಮಿಕ,' ದಲ್ಲಿ ನಿಜಕ್ಕೂ ಸೊಗಸಾಗಿದೆ. ಇನ್ನುಳಿದ ಶ್ಯಾಮ್ ಬೆನೆಗಲ್ರ ಚಿತ್ರಗಳನ್ನು ಬಲ್ಲವರು "ದೃಷ್ಯಕಾವ್ಯ,"ಗಳೆಂದು ಬಣ್ಣಿಸುತ್ತಾರೆ.

ಶ್ಯಾಮ್ ಹೈದರಾಬಾದ್ ನಲ್ಲಿ, ೧೯೩೪ ರಲ್ಲಿ ಜನಿಸಿದರು. ಅವರ ತಂದೆಯೂ ಒಬ್ಬ ಕಲಾವಿದ. ಫೋಟೋಗ್ರಾಫರ್ ಆಗಿದ್ದವರು. ತಂದೆ ಉಡುಪಿ ಜಿಲ್ಲೆಯ ಬೆನೆಗಲ್ ಮೂಲದವರು. ಕೆಲಸಕ್ಕಾಗಿ ಹೈದರಾಬಾದ್ ಗೆ ಹೋಗಿದ್ದರು. ೧೦ ಮಕ್ಕಳ ಪರಿವಾರ. ಚಿಕ್ಕ ಸಮರಂಭಗಳು, ಪಿಕ್ನಿಕ್ಗಳ ಸಮಾರಂಭಗಳನ್ನು ಚಿತ್ರಿಸಿಕೊಡುವ ಕೆಲಸ, ಮಾಡುತ್ತಿದ್ದರು. ಶ್ಯಾಮ್ ರ ೬ ವರ್ಷದ ಹುಟ್ಟು ಹಬ್ಬಕ್ಕೆ ತಂದೆ, ಒದು ಮ್ಯಾಜಿಕ್ ಲ್ಯಾಂಟ್ರಿನ್, ಒಂದು ಪುಟಾಣಿ ಪ್ರೊಜೆಕ್ಟರ್, ಮತ್ತು ಕೆಲವು ಕಾರ್ಟೂನ್ ಚಿತ್ರಗಳನ್ನು ಬಹುಮಾನವಾಗಿ ಕೊಟ್ಟಿದ್ದರು. ಇದೇ ಅವರ ಚಿತ್ರಕಲಾಸಕ್ತಿ ಗರಿಗೆದರಲು ಆದ ಒಂದು ಬಹುಮುಖ್ಯ ಸನ್ನಿವೇಷವೆಂದು, ಈಗ ಶ್ಯಾಮ್ ಒಮ್ಮೊಮ್ಮೆ ಜ್ಞಾಪಿಸಿಕೊಳ್ಳುತ್ತಾರೆ. ಬಾಲಕ ಶ್ಯಾಮ್, ತನ್ನ ೧೨ ನೆಯ ವಯಸ್ಸಿನಲ್ಲೇ " ಛುಟ್ಟಿಯೋಂಮೆ ಮೌಜ್ ಮಸ್ತಿ" ಎಂಬ ಕಿರು- ಚಿತ್ರ ತಯಾರಿಸಿದರು. ಶ್ಯಾಮ್ ಜಾಹಿರಾತುಗಳನ್ನೂ ತಯಾರಿಸಿದ್ದಾರೆ. ಅವುಗಳ ಸಂಖ್ಯೆ, ೧,೫೦೦. ಮಾಹಿತಿಚಿತ್ರಗಳ ಸಂಖ್ಯೆ-೪೫. ೨೫ ಕಥಾ ಚಿತ್ರಗಳು. ದೂರದರ್ಶನಕ್ಕೆ ಧಾರವಾಹಿಯನ್ನೂ ನೀಡಿದ್ದಾರೆ. ಶ್ಯಾಮ್ ಬೆನೆಗಲ್ ರವರ ಮೇಲೆ ಅತ್ಯಂತ ಪ್ರಭಾವಮಾಡಿದ ಹಿಂದೀ ಚಿತ್ರಗಳು : ಗುರುದತ್ತರ, 'ಪ್ಯಾಸ', ರಾಜ್ ಕಪೂರರ, 'ಜಾಗ್ತೆ ರಹೊ', ಬಿಮಾಲ್ ರಾಯ್ ರವರ, 'ದೊ ಭಿಘು ಜಮೀನ್', ಸತ್ಯ ಜಿತ್ ರೇರವರ, 'ಪಥೇರ್ ಪಾಂಚಾಲಿ', ಇತ್ಯಾದಿ ಚಿತ್ರಗಳು. ಹಿಂದೀಚಿತ್ರರಂಗದ ವ್ಯಾಪ್ತಿ ಬಲುದೊಡ್ಡದು. ಅತ್ಯಂತ ಗಂಭೀರವಾಗಿ, ಕಲಾತ್ಮಕವಾಗಿ, ಆಕರ್ಷಕವಾಗಿ, ತಮ್ಮ ಚಿತ್ರಗಳನ್ನು ಹೊರತಂದರು. ಸರಳ ಹಾಗೂ ನೈಜ ಚಿತ್ರಣಗಳು ಹಾಗೂ ನಿರೂಪಣಾಶೈಲಿಯ ಅದ್ಭುತ ಸಂಗಮದಲ್ಲಿ, ನಾವು ಅವರ ಯಶಸ್ಸಿನ ಗುಟ್ಟನ್ನು ಪತ್ತೆಹಚ್ಚಬಹುದು.

