ಋಷ್ಯಮುಖ ಪರ್ವತದ ಮೇಲೆ ಕಾಲಿಡಲು ವಾಲಿಗೆ ಭಯ ಏಕೆ?

ರಾಮಾಯಣದಲ್ಲಿ ಬರುವ ವಾಲಿ-ಸುಗ್ರೀವರ ಪ್ರಸಂಗದಲ್ಲಿ, ಇವರಿಬ್ಬರೂ ಸಹೋದರರಾದರೂ ಶತ್ರುಗಳಂತೆ ಇದ್ದವರು, ಅಣ್ಣನ ಭಯದಿಂದ ಸುಗ್ರೀವನು ಋಷ್ಯಮುಖ ಪರ್ವತದಲ್ಲಿ ರಕ್ಷಣೆಯನ್ನು ಪಡೆದಿದ್ದ. ಆದರೆ ಮಹಾಬಲಶಾಲಿಯಾದ ವಾಲಿಗೆ ಋಷ್ಯಮುಖ ಪರ್ವತಕ್ಕೆ ಕಾಲಿಡಲು ಯಾಕೆ ಸಾಧ್ಯವಾಗಲಿಲ್ಲ ಎನ್ನುವುದರ ಬಗ್ಗೆ ಒಂದು ಕಥೆ ಇದೆ.
ಹಿಂದೂ ಮಹಾಕಾವ್ಯವಾದ ರಾಮಾಯಣದ ಭಾಗದಲ್ಲಿ ಬರುವಂತಹ ವಾಲಿ- ಸುಗ್ರೀವರ ಪ್ರಸಂಗ ಎಲ್ಲರಿಗೂ ಗೊತ್ತು. ಸುಗ್ರೀವನಿಗೆ ಸಹಾಯ ಮಾಡಲು ರಾಮನು ವಾಲಿಯನ್ನು ಕೊಂದ ಕಥೆಯನ್ನು ಕೇಳಿರಬಹುದು. ವಾಲಿ ಹಾಗೂ ಸುಗ್ರೀವರು ಒಂದೇ ತಾಯಿ ಮಕ್ಕಳಾದರೂ ಶತ್ರುಗಳಂತಿದ್ದವರು. ವಾಲಿಯಿಂದ ರಕ್ಷಣೆ ಪಡೆಯಲು ತಮ್ಮನಾದ ಸುಗ್ರೀವನು ಋಷ್ಯಮುಖಪರ್ವತದಲ್ಲಿ ರಕ್ಷಣೆಯನ್ನು ಪಡೆದಿರುತ್ತಾನೆ. ಋಷ್ಯ ಮುಖ ಪರ್ವತಕ್ಕೆ ವಾಲಿಯು ಹೋಗದಿರಲು ಕಾರಣವೇನು ಎನ್ನುವುದರ ಕುರಿತಾಗಿ ಒಂದು ಪುರಾಣ ಕಥೆ ಇದೆ.
ಕಿಷ್ಕಿಂಧೆಯ ರಾಜನಾದ ವಾಲಿಯು ಇಂದ್ರನ ಮಗ, ಸುಗ್ರೀವನು ವಾಲಿಯ ತಮ್ಮ. ಶಿವಭಕ್ತನಾದ ವಾಲಿಯು ಶಿವನಿಂದ ವರ ಪಡೆದು ಮಹಾ ಪರಾಕ್ರಮಿಯಾಗುತ್ತಾನೆ. ಸಣ್ಣ ತಪ್ಪು ಕಲ್ಪನೆಯಿಂದಾಗಿ ವಾಲಿಯು ತಮ್ಮನಾದ ಸುಗ್ರೀವನನ್ನು ಗಡಿಪಾರು ಮಾಡಿ, ಸುಗ್ರೀವನ ಮಡದಿ ರುಮೆಯನ್ನು ತನ್ನ ವಶದಲ್ಲಿರಿಸಿಕೊಳ್ಳುತ್ತಾನೆ. ಇಲ್ಲಿಂದ ಸಹೋದರರಿಬ್ಬರ ನಡುವೆ ವೈರತ್ವವು ಆರಂಭವಾಗುತ್ತದೆ. ಸುಗ್ರೀವನು ತನ್ನ ಸಹಚರರೊಂದಿಗೆ ವಾಲಿಯು ಕಾಲಿಡದಂತಹ ಮತಂಗ ಪರ್ವತದಲ್ಲಿ ರಕ್ಷಣೆನ್ನು ಪಡೆಯುತ್ತಾನೆ. ಪರಾಕ್ರಮಶಾಲಿಯಾದ ವಾಲಿಯು ಮತಂಗ (ಋಷ್ಯಮುಖ) ಪರ್ವತಕ್ಕೆ ಹೋಗದಿರಲು ಮುಖ್ಯ ಕಾರಣವೆಂದರೆ ಋಷಿಯ ಶಾಪ.
