ಒಂದು ದಿನದ ಸಕಲೇಶಪುರ ಟ್ರೆಕ್......
ಸಕಲೇಶಪುರ ಟ್ರೆಕ್ ಹೋಗಬೇಕು ಅಂತ 2 ವಷ೯ದಿಂದ ಅಂದುಕೊಂಡಿದ್ದ ನಾವು ಕೊನೆಗೂ 7ರಂದು ಹೋಗುವ ನಿಶ್ಛಯವಾಯಿತು.
ನಾನು,ವೆಂಕ,ಸೌಜ,ಜಯ,ಪಕ್ಯ,ಜುಮ್ಮ,ಮಿತ್ರೇಶ್,ಪಣಿ,ವಿನಯ್,ರಶ್ಮಿ,ಶುಭ,ಶ್ವೇತ ಒಟ್ಟು 12 ಜನ ರಾತ್ರಿ 12ಕ್ಕೆ ಟಿಟಿಯಿಂದ ಬೆಂಗಳೂರನ್ನು ಬಿಟ್ಟೆವು. ವೆಂಕನ ಕಾಲು ಎಳೆಯುವುದರಿಂದ ನಮ್ಮ ಪ್ರಯಾಣ ಶುರುವಾಯಿತು. ವೆಂಕ,ಸೌಜ,ಜಯ,ಪಕ್ಯ,ಚಿಕ್ಕ (ಮೀಟರ್, ಉಲ್ಲ, ಶೆಟ್ಟಿ ಈ ಟ್ರೆಕ್ಗೆ ಬಂದಿರ್ಲಿಲ್ಲ) ಇದ್ರೆ ಯಾರು ಯಾರ ಕಾಲು ಎಳಿತರೋ ದೇವ್ರೆ ಬಲ್ಲ.
ಅಂತು ನಿದ್ರೆ ಇಲ್ಲದೆ ಬೆಳಗ್ಗೆ 5.30ಕ್ಕೆ ದೋಣಿಗಾಲ್ ತಲುಪಿದ್ವಿ, ಕ್ಯಾಬ್ ಡ್ರೈವರ್ಗೆ ಸುಬ್ರಮಣ್ಯ ಸಮೀಪ ಗುಂಡ್ಯಕ್ಕೆ ಹೋಗೋದಕ್ಕೆ ಹೇಳಿ ದೋಣಿಗಾಲ್ ರೈಲ್ವೆ ಸ್ಟೇಶನ್ ತಲುಪಿದ್ವಿ , ಕೆಲವರು ದೇಹಬಾಧೆನ ತೀರಿಸಿಕೊಂಡ್ರು ಇನ್ನು ಕೆಲವರು ಬರ್ದಲೆ ಹಾಗೆ ಉಳಿಸಿಕೊಂಡ್ರು. ದೋಣಿಗಾಲ್ ರೈಲ್ವೆ ಸ್ಟೇಶನ್ನಲ್ಲಿ ಬ್ರಶ್ ಮಾಡಿ, ಮುಖ ತೊಳೆದು ತಂದಿದ್ದ ಕೇಕ್, ಕಾರ ಬನ್ ತಿಂದ್ಕೊಂಡು ಬ್ಯಾಗ್ ಏರಿಸ್ಕೊಂಡು 6 ಗಂಟೆಯಿಂದ ನಮ್ಮ ಟ್ರೆಕ್ ಶುರು ಮಾಡಿದ್ವಿ.ರೈಲ್ವೆ ಟ್ಱಾಕ್ನ್ ಮೇಲೆ ನಮ್ಮ ಪಯಣ ಸೇತುವೆ,ಸುರಂಗಗಳನ್ನು ದಾಟಿ ಸಾಗಿತು. ಸಣ್ಣ ಸೇತುವೆಗಳನ್ನು ದಾಟುವಾಗ ಮೊದಮೊದಲು ಸ್ವಲ್ಪ ಭಯವಾದರೂ ಈ ತರದ ದಾರಿಗಳು ನಮ್ಮ ಟ್ರೆಕ್ಗಳಲ್ಲಿ (ಇದೇ ಗ್ರೂಪ್, ಇಲ್ಲಿವರೆಗೆ ಏನಿಲ್ಲ ಅಂದ್ರು 10ರಿಂದ 12 ಟ್ರೆಕ್ ಮಾಡಿರಬಹುದು) ಮಾಮೂಲಿ ಆಗಿರೊದ್ರಿಂದ ದಾಟುವುದು ಅಷ್ಟು ಕಷ್ಟ ಆಗಲಿಲ್ಲ, ಅಲ್ಲದೆ ಮುಂದಿನ ಹಾದಿಯಲ್ಲಿ 15ರಿಂದ 20 ಸೇತುವೆ,ಸುರಂಗಗಳನ್ನು ಕ್ರಮಿಸಬೇಕಾಯಿತು, ಹಾಗಾಗಿ ಭಯ ಹೋಗಿ ಇದು ಸಾಮಾನ್ಯದ ಹಾದಿ ಎನ್ನುವ ಸ್ತಿತಿಗೆ ಬಂತು. ಹೊಟ್ಟೆ ಹಸಿದಾಗ ಆಗಾಗ ತಿನ್ನುವುದು, ಅಲ್ಲಲ್ಲಿ ಫೋಟೊ ತೆಗೆಯುತ್ತಾ, ಜಯನ ಫೋಟೊ ಹಾಳು ಮಾಡುತ್ತಾ , ಆಗಾಗ ಯಾರನ್ನಾದ್ರು ಕಾಡಿಸುತ್ತಾ, ಬಕ್ರ ಮಾಡುತ್ತ ನಮ್ಮ ಟ್ರೆಕ್ ಸಾಗ್ತಾ ಇತ್ತು.
ಮಧ್ಯಾಹ್ನ ಆಗ್ತಾ ಆಗ್ತಾ ಹೊಟ್ಟೆ ಹಸಿಯೋಕೆ ಶುರುವಾಯಿತು, ಒಂದು 10 ಕಿ.ಮೀ ನಡೆದಾಗಿತ್ತು, ಮಧ್ಯದಲ್ಲಿ ಒಂದು ಫಾಲ್ಸ್ ಸಿಕ್ತು, ನಾವು ಟ್ರೆಕ್ ಹೋದ ಕಡೆಯೆಲ್ಲಾ ಒಂದು ಫಾಲ್ಸ್ ಸಿಕ್ಕತ್ತೆ, ಅದೇನು ಪುಣ್ಯ ಮಾಡಿದೀವೋ ಗೊತ್ತಿಲ್ಲ , ಅಲ್ಲಿ ಸ್ವಲ್ಪ ನೀರಿನಲ್ಲಿ ಆಟ ಆಡಿ ಆಮೇಲೆ ಊಟ ಮಾಡಿ ಆದ ಮೇಲೆ ಮತ್ತೆ ಟ್ರೆಕ್ ಶುರುವಾಯಿತು, 8 ಕಿ.ಮೀ ನಡೆದ ಮೇಲೆ ಯಡಕಮುರಿ ರೈಲ್ವೆ ಸ್ಟೇಶನ್ ತಲುಪಿದ್ವಿ, ಆಗ ಸಮಯ ಸಂಜೆ 4.30. ಇಲ್ಲಿವರೆಗೆ ಎಲ್ಲಾ ಸರಿಯಾಗೇ ಇತ್ತು, ನಾವು ಅಂದುಕೊಂಡಿದ್ದು ಏನು ಅಂದ್ರೆ ಯಡಕಮುರಿಯಿಂದ ರಸ್ತೆ ಇದೆ ಅಲ್ಲಿಂದ ಗುಂಡ್ಯಕ್ಕೆ ಹೋಗಿ ಟಿಟಿನ ಹಿಡಿಬಹುದು ಅಂತ ತಿಳಿದುಕೊಂಡಿದ್ದೆವು.
ಆದರೆ......................ತಾನೊಂದು ಬಗೆದರೆ ದೈವವೊಂದು ಬಗೆದಂತೆ ಅನ್ನೊ ಹಾಗೆ....
