ಒಂದಾನೊಂದು ಕಾಲದಲ್ಲಿ (ಭಾಗ 1)

ಒಂದಾನೊಂದು ಕಾಲದಲ್ಲಿ (ಭಾಗ 1)

ಪುಸ್ತಕದ ಲೇಖಕ/ಕವಿಯ ಹೆಸರು
ಎಂ. ಚೊಕ್ಸಿ ಮತ್ತು ಪಿ.ಎಂ. ಜೋಷಿ
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ. 10/-

ಪುರಾತನ ಕಾಲದ ಕತೆಗಳನ್ನು ಮಕ್ಕಳಿಗಾಗಿ ಸಾದರ ಪಡಿಸಿದ್ದಾರೆ ಎಂ. ಚೋಕ್ಸಿ ಮತ್ತು ಪಿ. ಎಂ. ಜೋಷಿಯವರು. ಆ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಎಂ.ವಿ. ನಾರಾಯಣ ರಾವ್. ಕತೆಗಳಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಪುಲಕ್ ಬಿಶ್ವಾಸ್. ಇದು ಎರಡು ಭಾಗಗಳಲ್ಲಿ ಮುದ್ರಣವಾಗಿರುವ ಪುಸ್ತಕ.

ಮೊದಲ ಕತೆ "ಆ ಪುರಾತನ ಮೊಹೆಂಜೊದಾರೋ ನಗರದಲ್ಲಿ”. ಐದು ಸಾವಿರ ವರುಷ ಹಿಂದಿನ ಕಾಲದಲ್ಲಿ ಅಲ್ಲಿನ ಜನಜೀವನ ಹೇಗಿತ್ತು ಎಂಬುದನ್ನು ಸರಳ ಭಾಷೆಯಲ್ಲಿ ತಿಳಿಸುವ ಕತೆ. ಹುಡುಗರ ತಂಡವೊಂದು ಕೆಲವರ ಮನೆಗೆ ಭೇಟಿ ನೀಡುತ್ತದೆ. ಆ ಮೂಲಕ ಮೊಹೆಂಜೊದಾರೋ ನಗರದಲ್ಲಿ ವಿವಿಧ ವೃತ್ತಿಯ ಜನರು ಏನೇನು ಮಾಡುತ್ತಿದ್ದರು ಎಂಬುದು ಓದುಗರಿಗೆ ತಿಳಿಯುತ್ತದೆ. ವೀರೋಚನನ ಮಗ ಹೈರಾಪ ತಂದೆಯ ಕಾರ್ಖಾನೆಗೆ ಹೋಗುತ್ತಾನೆ. ಅಲ್ಲಿ ಬಳಪದ ಕಲ್ಲುಗಳ ರಾಶಿ. ವೀರೋಚನ ಬಳಪದ ಕಲ್ಲುಗಳಲ್ಲಿ ಗುಂಡಗಿನ ಅಥವಾ ಆಯತಾಕಾರದ ಮುದ್ರೆ (ಮೊಹರು)ಗಳನ್ನು ಕೆತ್ತುವವನು. ನಗರದ ವರ್ತಕರೂ ಇತರರೂ ತಮ್ಮ ಗುರುತು ಸೂಚಿಸಲು ಈ ಮೊಹರುಗಳನ್ನು ಬಳಸುತ್ತಿದ್ದರು. ನೌಕೆಯಲ್ಲಿ ದೂರದ ದೇಶಗಳಿಗೆ ವ್ಯಾಪಾರಕ್ಕಾಗಿ ಹೋಗಿ ಬರುತ್ತಿದ್ದವನು ಕಾಪರ್ದಿ. ಅವನು ಖರ್ಜೂರ ಮತ್ತು ಇತರ ವಸ್ತುಗಳನ್ನು ತರುತ್ತಿದ್ದ. ತನ್ನ ಬಳಿ ಬಂದ ಹುಡುಗರಿಗೆ ಈಜಿಪ್ಟಿನ ಪಿರಮಿಡ್ಡುಗಳ ಬಗ್ಗೆ ತಿಳಿಸಿದ.

“ಭೀಮಕನೂ ಅವನ ಗೆಳೆಯರೂ" ಎರಡನೇ ಕತೆ. ಯುವಕ ಭೀಮಕ ಆಯುಧಗಳನ್ನು ಆಟಕ್ಕಾಗಿ ತಯಾರಿಸಿಟ್ಟಿದ್ದ. ದೇವದತ್ತ ಬಂದ ಸಮಯದಲ್ಲಿ, ಅವನ ಜೊತೆ ಸೇರಿ ಭೀಮಕ ಮತ್ತು ಅವನ ಗೆಳೆಯರು ಯುದ್ಧದ ಆಟವಾಡಲು ಹೊರಡುತ್ತಾರೆ. ಆಚಾರ್ಯ ದೇವಮಿತ್ರ ಶಾಕಲ್ಯರ ಆಶ್ರಮದಲ್ಲಿ ನಾಲ್ಕು ವರುಷ ವಿದ್ಯಾಭ್ಯಾಸ ಮಾಡಿ, ಕೆಲವು ದಿನಗಳ ಬಿಡುವಿನಲ್ಲಿ ತನ್ನೂರಿಗೆ ಮರಳಿದ್ದ ದೇವದತ್ತ (ಅವನು ಇನ್ನೂ ಹನ್ನೆರಡು ವರುಷ ವಿದ್ಯಾಭ್ಯಾಸ ಮಾಡಲಿದ್ದಾನೆ.) ಗುರುಕುಲದ ಶಿಕ್ಷಣದಿಂದಾಗಿ ದೇವದತ್ತನ ವ್ಯಕ್ತಿತ್ವ ಬದಲಾದದ್ದನ್ನು ವಿವರಿಸುವ ಕತೆ.

