ಒಡಲು...
ಕವನ
ಬಿಸಿಲಿನ ಟಿಸಿಲಿಗೆ ಬೆವರಿನ ಎರಕ
ದಣಿವಲಿ ಮುಗಿಲಿಗೆ ದೃಷ್ಟಿಯ ಶಾಪ
ತುಂಡು ರುಮಾಲಿನ ನಾರು ಸತ್ತಿದೆ
ಬೆವರ ಒರೆಸುತ ಜೀವ ಬಾಡಿದೆ..
ಹಾರೆ ಗುದ್ದಲಿ ನಡುವೆಯೆ ಬದುಕು
ದಶಕದ ಕತೆಯಿದು ಕವಿಗೆ ದಕ್ಕದು
ಲೇಖನಿ ಬಾರದು ಬರೆಯಲು ಮುಂದು
ಬೆಳಕನು ಕಾಣದ ಕತ್ತಲುಯೆಂದು..
ಮೀಸಲು ಉಯಿಲಿನ ಆಮಿಷ ಹುಟ್ಟಿತು
ಅರ್ಜಿಯು ನಾಲ್ಕು ಮೂಲೆಯ ತಲುಪಿತು
ನಡೆಯುತ ಪಾದವು ಗಾವುದ ಸಾಗಿತು
ಹೊರಗೆಯೆ ನಿಲ್ಲುತ ನಯನವು ಇಣುಕಿತು..
ಹೆಜ್ಜೆಗಳು ಠಸ್ಸೆಗಳಾಗಿ ಉದ್ವೇಗವು ಕ್ರೋದವಾಗಿ
ಮುಷ್ಠಿಗಳು ಬಲವಾಗಿ ಬಾಹುಗಳು ಮರವಾಗಿ
ಕಷ್ಟದ ಧಗೆಯನ್ನೂ ಲೆಕ್ಕಿಸದೆ ಸಾಗಿ
ದವಡೆಗೆ ಸೀಮಿತವಾಗಿದೆ ಬಡವನ ಕೋಪ
ನಿಲ್ಲಿರೋ ಅಣ್ಣ ನಿಮಗೂ ಹಕ್ಕಿದೆ
ನಿಮ್ಮನೆಯೊಳಗೂ ದೇವರ ಪಟವಿದೆ
ನಿಮ್ಮಯ ದೀಪವೂ ತೈಲವ ಬಯಸಿದೆ
ಬದುಕಲು ಕಲಿಯಿರಿ ನಿಮಗೂ ಬಾಳಿದೆ..
-‘ಮೌನರಾಗ’ ಶಮೀರ್ ನಂದಿಬೆಟ್ಟ
ಚಿತ್ರ ಕೃಪೆ: ವಿಜಯ ಕರ್ನಾಟಕ ಜಾಲ ತಾಣ
ಚಿತ್ರ್
- Log in to post comments