ಎಷ್ಟು ದಿನ ಅಂತ ದ್ವೇಷಿಸೋದು...?

ಒಂದು ಪ್ರಾಥಮಿಕ ಶಾಲೆಯಲ್ಲಿ ಅದೊಂದು ದಿನ ಶಿಕ್ಷಕರು, ಒಂದು ಚೀಲದಲ್ಲಿ ಟೊಮ್ಯಾಟೊ ಹಣ್ಣುಗಳನ್ನು ತರುವಂತೆ ಮಕ್ಕಳಿಗೆ ಹೇಳುತ್ತಾರೆ. "ನೀವು ತರುವ ಪ್ರತಿಯೊಂದು ಟೊಮ್ಯಾಟೊ ಹಣ್ಣು ನೀವು ದ್ವೇಷ ಮಾಡುವ ಒಬ್ಬೊಬ್ಬ ವ್ಯಕ್ತಿಯ ಸಂಕೇತ. ನೀವು ಎಷ್ಟು ಜನರನ್ನು ಇಷ್ಟಪಡ್ತಿಲ್ವೋ, ದ್ವೇಷ ಮಾಡ್ತೀರೋ, ಅಷ್ಟು ಹಣ್ಣು ತಗೊಂಡು ಬನ್ನಿ".
ಮರುದಿನ ಮಕ್ಕಳು ಉತ್ಸಾಹದಿಂದ ಟೊಮ್ಯಾಟೊ ಹಣ್ಣುಗಳನ್ನು ತರ್ತಾರೆ. ಒಂದು, ಎರಡು, ಮೂರು, ಐದರವರೆಗೆ ಹೀಗೆ ಒಬ್ಬೊಬ್ಬ ವಿದ್ಯಾರ್ಥಿಯ ಹತ್ತಿರ ಟೊಮ್ಯಾಟೊ ಹಣ್ಣುಗಳಿದ್ದವು.
ಎಲ್ಲಾ ತಂದಾಯ್ತಲ್ಲ? ಅವನ್ನು ನಿಮ್ಮ ಚೀಲದಲ್ಲಿ ಇಟ್ಕೊಂಡಿರಿ. ಇವನ್ನೇ ದಿನಾ ತಗೊಂಡು ಬನ್ನಿ. ಅಷ್ಟೇ ಅಲ್ಲ, ನೀವು ಓಡಾಡುವಾಗಲೂ ಇವು ನಿಮ್ಮ ಜೊತೆಗೇ ಇರಬೇಕು, ಅಂತ ಹೇಳಿ ಪಾಠ ಮುಂದುವರಿಸಿದರು ಶಿಕ್ಷಕರು. ಮೊದಲ ದಿನ ಟೊಮ್ಯಾಟೊ ಚೀಲ ಹಿಡಿದುಕೊಂಡೇ ವಿದ್ಯಾರ್ಥಿಗಳು ಓಡಾಡಿದರು. ಸಂಜೆ ಹೊತ್ತಿಗೆ ಅವನ್ನು ಹೊತ್ಕೊಂಡೇ ಮನೆಗೆ ಹೋದರು.
ಮರುದಿನ ಶಾಲೆಗೆ ಬಂದಾಗ, ನಿನ್ನೆಯ ಉತ್ಸಾಹ ಮಕ್ಕಳಲ್ಲಿ ಇರಲಿಲ್ಲ. ಹೋದಲ್ಲೆಲ್ಲ ಟೊಮ್ಯಾಟೊ ಹಿಡ್ಕೊಂಡು ಓಡಾಡೋದು ಬೇಸರ, ಕಷ್ಟ ಎಂದೆಲ್ಲಾ ತಮ್ಮ ತಮ್ಮಲ್ಲೇ ಮಾತಾಡಿಕೊಳ್ತಾ ಇದ್ದರು. ಆದರೂ ಶಿಕ್ಷಕರ ಭಯದಿಂದ ಸುಮ್ಮನಿದ್ದರು. ಶಿಕ್ಷಕರು ಅದನ್ನು ನೋಡಿಯೂ ನೋಡದಂತೆ ಸುಮ್ಮನೆ ನಕ್ಕು ಪಾಠ ಶುರು ಮಾಡಿದರು.
