ಒಡಲ ಜೋಗುಳ

ಒಡಲ ಜೋಗುಳ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಡಾ. ಯಮನೂರಪ್ಪ ವಡಕಿ
ಪ್ರಕಾಶಕರು
ಅಚಲ ಪ್ರಕಾಶನ, ಮೈಸೂರು
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೪

‘ಒಡಲ ಜೋಗುಳ' ಎಂಬುದು ವಿಶ್ವಪ್ರಿಯ ವಡ್ಡಮ್ಮ ತಾತನ ತತ್ವಪದಗಳ ಸಂಗ್ರಹದ ಮೊದಲ ಸಂಪುಟ. ಈ ಸಂಪುಟವನ್ನು ಸಂಪಾದನೆ ಮಾಡಿದ್ದಾರೆ ಡಾ. ಯಮನೂರಪ್ಪ ವಡಕಿ ಇವರು. ತಮ್ಮ ಸಂಪಾದಕೀಯದಲ್ಲಿ ಇವರು ಬರೆದ ಸಾಲುಗಳು ನಿಮ್ಮ ಓದಿಗಾಗಿ…

“ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಾಟೂರಿನವರಾದ ಆದಯ್ಯಸ್ವಾಮಿ ಹಿರೇಮಠ ಅವರು ಬಾಲ್ಯದ ದಿನಗಳಿಂದಲೂ ಗಂಗಾವತಿ ನಗರದಲ್ಲಿ ವಾಸವಾಗಿದ್ದವರು. ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣದವರೆಗೂ ಗಂಗಾವತಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ತಮ್ಮ ಬಾಲ್ಯದ ದಿನಗಳಿಂದಲೂ ಆಧ್ಯಾತ್ಮವನ್ನು ಮೈಗೂಡಿಸಿಕೊಂಡ ಇವರು ಸುಮಾರು ಮೂವತ್ತು ವರ್ಷಗಳಿಂದಲು ಸಮಾಜದಲ್ಲಿ ತಾವು ಕಂಡುಂಡ ಸತ್ಯ ಘಟನೆಗಳನ್ನು ಆಧರಿಸಿ ಆ ಘಟನೆಗಳನ್ನೇ ತತ್ವಪದಗಳಾಗಿ ಬರವಣೆಗೆಯಲ್ಲಿ ತೊಡಗಿದವರು ಆಧ್ಯಾತ್ಮಿಕ ಚಿಂತನೆ, ಭಜನೆ, ಸತ್ಸಂಗದಲ್ಲಿ ಭಾಗಿಯಾಗುವುದರ ಜೊತೆಗೆ ಇಂದಿಗೂ ಪ್ರತಿ ನಿತ್ಯ ತತ್ವಪದಗಳನ್ನು ಬರೆಯುತ್ತಿದ್ದಾರೆ. ಇವರ ನಿಜ ನಾಮ ಆದಯ್ಯಸ್ವಾಮಿ ಎಂಬುದಾಗಿದ್ದು, ಮೂವತ್ತು ವರ್ಷಗಳ ಹಿಂದೆ ಸಂಸಾರವನ್ನು ತೈಜೀಸಿ ರಾಂಪೂರ ಮಾಗಾಣಿಯು ಸುತ್ತಲೂ ಬೆಟ್ಟ, ಗುಡ್ಡಗಳಿಂದ ಕೂಡಿದ ಮಾಗಾಣಿ ಪ್ರದೇಶ ಭತ್ತದ ಗದ್ದೆಯಲ್ಲಿ ವಡ್ಡಮ್ಮ ದೇವಿ ನೆಲೆಸಿರುವ ಸ್ಥಳದಲ್ಲಿ ಇವರು ಒಂದು ಆಶ್ರಮವನ್ನು ನಿರ್ಮಿಸಿಕೊಂಡು ವಡ್ಡಮ್ಮ ದೇವಿಯ ಆರಾಧಕರಾಗಿ ಸೇವೆ ಸಲ್ಲಿಸುತ್ತಾ ಕಾಲ ಕಳೆಯುತ್ತಿದ್ದಾರೆ.