ಇಲ್ಲಿವರೆಗೆ ಆಗಿದ್ದು ಟ್ರೆಕ್ ಆದ್ರೆ ಇನ್ನು ಮುಂದೆ ಆಗಿದ್ದು ಸಾಹಸ....
ಸರಿ, ಸ್ಟೇಶನ್ ತಲುಪಾದ ಮೇಲೆ ಸ್ಟೇಶನ್ ಮಾಷ್ಟ್ರನ ವಿಚಾರಿಸೋದಕ್ಕೆ ಹೋದ್ವಿ, ಅವ್ನು ಇನ್ನು 13 ಕಿ.ಮೀ ರೈಲ್ವೆ ಟ್ರ್ಯಾಕ್ ಮೇಲೆ ಟ್ರೆಕ್ ಮಾಡಬೇಕು ಸುಬ್ರಮಣ್ಯ ರೈಲ್ವೆ ಸ್ಟೇಶನ್ ತಲುಪಲ್ಲಿಕ್ಕೆ ಅಂದ್ರು, ಅಷ್ಟೊತ್ತಿಗೆ ಟಿಟಿ ಸಿಕ್ಕಿದ್ರೆ ಹೋಗಿ ಬಿದ್ಕೊಳ್ಳೊ ಪರಿಸ್ತಿತಿನಲ್ಲಿದ್ದ ನಾವು ಆ ವಿಚಾರ ಕೇಳಿ ಸ್ವಲ್ಪ ಹೊತ್ತು ಏನು ಮಾಡಬೇಕು ಅಂತ ತೋಚಲಿಲ್ಲ. ಆಮೇಲೆ ಯಾವದಾದ್ರು ಶಾಟ್೯ ಕಟ್ ಇದೆಯಾ ಅಂತ ವಿಚಾರಿಸಿದಾಗ, ಕಾಡಿನ ದಾರಿಯಲ್ಲಿ 6 ಕಿ.ಮೀ ಹೋದ್ರೆ ಗುಂಡ್ಯ ಸಿಗತ್ತೆ ಅಂದ್ರು, ಆದ್ರೆ ಅಲ್ಲಿ ಆನೆ ಮತ್ತೆ ವಿಷಸರ್ಪಗಳು ಇರುತ್ತದೆ ನೋಡ್ಕೊಂದು ಹೋಗಿ ಅಂದ್ರು ಅಲ್ಲದೆ ಒಂದು 4 ಕಿ.ಮೀ. ಆಚೆ ಒಂದು ಸಣ್ಣ ಡ್ಯಾಮ್ ಬರತ್ತೆ, 6 ಘಂಟೆಗೆ ನೀರು ಬಿಡ್ತರೆ ಅಷ್ಟರೊಳಗೆ ನೀವು ಹೋಗಬೇಕು ಅಂದ್ರು. ಆಗ ಸಮಯ 4.45. ಸರಿ ಅದೇ ದಾರಿನಲ್ಲೆ ಹೋಗೋಣ ಅಂತ ನಿಧಾ೯ರ ಮಾಡಿ ಕಾಡಿನ ಹಾದಿ ಹಿಡಿದೆವು.