ಬಲಶಾಲಿಯಾದ ವಾಲಿಯು ಸಮುದ್ರಮಥನದ ಸಮಯದಲ್ಲಿ ದೇವತೆಗಳಿಗೂ ಸಹಾಯ ಮಾಡಿದ್ದ, ಅಪ್ಸರೆಯಾದ ತಾರೆಯನ್ನು ವಿವಾಹದ ವಾಲಿಯು ತನ್ನ ಪರಾಕ್ರಮದಿಂದ ರಾವಣನನ್ನೂ ಸೋಲಿಸಿದ್ದ. ಹೀಗಿರಬೇಕಾದರೆ ಒಮ್ಮೆ ದುಂದುಭಿ ಎಂಬ ಅಸುರನು ವಾಲಿಯೊಂದಿಗೆ ಯುದ್ಧದಲ್ಲಿ ಗೆಲ್ಲುವ ಸವಾಲನ್ನು ಹಾಕುತ್ತಾನೆ. ಇಬ್ಬರ ಮಧ್ಯೆ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ದುಂದುಭಿಯನ್ನು ಕೊಂದ ವಾಲಿಯು ಕೋಪದಿಂದ ಅವನ ದೇಹವನ್ನು ಆಕಾಶದಿಂದ ಸುಮಾರು ದೂರ ಎಸೆಯುತ್ತಾನೆ.
ದುಂದುಭಿಯ ದೇಹದ ಕೆಲವು ಹನಿ ರಕ್ತವು ಗಾಳಿಯಲ್ಲಿ ಹಾರಿ ಮಾತಂಗ ಋಷಿಯ ಆಶ್ರಮದ ಮೇಲೆ ಬೀಳುತ್ತದೆ. ಆಶ್ರಮದ ಮೇಲೆ ಬಿದ್ದ ರಕ್ತವನ್ನು ನೋಡಿದ ಋಷಿಯು ಕೋಪಗೊಂಡು. ತನ್ನ ತಪೋಬಲದಿಂದ ರಕ್ತವು ಬಿದ್ದ ಹಿನ್ನಲೆಯನ್ನು ತಿಳಿದಾಗ ವಾಲಿಯು ದುಂದುಭಿಯೊಂದಿಗೆ ಯುದ್ಧ ಮಾಡಿದ ಸಂಗತಿ ತಿಳಿಯುತ್ತದೆ. ಅಸುರನಾದ ದುಂದುಭಿಯನ್ನು ಕೊಂದಿರುವುದು ಒಳ್ಳೆಯದೇ ಆದರೂ, ಆಶ್ರಮದ ಮೇಲೆ ರಕ್ತದ ಹನಿಯನ್ನು ಬೀಳಿಸಿರುವುದು ಪಾಪದ ಸಮಾನವಾದುದು. ಹಾಗಾಗಿ ವಾಲಿಯ ವರ್ತನೆಯಿಂದ ಆಕ್ರೋಶಗೊಂಡ ಮಾತಂಗ ಋಷಿಯು ವಾಲಿಗೆ ' ಋಷ್ಯಮುಖ ಪರ್ವತದ ಮೇಲೆ ಕಾಲಿಟ್ಟರೆ ತಲೆ ಸಾವಿರ ಹೋಳಾಗಲಿ' ಎಂದು ಶಾಪವನ್ನು ನೀಡುತ್ತಾನೆ.
ದುಂದುಭಿಯ ಮರಣದ ವಾರ್ತೆ ಕೇಳಿದ ಅವನ ಸಹೋದರನಾದ ಮಾಯಾವಿಯು ವಾಲಿಯ ಮೇಲೆ ಯುದ್ಧಕ್ಕೆ ಬಂದ. ಆದರೆ ವಾಲಿಯ ಮುಷ್ಠಿ ಪ್ರಹಾರವನ್ನು ಸೈರಿಸಲಾರದೆ ಮಾಯಾವಿಯು ದೊಡ್ಡ ಗುಹೆಯೊಂದರಲ್ಲಿ ಅಡಗಿ ಕುಳಿತ. ತಮ್ಮ ಸುಗ್ರೀವನನ್ನು ಗುಹೆಯ ಹೊರಗೆ ನಿಲ್ಲಿಸಿ, ಮಾಯಾವಿಯನ್ನು ಕೊಂದೇ ತೀರಬೇಕೆಂದು ವಾಲಿಯು ಗುಹೆಯನ್ನು ಪ್ರವೇಶಿಸುತ್ತಾನೆ.
