ಎತ್ತ ಸಾಗುತ್ತಿದ್ದೇವೆ ನಾವು...

ಎತ್ತ ಸಾಗುತ್ತಿದ್ದೇವೆ ನಾವು...

ಕ್ರಿಕೆಟ್ ನಲ್ಲಿ ಫಿಕ್ಸಿಂಗ್, ಕುದುರೆ ರೇಸ್ ನಲ್ಲಿ ಫಿಕ್ಸಿಂಗ್, ರಾಜಕೀಯದಲ್ಲಿ ಫಿಕ್ಸಿಂಗ್, ಸಿನಿಮಾ ಪ್ರಶಸ್ತಿಗಳಲ್ಲಿ ಫಿಕ್ಸಿಂಗ್, ಅಕಾಡೆಮಿಗಳ ಅಧಿಕಾರ ಮತ್ತು ಪ್ರಶಸ್ತಿಗಳಲ್ಲಿ ಫಿಕ್ಸಿಂಗ್, ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ಫಿಕ್ಸಿಂಗ್, ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಫಿಕ್ಸಿಂಗ್, ಮಹಾನಗರ ಪಾಲಿಕೆ, ಪುರಸಭೆ, ಪಂಚಾಯತಿಗಳಲ್ಲಿ ಜಾತಿ ಆಧಾರಿತ ಮೀಸಲಾತಿ ನಿಗದಿಯಲ್ಲಿ ಫಿಕ್ಸಿಂಗ್, ರಿಯಾಲಿಟಿ ಶೋಗಳಲ್ಲಿ ವಿಜೇತರ ಫಿಕ್ಸಿಂಗ್, ಮತದಾನದಲ್ಲಿ ಜಾತಿಗಳ ಫಿಕ್ಸಿಂಗ್ ಇಡೀ ಸಮಾಜವೇ,

ಫಿಕ್ಸಿಂಗ್ ಫಿಕ್ಸಿಂಗ್ ಫಿಕ್ಸಿಂಗ್...

ಎತ್ತ ಸಾಗುತ್ತಿದ್ದೇವೆ ನಾವು...

ಈ ಎಲ್ಲಾ ಫಿಕ್ಸಿಂಗ್ ಗಳು ಬಹುತೇಕ ಹಣ ಅಧಿಕಾರಕ್ಕಾಗಿ ನಡೆಯುತ್ತಿರುವುದು ಸ್ಪಷ್ಟವಾಗಿ ಕಾಣಬಹುದು. ಹಾಗಾದರೆ ಈ ಸಮಾಜದಲ್ಲಿ ಬದುಕಿನ ಮೂಲ ಆಶಯವೇ ಹಣ ಅಧಿಕಾರ ಎಂದಾಯಿತು. ಅದಿಲ್ಲದೇ ಬದುಕೇ ಇಲ್ಲವೇ. ಹಣ ಮತ್ತು ಅಧಿಕಾರ ಕೆಲವರಿಗೆ ಮಾತ್ರ ಸಿಗುತ್ತದೆ. ಉಳಿದ ಬಹಳಷ್ಟು ಜನರ ಜೀವನದ ಅರ್ಥವೇನು ?

ಗೋವಾ ರಣಜಿ ಕ್ರಿಕೆಟ್ ನಾಯಕನಾಗಿದ್ದ ಕರ್ನಾಟಕದ ಹುಡುಗ ಮತ್ತು ಹಲವು ಪ್ರಖ್ಯಾತ ಉದಯೋನ್ಮುಖ ಆಟಗಾರರು, ಕೆಪಿಲ್ ತಂಡಗಳ ಮಾಲೀಕರು, ಹಿರಿಯ ಸಾಹಿತಿಗಳು, ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರುಗಳು, ಸಂಸದರು, ಧರ್ಮಾಧಿಕಾರಿಗಳು, ಮತದಾರರು, ಉದ್ಯಮಿಗಳು, ಸಿನಿಮಾ ನಟನಟಿಯರು ಸೇರಿ ಎಲ್ಲರೂ ಇದರಲ್ಲಿ ಭಾಗಿಯಾದರೆ ಸಮಾಜದ ಗತಿ ಏನು ?

