ಎಚ್ಚರ ತಪ್ಪದಿರಲಿ ಜನತೆ

ಎಚ್ಚರ ತಪ್ಪದಿರಲಿ ಜನತೆ

ದೇಶಕ್ಕೆ ಮತ್ತೆ ಕೊರೋನಾ ಸೋಂಕಿನ ಭೀತಿ ! ಕಳೆದ ಎರಡೂವರೆ ವರ್ಷಗಳಿಂದ ಭಾರತವಲ್ಲದೆ ಪ್ರಪಂಚವನ್ನು ಗಡಗಡ ನಡುಗಿಸಿದ ಕೊರೋನಾ ಮೂರನೆಯ ಅಲೆ ಜನತೆಯನ್ನು ಭಯಭೀತಗೊಳಿಸಿದೆ. ಒಂದು ಕಡೆ ಮೈ ಕೊರೆಯುವ ಚಳಿ ಮತ್ತು ಶೀತ. ವಿಷಮ ಜ್ವರ ಎಲ್ಲರಿಗೂ ಬಲುಬೇಗನೆ ಹರಡುವಂತಹ ಶೀತದ ವಾತಾವರಣ. ಮತ್ತೊಂದು ಕಡೆ ಹಬ್ಬ ಹರಿದಿನ ಮತ್ತು ಜಾತ್ರೆ. ಇದರ ನಡುವೆ ಚುನಾವಣೆಗಳು.

ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ದೇಶದ ಐದು ಪ್ರಮುಖ ರಾಜ್ಯಗಳ ವಿಧಾನಸಭೆಗಳಿಗೆ ಕೇಂದ್ರ ಚುನಾವಣ ಆಯೋಗವು ವೇಳಾಪಟ್ಟಿಯನ್ನು ಘೋಷಿಸಿದೆ. ಇದೇ ವೇಳೆ ಒಮಿಕ್ರಾನ್ ವೈರಾಣು ದಿನೇ ದಿನೇ ದೇಶದಲ್ಲಿ ಹರಡುವ ಗತಿಯೂ ಹೆಚ್ಚಾಗಿದೆ. ತಜ್ಞರ ಪ್ರಕಾರ ಮುಂದಿನ ಮೂರು ತಿಂಗಳವರೆಗೆ ಕೊರೋನಾ ಸೋಂಕು ಹರಡುವಿಕೆಯ ಪ್ರಮಾಣ ಅಧಿಕ ಎಂಬುದು. ಈ ದಿಶೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳುತ್ತಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳು ಸ್ವಾಗತಾರ್ಹ. ದೇಶದಲ್ಲಿ ಈಗಾಗಲೇ ೧೨೫ ಕೋಟಿ ಮಂದಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ. ಅಂದರೆ ಸರಿಸುಮಾರು ೬೦ ಕೋಟಿ ಮಂದಿಯೀಗ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದಂತಾಗಿದೆ. ಆದರೆ ಇನ್ನೂ ಬಹಳಷ್ಟು ಮಂದಿ ಲಸಿಕೆ ಪಡೆದಿಲ್ಲ. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಲಸಿಕೆ ಪಡೆದು ಸುರಕ್ಷಿತವಾಗಬೇಕಾಗಿದೆ.

