ಒಂದು ಸಣ್ಣ ಕಥೆ - ಮಾನವೀಯತೆ

ಒಂದು ಸಣ್ಣ ಕಥೆ - ಮಾನವೀಯತೆ

ಈ ಕಥೆಯನ್ನು ನೀವು ಈಗಾಗಲೇ ಓದಿರಲೂ ಬಹುದು. ಆದರೆ ಪ್ರತೀ ಬಾರಿ ಓದಿದಾಗಲೂ ನನ್ನ ಕಣ್ಣಿನಿಂದ ನೀರು ಬರುತ್ತದೆ. ಅಷ್ಟು ಭಾವನಾತ್ಮಕವಾದ ಮಾನವೀಯತೆಯ ಕಥೆ ಇದು. ನೀವು ಓದಿ, ಬೇರೆಯವರಿಗೂ ಹಂಚಿರಿ.

ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು ಧರಿಸಿದ ವ್ಯಕ್ತಿ ತನ್ನ 15-16 ವರ್ಷದ ಮಗಳ ಜೊತೆ ದೊಡ್ಡ ಸ್ಟಾರ್ ಹೋಟೆಲ್ ಗೆ ಹೋದರು. ಇಬ್ಬರೂ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಿ, ವೇಟರ್ ಬಂದು ಎರಡು ನೀರಿನ ಲೋಟ ಇಟ್ಟು ಕೇಳಿದ. ತಮಗೇನು ಬೇಕು? ಆಗ ಆ ವ್ಯಕ್ತಿ " ನನ್ನ ಮಗಳಿಗೆ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಬಂದರೆ ನಗರದ ಅತಿ ದೊಡ್ಡ ಹೋಟೆಲ್ ನಲ್ಲಿ ದೋಸೆ ತಿನ್ನಿಸುತ್ತೇನೆ ಎಂದು ಭರವಸೆ ನೀಡಿದ್ದೆ. ಇಂದು ಆ ಭರವಸೆಯನ್ನು ನನ್ನ ಮಗಳು ಈಡೇರಿಸಿದ್ದಾಳೆ. ದಯವಿಟ್ಟು ನನ್ನ ಮಗಳಿಗಾಗಿ ಒಂದು ದೋಸೆ ತನ್ನಿ. ಎಂದ.

ವೇಟರ್ ಕೇಳಿದ " ಆಯಿತು, ತಮಗೇನು ತರಬೇಕು?" ನನ್ನ ಬಳಿ ಕೇವಲ ಒಂದು ದೊಸೆಗೆ ಸಾಕಾಗುವಷ್ಟು ಮಾತ್ರ ಹಣವಿದೆ ಅವಳಿಗಷ್ಟೇ ಕೊಟ್ಟರೆ ಸಾಕು ಎಂದ. ಈ ಮಾತು ಕೇಳಿ ವೇಟರ್ ನ ಮನಸು ಕರಗಿತು. ಮಾಲೀಕನ ಬಳಿ ಹೋಗಿ   ಅವನು ಬಂದ ವ್ಯಕ್ತಿ ಮತ್ತು ಮಗಳ ಕಥೆ ಹೇಳಿದ. ಮುಂದುವರಿದು ಇವರಿಬ್ಬರಿಗೂ ನನ್ನ ಪರವಾಗಿ ತಿಂಡಿ ನೀಡಬೇಕೆಂದು ನಿರ್ಧರಿಸಿದ್ದೇನೆ. ನೀವು ಅವರ ಬಿಲ್ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಬಹುದು. ಈ ಮಾತನ್ನು ಕೇಳಿದ ಹೊಟೆಲ್ ಮಾಲಿಕನಿಗೂ ಅವರಿಬ್ಬರ ಮೇಲೆ ಮರುಕವಾಯಿತು ಹಾಗೂ ವೆಯ್ಟರ್ ನ ಅಭಿಮಾನ ಕಂಡು ಸಂತುಷ್ಟನಾಗಿ "ಅವರಿಬ್ಬರಿಗೆ ಹೋಟೆಲ್ ಪರವಾಗಿ ಇಂದು ನಾವು ಅಭಿನಂದನಾ ಪಾರ್ಟಿ ಕೊಡೋಣ” ಎಂದು ಮಾಲೀಕರು ಹೇಳಿದರು.  

ಹೋಟೆಲ್ ಮಾಲೀಕರು ಎಲ್ಲ ಸಿಬ್ಬಂದಿಯವರನ್ನು ಸೇರಿಸಿ ಟೇಬಲ್ ನ್ನು ಚೆನ್ನಾಗಿ ಅಲಂಕರಿಸಲು ಹೇಳಿದರು ಹಾಗೂ ಬಡ ಹುಡುಗಿಯ ಯಶಸ್ಸನ್ನು ಗ್ರಾಹಕರೊಂದಿಗೆ ಸಂಭ್ರಮಿಸಿ ಅವರಿಬ್ಬರಿಗೆ ಹೊಟ್ಟೆ ತುಂಬುವಷ್ಟು ತಿಂಡಿ ಹಾಗೂ ಸಿಹಿ ಹಂಚಿ ಆಚರಿಸಿದರು. ಜೊತೆಗೆ ಮಾಲೀಕರು ದೊಡ್ಡ ಚೀಲದಲ್ಲಿ ಸಿಹಿ ತಿಂಡಿ ಪ್ಯಾಕ್ ನೀಡಿ ತಮ್ಮ ನೆರೆಹೊರೆಯಲ್ಲಿ ಹಂಚಲು  ಕೊಟ್ಟರು. ಇಷ್ಟೆಲ್ಲಾ ಗೌರವ ಪಡೆದ ಅವರಿಗೆ ಹೊಟೇಲ್ ನವರ ಬಗ್ಗೆ ಧನ್ಯತಾಭಾವದಿಂದ ಕಣ್ಣಲ್ಲಿ ನೀರು ಜಿನುಗತೊಡಗಿತ್ತು.                                                        