ಸಿನಿಮಾಗಳಲ್ಲಿ ಚಿತ್ರಿಸುವಂತೆ ವಕೀಲರು, ಪೋಲೀಸರು, ರಾಜಕಾರಣಿಗಳು, ಪತ್ರಕರ್ತರು ಎಲ್ಲರೂ ಫಿಕ್ಸಿಂಗ್ ನಲ್ಲಿ ಭಾಗಿಯಾದರೆ ಮುಂದಿನ ಮಕ್ಕಳ ಭವಿಷ್ಯವೇನು ?

ಹಣವೇ ಮೌಲ್ಯಗಳಾಗಿ,

ಅಧಿಕಾರವೇ ಧರ್ಮವಾಗಿ,

ಪ್ರಚಾರವೇ ಸಂಪ್ರದಾಯವಾಗಿ,

ವಂಚನೆಯೇ ವೃತ್ತಿಯಾಗಿ,

ಮುಖವಾಡಗಳೇ ಸಹಜ ಗುಣಗಳಾಗಿ,

ಮಾರ್ಪಾಡಾಗುತ್ತಿರುವ ಈ ಹೊತ್ತಿನಲ್ಲಿ...

ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಅದಕ್ಕಾಗಿ ಈ ಕ್ಷಣದಿಂದಲೇ ಮೌನವಾಗಿ ಪ್ರಾರಂಭಿಸೋಣ. ಹಣದ ಮೋಹ ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ, ಮಾನವೀಯ ಮೌಲ್ಯಗಳ ಪಾಲನೆ ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ, ದ್ವೇಷವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ, ಪ್ರೀತಿಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ, ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ, ತಾಳ್ಮೆಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ, ಸ್ವಾರ್ಥವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ, ತ್ಯಾಗವನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ, ಗಲಾಟೆಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ, ಸ್ನೇಹಿತರನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ, ಭ್ರಮೆಗಳನ್ನು ಸ್ವಲ್ಪ ದೂರ ಮಾಡೋಣ, ವಾಸ್ತವಕ್ಕೆ ಸ್ವಲ್ಪ ಹತ್ತಿರವಾಗೋಣ,

ಬೂಟಾಟಿಕೆ ಸ್ವಲ್ಪ ಕಡಿಮೆ ಮಾಡೋಣ, ನ್ಯೆಜತೆಗೆ ಸ್ವಲ್ಪ ಹೆಚ್ಚು ಒತ್ತು ಕೊಡೋಣ, ಎಲ್ಲವನ್ನೂ ನಿಮ್ಮ ಕುಟುಂಬಕ್ಕಾಗಿ ಮಾಡಿ, ಆದರೆ ಸಮಾಜಕ್ಕಾಗಿ ಸ್ವಲ್ಪವಾದರೂ ಕೊಡಿ,

ಎಲ್ಲವೂ ನಿಮಗಾಗಿ, 

ನೀವು ಮಾತ್ರ ಇತರರಿಗಾಗಿ,

ಮುಖವಾಡ ಮನಸ್ಥಿತಿ ಕಡಿಮೆ ಮಾಡಿ,

ವಾಸ್ತವ ಮನಸ್ಥಿತಿಗೆ ಹೆಚ್ಚು ಹತ್ತಿರವಾಗಿ,

ಈಗಿನಿಂದಲೇ ಪ್ರಯತ್ನಿಸಿ, ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ..

ಎಲ್ಲರಿಗೂ ಒಳ್ಳೆಯದಾಗಲಿ....

  • ಜ್ಞಾನ ಭಿಕ್ಷಾ ಪಾದಯಾತ್ರೆಯ 157 ನೆಯ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಲೇಖನ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣದ ಕೃಪೆ