ಓಶೋ ಹೇಳಿದ ಕಥೆಗಳು

ಓಶೋ ಹೇಳಿದ ಕಥೆಗಳು

ಸಾವು

ಸೂಫಿ ಗುರುವಿನ ಬಳಿ ಶಿಷ್ಯನೊಬ್ಬ ಓಡೋಡಿ ಬಂದು,

'ಗುರುಗಳೇ, ತುರ್ತಾಗಿ ನಿಮ್ಮ ಕುದುರೆ ಬೇಕು, ಸ್ವಲ್ಪ ಬೇಗ ಕೊಡಿ, ನನ್ನ ಬಳಿ ಹೆಚ್ಚು ಸಮಯವೇನೂ ಇಲ್ಲ'.

'ಏನಾಯಿತು? ಯಾಕೆ ಅಷ್ಟೊಂದು ಅವಸರದಲ್ಲಿದ್ದೀಯಾ?' ಕೇಳಿದರು ಗುರು.

'ನಾನು ತರಕಾರಿಗೆಂದು ಮಾರುಕಟ್ಟೆಗೆ ಹೋಗಿದ್ದಾಗ ಯಾರೋ ಅಚಾನಕ್ಕಾಗಿ ಹೆಗಲ ಮೇಲೆ ಕೈ ಹಾಕಿದರು. ನೋಡಿದರೆ ಕಪ್ಪು ಆಕೃತಿ. ನಾನು ಯಾರೆಂದು ಕೇಳಿದೆ. ಅದಕ್ಕೆ ಅದು 'ನಾನು ನಿನ್ನ ಸಾವು, ಸಂಜೆ ತಯಾರಾಗಿರು, ನಾನು ಸಿಗುತ್ತೇನೆ' ಎಂದು ಹೇಳಿ ಅದೃಶ್ಯವಾಯಿತು.

ಗುರುಗಳು ಜೋರಾಗಿ ನಕ್ಕು ಕುದುರೆಯನ್ನು ಒಯ್ಯುವಂತೆ ತಿಳಿಸಿದರು. ಶಿಷ್ಯ ಕುದುರೆಯೊಂದಿಗೆ ನಗರದಿಂದ ಹೊರಕ್ಕೆ ತೆರಳಿದ. ಸಾವು ತನ್ನನ್ನು ತಲುಪದ ಹಾಗೆ ಬಲುದೂರದ ಮರುಭೂಮಿಗೆ ತೆರಳುವುದೆಂದು ನಿಶ್ಚಯಿಸಿಕೊಂಡಿದ್ದ.

ಇನ್ನೊಂದೆಡೆ ಗುರು ಮಾರುಕಟ್ಟೆಗೆ ತೆರಳಿ ಸಾವನ್ನು ಸಂದರ್ಶಿಸಿದರು.

'ಅದೇಕೆ ನನ್ನ ಶಿಷ್ಯನಿಗೆ ತೊಂದರೆ ಕೊಟ್ಟೆ? ನಿನಗೇನಾದರೂ ಸಂದೇಶ ಹೇಳುವುದಿದ್ದರೆ ನನ್ನ ಬಳಿ ಹೇಳಬಹುದಿತ್ತು..'

ಸಾವು ಹೇಳಿತು, 'ನಾನು ಉದ್ದೇಶಪೂರ್ವಕವಾಗಿ ಅವನ ಹೆಗಲ ಮೇಲೆ ಕೈ ಇಡಲಿಲ್ಲ. ನಾನೂ ಅಲ್ಲಿಲ್ಲಿ ಸುತ್ತುತ್ತಿದ್ದೆ. ಅಚಾನಕ್ಕಾಗಿ ಪಕ್ಕದಲ್ಲಿ ನಿಂತಿದ್ದ ಅವನ ಹೆಗಲ ಮೇಲೆ ನನ್ನ ಕೈ ಹೋಯಿತು. ಅವನಿಗೆ ನನ್ನನ್ನು ನೋಡಿ ಆಶ್ಚರ್ಯವಾದಂತೆ ನನಗೂ ಅವನನ್ನು ಕಂಡಾಗ ಅಚ್ಚರಿಯಾಯಿತು'

'ನಿನಗೇಕೆ ಆಶ್ಚರ್ಯ?'

