ಒಂದು ಒಳ್ಳೆಯ ನುಡಿ - 93

ಈ ಪ್ರಪಂಚದಲ್ಲಿ ನಾನಾ ವೈಕಲ್ಯಗಳು, ವೈಪರೀತ್ಯಗಳನ್ನು ನಾವು ನೋಡುತ್ತಿದ್ದೇವೆ. ಎಲ್ಲವೂ ವಿಧಿಯಾಟದಂತೆ ಸಾಗುವುದೆಂದು ನಮಗೆ ತಿಳಿದಿದೆ. ಆದರೂ ಹಲುಬುತ್ತೇವೆ, ಕೊರಗುತ್ತೇವೆ, ಸಂಕಟಪಡುತ್ತೇವೆ. ಯಾವುದು? ಎಷ್ಟು? ಹೇಗೆ? ಯಾರಿಗೆ? ಕೊಡಬೇಕೆಂಬುದು ಆ ಭಗವಂತನಿಗೆ ತಿಳಿದಿದೆ. ಅದಕ್ಕನುಗುಣವಾಗಿ ಕೊಡುವನು. ಸ್ವೀಕರಿಸುವ ಮನಸ್ಸು ನಮ್ಮಲ್ಲಿರಬೇಕಷ್ಟೆ. ಎಲ್ಲವೂ ಸುಖವೇ ಆಗಬೇಕೆಂದು ಹಂಬಲಿಸಿದರೆ ಹೇಗೆ? ಬದುಕು ಎಂಬುದು ನೆರಳು ಬೆಳಕಿನಾಟ ಅಲ್ಲವೇ? ಕತ್ತಲು ಮುತ್ತಿದೆಂದು ಅಂಜಬಾರದು. ನಂತರ ಹಗಲು ಓಡೋಡಿ ಬರುತ್ತದೆ. ಬರಬೇಡ ಎಂದು ತಡೆಯುವ ಶಕ್ತಿ ನಮಗಿಲ್ಲ. ಹಾಗಾದರೆ ಇದು ವಿಧಿನಿಯಮದಂತೆ ನಡೆಯುವುದು ಎಂಬುದು ಖಾತ್ರಿಯಾಯಿತಲ್ಲ. ಕಷ್ಟದ ದಿನಗಳು ಕಳೆದು ಸಂತೋಷದ ದಿನಗಳು ಬರಬಹುದೆಂಬ ನಿರೀಕ್ಷೆಯಲಿರೋಣ. ನಂಬಿಕೆ, ಭರವಸೆ ಯಾವತ್ತೂ ಕಳೆದುಕೊಳ್ಳಬಾರದು. ನಮ್ಮ ನಿಮ್ಮ ನಡುವೆ ಎಷ್ಟೋ ಜನ ಕಣ್ಣು ಕಾಣಿಸದ, ಕಿವಿ ಕೇಳಿಸದ, ಮಾತನಾಡಲು ಬಾರದ, ಬುದ್ಧಿಮಾಂದ್ಯ ಸ್ವಭಾವದವರು ಇರಬಹುದು. ಅವರಿಗೂ ಎಲ್ಲರಂತೆ ಜೀವಿಸುವ ಹಕ್ಕಿದೆ. ಅವರನ್ನು ಹೀಯಾಳಿಸುವುದು, ವ್ಯಂಗ್ಯವಾಡುವುದು, ತಮಾಷೆ ಮಾಡುವುದು ಸರಿಯಲ್ಲ. ಓರ್ವ ತಂದೆ ಹೇಗೆ ತನ್ನ ಮಕ್ಕಳನ್ನು ಸಲಹುವನೋ ಹಾಗೆ ಅವರನ್ನು ನಾವು ಸಲಹಬೇಕು. ವಿಶೇಷ ಅಗತ್ಯದ ಅವರಿಗೆ ಬೇಕಾದ್ದನ್ನು ನೀಡಿ ಜೀವಿಸಲು ದಾರಿ ಮಾಡಿಕೊಡಬೇಕು.
ಮಹಾಭಾರತದಲ್ಲಿ ಭೀಷ್ಮಾಚಾರ್ಯರು ಒಂದು ಕಡೆ ಹೇಳಿದ ಶ್ಲೋಕ ಹೀಗಿದೆ.
*ಕಚ್ಚಿದ್ ಅಂಧಾಶ್ಚ ಮೂಕಾಂಶ್ಚ* *ಪಂಗೂನ್ ವ್ಯಂಗಾನ್* *ಅಬಾಂಧವಾನ್|*
*ಪಿತೇವ ಪಾಸಿ ಧಮಶ್ಚ ತಥಾ ಪ್ರವ್ರಜಿತಾನಪಿ||*
ಸಲಹುವ ತಂದೆಯಷ್ಟೇ ಜವಾಬ್ದಾರಿ ಹೊತ್ತು ಕಾಪಾಡಬೇಕು. ಅವರಿಗೂ ಎಲ್ಲರಂತೆಯೇ ಬದುಕುವ ಹಕ್ಕಿದೆ. ನಮ್ಮಲ್ಲಿ ಒಬ್ಬರಾಗಿರಬೇಕು. ತಾಳ್ಮೆ ಎನ್ನುವುದು ಇಲ್ಲಿ ಮುಖ್ಯ. ಮನೆಯ ಸದಸ್ಯರೆಲ್ಲ ಸಹಕರಿಸಿದಾಗ ಅವರ ಬಾಳು ಸಹ ಹಸನಾಗಬಹುದು. ಕಾಲವನ್ನು ಮೀರಿ ಹೋಗುವ ಅಧಿಕಾರ ನಮಗಿಲ್ಲ. ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ ಬದುಕುವುದಷ್ಟೇ ನಮ್ಮ ಪಾಲಿನದು.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