ಸಮಯ ಕಳೆಯಿತು. ಒಂದು ದಿನ ಅದೇ ಹುಡುಗಿ I.A.S. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅದೇ ಊರಿಗೆ ಜಿಲ್ಲಾಧಿಕಾರಿಯಾಗಿ ಬಂದಳು. ಮೊದಲು ಆಪ್ತ ಸಹಾಯಕನನ್ನು ಅದೇ ಹೋಟೆಲ್ ಗೆ ಕಳುಹಿಸಿ, "ಜಿಲ್ಲಾಧಿಕಾರಿಗಳು ತಿಂಡಿ ತಿನ್ನಲು ಬರುತ್ತಾರೆ” ಎಂದು ಹೋಟೆಲ್ ಮಾಲೀಕರಿಗೆ ತಿಳಿಸುವಂತೆ ಹೇಳಿದರು. ಹೋಟೆಲ್ ಮಾಲೀಕರು ತಕ್ಷಣ ಹೋಟೆಲ್ ಹಾಗೂ ಟೇಬಲ್ ಗಳನ್ನು ತಮ್ಮ ಸಹಾಯಕರ ಸಹಾಯದಿಂದ ಸುಂದರವಾಗಿ ಅಲಂಕರಿಸಿದರು. ಈ ಸುದ್ದಿ ಕೇಳಿ ಇಡೀ ಹೋಟೆಲ್ ಗ್ರಾಹಕರಿಂದ ತುಂಬಿ ತುಳುಕಿತು.

ಜಿಲ್ಲಾಧಿಕಾರಿಗಳು ತನ್ನ ಪೋಷಕರೊಂದಿಗೆ ಹೋಟೆಲ್ ತಲುಪಿದರು. ಎಲ್ಲರೂ ಅವರ ಗೌರವಕ್ಕೆ ನಿಂತರು. ಹೋಟೆಲ್ ಮಾಲೀಕರು ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಅವಳು ನೇರವಾಗಿ  ಹೋಟೆಲ್ ಮಾಲೀಕ ಮತ್ತು ವೆಟರ್ ನ ಕಾಲಿಗೆ ನಮಸ್ಕರಿಸಿ ಹೇಳಿದಳು - 'ಬಹುಶಃ ನೀವಿಬ್ಬರೂ ನನ್ನನ್ನು ಗುರುತಿಸಲಿಲ್ಲ. ಹಿಂದೊಮ್ಮೆ ದೋಸೆ ಕೊಡೋಕೆ ಅಪ್ಪನ ಬಳಿ ದುಡ್ಡಿಲ್ಲದ ಹುಡುಗಿ ನಾನು. ಆ ದಿನ ನೀವಿಬ್ಬರೂ ಮಾನವೀಯತೆಯು ಇನ್ನೂ ಇದೆ ಎನ್ನುವದಕ್ಕೆ ನೈಜ  ಉದಾಹರಣೆ ಕೊಟ್ಟಿದ್ದಿರಿ. ನನ್ನ ನೆರೆಹೊರೆಗೆ ಹಂಚಲು ಸಿಹಿತಿಂಡಿಯ ಪ್ಯಾಕ್ ನೀಡಿ ಗೌರವಿಸಿದ್ದಿರಿ.

ನಿಮ್ಮಿಬ್ಬರಿಂದಲೇ ಇಂದು ನಾನು ಈ ಹಂತಕ್ಕೆ ಬರಲು ಪ್ರಯತ್ನ ಪಟ್ಟೆ. ನಾನು ನಿಮ್ಮಿಬ್ಬರನ್ನು ಯಾವಾಗಲೂ  ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಇವತ್ತು ಈ ಪಾರ್ಟಿ ನನ್ನಿಂದ. ಎಲ್ಲಾ ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿಗಳ ಬಿಲ್ ನಾನು ಕೊಡುತ್ತೇನೆ. ಇವತ್ತಿನಿಂದ ನಿಮ್ಮಿಬ್ಬರ ಸುಖ ದುಃಖಗಳಲ್ಲಿ ನಾನೂ ಭಾಗಿ ಎಂದು ಹೇಳಿದಳು. ಆ ಸಂದರ್ಭದಲ್ಲಿ ಹೋಟೆಲ್ ಮಾಲಿಕ ಹಾಗೂ ವೆಯ್ಟರನ ಕಣ್ಣುಗಳು ತೇವಗೊಂಡಿದ್ದವು.     

 *ಯಾವುದೇ ಬಡವರ ಬಡತನವನ್ನು ನೋಡಿ ಅಪಹಾಸ್ಯ ಮಾಡುವ ಬದಲು, ಅವರ ಪ್ರತಿಭೆಯನ್ನು ಸರಿಯಾಗಿ ಗೌರವಿಸಿದರೆ ಆ ಸಂತೃಪ್ತ ಭಾವ ಅವರಲ್ಲಿ ಯಾವತ್ತೂ ಹಚ್ಚಹಸುರನಾಗಿ ಇರುತ್ತದೆ.*                            

ಕೃಪೆ: ಟೈಮ್ಸ್ ಆಫ್ ಇಂಡಿಯಾ