'ಉದಯರವಿ'

'ಉದಯರವಿ'

ಅಡವಿಯ ಕಡಲಿನ ತುದಿಯಲ್ಲಿ ರವಿ ತಾನ್ ಉದಯಿಸಿ ಬರುತಿಹ ಹುರುಪಿನಲಿ.

ಬೆಳಗಿನ ಜಾವದಿ ಹಸಿರನು ಕವಿದಿಹ ಮಂಜಿನ ಪರದೆಯ ಸರಿಸುತಲಿ.
ರವಿ ದಯಮಾಡಿದ ಕೃಪೆತೋರುತಲಿ.

ತರುಲತೆಗಳು ನಗುತಿವೆ ಗೆಲುವಿನಲಿ.
ವನಸುಮವದು ಬಿರಿದಿದೆ ಕೋಮಲದಿ.
ಚೆಲುವಿದು ಜರುಗಿಹ ಸಮಯದಲ್ಲಿ ಸೂರ್ಯೋದಯವಾಯಿತು ಮೂಡಣದಿ.

ಜಡವಾಗಿಹ ಅಕ್ಷಯ ಕಾನನ ಜೀವಕ್ಕೆ ನವಚೈತನ್ಯವೂ ಮೂಡಿದೇ ಕಣಕಣದಿ.
ಕಣ್ ತಣಿಯುವವರೆಗಿಹ ಅಕ್ಷಯಅಡವಿಯ ಹಣೆಯಲ್ಲಿ ಕುಂಕುಮದೋಕುಳಿ ಚದುರಿ.
ಅರುಣೋದಯವಾಯಿತು ಮುಂಜಾವಿನಲ್ಲಿ.

ಚಿಲಿಪಿಲಿ ಕೇಳಿದೆ,
ಹೂವದು ಅರಳಿದೆ,
ಜುಳುಜುಳು ನದಿ ರಂಗೇರುತಲಿ.
ಇಬ್ಬನಿಮಣಿಗಳು ಮುತ್ತಾಗುತಲಿ.
ಜಗವದು ತಳತಳಗೊಳಿಸುತಲಿ,ಫಳಫಳ ಜಗಮಗಿಸುತಲಿ,
ಉತ್ಸಾಹದ ಚಿಲುಮೆಯಂದದಲ್ಲಿ ರವಿ, ಗಿರಿ ಏರುತ್ತ ಬಂದನು ನೋಡಲಿ.

ಮರಗಿಡ ತೂಗಿವೆ,
ತಂಗಾಳಿಯು ತೇಲಿದೆ,
ಹೂಗಂಧವೂ ಪಸರಿದೆ,
ದುಂಬಿ ಜೇಂಕಾರದ ಗುಂಗಿನಲಿ,
ನೇಸರ ಬಂದನು ತೇರಿನಲಿ.

ತಿಂಗಳು ಮುಳುಗಿದೆ.
ರಂಗೋಲಿಯು ಬೆಳಗಿದೆ.
ಬೆಟ್ಟದ ಗುಡಿಯಲ್ಲಿ ಗಂಟೆಯು ಮೊಳಗಿಹ ಗಳಿಗೆಯಲ್ಲಿ
ಮೂಡಣ ರಂಗೇರಿದೆ ಮುಂಜಾವಿನಲಿ.