ಒಳ್ಳೆಯವರಿಗೇ ಕಷ್ಟ ಬರುತ್ತೆ ಏಕೆ?

ಒಳ್ಳೆಯವರು ಎಂದು ಗುರುತಿಸಿಕೊಂಡವರು ಸಂಕಷ್ಟಗಳಿಗೆ ಸಿಲುಕಿದಾಗ ಆ ನೋವನ್ನು ಸಹಿಸಿಕೊಳ್ಳುವ ಶಕ್ತಿಯಿಲ್ಲದ ಅವರ ಹಿತೈಷಿಗಳು ಹತಾಶರಾಗಿ ಒಳ್ಳೆಯವರಿಗೆ ಕಾಲವಿಲ್ಲ, ಒಳ್ಳೆಯವರಿಗೆ ಕಷ್ಟ ಜಾಸ್ತಿ ಬರುತ್ತೆ ಎಂದು ದೇವರ ಮೇಲೆ ಹಿಡಿ ಶಾಪ ಹಾಕುತ್ತಾರೆ. ಹಾಗಾದರೆ ಇಲ್ಲಿ ಒಳ್ಳೆಯವರು ಎಂದರೆ ಯಾರು? ನಮಗೆ ಬೇಕಾದವರನ್ನು ಒಳ್ಳೆಯವರು ಎನ್ನಬೇಕೆ? ಸಮಾಜಕ್ಕೆ ಬೇಕಾದವರನ್ನು ಒಳ್ಳೆಯವರು ಎನ್ನಬೇಕೆ? ಇಲ್ಲ ಏನು ಮಾಡದೆ ತಾನಾಯ್ತು ತನ್ನ ಕೆಲಸವಾಯಿತು, ಯಾರ ತಂಟೆಗೂ ಹೋಗದೆ ಸುಮ್ಮನಿರುವವರು ಒಳ್ಳೆಯವರೇ? ಎಂಬ ಜಿಜ್ಞಾಸೆಯ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಒಳ್ಳೆಯವರಿಗೆ ಕಷ್ಟ ಬರುತ್ತೆ ಏಕೆ? ಎಂಬುದಕ್ಕೆ ರಾಮಕೃಷ್ಣ ಪರಮಹಂಸರ ಮಾತು ಉಲ್ಲೇಖಾರ್ಹವಾಗಿದೆ.
ಅವರು ಕ್ಯಾನ್ಸರ್ ಕಾಯಿಲೆಗೆ ತುತ್ತಾದಾಗ 'ನಿಮ್ಮ ದೇಹಕ್ಕೆ ಇಂತಹ ಕಷ್ಟ ಏಕೆ ಬರಬೇಕಿತ್ತು ಗುರುಗಳೇ?' ಎಂಬ ಶಿಷ್ಯ ವರ್ಗದ ಪ್ರಶ್ನೆಗೆ ರಾಮಕೃಷ್ಣ ಪರಮಹಂಸರು ಹೇಳುತ್ತಾರೆ 'ನಾನೇ ಬೇರೆ, ನನ್ನ ದೇಹವೇ ಬೇರೆ ನನ್ನ ದೇಹದಲ್ಲಿ ನಡೆಯುವ ಘಟನೆಗಳಿಗೂ ಹಾಗೂ ನಾನು ಮಾಡುವ ಉತ್ತಮ ಕಾರ್ಯಗಳಿಗೂ ಸಂಬಂಧವೇ ಇಲ್ಲ. ಅವುಗಳನ್ನು ನನಗೆ ಹೋಲಿಸಬೇಡಿ' ಎನ್ನುತ್ತಾರೆ. ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಧರ್ಮರಾಜನಿಗೆ ಪಟ್ಟಾಭಿಷೇಕ ಮಾಡಿ ಕೃಷ್ಣ ಎಲ್ಲರಿಗೂ ನಮಸ್ಕರಿಸಿ ಅಪ್ಪಣೆ ಪಡೆದು ದ್ವಾರಕೆಗೆ ಹೊರಡುವಾಗ ಕುಂತಿಗೆ ನಮಸ್ಕರಿಸುವ ಸಮಯದಲ್ಲಿ ಕುಂತಿಯು 'ವಿಪದಹ ಸಂತೂ ನಶ್ಯಶ್ವತ ಯತ್ರ ತಂತ್ರ ಜಗದ್ಗುರು' ಭಗವಂತ ನಾವು ಎಲ್ಲಿರುತ್ತೇವೆಯೋ ಅಲ್ಲಲ್ಲಿ ಒಂದು ಕಷ್ಟ ಕೊಡುತ್ತಿರು ಏಕೆಂದರೆ ಆ ಮೂಲಕ ನಿನ್ನನ್ನು ಸ್ಮರಣೆ ಮಾಡುತ್ತೇವೆ. ನಿನ್ನ ನೆನಪಿಗಾಗಿ ನನಗೆ ಕಷ್ಟ ಬೇಕು ಎನ್ನುವ ಈ ಎರಡು ಮಾತುಗಳಿಂದ ನಾವೆಲ್ಲ ಇರುವಷ್ಟು ದಿನಗಳ ಕಾಲ ವಿಷಯಾಸಕ್ತ ಈ ಪ್ರಪಂಚದಲ್ಲಿ ವಿರಕ್ತ ಭಾವದಿಂದ ಅಂಟಿಕೊಂಡು, ಇದ್ದೂ ಇಲ್ಲದಂತಿರಬೇಕು. ಮೂರು ಬಿಟ್ಟವರ ಮುಂದೆ ಮುಸುಗುಡದೆ, ಧೃತಿಗೆಡದೆ ದೃಢವಾಗಿ ಮುಂದಡಿಯನ್ನಿಡಬೇಕು. ಮನುಷ್ಯರಿಗಲ್ಲದೆ ಮರಕ್ಕೆ ಕಷ್ಟ ಬರಲು ಸಾಧ್ಯವೇ? ಕಷ್ಟದ ಮೋಡ ಕರಗಿದಾಗಲ್ಲವೇ ಸುಖದ ಮಳೆ ಸುರಿಸಲು ಸಾಧ್ಯ! ಹಾಗಾಗಿ ಎಷ್ಟೇ ಕಷ್ಟಗಳು ಬಂದೆರಗಿದರೂ ಎದೆಗುಂದದೆ ಆದದೆಲ್ಲ ಒಳ್ಳೆಯದಾಗುತ್ತದೆಂಬ ಸದ್ಭಾವದಿಂದ ಒಳ್ಳೆಯದನ್ನು ಮಾಡಿದ್ದೇನೆಂಬ ಅಹಂಭಾವ - ತೊರೆದು ಸದಾ ಒಳ್ಳೆಯದನ್ನು ಮಾಡುತ್ತಿರಬೇಕು.
-ರವಿ ಕಂಗಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