೧೯೬೯ ರಲ್ಲಿ, ಭಾರತೀಯ ಹಿಂದಿಚಿತ್ರರಂಗದಲ್ಲಿ ಹೊಸ ಶೈಲಿ, ಹೊಸ ವಿನ್ಯಾಸಗಳು, ಹೊಸಆಶಯಗಳನ್ನು ಚಿತ್ರನಿರ್ಮಾಪಕರುಗಳು ಗುರುತಿಸಿ, ಅವುಗಳನ್ನು ಪರದೆಯಮೇಲೆ ತರಲು ಯತ್ನಿಸುತ್ತಿದ್ದರು. ಶ್ಯಾಮ್ ಬೆನೆಗಲ್ ತಮ್ಮ ವಾಕ್ಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಅಂಕುರ್ ಚಿತ್ರದಿಂದ. ಅನಂತನಾಗ್, ಶಬ್ನ ಅಝ್ಮಿ, ಮತ್ತು ಸಾಧು ಮೆಹರ್ ನಟಿಸಿದ, ಈ ಹಿಂದಿ ಚಿತ್ರ, ಹೊಸಆಯಾಮ ನೀಡಿದ್ದಲ್ಲದೆ, ಅಂತರರಾಷ್ಟ್ರೀಯ ಖ್ಯಾತಿಯನ್ನು ತಂದು ಕೊಟ್ಟಿತು. ಚಿತ್ರನಿರ್ಮಾಣಕಾರ್ಯದಲ್ಲಿ ಆತ್ಮ- ಸ್ಥೈರ್ಯವನ್ನು ತಂದುಕೊಟ್ಟ ಮೊದಲ ಚಿತ್ರ ಇದು. ಬೊಂಬಾಯಿಗೆ ಬಂದ ಮೊದಲಿಗೆ ಅವರು ' Lintas,' ಎಂಬ ಜಾಹಿರಾತು ಕಂಪೆನಿಯಲ್ಲಿ ೧೪ ವರ್ಷ ದುಡಿದಿದ್ದರು. ಅನೇಕ ವಾರ್ತಾ-ಚಿತ್ರಗಳನ್ನೂ ತಯಾರಿಸಿದ ಅನುಭವಿ. [ಡಾಕ್ಯುಮೆಂಟರಿ] ೪ ದಶಕಗಳಕಾಲ ಹಿಂದೀ ಚಿತ್ರರಂಗದಲ್ಲಿ ಸೇವೆಮಾಡಿದ ಈ ದಿಗ್ದರ್ಶಕ, ಆರಿಸಿಕೊಂಡ ಕೆಲವು ಕಲಾವಿದರು, ಮುಂದೆ ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬಂದರು. ಸ್ಮಿತಾಪಾಟೀಲ್, ನಾಸಿರುದ್ದೀನ್ ಶಾ, ಓಂಪುರಿ, ಕುಲ್ ಭೂಷನ್ ಖರಬಂದಾ. ಹೊಸ ಅಲೆಯ ಚಿತ್ರನಿರ್ಮಾಪಕ, ನಿರ್ದೇಶಕರಿಗೆ ಮಾದರಿಯಂತಿದ್ದ ಬೆನೆಗಲ್ ರವರು, ಒಬ್ಬ ಕಲಾತ್ಮಕ, ಜನಪ್ರಿಯ, ಮತ್ತು ನಿರ್ಮಾಪಕ ನಿರ್ದೇಶರೆಂದು ಹೆಸರುಮಾಡಿ, ಹಿಂದೀ- ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದ ಕೆಲವೇ ಸಮಯದಲ್ಲಿ ತಮ್ಮ ’ಛಾಪ” ನ್ನು ಚಿತ್ರರಂಗದಮೇಲೆ ಒತ್ತಿಬಿಟ್ಟರು !

