ಎಲ್ಲೆಗಳ ದಾಟಿದವಳು

“ನನ್ನ ಬರವಣಿಗೆಯ ಆರಂಭ ಸಣ್ಣ ಕತೆಗಳಿಂದಲೇ ಆಗಿದ್ದರೂ ಮೊದಲಿಗೆ ಪ್ರಕಟವಾದದ್ದು ಕವಿತೆಗಳು. ಕಳೆದ ಹತ್ತು ವರ್ಷಗಳಿಂದ ಇತ್ತೀಚಿನವರೆಗೆ ಬರೆದ ಆಯ್ದ ಕತೆಗಳ ಸಂಕಲನ ‘ಎಲ್ಲೆಗಳ ದಾಟಿದವಳು’. ಕತೆ ಹೇಳುವ ಮತ್ತು ಕೇಳುವ ಆಸಕ್ತಿ ಚಿಕ್ಕಂದಿನಿಂದಲೇ ಬಂದದ್ದು, ಅಂತಹ ಆಸಕ್ತಿಯಿಂದಲೇ ಈ ಕತೆಗಳು ಸಹ ಬರೆಸಿಕೊಂಡಿವೆ. ಕತೆಗಳ ಓದು ಎಷ್ಟು ಮುದ ನೀಡುವ ಸಂಗತಿಯೋ ಬರೆಯುವುದು ಅಷ್ಟೇ ಕಷ್ಟ ಎಂಬುದು ನನ್ನ ಅನುಭವ. ಆದರೆ ಎಷ್ಟೋ ಹೊರ ಜಗತ್ತಿನ ಮತ್ತು ಒಳಗಿನ ಅನುಭವಗಳನ್ನು ಹೇಳಿಕೊಳ್ಳಲು ಕಥೆಗಳು ನೆರವಾಗಿವೆ” ಎನ್ನುವುದು ‘ಎಲ್ಲೆಗಳ ದಾಟಿದವಳು’ ಕಥಾ ಸಂಕಲನದ ಕಥೆಗಾರ್ತಿ ಶ್ರುತಿ ಬಿ.ಆರ್ ಅವರ ಮಾತುಗಳು.
ಈ ಸಂಕಲನದ ಬಗ್ಗೆ ತಮ್ಮ ಅನಿಸಿಕೆಯನ್ನು ಮುನ್ನುಡಿಯಲ್ಲಿ ಹಂಚಿಕೊಂಡಿದ್ದಾರೆ ಚಂದನ್ ಎಸ್ ವಿ. ಅವರ ಪ್ರಕಾರ “ ಮಧ್ಯಮ ವರ್ಗದ ಸಣ್ಣ ಆಶೆಗಳನ್ನು ಈ ವ್ಯವಸ್ಥೆ ಪೂರೈಸುತ್ತದೆ. ಆದರೆ ಹಣವನ್ನು ಕಳೆದುಕೊಂಡ ಮೇಲಿನ ಸ್ಥಿತಿ ನಿರ್ವಹಿಸಲು ಅಸಾಧ್ಯವಾಗಿ ಕೊನೆಗೆ ದೇವರು ಮೈಮೇಲೆ ಬರುವವರ ಸಹಾಯ ಕೇಳಿ ಹೋಗುತ್ತಾರೆ. ಆ ದೇವರ 'ಮಾಧ್ಯಮ'ವಾದ ಹೆಣ್ಣುಮಗಳು ದುಡ್ಡು ಕೇಳಲು ಹೆದರಿಸಿದಾಗ ಇಬ್ಬರು ಹೊರ ಬರುತ್ತಾರೆ. ಸೂಕ್ಷ್ಮವಾಗಿ ಇಂಥ ಆಚರಣೆಗಳು ದುಡ್ಡಿನ ವ್ಯವಹಾರವಾಗುವುದು ಕತೆಯಲ್ಲಿ ಸೂಚಿತವಾಗುತ್ತದೆ.
'ದ್ಯಾವಮ್ಮನೂ ಸತ್ಯನಾರಾಯಣನೂ' ಕತೆಯು ಸಂಕೀರ್ಣತೆಯನ್ನು ವಿಶ್ಲೇಷಿಸುತ್ತದೆ. ದ್ಯಾವಮ್ಮನ ವಾದವೆಂದರೆ ಕೋವಿಡ್ ಕಾಲದಲ್ಲಿ ನಾಯಿಗಳಿಗೆ ಯಾರೂ ತಂಗಳನ್ನವನ್ನು ಹಾಕುವುದಿಲ್ಲ. ಆದ್ದರಿಂದ ಅವಳೂ ದಿನವೂ ಬಿರಿಯಾನಿ ಮಾಡಿಕೊಂಡುಬಂದು ಸತ್ಯನಾರಾಯಣನ ಮನೆಯ ಹತ್ತಿರ ಬೀದಿಯಲ್ಲಿ ಅದನ್ನು ಹಾಕಿ ಹೋಗುತ್ತಾಳೆ. ಇದರಿಂದ ವ್ಯಗ್ರನಾದ ಸತ್ಯನಾರಾಯಣ, ಅವಳು ಜಗ್ಗುವುದಿಲ್ಲ. ಆದರೆ ಅವನಿಗೆ ಜ್ವರ ಬಂದು ಅವನ ಮನೆಯ ಬಾಗಿಲು, ಗೇಟ್ ತೆರೆಯದಿದ್ದಾಗ ಅವಳು ಅವನ ಬಗ್ಗೆ ಅನುಕಂಪ ತೋರಿಸುತ್ತಾಳೆ, ಕೋವಿಡ್ ನಿಂದಾಗಿ ಅವನ ಮನೆಯ ದಾರಿ ಬಂದಾಗುತ್ತದೆ. ಈ ಕತೆಯಲ್ಲಿ ತೀವ್ರತೆಯಿಲ್ಲದಿದ್ದರೂ ಮನುಷ್ಯ ಭಾವನೆಗಳ ಅನಿರೀಕ್ಷಿತ ಮಗ್ಗಲುಗಳನ್ನು ಸಂಕ್ಷಿಪ್ತವಾಗಿ ಸೂಚಿಸುತ್ತದೆ.
