ಐತಿಹಾಸಿಕ ಮಹತ್ವದ ತೀರ್ಪು

ಐತಿಹಾಸಿಕ ಮಹತ್ವದ ತೀರ್ಪು

ಶಾಸನ ಸಭೆಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷದ ವಿರುದ್ಧ ಮಾತನಾಡಲು ಅಥವಾ ಅಲ್ಲಿ ನಡೆದಿರುವ ಮತದಾನದಲ್ಲಿ ಬೆಂಬಲಿಸಲು ಚುನಾಯಿತ ಜನಪ್ರತಿನಿಧಿ ಲಂಚ ಪಡೆದಿದ್ದರೆ ಅಂಥವರಿಗೆ ಇನ್ನು ಮುಂದೆ ರಕ್ಷಣೆ ಅಥವಾ ವಿನಾಯಿತಿ ಸಿಗುವುದಿಲ್ಲ. ಇಂಥದ್ದೊಂದು ಕಠಿಣ ನಿಯಮಕ್ಕೆ ಅವಕಾಶವಾಗುವಂತಹ ತೀರ್ಪನ್ನು ಸುಪ್ರೀಂಕೋರ್ಟ್ ನ ಏಳು ಸದಸ್ಯರ ನ್ಯಾಯಪೀಠ ಸೋಮವಾರ ಪ್ರಕಟಿಸಿದ್ದು, ಇದಕ್ಕೆ ದೇಶದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದಶಕಗಳ ಹಿಂದೆ ನಡೆದ ಜಾರ್ಖಂಡ್ ಮುಕ್ತಿ ಮೋರ್ಚ (ಜೆ ಎಂ ಎಂ) ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ೧೯೯೮ರಲ್ಲಿ ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳ ಪೀಠ ಒಂದು ತೀರ್ಪು ನೀಡಿತ್ತು. ಮತ ಚಲಾಯಿಸಲು ಲಂಚ ಪಡೆಯುವ ಶಾಸಕರಿಗೆ ವಿನಾಯಿತಿ ನೀಡಿದ ಆ ತೀರ್ಪು ಈವರೆಗೆ ಹಾಗೇ ಇತ್ತು. ಇದನ್ನೇ ಆಧಾರವಾಗಿ ಇಟ್ಟುಕೊಂಡು ಕೆಲವು ಲಂಚಕೋರ ಜನಪ್ರತಿನಿಧಿಗಳು ಕಾನೂನಿನ ರಕ್ಷಣೆ ಪಡೆಯುತ್ತಿದ್ದರು. ಅದರಿಂದ ವ್ಯಾಪಕ ಅಡ್ಡಪರಿಣಾಮಗಳು ಆಗುತ್ತಿರುವುದನ್ನು ಮನಗಂಡು ಹಾಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ ಈ ಪಿಡುಗಿಗೆ ಅಂತ್ಯ ಹಾಡಿದೆ.

ಜನಪ್ರತಿನಿಧಿಗಳ ಲಂಚ ಸ್ವೀಕಾರಕ್ಕೆ ಸಂಸದೀಯ ಸವಲತ್ತುಗಳ ಮೂಲಕ ರಕ್ಷಣೆ ಅಥವಾ ವಿನಾಯಿತಿ ನೀಡುವುದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ವಿರುದ್ಧವಾದ ಕ್ರಮ. ನಿರ್ಭೀತಿಯಿಂದ ಚುನಾಯಿತ ಜನಪ್ರತಿನಿಧಿಗಳು ಕೆಲಸ ಮಾಡಲಿ ಎಂಬ ಉದ್ದೇಶದಿಂದ ಸಂವಿಧಾನದಲ್ಲಿ ಕೆಲವು ಅವಕಾಶಗಳನ್ನು ನೀಡಲಾಗಿರುತ್ತದೆ. ಅವು ನಿರ್ದಿಷ್ಟ ಸಂದರ್ಭಗಳಲ್ಲಿ ಕಾನೂನು ಕ್ರಮದಿಂದ ಇವರಿಗೆ ವಿನಾಯಿತಿ ನೀಡುವುದೇನೋ ನಿಜ. ಆದರೆ ಅದನ್ನೇ ಮಾನದಂಡವಾಗಿ ಇಟ್ಟುಕೊಂಡು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಕಾನೂನು, ನಿಯಮಗಳಲ್ಲಿ ಇರುವ ಸಣ್ಣಪುಟ್ಟ ನ್ಯೂನತೆಗಳನ್ನು ಕೆಲವರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಪ್ರಕರಣಗಳು ಇತೀಚೆಗೆ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಬೀಳಬೇಕಾದದ್ದು ಅನಿವಾರ್ಯವಾಗಿತ್ತು. ಅಂತಹ ಸ್ತುತ್ಯ ಕಾರ್ಯವನ್ನು ಈಗ ಸುಪ್ರೀಂ ಕೋರ್ಟ್ ನ ಏಳು ನ್ಯಾಯಮೂರ್ತಿಗಳ ಪೀಠ ಮಾಡಿದೆ. ಈ ಮೂಲಕ ಜನಪ್ರತಿನಿಧಿಗಳಿಗೆ ಅವರ ಜವಾಬ್ದಾರಿ ಮತ್ತು ಕರ್ತವ್ಯಗಳ ಮಹತ್ವವನ್ನು ಮತ್ತೊಮ್ಮೆ ಸುಪ್ರೀಂ ಕೋರ್ಟ್ ನೆನಪಿಸಿದಂತಾಗಿದೆ.