ಭಾರತ್ ಏಕ್ ಖೋಜ್, ಧಾರಾವಾಹಿ, ನಿಜಕ್ಕೂ ಅತ್ಯಂತ ಪ್ರಾಭಾವಿ ದೃಷ್ಯಗಳು, ಮತ್ತು ಪ್ರಭಾವೀ ವಿವರಣೆಗಳಿಂದಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೆ ಆನಂದವನ್ನುಂಟುಮಾಡಿತ್ತು. ೧೯೭೬ ರಲ್ಲಿ ಪದ್ಮಶ್ರೀ, ೧೯೯೧ ರಲ್ಲಿ ಪದ್ಮಭೂಷಣ, ಸೋವಿಯಟ್ ಲ್ಯಾಂಡ್ ಪ್ರಶಸ್ತಿ, ಭಾಭಾಫೆಲೊಶಿಪ್, ಗಳು ಅವರನ್ನಾಗಲೇ ಅರಸಿ ಬಂದಿವೆ. ಭಾರತೀಯ Film & Television Institute ಗೆ, ಎರಡುಬಾರಿ ಅಧ್ಯಕ್ಷರಾಗಿದ್ದ ಶ್ಯಾಂ ಬೆನೆಗಲ್, ಈಗ ಶ್ರೀಲಂಕಾ ಸರ್ಕಾರದ ನೆರವಿನಿಂದ " ಗೌತಮಬುದ್ಧ," ಚಿತ್ರದ ನಿರ್ಮಾಣದಲ್ಲಿ ತಮ್ಮ ಸಮಯವನ್ನು ವಿನಿಯೋಗಿಸುತ್ತಿದ್ದಾರೆ. ಈಗತಾನೇ ಘೋಷಿಸಿರುವ, " ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ," ಇದೆಲ್ಲದರ ವಿಸ್ತಾರ, ಎಂದು ಹೇಳಬಹುದು. ಸುವರ್ಣಕಮಲ, ಶಾಲು, ಮತ್ತು ಎರಡುಲಕ್ಷ ರೂಪಾಯಿಗಳು ನಿಜಕ್ಕೂ ಒಬ್ಬ ವಿಶಿಷ್ಟ ವ್ಯಕ್ತಿಗೆ ಕೊಟ್ಟು ಸನ್ಮಾನಿಸಿದಂತಾಗಿದೆ. ದೆಹಲಿಯಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ರಾಷ್ಟ್ರಪತಿಯವರ ಹಸ್ತದಿಂದ ಪ್ರಶಸ್ತಿಪ್ರದಾನ ಮಾಡಲಾಗುವುದು. ೨೦೦೫ ರ, ಜಾಗತಿಕ ಖ್ಯಾತಿಯ ಭಾರತೀಯ ಚಿತ್ರರಂಗದ, ನಿರ್ಮಾಪಕ/ನಿರ್ದೇಶರೆಂಬ ಖ್ಯಾತಿಗೆ ಪಾತ್ರರಾಗಿರುವ, ನಮ್ಮ ಪ್ರೀತಿಯ ಕನ್ನಡಿಗ, ಶ್ಯಾಮ್ ಬೆನೆಗಲ್ ರಿಗೆ, ಸರ್ವಾಧಿಕ ಪ್ರತಿಷ್ಟೆಯ ಪ್ರತೀಕವಾಗಿರುವ " ಫಾಲ್ಕೆ ಪುರಸ್ಕಾರ," ಸಂದಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ.

ಸಂಪದೀಯರೆಲ್ಲರ ಪರವಾಗಿ ಅವರಿಗೆ ನಮ್ಮ ಹಾರ್ದಿಕ ಶುಭಾಷಯಗಳು.