ಮೂರನೆಯ ಕತೆ “ಪಾಟಲೀಪುತ್ರದ ದಾರಿಯಲ್ಲಿದ್ದ ಅನ್ನಸತ್ರದಲ್ಲಿ" ಕತೆಯಲ್ಲಿ, ಅನ್ನಸತ್ರಕ್ಕೆ ಬರುವ ಯಾತ್ರಿಕರು, ಯುದ್ಧ ಮತ್ತು ಹಿಂಸೆ ತ್ಯಜಿಸಿ, ಪ್ರೀತಿ ಮತ್ತು ಕರುಣೆಯಿಂದ ರಾಜ್ಯವಾಳಲು ಶುರು ಮಾಡಿದ್ದ ಚಕ್ರವರ್ತಿ ಆಶೋಕನು ಆಡಳಿತದಲ್ಲಿ ತಂದ ಬದಲಾವಣೆಗಳನ್ನು ತಿಳಿಸುತ್ತಾರೆ. ಕತೆಯ ಉತ್ತರಾರ್ಧದಲ್ಲಿ, ಪಾರುಪತ್ತೇದಾರನ ಮಗಳಾದ ಬಿಂಬಿ ಎಂಬ ಹುಡುಗಿ ನಿಜವಾಗಿ ಅವನ ಮಗಳಲ್ಲ ಎಂಬ ಸಂಗತಿ ಬಿಂಬಿಗೆ ಒಬ್ಬ ಯಾತ್ರಿಕನ ಮಾತಿನಿಂದ ತಿಳಿದು ಬರುತ್ತದೆ. ಅವಳು ಬಂದು ಕೇಳಿದಾಗ, ಪಾರುಪತ್ತೇದಾರನೂ ಅವನ ಪತ್ನಿಯೂ ನಿಜ ಹೇಳಲೇ ಬೇಕಾಗುತ್ತದೆ.

"ಕಾವೇರಿ ಪಟ್ಟಣದ ವೈಭವ” ಭಾಗ-1ರ ಕೊನೆಯ ಕತೆ. ಇದೂ ಹುಡುಗರ ತಂಡವೊಂದರ ಮೂಲಕ ಪ್ರಸ್ತುತ ಪಡಿಸಲಾದ ಕತೆ. ಕಾರಿ ಎಂಬವನು ಕಾಡಿನ ಬೇಡನ ಮಗ. ಇವನೂ ಒಂದು ಗಿಳಿ ಸಾಕಿದ್ದ. ಅದನ್ನು ಪ್ರೀತಿಯಿಂದ ಸಾಕಿ, ಅದಕ್ಕೆ ಮಾತಾಡಲು ಕಲಿಸಿದ್ದ. ಆ ದಿನ, ಚೋಳರ ರಾಜಧಾನಿ ಕಾವೇರಿ ಪಟ್ಟಣಕ್ಕೆ ನೌಕೆ ಆಗಮಿಸಿತ್ತು. ಅದರ ವರ್ತಕರು ಕಾರಿಯ ಹಳ್ಳಿಗೆ ಬಂದು ವಸ್ತುಗಳನ್ನು ಮಾರಿದ್ದರು. ಹುಲಿ ಚರ್ಮ ಇತ್ಯಾದಿ ಮಾರಲು ಕಾರಿಯ ತಂದೆ ನೌಕೆಯ ಹತ್ತಿರಕ್ಕೆ ಬರಬೇಕೆಂದು ಒತ್ತಾಯಿಸಿದರು. ತಂದೆಯೊಂದಿಗೆ ಕಾರಿಯೂ ಪಂಜರದಲ್ಲಿ ಸಾಕಿದ್ದ ಕೆಲವು ಗಿಳಿಗಳ ಸಹಿತ ಅಲ್ಲಿಗೆ ಹೋದ. ಆಗ ದಢಿಯ ನಾವಿಕನೊಬ್ಬ ಕಾರಿಯ “ಮಾತಾಡುವ ಗಿಳಿ” ಬೇಕೆಂದ. ಕಾರಿ ಕೊಡೋದಿಲ್ಲ ಎಂದಾಗ, ಅವನ ತಂದೆಗೆ ಬೆಳ್ಳಿಯ ನಾಣ್ಯದ ಆಮಿಷ ಒಡ್ಡಿದ. ಆಮಿಷಕ್ಕೆ ಬಲಿಯಾದ ತಂದೆ, ಕಾರಿಯ ಮುದ್ದಿನ ಗಿಳಿಯನ್ನು ಆ ನಾವಿಕನಿಗೆ ಮಾರಿದ. ಇದರಿಂದಾಗಿ ಖಿನ್ನನಾದ ಕಾರಿಯನ್ನು ಅವನ ಗೆಳೆಯ ವಳ್ಳುವರ್ ಮನೆಗೆ ಕರೆದೊಯ್ದು ಸಂತೈಸುವುದೇ ಕತೆಯ ವಸ್ತು.
(ಭಾಗ 2 ನಾಳೆ ಪ್ರಕಟವಾಗಲಿದೆ.)