ಸುಮಾರು ದಿನಗಳು ಕಳೆದರೂ ಅಣ್ಣ ವಾಲಿಯು ಗುಹೆಯಿಂದ ಹೊರಗೆ ಬಾರದಿರುವುದನ್ನು ಕಂಡು ಸುಗ್ರೀವನು ಆತಂಕಕ್ಕೊಳಗಾಗುತ್ತಾನೆ. ಇದೇ ಸಂದರ್ಭದಲ್ಲಿ ವಾಲಿಯ ಧ್ವನಿಯನ್ನೇ ಹೋಲುವ ಆಕ್ರಂದನವನ್ನು ಕೇಳಿಸಿಕೊಂಡ ಸುಗ್ರೀವನು ಕಳವಳದಿಂದ ಗುಹೆಯ ದ್ವಾರದ ಬಳಿ ದೃಷ್ಟಿ ಹಾಯಿಸಿದಾಗ ಬಿಸಿ ರಕ್ತವು ಹೊರಗೆ ಹರಿಯುತ್ತದೆ. ಮಾಯಾವಿಯಿಂದ ವಾಲಿಯು ಹತನಾದ ಎಂದು ಭಾವಿಸಿದ ಸುಗ್ರೀವನು, ತನಗಿಂತ ಬಲಶಾಲಿಯಾದ ವಾಲಿಯನ್ನೇ ಮಣಿಸಿದ ಮಾಯವಿಯು ನನ್ನನ್ನು ಮಾತ್ರವಲ್ಲದೇ ತನ್ನವರನ್ನೂ ಸುಮ್ಮನೆ ಬಿಡಲಾರ ಎಂದು ಭಾವಿಸಿ ಬಂಡೆಯೊಂದರಿಂದ ಗುಹೆಯ ಬಾಗಿಲನ್ನು ಮುಚ್ಚಿ, ದುಃಖಿತನಾಗಿ ಭಾರವಾದ ಹೃದಯದೊಂದಿಗೆ ಕಿಷ್ಕಿಂಧೆಗೆ ಮರಳುತ್ತಾನೆ.
ಅತ್ತ ಗುಹೆಯೊಳಗೆ ಮಾಯಾವಿಯನ್ನು ಕೊಂದ ವಾಲಿಯು ಹೊರಬರುತ್ತಿದ್ದಂತೆ ಗುಹೆಯ ಬಾಗಿಲಲ್ಲಿ ಅಡ್ಡವಾಗಿರುವ ಬಂಡೆಯನ್ನು ನೋಡಿ ಆಶ್ಚರ್ಯಗೊಂಡು ಸುಗ್ರೀವನನ್ನು ಕರೆಯುತ್ತಾನೆ. ಸುಗ್ರೀವನನ್ನು ಕರೆದರೂ ಉತ್ತರ ಬಾರದಿದ್ದಾಗ ಕೋಪಗ್ರಸ್ತನಾಗಿ ಒಂದೇ ಏಟಿಗೆ ಬಂಡೆಯನ್ನು ಕುಟ್ಟಿ ಪುಡಿ ಮಾಡುತ್ತಾನೆ. ಕೋಪದಿಂದ ಹೊರಬಂದ ವಾಲಿಗೆ ಸುಗ್ರೀವನು ಇಲ್ಲದಿರುವುದನ್ನು ಕಂಡು ಕೋಪಾವಿಷ್ಟನಾಗಿ ಅರಮನೆಗೆ ಬಂದಾಗ ಕಾಣಿಸಿದ್ದು ತನ್ನ ಸಿಂಹಾಸನದಲ್ಲಿ ವಿರಾಜಮಾನನಾಗಿ ಕುಳಿತಿದ್ದ ತಮ್ಮ ಸುಗ್ರೀವ ಹಾಗೂ ಮಹಾರಾಣಿಯ ಪೀಠದಲ್ಲಿ ಕುಳಿತಿದ್ದ ಮಡದಿ ತಾರಾ.
ಸುಗ್ರೀವನ ಹೆಬ್ಬಯಕೆಗಳ ಪಟ್ಟಿಯಲ್ಲಿ ತನ್ನ ಮರಣ, ಕಿಷ್ಕಿಂಧೆಯ ಒಡೆತನ ಮಾತ್ರವಲ್ಲದೇ ತನ್ನ ಮಡದಿಯಾದ ತಾರಾ ಕೂಡ ಇದ್ದಾಳೆ ಎಂದು ತಪ್ಪು ತಿಳಿದ ವಾಲಿಯು ಇನ್ನಷ್ಟು ಆವೇಶದಿಂದ ತನ್ನನ್ನು ನೋಡಿ ಆನಂದಾಶ್ಚರ್ಯದಿಂದ ಬಂದ ತಮ್ಮನಾದ ಸುಗ್ರೀವನ ಎದೆಯನ್ನು ಒದ್ದು, ಆತನಿಗೆ ಮಾತನಾಡಲು ಅವಕಾಶವನ್ನೂ ನೀಡದೆ ಅರಮನೆಯಿಂದ ಹೊರಗಟ್ಟುತ್ತಾನೆ.
