ಎಚ್ಚೆಸ್ವಿ ಹೆಚ್ಚೆಚ್ಚು ಸವಿ

ಎಚ್ಚೆಸ್ವಿ ಹೆಚ್ಚೆಚ್ಚು ಸವಿ

ಕನ್ನಡ ಸಾಹಿತ್ಯದ ಮೇರುಪರ್ವತದಂತಿದ್ದ, 'ಭಾವಕವಿ' ಎಂದೇ ಜನಜನಿತರಾಗಿದ್ದ ಎಚ್‌. ಎಸ್. ವೆಂಕಟೇಶಮೂರ್ತಿ ಅವರ ನಿರ್ಗಮನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಖಂಡಕಾವ್ಯ, ಮಕ್ಕಳ ಸಾಹಿತ್ಯ, ನಾಟಕ ಸೇರಿದಂತೆ ಸಾಹಿತ್ಯ ಹತ್ತಾರು ಮಗ್ಗುಲುಗಳನ್ನು ಸ್ಪರ್ಶಿಸಿದ ಖ್ಯಾತಿ ಎಚ್ಚೆಸ್ವಿಯವರದ್ದು, 'ಕಾವ್ಯವೇ ಜೀವನ, ಮೌನವೇ ಅನುಸಂಧಾನ' ಎನ್ನುವ ತತ್ವದಲ್ಲಿ ನಂಬಿಕೆಯಿಟ್ಟು ಕಾವ್ಯ ರಚನೆಗಳ ' ಮೂಲಕ ಭಾವಲೋಕವನ್ನು ಎಚ್ಚೆಸಿ ಅವರಿಸಿಕೊಂಡ ಪರಿಯೇ ಅನನ್ಯ. 

ಕನ್ನಡದ ಪುರಾತನ ಹಾಗೂ ಹಿಂದಿನ ಕವಿಗಳು ರಾಮಾಯಣ, ಮಹಾಭಾರತ ಆಧರಿಸಿ ಸಾಕಷ್ಟು ರಚನೆಗಳನ್ನು ಕೊಡುಗೆಯಾಗಿ ನೀಡಿದ್ದರು. ಆದರೆ, ಅವುಗಳ ಸತ್ವಗಳೆಲ್ಲ ಹಳೇಗನ್ನಡದಲ್ಲಿ ಅಡಗಿತ್ತು. ಕಾಲದ ವೇಗದಲ್ಲಿ ಮೂಲೆಗುಂಪಾಗುತ್ತಿದ್ದ ಹಳೇಗನ್ನಡ ಸಾಹಿತ್ಯವನ್ನು ಭಿನ್ನನೋಟದಲ್ಲಿ ಹೊಸ ನಿರೂಪಣೆಯೊಂದಿಗೆ ಕಾವ್ಯಸುಗಂಧವನ್ನು ಅಸಂಖ್ಯ ಓದುಗರೆದೆಗ ದಾಟಿಸಿದ ಹೆಗ್ಗಳಿಕೆ ಎಚ್ಚೆಸ್ವಿಯದ್ದು, ಕಬ್ಬಿಣದ ಕಡಲೆಯಂತಿದ್ದ ಹಳೇಗನ್ನಡದ ಕಾವ್ಯ, ಕತೆಗಳನ್ನು ಕಬ್ಬಿನರಸದಂತೆ, ಹಳೇಗನ್ನಡ-ಹೊಸಗನ್ನಡ ನಡುವೆ ಇವರು ಕಟ್ಟಿದ ಸೇತು ಕನ್ನಡ ಸಾರಸ್ವತ ಲೋಕಕ್ಕೆ ಶ್ರೇಷ್ಠ ಉಡುಗೊರೆಯೇ ಸರಿ.

ಕನ್ನಡದ ಸಾಹಿತ್ಯದ ಭವಿಷ್ಯವನ್ನು ಅರಳಿಸುವಲ್ಲಿ ಮಕ್ಕಳ ಸಾಹಿತ್ಯದ ಪಾತ್ರ ಮಹತ್ವದ್ದೆಂದು ಭಾವಿಸಿದ ಎಚ್ಚೆಸ್ವಿ ತಮ್ಮ ಇಡೀ ಸಾಹಿತ್ಯಪಯಣದಲ್ಲಿ ಅದನ್ನು ಜತೆಗೂಡಿಸಿಕೊಂಡೇ ಹೆಜ್ಜೆ ಹಾಕಿರುವುದು ವಿಶೇಷ. ಮಕ್ಕಳ ಭಾವಲೋಕಕ್ಕೆ ಇಳಿದು, ಅವರ ಆಲೋಚನೆಗಳಿಗೆ ತಕ್ಕಂತೆ ಪರಕಾಯ ಪ್ರವೇಶಿಸುವ ಕಲೆ ಅವರಿಗೆ ಜನ್ಮದತ್ತವಾಗಿಯೇ ಒಲಿದಿತ್ತೇನೋ. ಮಹಾಭಾರತ. ರಾಮಾಯಣಗಳಲ್ಲದೆ, ಆಧುನಿಕ ಭಾವಗೂಡಿನಿಂದಲೂ ಒಡಮೂಡಿದ ಕಾವ್ಯದ ಬೆರಗನ್ನು ಮಕ್ಕಳ ಬೆರಗಿನ ಪರಿಧಿಗೆ ಮುಟ್ಟಿಸುವುದು ಅಷ್ಟು ಸುಲಭದ ಸಾಹಸವೇನಲ್ಲ, ತಮಗೆ ಕಾಡಿದ ರಾಧೆ- ಕೃಷ್ಣನನ್ನು ಮಕ್ಕಳಾದಿಯಾಗಿ ಎಲ್ಲ ವಯೋಮಾನದವರಿಗೂ ಕಾಡುವಂತೆ ಮಾಡಿರುವುದೂ ಮಹಾನ್ ಕೆಲಸವೇ.

