ಎಚ್ ಎಸ್ ವಿ

“ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ…
ಎಲ್ಲುಂಟು ಆಚೆ ತೀರ?”
ಚಳ್ಳಕೆರೆಯಲ್ಲಿ ನಮ್ಮ ತಾತನ ಮನೆಗೆ ಬಂದಾಗ ಒಮ್ಮೆ ಅವರ ಕವನಗಳಿರುವ ಒಂದು ಪುಸ್ತಕವನ್ನು ಕೊಟ್ಟಿದ್ದರಂತೆ. ಅವರು ಮುಂಚಿನಿಂದಲೂ ಕಾವ್ಯದಲ್ಲಿ ಆಸಕ್ತಿ ಇಟ್ಟುಕೊಂಡಿದ್ದರು ಎಂದು ಅಜ್ಜಿಯ ಮನೆಯವರೆಲ್ಲ ಹೇಳುತ್ತಿದ್ದರು. ನಮ್ಮ ಅಜ್ಜಿ ತಾತನ ಬಂಧುಗಳಲ್ಲಿ ಎಲ್ಲರಿಗೂ ಓದುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಕಾವ್ಯದಲ್ಲಿ ಇವರೇ ಹೆಚ್ಚು ತೊಡಗಿಸಿಕೊಂಡವರು.
ಅವರ ಭಾವಗೀತೆಗಳನ್ನು ಹಾಡಾಗಿ ಕೇಳಿ ನನಗೆ ಅವರ ಪರಿಚಯವಾಗಿತ್ತು. ಒಮ್ಮೆ ಸಂಪದ.ನೆಟ್ ಗಾಗಿ ಅವರ ಸಂದರ್ಶನ ರೆಕಾರ್ಡ್ ಮಾಡಲು ಎಚ್ ಎಸ್ ವಿ ಯವರ ಮನೆಗೆ ಹೋದಾಗ ಅವರಿಗೆ ನನ್ನ ಪರಿಚಯ ಮಾಡಿಕೊಂಡಿದ್ದೆ. ಹಾಗೆಯೇ ನಡೆದ ಮಾತಿನಲ್ಲಿ ದುರ್ಗದ ‘ಲೀಲಾ’ ನನ್ನ ಅಜ್ಜಿಗೆ ತಂಗಿಯಾಗಬೇಕು ಎಂದು ಹೇಳಿದ್ದೆ. ಇವರು ಅವರ ಮನೆಗೆ ಆಗಾಗ ಹೋಗುತ್ತಿದ್ದುದರ ಬಗ್ಗೆ ನನಗೆ ತಿಳಿದು ಬಂದಿತ್ತು.
“ಲೀಲಕ್ಕ ನಮ್ಮ ಬಂಧು” ಎಂದು ತಕ್ಷಣ ನನಗೆ ತಿಳಿಸಿದ್ದರು.
ಹತ್ತು ವರ್ಷಗಳ ಕೆಳಗೆ ಬೆಂಗಳೂರಿನಿಂದ ಹೊರಗೆ ಬಂದ ಮೇಲೆ ನನಗೆ ಸಾಹಿತಿಗಳ ಒಡನಾಟವು ಕಡಿಮೆಯಾಯಿತು. ಎಚ್ ಎಸ್ ವಿ ಮನೆಗೆ ಹೋಗಬೇಕು ಎಂದು ಆಗಾಗ ಮನಸ್ಸಿಗೆ ಬರುತ್ತಿತ್ತು, ಆದರೆ ಭೇಟಿಕೊಡಲಾಗಲಿಲ್ಲ.
“ನಿಮ್ಮ ಮಾಮನಿಗೆ ಅಭ್ಯಾಸಕ್ಕೆ ಬರಲು ಹೇಳಿ. ಎಷ್ಟೊಂದು ತಿಳಿದುಕೊಂಡಿದ್ದಾರೆ!” ಎಂದು ಒಮ್ಮೆ ಹೇಳಿದ್ದರು. ಅದನ್ನು ನಾನು ನನ್ನ ಮಾಮನಿಗೂ ತಿಳಿಸಿದ್ದೆ. ಮಾಮ ಅಭ್ಯಾಸಕ್ಕೆ ಹೋದಂತೆ ಕಾಣಲಿಲ್ಲ. ತಿಳುವಳಿಕೆಯ ಗಂಧವಾಗಿ ಆಹ್ಲಾದ ನೀಡುವ ಮನಸ್ಸುಗಳು ಹೆಚ್ಚಿನಂತೆ ತಾನಾಯ್ತು, ತನ್ನ ಓದಾಯ್ತು ಎಂದು ಇರುವುದರಲ್ಲಿ ತಪ್ಪಿಲ್ಲ. ಗಾಳಿ ಬೀಸಿದೆಡೆಗೆ ಸುಗಂಧ ವಿಸ್ತರಿಸುತ್ತಿರುತ್ತದೆ.
ನಮಗೆಲ್ಲರಿಗಾಗಿ ಕಾವ್ಯದ ಸುಗಂಧವನ್ನು ಹರಡಿ ಎಚ್ ಎಸ್ ವಿ ಈಗ ದೂರ ಹೋಗಿದ್ದಾರೆ. ಮುಕ್ತಿಯ ಬಗ್ಗೆ ಆಲೋಚನೆಯ ಅವರ ಕಾವ್ಯದ ಸಾಲುಗಳು ಎಷ್ಟು ಜನಪ್ರಿಯವಾದವು. ಅಧ್ಯಾತ್ಮ ಅದೇ ಸಾಲುಗಳಲ್ಲಿ ಇದ್ದವು. ಕವಿ ಚೈತನ್ಯ ಮುಕ್ತಿಯನ್ನರಸಿ ಕ್ಷಿತಿಜದೆಡೆಗೆ ಹೆಜ್ಜೆ ಹಾಕಿ ನಡೆಯುತ್ತಿರುವರು ಎಂದು ನನಗೆ ಭಾಸವಾಗುತ್ತಿದೆ.