ತಡೆಯಲು ಬಂದ ಸುಗ್ರೀವನ ಮಡದಿ ರುಮೆಯನ್ನು ಸುಗ್ರೀವನ ಎದುರಲ್ಲೇ ಬರಸೆಳೆದುಕೊಂಡ. ವಾಲಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಸುಗ್ರೀವನು ತನ್ನ ಸಹಚರರೊಂದಿಗೆ ವಾಲಿಯು ಕಾಲಿಡದ ಋಷ್ಯಶೃಂಗ ಪರ್ವತವನ್ನು ಸೇರಿಕೊಳ್ಳುತ್ತಾನೆ. ತಮ್ಮನ ಪತ್ನಿ ರುಮೆಯನ್ನು ವಾಲಿಯು ಬಲವಂತದಿಂದ ಮದುವೆಯಾಗುತ್ತಾನೆ. ಮುಂದೆ ರಾಮನು ಸುಗ್ರೀವನನ್ನು ಭೇಟಿಯಾಗುತ್ತಾನೆ. ಸೀತೆಯನ್ನು ಹುಡುಕಲು ಸುಗ್ರೀವನು ಸಹಾಯ ಮಾಡುವುದಾಗಿ ಹಾಗೂ ಇದಕ್ಕೆ ಪ್ರತಿಯಾಗಿ ರಾಮನು ವಾಲಿಯನ್ನು ಕೊಂದು ರುಮೆಯನ್ನು ಮರಳಿ ಕೊಡಿಸುವುದಾಗಿ ವಚನವನ್ನು ನೀಡುತ್ತಾನೆ. ಮುಂದೆ ವಾಲಿ ಹಾಗೂ ಸುಗ್ರೀವರ ಮಧ್ಯೆ ಯುದ್ಧ ನಡೆದಾಗ ರಾಮನು ಬಾಣ ಪ್ರಯೋಗಿಸಿ, ವಾಲಿಯನ್ನು ಕೊಲ್ಲುತ್ತಾನೆ.
ಮಾತಂಗ ಋಷಿಯ ಆಶ್ರಮವು ಋಷ್ಯಮುಖ ಪರ್ವತದ ತಪ್ಪಲಿನಲ್ಲಿತ್ತು. ನಂಬಿಕೆಗಳ ಪ್ರಕಾರ ವಿಜಯನಗರ ಸಾಮ್ರಾಜ್ಯದಲ್ಲಿದ್ದ ವಿರೂಪಾಕ್ಷ ದೇವಾಲಯದ ಸ್ವಲ್ಪ ದೂರದಲ್ಲೇ ಈ ಪರ್ವತವಿದ್ದು ಅದನ್ನು ರಾಮಾಯಣ ಕಾಲದಲ್ಲಿ ಬಂದಿರುವ ಋಷ್ಯಮುಖ ಪರ್ವತವೆಂದೇ ಹೇಳಲಾಗುತ್ತಿದೆ. ಆ ಪರ್ವತದಲ್ಲಿರುವಂತಹ ಗುಹೆಯಲ್ಲಿ ಸುಗ್ರೀವನು ವಾಸವಾಗಿದ್ದನೆಂದೂ, ಅದೇ ಗುಹೆಯಲ್ಲಿ ರಾಮನು, ಹನುಮಂತನೊಂದಿಗೆ ಸುಗ್ರೀವನನ್ನು ಭೇಟಿಯಾಗಿದ್ದಾಗಿಯೂ ಹೇಳಲಾಗುತ್ತದೆ. ಈಗ ಅದೇ ಗುಹೆಯ ಪಕ್ಕದಲ್ಲಿ ದೇವಸ್ಥಾನವನ್ನು ಕಟ್ಟಲಾಗಿದ್ದು ಅಲ್ಲಿ ಸೂರ್ಯ ದೇವ ಹಾಗೂ ಸುಗ್ರೀವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
(ಸಂಗ್ರಹ) ಸತೀಶ್ ಶೆಟ್ಟಿ ಚೇರ್ಕಾಡಿ
ವಾಲಿ-ಸುಗ್ರೀವರ ಹೋರಾಟದ ಚಿತ್ರ ಕೃಪೆ: ಇಂಟರ್ನೆಟ್ ತಾಣ