ಗಂಗಾವತಿಯ ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೀತಿಯ ಗುರುಗಳು ಪ್ರಾಚಾರ್ಯರಾದ ಡಾ. ಜಾಜಿ ದೇವೇಂದ್ರಪ್ಪ ಅವರನ್ನು ನನ್ನ ಪಿ.ಎಚ್.ಡಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಭೇಟಿಯಾದ ಸಂದರ್ಭದಲ್ಲಿ ಆದಯ್ಯ ತಾತನು ಎಂಬ ಹೆಸರಿನ ಬಗ್ಗೆ ನನಗೆ ಪರಿಚಯಿಸಿದರು. ಒಂದು ದಿನ ಆದಯ್ಯ ತಾತನನ್ನು ಭೇಟಿ ಮಾಡಲು ರಾಂಪೂರ ಗ್ರಾಮಕ್ಕೆ ತೆರಳಿ ಆದಯ್ಯ ತಾತ ಬಗ್ಗೆ ವಿಚಾರಿಸಿದಾಗ ಆದಯ್ಯ ತಾತ ಎನ್ನುವ ಹೆಸರಿನ ವ್ಯಕ್ತಿಗಳು ಇಲ್ಲಿ ಯಾರು ಇಲ್ಲ ಎಂದು ಗ್ರಾಮಸ್ಥರು ಪ್ರತಿಕ್ರಿಯಿಸಿದರು. ಆಗ ವಡ್ಡಮ್ಮ ದೇವಿಯ ಪೂಜಾರಿ ಎಂದು ತಿಳಿಸಿದೆ. ತಕ್ಷಣಕ್ಕೆ ಈ ಭಾಗದಲ್ಲಿ ಆದಯ್ಯಸ್ವಾಮಿವರನ್ನು ವಡ್ಡಮ್ಮತಾತನೆಂದು ಕರೆಯುವರು ಊರಿನ ಹೊರವಲಯದಲ್ಲಿರುವ ವಡ್ಡಮ್ಮ ದೇವಿ ದೇವಸ್ಥಾನದಲ್ಲಿರುವರು ಎಂದು ಗ್ರಾಮಸ್ಥರು ತಿಳಿಸಿದರು.

ವಡ್ಡಮ್ಮ ತಾತನ ಮೋದಲ ಭೇಟಿಗೆ ಹೋದಾಗ ಗುಡಿಯ ಮುಂದೆ ಏಕಾಂಗಿಯಾಗಿ ತಂಬೂರಿ ನುಡಿಸುತ್ತಾ ತತ್ವಪದಗಳನ್ನು ಹಾಡುತ್ತಾ ಕುಳಿತಿದ್ದರು. ಬಂದ ವಿಷಯ ತಿಳಿಸಿ ಅವರಿಂದ ಒಂದಿಷ್ಟು ಹಾಡುಗಳನ್ನು ಹಾಡಿಸಿಕೊಂಡು ಆಡಿಯೋ ರೇಕಾರ್ಡ್ ಮಾಡಿಕೊಂಡು ಬಂದೆ. ಅದರಲ್ಲಿ ತಂಬಾಕು ತಿನ್ನಬಾರದೆ ತಂಗ್ಯಮ್ಮ ತಂಬಾಕು ತಿನ್ನಬಾರದೆ, ತಂಬಾಕು ತಿಂದರೆ ಉಂಬಾಕ ಬಾರದೆ ಎನ್ನುವ ತತ್ವಪದವನ್ನು ಅದ್ಭುತವಾಗಿ ಹಾಡಿದ್ದರು. ನಂತರ ಎರಡನೇ ಬಾರಿಗೆ ಹೋದ ಸಂದರ್ಭದಲ್ಲಿ ನನ್ನ ಪಿಎಚ್.ಡಿ ಮಹಾಪ್ರಬಂಧವನ್ನು ತೆಗುದುಕೊಂಡು ಹೋಗಿ ಅವರಿಗೆ ತೋರಿಸಿದೆ ಮಹಾಪ್ರಬಂಧದಲ್ಲಿ ಅವರ ಕೆಲವು ವಿಷಯಗಳನ್ನು ದಾಖಲಿಸಿದ್ದನ್ನು ನೋಡಿ ಖುಷಿಯನ್ನು ವ್ಯಕ್ತಪಡಿಸಿ ನಾನು ಸಾಕಷ್ಟು ತತ್ವಪದಗಳನ್ನು ಬರೆದಿದ್ದೆನೆ. ಎಲ್ಲಿಯೂ ಪ್ರಕಟವಾಗಿಲ್ಲ ಎಂದು ಹೇಳಿ ಅವರೇ ಕೈಯ್ಯಾರೆ ಬರೆದ ತತ್ವಪದಗಳ ಹಸ್ತಪ್ರತಿಯನ್ನು ನನಗೆ ನೀಡಿದರು. ನಾನು ಈ ತತ್ವಪದಗಳನ್ನು ಸಂಪಾದಿಸಿ ಪುಸ್ತಕ ರೂಪದಲ್ಲಿ ತರುವೆ ಎಂದು ಕೇಳಿಕೊಂಡೆ ಆಗಲಿ ಎಂದು ಹಸ್ತಪ್ರತಿಯನ್ನು ನನ್ನ ಕೈಗೆ ನೀಡಿ ಆಶೀರ್ವದಿಸಿದರು. ಇದರ ಫಲವಾಗಿಯೇ ಈ ಕೃತಿ ಓದುಗರಿಗೆ ಧಕ್ಕಿದೆ. ಇದು ನನ್ನ ಮೊದಲ ಸಂಪಾದನಾ ಕೃತಿಯಾಗಿರುವುದರಿಂದ ಇದರಲ್ಲಿ ಉಳಿದ ಇನ್ನೂ ಅನೇಕ ತತ್ವಪದಗಳನ್ನು ಮುಂದಿನ ಹಂತದಲ್ಲಿ ಮತ್ತೆ ಪುಸ್ತಕ ರೂಪದಲ್ಲಿ ಪ್ರಕಟಿಸಲು ತೀರ್ಮಾನಿಸಿದ್ದೇನೆ.

