ಒಂದು ಒಳ್ಳೆಯ ನುಡಿ - 94

ಸಂಗೀತ ಸಾಹಿತ್ಯ ಕಲಾವಿಹೀನಃ ಸಾಕ್ಷಾತ್ಪಶುಃ ಪುಚ್ಛವಿಷಾಣಹೀನಃ/
ಸರ್ವಸ್ಯೌಷಧಮಸ್ತಿ ಶಾಸ್ತ್ರ ವಿಹಿತಂ ಮೂರ್ಖಸ್ಯನಾಸ್ತ್ಯೌಷಧಮ್//
ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಂ/
ಕಿಂ ಜೀರ್ಣಂ ತೃಣಮತ್ತಿ ಮಾನಮಹತಾಮಗ್ರೇಸರಃ ಕೇಸರೀ//
ದುರ್ಜನಂ ಪರಿಹರ್ತವ್ಯೋ ವಿದ್ಯಾಯಲಂಕೃತೋಪಿ ಸನ್/
ಮಣಿನಾ ಭೂಷಿತಸರ್ಪಃ ಕಿಮಸೌ ನ ಭಯಂಕರಃ//
ಯಾರಿಗೆ ಸಂಗೀತ, ಸಾಹಿತ್ಯ, ಇನ್ನಿತರ ಕಲೆಗಳ ಬಗ್ಗೆ ಆಸಕ್ತಿ ಇರುವುದಿಲ್ಲವೋ ಅವರು ಬಾಲ ಮತ್ತು ಕೋಡು ಇಲ್ಲದ ಪಶುಗಳಿಗೆ ಸಮಾನ. ನಮ್ಮ ಹತ್ತಿರ ಅದನ್ನು ಆಸ್ವಾದಿಸುವ ಕಲೆಯಾದರೂ ಇರಬೇಕು. ಎಲ್ಲಾ ರೋಗಕ್ಕೂ ವೈಜ್ಞಾನಿಕವಾದ ಮದ್ದುಗಳು ಇವೆ. ಆದರೆ ಹೇಳಿದ್ದನ್ನು ಸ್ವಲ್ಪವೂ ಕಿವಿಮೇಲೆ ಹಾಕಿಕೊಳ್ಳದ ಮೂರ್ಖರಿಗೆ ಯಾವ ಮದ್ದು ಸಹ ಪ್ರಯೋಜನವಿಲ್ಲ. ಅವರಿಗೆ ಅವರು ಹೇಳಿದ್ದೇ ಸರಿ. ಹೊರಗೆ ಕಾಣುವ ಎಲ್ಲಾ ಆಡಂಬರಗಳು, ಐಶ್ವರ್ಯಗಳು, ನಮ್ಮ ಹತ್ತಿರ ಇರುವುದೆಲ್ಲ ನಶಿಸಿ, ಹಾಳಾಗಿ ಹೋಗಬಹುದು. ಆದರೆ ಒಳ್ಳೆಯ ಮಾತು, ಮಾತನಾಡುವ ಕಲೆ ಯಾವತ್ತೂ ಹಾಳಾಗದು. ಆ ವ್ಯಕ್ತಿ ಇದ್ದರು ಇಲ್ಲದಿದ್ದರೂ ‘ಮಾತು ಹೇಳಿದರೆ ಮಾತು ಅವನದು ಎಂದು ಹೇಳಿ ನಾವು ಎಷ್ಟೋ ಸರ್ತಿ ಹೇಳುವುದುಂಟು. ಮಾತು ಸಹ ಮನುಷ್ಯನ ಭೂಷಣಗಳಲ್ಲಿ ಒಂದು. ಒಳ್ಳೆಯ ಮಾತನಾಡುವ ಕಲೆ ಆಭರಣ’ ಇದ್ದ ಹಾಗೆ.
ಹೇಗಿದ್ದ ಕಷ್ಟದ ಪರಿಸ್ಥಿತಿ ಬಂದರೂ ಸಿಂಹ ಹುಲ್ಲು ತಿನ್ನಲಾರದು. ಅದು ಕಾಡಿನಲ್ಲೇ ಇದ್ದರೂ ಅದರದ್ದೇ ಆದ ಘನತೆ ಗೌರವದಲ್ಲಿರುತ್ತದೆ. ಯಾವುದೇ ಘನತೆ ಗೌರವಕ್ಕೆ ಮರ್ಯಾದೆ ಕೊಡುವುದರಲ್ಲಿ ಸಿಂಹ ಅಗ್ರಸ್ಥಾನಲ್ಲಿದೆ. ನಾವು ಪಶು ಪಕ್ಷಿ ಪ್ರಾಣಿಗಳಿಂದ ಸಹ ಕಲಿಯುವುದು ತುಂಬಾ ಇದೆ. ದುರ್ಜನರು, ಕೆಟ್ಟ ಮನಸಿನವರು, ಎಷ್ಟೇ ವಿದ್ಯಾವಂತರಾದರೂ, ಅವರನ್ನು ದೂರವೇ ಇಡುವುದು ಆರೋಗ್ಯ ಮತ್ತು ನೆಮ್ಮದಿ. ಹಾವಿನ ಹೆಡೆಯಲ್ಲಿ ಮಣಿ ಇದೆ ಎಂದು ಹೇಳಿ ಅದರ ಹತ್ತಿರೆ ಹೋದರೆ ಏನಾಗಬಹುದು ನಮಗೆ ಗೊತ್ತಿದೆ .ದುಷ್ಟರಿಂದ ಯಾವಾಗಲೂ ದೂರವಿರುವುದೇ ಒಳ್ಳೆಯದಲ್ಲವೇ? ತಾನು ಹೇಳಿದ್ದೇ ಸರಿ ಎಂದು ವಾದ ಮಾಡುವವರನ್ನು ಯಾವತ್ತೂ ಸ್ವಲ್ಪ ದೂರವಿಡುವುದೇ ಒಳ್ಳೆಯದು. ಎರಡು ಕೈ ಸೇರಿದರೆ ಚಪ್ಪಾಳೆ. ನಮ್ಮ ಗಂಟಲು ನೋಯಿಸಿಕೊಳ್ಳುವುದರಲ್ಲಿ ಅರ್ಥ ವಿಲ್ಲ. ಸಾಧ್ಯವಾದರೆ ತಿಳಿ ಹೇಳುವುದು. ಇಲ್ಲದಿದ್ದರೆ ಮೌನವೇ ಔಷಧ. ಆಡುವ ಮಾತುಗಳು ವಿವೇಚನೆಯಿಂದ ಕೂಡಿರಲಿ.
ಆಕರ ಗ್ರಂಥ:(ಭರ್ತೃಹರಿ ಯ ನೀತಿಶತಕ)
ಸಂಗ್ರಹ:ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