ಅಬ್ಬ!!!!! ಆ ದಾರಿ ನೋಡಿದ್ರೆ ಊರಿನಲ್ಲಿರೋರು ಇರ್ಲಿ ಕಾಡು ಮನುಷ್ಯರು, ಕಾಡು ಪ್ರಾಣಿಗಳು ಹೋಗೋದು ಕಷ್ಟ ಅನ್ನೋ ಸ್ತಿತಿಯಲ್ಲಿತ್ತು. ಪಾಪ ಆ ಹೆಣ್ಣುಮಕ್ಕಳ ಪರಿಸ್ತಿತಿಯಂತೂ ಹೇಳತೀರದು, 1 ಕಿ.ಮೀ ಕಷ್ಟಪಟ್ಟು ನಡೆದಾದ ಮೇಲೆ ಆ ರಸ್ತೆ ಕಥೆ ನೋಡಿ ಎಲ್ಲರನ್ನು ಒಂದು ಕಡೆ ನಿಲ್ಲಲು ಹೇಳಿ, ನಾನು ಜಯ,ಜುಮ್ಮ ಸ್ವಲ್ಪ ಮುಂದೆ ಹೋದೆವು, ಆಗ ಒಂದು ಸಣ್ಣ ಹೊಳೆ ಸಿಕ್ತು, ಜಯ ಮತ್ತು ಜುಮ್ಮ ಇಬ್ಬರನ್ನು ಒಂದು ಕಡೆ ನಿಲ್ಲಲು ಹೇಳಿ ನಾನು ಆ ಹೊಳೆಯನ್ನು ದಾಟಿ ಮುಂದಿನ ದಾರಿಯನ್ನು ಹುಡುಕಲು ಹೊರಟೆ, ಆ ದಾರಿ ಬಾರಿ ಕಿರಿದಾಗಿತ್ತು ಅಕಸ್ಮಾತ್ ಆನೆ ಬಂದಿದ್ರು ಎಸ್ಕೇಪ್ ಆಗೋ ಚಾನ್ಸೆ ಇರ್ಲಿಲ್ಲ, ಬಂದಿದ್ರು ಬಾರಣ್ಣ ನಿನಗೆ ಕಾಯ್ತಾ ಇದ್ದೆ ಅನ್ನಬಹುದಿತ್ತು ಅಷ್ಟೆ.
ಇನ್ನೇನು, ಆ ದಾರಿನಲ್ಲಿ ಹೋಗೋಕಾಗಲ್ಲ ಅಂತ ಅನ್ನಿಸಿದ ಮೇಲೆ ಜಯ,ಜುಮ್ಮ ಇರೋ ಕಡೆ ಬಂದು ವಾಪಸ್ ಹೋಗೋಣ ಅಂದೆ. ಜೀವ ಅನ್ನೋದಿದ್ರೆ ಇಂತ ಸಾವಿರ ಟ್ರೆಕ್ ಮಾಡಬಹುದು ಅಂದ್ಕೊಂಡು 'ಬಂದ ದಾರಿಗೆ ಸುಂಕ ಇಲ್ಲ' ಅಂದ್ಕೊಂಡು ವಾಪಸ್ ಮತ್ತೆ 1 ಕಿ.ಮೀ ನಡೆದು 'ಹಳೆ ಗಂಡನ ಪಾದವೇ ಗತಿ' ಅಂತ ಯಡಕಮುರಿ ರೈಲ್ವೆ ಸ್ಟೇಶನ್ ಹತ್ತಿರ ಬಂದ್ವಿ. ಅಷ್ಟೊತ್ತಿಗಾಗಲೆ ಎಲ್ಲರೂ ಹಣ್ಣುಗಾಯಿ ನೀರುಗಾಯಿ ಆಗಿದ್ವಿ.
ಸ್ಟೇಶನ್ ಮಾಷ್ಟರ್ (ಬಿಹಾರಿಯವನು) ನಮಗೆ ಆ ದಾರಿಯಲ್ಲಿ ಹೋಗಬೇಡಿ ಅಂತ ಅಂದಿದ್ದ, ಆದರೂ ನಾವು ಅವನ ಮಾತು ಕೇಳದೆ ಹೋಗಿದ್ದೆವು, ವಾಪಸ್ ಬಂದಾಗ ಅವನು ನಮ್ಮನ್ನು ನೋಡಿ ಮನಸ್ಸಿನಲ್ಲೆ ಮಂಡಿಗೆ ತಿಂದಿರ್ತನೆ, ಸರಿ ಈಗ ಅವ್ನೆ ನಮಗೆ ದೇವ್ರು ಆದ್ರೆ ಆ ದೇವ್ರನ್ನ ನಮ್ಮ ಕಡೆ ನೋಡೋ ಹಾಗೆ ಮಾಡೋದಕ್ಕೆ ಸೌಜ, ಕನಕದಾಸರು ಶ್ಱೀ ಕ್ರಿಶ್ಹ್ಣನಿಗೆ ಅವನ ಕಡೆ ನೋಡೋದಕ್ಕೆ ಪ್ರಯತ್ನ ಪಟ್ಟಿದ್ದಕ್ಕಿಂತಲೂ ಬಾರೀ ಕಷ್ಟಪಡಬೇಕಾಯಿತು, ಯಾಕಂದ್ರೆ ಗೂಡ್ಸ್ ರೈಲ್ ಆಗ್ಲಿ ಅಥವಾ ಪ್ಯಾಸೆಂಜರ್ ರೈಲ್ ಆಗ್ಲಿ ನಿಲ್ಸೋಕೆ ಆ ದೇವ್ರೆ ಸಿಗ್ನಲ್ ಬಟನ್ ಪ್ರೆಸ್ಸ್ ಮಾಡ್ಬೇಕಿತ್ತು ಅಂದ್ರೆ ಆತನ ಅಪ್ಪಣ್ಣೆ ಬೇಕಾಗಿತ್ತು.