'ಎಲ್ಲೆಗಳ ದಾಟಿದವಳು' ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ ಭಾಗವನ್ನು ನಿರೂಪಿಸುವ ಅಜ್ಜಿ ಕೂಡ ಎಲ್ಲೆಗಳ ದಾಟದವಳು. ಎಲ್ಲವನ್ನೂ ಸಹಿಸಿಕೊಂಡ ದೊಡ್ಡಮ್ಮ ಅದೇ ಊರಿನ ಸಾಬನೊಬ್ಬನನ್ನು ಮದುವೆಯಾಗಿ ಅವನಿಂದ ಮಗುವನ್ನು ಪಡೆಯುತ್ತಾಳೆ.
"ನಾನು ಬೂಬಮ್ಮ ಆಗಿದೀನಿ, ಶಿವ ತೋರ್ಸಿದ ದಾರಿಲ್ಲೆ ನಡೆದಿದಿನಿ” ಎಂದು ದೊಡ್ಡಮ್ಮ ಹೇಳುವುದು ಕತೆಯ ಮುಖ್ಯ ವಾಕ್ಯವಾಗಿದೆ. ದೊಡ್ಡಮ್ಮನ ಕತೆ ಹೇಳಿದ ಅಜ್ಜಿ ಅವಳ ಪರವಾಗಿ ಹೇಳುವ ಮಾತುಗಳು ಕತೆಗೆ ಮುಖ್ಯವಾಗಿವೆ. ಸಾಂಪ್ರದಾಯಿಕ ಕುಟುಂಬದ ಕಟ್ಟುಪಾಡುಗಳ ನಡುವೆ ತನ್ನದೇ ಬಂಡಾಯ ಹೂಡುವ ಹೆಣ್ಣಿನ ಕತೆಯಾಗಿದೆ.
'ಶಕುನದ ಹಕ್ಕಿ' ಅಷ್ಟೇನು ಇಷ್ಟವಾಗಿಲ್ಲ. 'ಅನಾಮಧೇಯ' ಕತೆಯಲ್ಲಿ ಪತ್ರಗಳ ಮೂಲಕ ಮದುವೆ ಸಂಬಂಧವನ್ನು ಹಾಳುಗೆಡವುವುದು ಹೊಸದಾದ ವಸ್ತುವಲ್ಲ. ಆದರೆ ಇಲ್ಲಿ ತನ್ನ ಅಣ್ಣನ ಮಾತುಗಳಿಂದ ಮೋಸಹೋಗಿ ಇಂಥ ದುಷ್ಟ ಕೆಲಸಕ್ಕೆ ಭಾಗಿಯಾದವಳು ಕೂಡ ತನ್ನ ಸ್ವಾರ್ಥಕ್ಕಾಗಿ ಅಲ್ಲ. ತನ್ನ ಮುಗ್ಧತನದಿಂದ ಎನ್ನುವುದು ಕತೆಗೆ ಹೊಸ ತಿರುವನ್ನು ಕೊಡುತ್ತದೆ..
ದರಕಾಸ್ತು' ಕತೆಯ ಕತೆಗಾರ್ತಿ ಹೊರಜಗತ್ತನ್ನು ಸೂಕ್ಷ್ಮವಾಗಿ ನೋಡಬಲ್ಲರು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಭೂಮಿಯನ್ನು ನೆಚ್ಚಿಕೊಂಡವನ ಅಸಹಾಯಕತೆಯ ಕತೆ ಇದಾಗಿದೆ. ಧಾರೆ ಗಟ್ಟಿಯಾದ ಕತೆ. ಹೆಣ್ಣಿನ ದುಃಖವನ್ನು ಇಲ್ಲಿ ವಿವರಿಸಲಾಗಿದೆ. ಎಲ್ಲಿಯೂ ಭಾವುಕತೆಯ ಸುಳಿವಿಲ್ಲ. ಅಪ್ರಾಮಾಣಿಕವಾದ, ಕೆಲಸಕ್ಕೆ ಬಾರದ ಗಂಡನು ಸಮಾಜದಲ್ಲಿ ಪ್ರತಿಷ್ಟಿತ ವ್ಯಕ್ತಿಯಾಗಿರುವುದರ ನೋವು, ಅವಮಾನ ಇವೆಲ್ಲ ಪ್ರಭಾವಿಯಾಗಿ ಬಂದಿವೆ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.