ಈ ತೀರ್ಪು ಬರುವುದರ ಹಿಂದೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಶಂಕರನಾರಾಯಣನ್ ಅವರು ಮಂಡಿಸಿದ ವಾದವೂ ಮುಖ್ಯವಾಗಿತ್ತು ಎಂಬುದನ್ನು ಗಮನಿಸಬೇಕಾಗಿದೆ. ‘ಶಾಸಕಾಂಗ ಪ್ರಕ್ರಿಯೆಯ ಸಮಗ್ರತೆಯನ್ನು ರಕ್ಷಿಸುವುದು. ಸಂವಿಧಾನಾತ್ಮಕ ನಿಬಂಧನೆಗಳ ಉದ್ಡೇಶ. ಮತದಾರರಿಗೆ ಮಾಡುವ ನಂಬಿಕೆ ದ್ರೋಹದಿಂದ ಉಂಟಾಗುವ ಕ್ರಿಮಿನಲ್ ಮೊಕದ್ದಮೆಗಳಿಂದ ಅವರನ್ನು ರಕ್ಷಿಸುವುದು ಸಂವಿಧಾನಾತ್ಮಕ ನಿಬಂಧನೆಗಳ ಉದ್ದೇಶ. ಮತದಾರರಿಗೆ ಮಾಡುವ ನಂಬಿಕೆ ದ್ರೋಹದಿಂದ ಉಂಟಾಗುವ ಕ್ರಿಮಿನಲ್ ಮೊಕದ್ದಮೆಗಳಿಂ ಅವರನ್ನು ರಕ್ಷಿಸುವುದು ಸಂವಿಧಾನದ ಉದ್ದೇಶವಲ್ಲ' ಎಂಬ ವಾದವನ್ನು ಅವರು ಮಂಡಿಸಿದ್ದರು. ಆ ಮೂಲಕ ಈ ನಿಬಂಧನೆಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುವ ಕೆಲವು ಜನಪ್ರತಿನಿಧಿಗಳ ಕ್ರಮವನ್ನು ಅವರು ವಿರೋಧಿಸಿದ್ದರು. ಶಾಸಕರ ನೈಜ ಕರ್ತವ್ಯಗಳಿಗೆ ಸಂಬಂಧಿಸದೇ ಇರುವ ವಿಚಾರಕ್ಕೆ ಕಾನೂನಿನ ಕ್ರಮದ ವಿನಾಯಿತಿ ವಿಸ್ತರಿಸಬಾರದು ಎಂದು ಕೋರಿದ್ದರು. ಈ ಹಿನ್ನಲೆಯಲ್ಲಿಯೇ ಸುಪ್ರೀಂಕೋರ್ಟ್ ನ ಈ ಮಹತ್ತರ ತೀರ್ಪು ಬಂದಿದ್ದು. ಇದು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯುವ ದಿಸೆಯಲ್ಲಿ ಐತಿಹಾಸಿಕ ಎನಿಸಿಕೊಂಡಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೫-೦೩-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