ಏನಿದು ತೌಖ್ತೆ ಚಂಡಮಾರುತ?

ಏನಿದು ತೌಖ್ತೆ ಚಂಡಮಾರುತ?

ತೌಖ್ತೆ, ( tauktae) ಇದೊಂದು ಕೆಲವೇ ದಿನಗಳ ಹಿಂದೆ ತಾನೇ ಮಧ್ಯ ಅರಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಹೆಸರು. ಎರಡು ದಿನಗಳಲ್ಲಿ ಭಾರತದ ಪಶ್ಚಿಮ ಕರಾವಳಿಗಳಿಗೆ ರಭಸದ ಗಾಳಿಯೊಂದಿಗೆ ಮಳೆ ತರುವ ಚಂಡಮಾರುತವಿದು.

ಈ ಚಂಡಮಾರುತದ ಹೆಸರು ತೌಖ್ತೆ. ಅರೇ, ಇದೇನಿದು ವಿಚಿತ್ರ ಹೆಸರು, ಚಂಡಮಾರುತಕ್ಕೆ.  ಮ್ಯಾನ್ಮಾರ್ ರಾಷ್ಟ್ರ ಈ ಚಂಡಮಾರುತಕ್ಕೆ ಈ ಹೆಸರನ್ನು ಸೂಚಿಸಿದ್ದರು. ತೌಖ್ತೆ ಎಂದರೆ ಲಿಸಾರ್ಡ್ ( ಒಂದು ಜಾತಿಯ ಹಲ್ಲಿ ) .

ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತಗಳಿಗೆ ಇವುಗಳ ಸುತ್ತ ಇರುವ 13 ರಾಷ್ಟ್ರಗಳು ನಾಮಕರಣ ಮಾಡುತ್ತವೆ. ಈ ಹೆಸರುಗಳನ್ನು ಮೊದಲೇ ಸೂಚಿಸಿರುತ್ತವೆ. ಕಳೆದ ವರ್ಷ, ಪ್ರತೀ ರಾಷ್ಟ್ರ 13 ಹೆಸರುಗಳ ಪಟ್ಟಿ ಕೊಟ್ಟದ್ದರಿಂದ ಅದರಂತೆ 169 ಹೊಸ ಹೆಸರುಗಳ ಪಟ್ಟಿಯನ್ನು ಇಂಡಿಯನ್ ಮೆಟ್ರೋಲೋಜಿಕಲ್ ವಿಭಾಗ ಬಿಡುಗಡೆ ಮಾಡಿದೆ. ಈ ಹೊಸ ಪಟ್ಟಿಯಲ್ಲಿ ಕ್ರಮವಾಗಿ ಬಾಂಗ್ಲಾದೇಶ, ಭಾರತ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಕತಾರ್, ಸೌದಿ, ಶ್ರೀಲಂಕಾ, ಥಾಯ್ಲೆಂಡ್, ಯುಎಇ ಮತ್ತು ಯೆಮೆನ್. ಹೀಗೆ 13 ರಾಷ್ಟ್ರಗಳ ಹೆಸರು ಕ್ರಮವಾಗಿ ಬರುತ್ತವೆ. ತೌಖ್ತೆ ಮ್ಯಾನ್ಮಾರ್ ದೇಶ ಕೊಟ್ಟ ಹೆಸರು. ಮುಂದೆ ಬರುವ ಚಂಡಮಾರುತದ ಹೆಸರು ಯಾಸ್, ಅದು ಒಮಾನ್ ದೇಶದವರು ಸೂಚಿಸಿರುವುದು.

ಈ ತೌಖ್ತೆ ಚಂಡಮಾರುತ ಈಗ ತಾನೆ ಮಧ್ಯ ಅರಬೀ ಸಮುದ್ರದಲ್ಲಿ , ಭಾರತದ ನೈರುತ್ಯದಲ್ಲಿ ಹುಟ್ಟಿ ಪೂರ್ವದ ಕಡೆಗೆ ಅಂದರೆ ನಮ್ಮ ಪಶ್ಚಿಮದ ಕರಾವಳಿ ಕಡೆಗೆ ಬಂದಿದೆ. ಹವಾಮಾನ ವಿಶ್ಲೇಷಕರ ಪ್ರಕಾರ ಮೇ 16 ರಂದು ಪಶ್ಚಿಮದಿಂದ ಉತ್ತರಕ್ಕೆ ಹೊರಟು ಗುಜರಾತಿನ ದಕ್ಷಿಣ ತೀರಕ್ಕೆ ಮೇ 17 ರಂದು ತಲುಪಲಿದೆ.