ಅಲ್ಲದೆ ಬರೀ ಎರಡು ಡೋಸ್ ಲಸಿಕೆಯನ್ನು ಪಡೆದ ಮಾತ್ರಕ್ಕೆ ಕೊರೋನಾ ನಮ್ಮ ದೇಶದಿಂದ ಓಡಿಹೋಯಿತೆಂದು ಭಾವಿಸುವುದು ಅರ್ಥಹೀನ. ನಾವೆಷ್ಟು ಮುನ್ನೆಚ್ಚರಿಕೆ ವಹಿಸುತ್ತೇವೆ ಎಂಬುದರ ಮೇಲೆ ಸೋಂಕು ನಮ್ಮ ದೇಹ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವುದುಂಟು. ಒಮಿಕ್ರಾನ್ ವೈರಾಣು ಅತಿ ಅಪಾಯಕಾರಿಯೇನಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞ ವೈದ್ಯರೇ ಹೇಳಿದ್ದಾರೆ. ಆದರೆ ಹೀಗೆಂದು ನಾವು ಎಚ್ಚರ ತಪ್ಪುವಂತಿಲ್ಲ. ಮಿಗಿಲಾಗಿ ನಾವೆಲ್ಲರೂ ನಮ್ಮ ಕೆಲಸದಲ್ಲಿ ನಿರತರಾಗಬೇಕಾಗಿದೆ ಮತ್ತು ಭಯದ ವಾತಾವರಣದಿಂದ ಮೊದಲು ಹೊರಬರಬೇಕಾಗಿದೆ. ಮೊದಲ ಸಾರಿ ಕೊರೋನಾ ವಿಜೃಂಭಿಸಿದಾಗ ಇದ್ದಂತಹ ಅಸಹಾಯಕ ಪರಿಸ್ಥಿತಿಯಾಗಲೀ, ಸನ್ನಿವೇಶವಾಗಲೀ ಈಗ ದೇಶದಲ್ಲಿಲ್ಲ. ಒಟ್ಟಿನಲ್ಲಿ ನಮ್ಮ ಆರೋಗ್ಯವಿಂದು ನಮ್ಮ ಕೈಯಲ್ಲಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವುದು, ಮಾಸ್ಕ್ ಮತ್ತು ಸ್ಯಾನಿಟೈಜರ್ ಬಳಸುವುದು ಇವೆಲ್ಲ ಮಾರ್ಗಸೂಚಿಗಳನ್ನು ನಾವೆಲ್ಲರೂ ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಸೇವಿಸುವ ಆಹಾರ ಮತ್ತು ನೀರಿನ ಬಗ್ಗೆಯೂ ಜನತೆಗೆ ತಿಳುವಳಿಕೆ ಮುಖ್ಯ. ಇನ್ನು ಶಾಲಾ, ಕಾಲೇಜುಗಳು ಮೊನ್ನೆಯಷ್ಟೇ ಕೆಲವು ಕಡೆ ತೆರೆಯಲಾಗಿದ್ದು ಮತ್ತೊಮ್ಮೆ ಇವುಗಳು ಬೀಗಮುದ್ರೆಗೊಳಗಾಗುವ ಸಾಧ್ಯತೆಗಳಿವೆ. ಸೋಂಕು ಹೆಚ್ಚಳವಾದಲ್ಲಿ ಮತ್ತೆ ಲಾಕ್ ಡೌನ್ ನಿರ್ಬಂಧ ಜಾರಿಯಾಗುವುದು ಖಂಡಿತ. ಯಾವುದನ್ನೂ ಜನತೆ ಸರಿಯಾಗಿ ಪಾಲನೆ ಮಾಡದೇ ಇದ್ದಲ್ಲಿ ಸರ್ಕಾರಗಳು ಅನಿವಾರ್ಯವಾಗಿ ಕೋವಿಡ್ ನಿಗ್ರಹ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗುತ್ತದೆ. ಒಟ್ಟಿನಲ್ಲಿ ದೇಶಕ್ಕೆ ಈಗ ಎಲ್ಲರ ಆರೋಗ್ಯ ಮತ್ತು ಸುರಕ್ಷತೆಯೇ ಮುಖ್ಯ. ಪಾದಯಾತ್ರೆ, ಉತ್ಸವ, ಜಾತ್ರೆ ಸಭೆ ಸಮಾರಂಭವಲ್ಲ.

(ಕೃಪೆ: ಹೊಸ ದಿಗಂತ, ಪತ್ರಿಕೆಯ ಸಂಪಾದಕೀಯ ಪುಟದಿಂದ ಆಯ್ದದ್ದು.)

 ಚಿತ್ರ ಕೃಪೆ: ಇಂಟರ್ನೆಟ್ ತಾಣ