ಒಂದು ಒಳ್ಳೆಯ ನುಡಿ - 185

ಒಂದು ಒಳ್ಳೆಯ ನುಡಿ - 185

ಕಾಲುಂಗುರ ನಡೆಯುವಾಗ ಒತ್ತುತ್ತೆ, ಎಂಬ ಪತ್ನಿಯ ಆಕ್ಷೇಪಕ್ಕೆ ಪತಿಯ ಒಪ್ಪಿಗೆ ಸಿಕ್ಕಿತು. ಪರಿಣಾಮ ಮುತ್ತೈದೆಯ ಪ್ರತೀಕವಾದ ಕಾಲುಂಗುರ ಪಟ್ಟಿಗೆ ಸೇರಿಕೊಂಡಿತು. ಗಾಜಿನ ಬಳೆಗಳು ಒಡೆಯುತ್ತೆ ಎಂಬ ಪತ್ನಿಯ ಆಕ್ಷೇಪಕ್ಕೆ ಪತಿಯ  ಒಪ್ಪಿಗೆ ಸಿಕ್ಕಿತು. ಪರಿಣಾಮ ಮುತ್ತೈದೆಯ ಪ್ರತೀಕವಾದ ಗಾಜಿನ ಬಳೆ ಕೈಯಿಂದ ಮಾಯವಾಯಿತು. ಕುತ್ತಿಗೆಯಲ್ಲಿರುವ ತಾಳಿ ಮಲಗುವಾಗ ಚುಚ್ಚುತ್ತೆ ಅಂತ ಪತ್ನಿಯ ಆಕ್ಷೇಪಕ್ಕೆ ಪತಿಯ ಒಪ್ಪಿಗೆ ಸಿಕ್ಕಿತು. ಪರಿಣಾಮ‌ ಮುತ್ತೈದೆಯ ಪ್ರತೀಕವಾದ  ತಾಳಿ ಕುತ್ತಿಗೆಯಲ್ಲಿ ಕಡಿಮೆ, ಗೋಡೆಯಲ್ಲಿ ಹೆಚ್ಚು ಹೆಚ್ಚು ನೇತಾಡಲಾರಂಭವಾಯಿತು. ಹಣೆ ತುಂಬ ಕುಂಕುಮ ಹಾಕಿದರೆ  ನಾನು ಮಾರಮ್ಮನ ಹಾಗೆ ಕಾಣುತ್ತೇನೆ. ಅಂತ ಪತ್ನಿಯ ಆಕ್ಷೇಪಕ್ಕೆ ಪತಿಯ ಒಪ್ಪಿಗೆ ಸಿಕ್ಕಿತು. ಪರಿಣಾಮ ಮುತ್ತೈದೆಯ ಪ್ರತೀಕವಾದ ಕುಂಕುಮ ಹಣೆಯಿಂದ ಮಾಯವಾಯಿತು.ಹೂ ಮುಡಿದರೆ ತಲೆ ಕೂದಲಿನ ಸಿಂಗಾರ ಹಾಳಾಗುತ್ತೆ ಅಂತ ಪತ್ನಿಯ ಆಕ್ಷೇಪಕ್ಕೆ ಪತಿಯ ಒಪ್ಪಿಗೆ ಸಿಕ್ಕಿತು. ಪರಿಣಾಮ‌ ಮುತ್ತೈದೆಯ ಪ್ರತೀಕವಾದ ಹೂ ತಲೆಯಿಂದ ಮಾಯಾವಾಯಿತು. ಈ ರೀತಿಯಲ್ಲಿ ಆಧುನಿಕತೆಯ ಹೆಸರಿನಲ್ಲಿ ಒಂದೊಂದಾಗಿ ಮಾಯವಾಗುತ್ತಾ ಬಂದು ಇಂದು ಗಂಡ ಜೀವಂತ ಜೊತೆಗಿದ್ದರೂ ಕೂಡ ಮುತ್ತೈದೆಯಾಗಿರುವ ಹೆಣ್ಣನ್ನು ವಿಧವೆಯಂತೆ ಕಾಣಬೇಕಾಗಿದೆ. ಇದು ಆಧುನಿಕತೆಯ ಭರಾಟೆಯಲ್ಲಿ ಪಾಶ್ವಾತ್ಯ ಸಂಸ್ಕ್ರತಿಗೆ ಮಾರು ಹೋದ ಕೆಲವೊಂದು ಯುವ ಜನಾಂಗದ ಇಂದಿನ ಸ್ಥಿತಿ ಗತಿ. 

ಕಾಲ‌ ಬದಲಾದಂತೆ ನಮ್ಮ ಬೆಳವಣಿಗೆಯಲ್ಲಿ  ಬದಲಾಣೆಯ ನಿರೀಕ್ಷೆ ಸಹಜ. ಆದರೆ ಆಧುನಿಕತೆಯ ಮುಂದೆ ನಮ್ಮ ಆಚಾರ, ವಿಚಾರ, ಸಂಸ್ಕ್ರತಿ - ಸಂಸ್ಕಾರ ಮಣ್ಣು ಪಾಲಾಗದಂತೆ ನೋಡಿ ಕೊಳ್ಳುವುದು ಯುವ ಜನಾಂಗದ ಕರ್ತವ್ಯವಾಗಿದೆ. ಮತ್ತು ಹಿರಿಯರ ಕಟ್ಟು ಕಟ್ಟಳೆಯನ್ನು ಉಳಿಸಿ ಬೆಳೆಸುವುದು ಕೂಡ ಅಷ್ಟೇ ಮುಖ್ಯ ಎಂಬುವುದುನ್ನು ಯುವ ಜನಾಂಗ  ಅರ್ಥೈಸಿ ಕೊಳ್ಳುವ ಅಗತ್ಯವಿದೆ. ಆದ್ದರಿಂದ ಹೆಣ್ಣಿನ ಸೌಂದರ್ಯ ಕೇವಲ ಮುಖಕ್ಕೆ ಮಾತ್ರ ಸೀಮಿತವಲ್ಲ. ಹೆಣ್ಣು ಮಕ್ಕಳ ಸೌಂದರ್ಯ ಎನ್ನುವಂತದ್ದು ಅವರ ನಿಜವಾದ ಪ್ರೀತಿ, ಅವರ ಗುಣ ನಡತೆಯ ಮೇಲೆ ಅವಲಂಬಿಸಿರುತ್ತದೆ. ಅದೇ ರೀತಿ ಗಂಡು ಮಕ್ಕಳ  ಸೌಂದರ್ಯ ಅವರ ಆಸ್ತಿ ಅಥವಾ ಸಂಪತ್ತಿನಲ್ಲಿರುವುದಿಲ್ಲ . ಬದಲಾಗಿ ಅವರು ಸ್ತ್ರೀಯರಿಗೆ, ಹಿರಿಯರಿಗೆ  ಕೊಡುವ ಮರ್ಯಾದೆ, ಗೌರವದ ಮೇಲೆ ಅವಲಂಭಿತವಾಗಿದೆ ಎಂಬುವುದನ್ನು ಇಂದಿನ ಯುವ ಪೀಳಿಗೆ ತಿಳಿದು ಬಾಳುವ ಅಗತ್ಯವಿದೆ.

-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