ಭಾವಗೀತೆಗಳ ಮೂಲಕ ಕ್ಯಾಸೆಟ್ ಲೋಕಕ್ಕೆ ಹೊಸ ಮೆರುಗು ತಂದುಕೊಟ್ಟು ಜನಪ್ರಿಯರಾದರೂ, ಆ ಜನಪ್ರಿಯತೆ ಎಚ್ಚೆಸ್ವಿಯ ಕ್ಲಾಸಿಕ್ ರಚನೆಗಳ ಹೊಳಪನ್ನೇನೂ ಕುಂದಿಸಲಿಲ್ಲ. 'ಎಲೆಗಳು ನೂರಾರು ಭಾವದ ಎಲೆಗಳು ನೂರಾರು' ಎನ್ನುತ್ತಲೇ ಭಾವಗೀತೆಗಳಿಗೂ ಸಮಷ್ಟಿ ಪ್ರಜ್ಞೆಯ ಜವಾಬ್ದಾರಿ ಮೂಡಿಸಿದ್ದರು. ಸಾಂಪ್ರದಾಯಿಕ ಸಾಹಿತ್ಯ ರಚನೆಯ ಚೌಕಟ್ಟಿನಾಚೆಗೆ ಜಿಗಿಯಲು ಅವರು ತೋರಿದ ಪ್ರಯತ್ನ ಇಲ್ಲಿ ಉಲ್ಲೇಖಾರ್ಹ. ಎಳೆಯ ಕಂಗಳ ಕನಸುಗಳನ್ನು ಬಾನಿನೆತ್ತರಕ್ಕೆ ಚಿಮ್ಮಿಸಿದ 'ಚಿನ್ನಾರಿ ಮುತ್ತ', 'ಕೊಟ್ರೇಶಿ ಕನಸು'ಗಳಿಂದ ಇತ್ತೀಚೆಗಿನ ಒಂದೂರಲ್ಲಿ' ಚಿತ್ರಕ್ಕೂ ಕಥೆ ಚಿತ್ರಕಥೆ-ಸಂಭಾಷಣೆ ಬರೆದಿದ್ದು: 'ಹಸಿರು ರಿಬ್ಬನ್'ಗೆ ನಿರ್ದೇಶನ ಹೇಳಿದ್ದು, ಪುನೀತ್ ರಾಜ್‌ ಕುಮಾರ್ ನಟನೆಯ 'ಮೈತ್ರಿ' ಚಿತ್ರಕ್ಕೆ ಸಾಹಿತ್ಯ, 'ಮುಕ್ತ' ಮತ್ತು 'ಮಹಾಪರ್ವ'ದಂಥ ಕಿರುತೆರೆ ಧಾರಾವಾಹಿಗಳಿಗೆ ಟೈಟಲ್ ಸಾಂಗ್ ಬರೆದು ಎಚ್ಚೆಸ್ವಿ ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಅವರೊಳಗಿನ ಕಲ್ಪನೆಯ ಅಕ್ಷಯಪಾತ್ರೆಗೆ ಸಾಕ್ಷಿ.

ವಾದ- ವಿವಾದಗಳ ಅಲೆಗೆ ಸಿಲುಕದೆ ಭಾವ-ಸಂವಾದಕ್ಕಷ್ಟೇ ತೆರೆದುಕೊಂಡು, ವಿಶ್ವವನ್ನು ಕನ್ನಡದೊಳಗೆ ಕಾಣುವ ಕಲೆಯನ್ನು ಹೇಳಿಕೊಟ್ಟವರು ಎಚ್ಚೆ, ರಾಮ, ಕೃಷ್ಣ, ಬುದ್ಧ, ಗಾಂಧಿ ಯನ್ನು ವಿಶಿಷ್ಟವಾಗಿ ಪರಿಚಯಿಸುತ್ತಲೇ, ಮನುಷ್ಯತ್ವದ ಭಾಷೆಗೆ ಮಿಡಿಯುವುದನ್ನು ಕಲಿಸಿದ ಚೇತನ ಇನ್ನು ನೆನಪಷ್ಟೇ. ಹೋಗಿ ಬನ್ನಿ, ಎಚ್ಚೆಸ್ವಿ…

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ

ಚಿತ್ರ ಕೃಪೆ: ಅಂತರ್ಜಾಲ ತಾಣ