ಮೂರನೇ ದಿನ ಮಕ್ಕಳ ದೂರುಗಳ ಪಟ್ಟಿ ದೊಡ್ಡದಾಗಿತ್ತು. ಟೊಮ್ಯಾಟೊಗಳು ಒಡೆದಿವೆ, ವಾಸನೆ ಬರ್ತಿವೆ ಎಂದು ದೂರಿದರು. ಎಲ್ಲಾ ಮಕ್ಕಳು ತಮ್ಮ ಟೊಮ್ಯಾಟೊ ಎಸೆದರೆ ಸಾಕು ಅಂತಿದ್ರು. ಆದರೆ, ಶಿಕ್ಷಕರ ಭಯ. ಕೊನೆಗೆ ಅಳುಕಿನಂದಲೇ ಕೇಳಿದರು: "ಟೊಮ್ಯಾಟೊಗಳೆಲ್ಲ ಕೊಳೆತು ಕೆಟ್ಟ ವಾಸನೆ ಬರ್ತಿವೆ ಟೀಚರ್. ಇವನ್ನು ಯಾಕೆ ತಗೊಂಡು ಓಡಾಡ್ಬೇಕು?"
ಶಿಕ್ಷಕರು ನಕ್ಕು ಹೇಳಿದರು 'ಈ ಟೊಮ್ಯಾಟೊ ನೀವು ದ್ವೇಷ ಮಾಡುವ ವ್ಯಕ್ತಿಗಳಿದ್ದಂತೆ ತಾನೇ ? ಅಂದರೆ, ಇವು ನಿಮ್ಮ ಮನಸ್ಸಿನ ದ್ವೇಷ ಇದ್ದ ಹಾಗೆ. ನೀವು ಯಾರನ್ನಾದರೂ ದ್ವೇಷ ಮಾಡೋಕೆ ಶುರು ಮಾಡಿದರೆ, ಕ್ರಮೇಣ ಆ ಭಾವನೆ ಆ ಕೊಳೆತ ಟೊಮ್ಯಾಟೊ ಹಣ್ಣುಗಳ ಕೆಟ್ಟ ವಾಸನೆಯ ಹಾಗೆ ನಿಮ್ಮ ಮನಸ್ಸಿಗೆ ರೇಜಿಗೆ ಹುಟ್ಟಿಸುತ್ತದೆ. ಹೇಗೆ ಕೊಳೆತ ಟೊಮ್ಯಾಟೊ ವಾಸನೆ ಅಹಿತಕರ ಭಾವನೆ ತರುತ್ತದೆಯೋ, ನಿಮ್ಮ ಮನಸ್ಸು ಕೂಡಾ ದ್ವೇಷದಿಂದ ರಾಡಿಯಾಗುತ್ತದೆ. ಅಸಹನೆ, ಅಸಮಾಧಾನ ಹೆಚ್ಚಿಸುತ್ತದೆ. ನಿಮ್ಮ ಮನಃ ಶಾಂತಿ ದೂರ ಮಾಡುತ್ತದೆ.
'ಆದ್ದರಿಂದ, ಯಾರನ್ನೂ ದ್ವೇಷ ಮಾಡಬೇಡಿ. ಇದರಿಂದ ಮನಸ್ಸು ಕೆಟ್ಟು ಹೋಗುತ್ತದೆ. ಒಂದೆರಡು ದಿನ ಈ ಟೊಮ್ಯಾಟೊ ಹೊತ್ಕೊಂಡು ಓಡಾಡಿದಕ್ಕೇ ಇಷ್ಟೊಂದು ಬೇಸರವಾಗಿದೆ ನಿಮಗೆ. ಇನ್ನು, ಇಡೀ ಜೀವನ ಅದು ಹೇಗೆ ದ್ವೇಷ ಮನಸ್ಸಿನಲ್ಲಿ ಇಟ್ ಕೊಂಡು ಓಡಾಡ್ತೀರಿ?
'ಎಷ್ಟು ಬೇಗ ಟೊಮ್ಯಾಟೊ ಆಚೆಗೆ ಎಸೆಯುತ್ತೀರೋ, ಅಷ್ಟು ಬೇಗ ಆರಾಮ ಆಗ್ತೀರಿ. ಮನಸ್ಸನ್ನು ಸ್ವಚ್ಛವಾಗಿ ಇಟ್ಕೊಳ್ಳಿ. ನಿಮಗಿಷ್ಟದ ವ್ಯಕ್ತಿ, ವಸ್ತುಗಳನ್ನು ಅದರಲ್ಲಿ ಸೇರಿಸ್ತಾ ಹೋಗಿ. ಕೆಟ್ಟ ಭಾವನೆ ಉಂಟು ಮಾಡುವ ವಿಷಯಗಳನ್ನು ದೂರ ಇಡಿ. ಅವನ್ನು ಹೊತ್ಕೊಂಡು ಓಡಾಡ್ಬೇಡಿ. ಆಗ ಜೀವನಪೂರ್ತಿ ಆರಾಮವಾಗಿರ್ತೀರಿ.'
(ವಾಟ್ಸಾಪ್ ನಿಂದ ಸಂಗ್ರಹಿತ)