ಈ ಕೃತಿಗೆ ಮುನ್ನುಡಿಯನ್ನು ಬರೆಯಲು ಡಾ. ಸಿ.ಬಿ. ಚಿಲ್ಕರಾಗಿಯವರನ್ನು ಕೇಳಿಕೊಂಡಾಗ ಅಕ್ಕರೆಯಿಂದ ಒಪ್ಪಿ ಸೋಗಸಾಗಿ, ಅರ್ಥಪೂರ್ಣವಾದ ವಿಚಾರಗಳೊಂದಿಗೆ ಮುನ್ನುಡಿಯನ್ನು ಬರೆದು ಶುಭ ಆರೈಸಿದ ಪ್ರೀತಿಯ ಗುರುಗಳಿಗೆ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಸಂಪಾದನಾ ಕೃತಿ ಹೊರತರಲು ದಾರಿ ತೋರಿದ ನನ್ನ ಸ್ನಾತಕೊತ್ತರ ವಿದ್ಯಾಗುರುಗಳು ಆದ ಡಾ. ಜಾಜಿ ದೇವೇಂದ್ರಪ್ಪ ಅವರಿಗೆ ವಡ್ಡಮ್ಮ ತಾತನ ತತ್ವಪದಗಳನ್ನು ಸಂಪಾದಿಸಿರುವ ಪುಸ್ತಕ ರೂಪದಲ್ಲಿ ಹೊರತರಲು ಇಚ್ಚಿಸಿದ್ದೇನೆ ಎಂದು ತಿಳಿಸಿದಾಗ ಹರ್ಷ ವ್ಯಕ್ತಪಡಿಸಿದರು. ಇದಕ್ಕೆ ನಿವೇ ಬೆನ್ನುಡಿಯನ್ನು ಬರೆಯಬೇಕು ಎಂದು ಗುರುಗಳಲ್ಲಿ ಮನವಿ ಮಾಡಿಕೊಂಡಾಗ ಒಪ್ಪಿ ತುಂಬಾ ಪ್ರೀತಿಯಂದ ಅರ್ಥಪೂರ್ಣವಾದ ಬೇನ್ನುಡಿ ಬರೆದ ಪ್ರೀತಿಯ ಗುರುಗಳಿಗೆ ಅನಂತ ಧನ್ಯವಾದಗಳನ್ನು ಅರ್ಪಿಸುವೆ.”