ಆಗ ಸಮಯ 6.15 ಆಗಿತ್ತು. ಸೌಜ ಸ್ಟೇಶನ್ ಮಾಷ್ಟರ್ ಹತ್ತಿರ ಬರೋ ರೈಲ್ ಬಗ್ಗೆ ಹೋಗಿ ವಿಚಾರಿಸಿಕೊಂಡು ಬಂದ, ನಾನು ಹೇಳಿದ್ರೂ ಗೂಡ್ಸ್ ರೈಲ್ ಡ್ರೈವರ್ ಒಪ್ಪಿದ್ರೆ ನಿಲ್ಲಿಸಬಹುದು ಅಂತ ಅವ್ನು ಹೇಳಿದ್ನಂತೆ, ಸರಿ ನಮ್ಮ ಹಣೆಬರಹ ಹೆಂಗಿರತ್ತೊ ಹಾಗೆ ಆಗತ್ತೆ ಅಂತ ಅಲ್ಲೆ ಪ್ಲಾಟ್ಫಾರ್ಮ್ನಲ್ಲಿ ಕೂತ್ಕೊಂಡ್ವಿ.
ಆಗ ವೆಂಕ ನಮ್ಮ ಹಾಗೆ ಟ್ರೆಕ್ ಬಂದವ್ರಲ್ಲಿ ಒಬ್ರನ್ನ ಮಾತಾಡ್ಸ್ತಿದ್ದ, ಅವ್ರು ಹೆಣ್ಣುಮಕ್ಕಳನ್ನ ನೋಡಿ, ಸಾರ್ ಇಲ್ಲಿಂದ 3.5 ಕಿ.ಮೀ ನಡೆದುಕೊಂಡು ಹೋದ್ರೆ ನಮ್ಮ ಪರಿಚಯದವರೊಬ್ರು ಜೀಪ್ನಲ್ಲಿ ಬರ್ತರೆ (ಅವ್ರ್ಯಾರಿಗೋ ಊಟ ಕೊಡೋದಕ್ಕೆ ಬಂದಿದ್ರಂತೆ) ನೀವು ಅಲ್ಲಿಗೆ ಹೋದ್ರೆ ಗುಂಡ್ಯ ತನಕ ಜೀಪ್ನಲ್ಲಿ ಹೋಗಬಹುದು ಅಂದ್ರು, ಆದ್ರೆ ಕಾಡಾನೆಗಳು ರಾತ್ರಿ ಹೊತ್ತು ಬರೋ ಚ್ಯಾನ್ಸ್ ಇರತ್ತೆ ನೋಡ್ಕೊಂಡು ಹೋಗ್ಬೇಕು ಅಂದ್ರು, ಸರಿ ಹಾಗೆ ಮಾಡುವ ಅಂತ ಎಲ್ಲರನ್ನು ಕೇಳಿದ್ರೆ ಹೆಣ್ಣುಮಕ್ಕಳ್ಯಾರು ನಮ್ಮ ಹತ್ತಿರ ಇನ್ನೊಂದು ನಯಾಪೈಸೆಯಷ್ಟು ದೂರನೂ ನಡೆಯೋಕಾಗಲ್ಲ ಅಂದ್ರು.
ಛೆ, ಏನಪ್ಪ ಮಾಡೋದು ಅಂತ ಯೋಚಿಸುತ್ತಿರುವಾಗ...