ಉತ್ಕ್ರಮಣದಲಿ ಉಜ್ಜೀವನದ ಉಚ್ಛ್ರಾಯ
ಕಗ್ಗತ್ತಲ ಆಸರೆಯಲಿ
ತುಂತುರು ಹನಿಗಳ ಮಧ್ಯೆ
ಹೊರಟಿದೆ ಹುಡುಕುತ
ಅಂತ್ಯವ..ಜೀವನದಲಿ
ಬೇಸತ್ತ ಒಂದು ಜೀವ
ಬಣ್ಣಬಣ್ಣದ ಜಗವ ಹಳಿಯುತ
ಏಕಾಂಗಿಯಾದ ನೋವಿನಲಿ
ಭಾರವಾದ ಹೆಜ್ಜೆಯನಿಡುತ
ಸಾಗಿತ್ತು ಸಾವಿನ ದುರ್ಗದೆಡೆ
ಹೊರೆ ಹೊತ್ತ ಹೃದಯ
ಆರ್ಜಿತ ಶ್ರದ್ಧೆಯು ಮರೆಯಾದ
ಸ್ವಾರ್ಥಕ್ಕೆ ಬಲಿಯಾದ ಸತ್ಯದ
ತ್ಯಾಗದಡಿಯಲಿ ನಲುಗಿದ ಪ್ರೀತಿಯ
ಕಥನವ ಹೇಳಬಯಸಿತ್ತು
ಅವನ ಆರ್ದ್ರ ಕಣ್ಣುಗಳು
ಅವನ ಆಹ್ನಿಕ ತಪಸ್ಸಿನ
ಇಚ್ಛಾಶಕ್ತಿಯ ಪ್ರಯತ್ನಗಳ
ಫಲವ ಅರಿಯದೆ ವಿರಮಿಸುವ
ಅಂತಃರಂಗದ ಭಾವಕ್ಕೆ
ಇರುಳ ಮೌನವೆ ಸಾಂತ್ವನವಾಗಿತ್ತು
ಗತಿಸಿದ ದಿನಗಳ ಸ್ಮರಿಸಲು
ನೆನಪುಗಳ ಮುಗಿಲಲ್ಲಿ ಮಿನುಗುತ್ತಿದ್ದ
ಅವನ ಸತ್ಯಶೋಧನೆಯ ಹಣತೆಗಳು
ಕಾರಣವಾದವು ಬದುಕಬೇಕೆಂಬ
ಉತ್ಕಟ ಆಸ್ತೆಯ ಜನನಕೆ!!!
ಹೋರಾಡುವ ಕಿಚ್ಚು ನಿನಗಿರಲಿ
ಸೋಲುಗೆಲುವಿನ ತರ್ಕ ನನಗಿರಲಿ
ಆರ್ಯ..ಎಂಬ ಅಶರೀರವಾಣಿಯು
ತೆರೆಯಿತು ಸೋತ ಮನಸ್ಸಿನ
ಕದವನು ನೂತನ ಅಧ್ಯಾಯದೆಡೆಗೆ
- ಪ್ರಮೋದ್ ಗೌಡ
ನನ್ನ ಮನಸ್ಸಿಗೆ ಬಹಳ ಹತ್ತಿರವಾದ ಕವನ .. ನಾನು ಬರೆದ ಕವನಗಳಲ್ಲಿ ನನಗೆ ಬಹಳ ಇಷ್ಟವಾದುದು .. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಸಂಪದಿಗರೆ