ಒಂದಿಷ್ಟು ಹನಿಗಳು…
ತೌರಿನ ಬೆಲೆ...!
ಸಿದ್ದರಾಮಯ್ಯ
ವೈಮಾನಿಕ ಹಾರಾಟ-
ಮೈಸೂರಿಗೆ
ಇಪ್ಪತ್ತು ಬಾರಿ ಪಯಣ;
ಬೊಕ್ಕಸಕ್ಕೆಇಪ್ಪತ್ತೈದು
ಕೋಟಿ ವೆಚ್ಚಾ....
ನಾನೂ ನೀನೂ
ಹೀಗೆ ಇಷ್ಟು ವೆಚ್ಚದಲಿ-
ಆಕಾಶದಲ್ಲಿ
ಹಾರಾಡಲಾದೀತೇ ತಮ್ಮಾ...?
ಮುಖ್ಯಮಂತ್ರಿ ತೌರಿನ ಪ್ರೀತಿಗೆ
ಬೆಲೆ ಕಟ್ಟಲಾದೀತೇನೋ ಹುಚ್ಚಾ...!
***
ರಾಜಕೀಯ ದೊಂಬರಾಟ
ರಾಜ್ಯವೇ
ಅಕ್ಕಿ ಖರೀದಿಸುತ್ತಿಲ್ಲ-ಕೇಂದ್ರ;
ಕೇಂದ್ರವೇ
ಅಕ್ಕಿ ಕೊಡುತ್ತಿಲ್ಲ-ರಾಜ್ಯ
ಕೇಂದ್ರ-ರಾಜ್ಯಗಳದು
ರಾಜಕೀಯ ದೊಂಬರಾಟ...
ಗಂಡ-ಹೆಂಡಿರ
ಜಗಳದಲಿ
ಕೂಸಿನ ಬಡಿದಾಟ;
ಕೇಂದ್ರ-ರಾಜ್ಯಗಳ
ತಿಕ್ಕಾಟದಲಿ-
ಬಡವರ ಹಸಿವಿನ ಕುಸಿದಾಟ!
***
ಕಿಲಾಡಿ ದೇವ
ಪುತ್ರನಿಗೆ
ಗಂಡು ಮಗು
ಬೇಕೆಂದ ನಟ
ಚಿರಂಜೀವಿ-
ಕಿಲಾಡಿ ಆ ದೇವ
ಒಂದು ಕೊರತೆಯಿಟ್ಟ....
ಅಯ್ಯೋ-
ದೇವರು ಕೋಟಿ ಕೋಟಿ
ಮತ್ತೆಲ್ಲವನೂ ಕೊಟ್ಟ;
ಒಂದು ಪುಟ್ಟ
ಗಂಡುಮಗುವನು
ಕೊಡದೆ ಸಂಕಟವಿಟ್ಟ!
***
ಚೆಲುವಿನ ಭಾಷೆ ಎಮ್ಮೀ ಕನ್ನಡ
ನೋಟಿನಲಿರುವ
ಅಧಿಕೃತ ಹದಿನೈದು
ಭಾರತೀಯ
ಭಾಷೆಗಳಲಿ-
ಮಧುರ ಕನ್ನಡವೇ
ಅತಿ ಸುಂದರ...
ಹಾವಿನೊಳು ಹರಿವ
ಕಾವೇರಿ ತುಂಗೆಯರೊಲು
ಬಳುಕಿ ನಡೆವ
ಸುಂದರ ಬರವಣಿಗೆಯ
ಅಕ್ಷರ ಮಾಲೆಯೇ-
ನಮ್ಮ ಕನ್ನಡೋಗರ!
***
ಬೆಟ್ಟದಲ್ಲಿ ಕ್ಯಾಬಿನೆಟ್
ರಾಜ್ಯ ಸಚಿವ
ಸಂಪುಟ
ಸಭೆ-
ಮಹದೇಶ್ವರ
ಬೆಟ್ಟದಲ್ಲಿ
ಕ್ಯಾಬಿನೆಟ್...
ಎತ್ತರ
ಪ್ರದೇಶದಲ್ಲಿಯಾದರೂ
ರಾಜಕಾರಣಿಗಳ
ಪ್ರಜಾಹಿತಬುದ್ಧಿ-
ಚಿಗುರಬಹುದೇನೋ
ಬಹುಪರಾಕ್!
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