ಚಂಡಮಾರುತವೆಂದರೆ ಸಮುದ್ರದಲ್ಲಿ ಒಂದು ಕಡೆ ನಿಮ್ನ ಒತ್ತಡ ಸ್ರಷ್ಟಿಯಾಗಿ ಸುತ್ತಲಿಂದಲೂ ಅಲ್ಲಿಗೆ ಗಾಳಿ ನುಗ್ಗುವುದು. ಅವು ನೇರ ನುಗ್ಗದೇ ಸುರುಳಿ ಆಕಾರದಲ್ಲಿ ಸುತ್ತುತ್ತಾ ಮೋಡಗಳನ್ನು ಎತ್ತಿಕೊಂಡು ಕೆಲವೇ ಗಂಟೆಗಳಲ್ಲಿ ಅತೀ ಪ್ರಬಲ ಶಕ್ತಿ ಪಡೆಯುತ್ತವೆ. ಧಾರಾಕಾರ ಮಳೆ ಬಿರುಗಾಳಿಯೊಂದಿಗೆ  ಸಮುದ್ರದತೀರಕ್ಕೆ ಅಪ್ಪಳಿಸಿ ಬೀಸಿ ಕೆಲವೇ ಗಂಟೆಗಳಲ್ಲಿ ಅನೇಕ ಅವಾಂತರಗಳನ್ನು ಮಾಡುತ್ತವೆ.

ಭಾರತದ ಪೂರ್ವ ಕರಾವಳಿಯಲ್ಲಿ, ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತ ಪ್ರತೀ ವರ್ಷವಿರುತ್ತದೆ.ಅದು ಅಪರೂಪವೇನಲ್ಲ. ಆದರೆ, ನಮ್ಮೀ ಪರಶುರಾಮ ಕ್ಷೇತ್ರಕ್ಕೆ ಚಂಡಮಾರುತ ಅತೀ ಅಪರೂಪ. ಬಹುಶಃ ಸಮುದ್ರ ತೀರಕ್ಕೆ  ಗೋಡೆಯಂತಿರುವ ಸಸ್ಯ ಶ್ಯಾಮಲೆಯಾಗಿರುವ ನಮ್ಮ ಪಶ್ಚಿಮಘಟ್ಟವೇ ಕಾರಣವಿದ್ದಿರಬೇಕು.

ಈಗ  ಕಾಡು ಬೋಳಾಗಿರುವುದರಿಂದ ಭೂಮಿಯ ಉಷ್ಣತೆ ಸುಮಾರು 1.5 ಡಿಗ್ರಿ ಏರಿರುವುದರಿಂದ ಅರಬೀ ಸಮುದ್ರದಲ್ಲೂ ಚಂಡಮಾರುತ, ಭಾರತದ ಪೂರ್ವ ಕರಾವಳಿಯಲ್ಲಿ ಪ್ರತೀ ವರ್ಷ ಬರುವಂತೆ ಮಾಮೂಲಾಗಿ ಬರುತ್ತಿದೆ.

ಪ್ರಕ್ರತಿ ಮುನಿದರೆ.... ಹೀಗೆಯೇ ಕಷ್ಟ ನಷ್ಟ ಅನುಭವಿಸಬೇಕಷ್ಟೆ.

 

ಮಾಹಿತಿ : ಡಾ. ಎ ಪಿ ಭಟ್, ಉಡುಪಿ (ವಿಜ್ಞಾನಿ)

ಚಿತ್ರ: ಇಂಟರ್ನೆಟ್ ತಾಣದಿಂದ ಸಂಗ್ರಹಿತ