ಒಂದು ಒಳ್ಳೆಯ ನುಡಿ - 51

ಒಂದು ಒಳ್ಳೆಯ ನುಡಿ - 51

ಸಂಬಂಧಗಳು ಹುಟ್ಟಿ ಮೊಳಕೆಯೊಡೆಯುವುದು, ರಕ್ತದಿಂದ. ನಮ್ಮವರು ಎನ್ನುವ ಭಾವನೆ, ಪ್ರೀತಿ ಹುಟ್ಟಿ ಮೊಳಕೆಯೊಡೆಯುವುದು ಹೃದಯದಿಂದ ಮನಸ್ಸಿನಿಂದ. ನಾವು ಮಾತನಾಡುವಾಗ, ವ್ಯವಹರಿಸುವಾಗ ನಮ್ಮ ನಾಲಿಗೆ ಸರಿಯಾಗಿಲ್ಲದಿದ್ದರೆ ಈ ಸಂಬಂಧಗಳಿಗೆ ಬೆಲೆಯೂ ಇಲ್ಲ, ಅರ್ಥವೂ ಇಲ್ಲ.

ನಮ್ಮ ವಿಚಾರ ಲಹರಿ ಯಾವ ರೀತಿ ಇರುತ್ತದೆಯೋ, ಅದರಿಂದ ಎಲ್ಲರೂ ಒಪ್ಪತಕ್ಕ ಮಾತು ಆಡಿದರೆ ಚಂದ. ಮಾತಿನಿಂದ ಕೃತಿ, ಕೃತಿಯಿಂದ ತಾನೇ ನಮ್ಮ ವ್ಯಕ್ತಿತ್ವದ ಅರಿವು ಆಗಲು ಸಾಧ್ಯ. ನಾವು ಮಂಡಿಸುವ ವಿಚಾರಗಳು ನಾಲ್ಕು ಜನರು ಒಪ್ಪುವಂತಿರಬೇಕು, ಮೆಚ್ಚುವಂತಿರಬೇಕು. ಒಟ್ಟಾರೆ ವ್ಯವಹರಿಸಿದರೆ, ಆಲೋಚಿಸದೆ ಮುಂದಡಿಯಿಟ್ಟರೆ, ಇನ್ನೊಬ್ಬರನ್ನು ತುಳಿಯಲೆಂದೇ ಮನಸ್ಸು ಮಾಡಿದರೆ ಹೇಗೆ? ಅದು ಪುನಃ ನಮ್ಮ ಬಳಿಗೇ ಬರಬಹುದೆಂಬ ಪ್ರಜ್ಞೆ ಯಾವತ್ತೂ ಇರಬೇಕು. ನಾವು ಗ್ರಹಿಸಬಹುದು, ಯಾರಿಗೂ ತಿಳಿಯದು ಎಂದು. ಆದರೆ ಮೇಲೊಬ್ಬ ತಕ್ಷಣ ಬರೆದಿಡುವವನಿದ್ದಾನೆ ಎಂಬುದಾಗಿ ನಮಗೆ ಗೊತ್ತಿದ್ದರೆ ಸಾಕು.ನಮ್ಮ ಮಾತು, ಕೃತಿ, ನಡವಳಿಕೆ ಎಲ್ಲವೂ ಪಾರದರ್ಶಕವಾಗಿರಲಿ. ಕೃತ್ತಿಮತೆ ತ್ಯಜಿಸೋಣ. ಬದುಕಲ್ಲಿ ಅರ್ಥ ಪೂರ್ಣ ಸಂಬಂಧಗಳನ್ನು ಗಟ್ಟಿಯಾಗಿಸೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