'ಅವನ ಸಾವಿನ ಸ್ಥಳ ದೂರದ ಮರುಭೂಮಿಯಲ್ಲಿ ಎಂದು ನಿಶ್ಚಯವಾಗಿದೆ, ಹೀಗಿರುವಾಗ ಅವನು ಮಾರುಕಟ್ಟೆಯಲ್ಲಿ ಯಾಕಿದ್ದಾನೆ ಎಂದು ನನಗೆ ಅಚ್ಚರಿಯಾಯಿತು'.

ಗುರುಗಳು ಇನ್ನೊಮ್ಮೆ ಜೋರಾಗಿ ನಕ್ಕರು.

***

ದುರದೃಷ್ಟಕರ

ರಾಮಕೃಷ್ಣರನ್ನು ಭೇಟಿ ಮಾಡಿದ ಒಬ್ಬ ವ್ಯಕ್ತಿ, 'ನೀವು ಪ್ರಚಂಡ ಗುರು ಆಗಬೇಕಿತ್ತು. ನಿಮ್ಮಲ್ಲಿ ಪ್ರಚಂಡ ಎನ್ನುವಂತಹ ಯಾವ ಸಿದ್ಧಿಶಕ್ತಿಯೂ ಇಲ್ಲ. ನಿಮಗಿಂತ ನನ್ನ ಗುರುಗಳೇ ಆಗಬಹುದು. ಅವರು ನೀರಿನ ಮೇಲೆ ನಡೆಯುವ ಶಕ್ತಿಯುಳ್ಳವರು. ನದಿಯನ್ನೂ ಅವರು ನಡೆದೇ ಸಾಗುತ್ತಾರೆ'.

“ಓಹೋ, ನಿನ್ನ ಗುರುಗಳು ಈ ಕಲೆಯನ್ನು ಸಿದ್ಧಿಸಲು ಎಷ್ಟು ಸಮಯ ತೆಗೆದುಕೊಂಡರು?

ಕನಿಷ್ಟ ಇಪ್ಪತ್ತು ವರ್ಷಗಳು..'

'ಛೇ, ಇದು ಅನ್ಯಾಯ. ಕೇವಲ ಎರಡೇ ನಿಮಿಷದಲ್ಲಿ ಇಪ್ಪತ್ತು ಪೈಸೆಯೊಳಗೆ ದೋಣಿಯಿಂದಾಗುವ ಕೆಲಸಕ್ಕೆ ಇಪ್ಪತ್ತು ವರ್ಷ ಕಳೆದುಕೊಂಡಿದ್ದು ದುರದೃಷ್ಟಕರ!'

***

ನಟನೆ

ಸಿನಿಮಾ ನಟನೊಬ್ಬನ ಪತ್ನಿ ದುರ್ಮರಣಕ್ಕೀಡಾಗಿದ್ದಳು. ಅವನು ಬೊಬ್ಬೆ ಹೊಡೆದು ಅಳುತ್ತಿದ್ದ. ಗೋಡೆಗೆ ತಲೆ ಚಚ್ಚಿಕೊಳ್ಳುತ್ತಿದ್ದ ನೆಲದ ಮೇಲೆ ಅಪ್ಪಳಿಸುತ್ತಿದ್ದ. ಇನ್ನೂ ಏನೇನೂ ವಿಧಾನದಲ್ಲಿ ಅಳುತ್ತಿದ್ದ ತುಸು ಶಾಂತವಾಗುತ್ತಲೇ ಅವನ ಮಿತ್ರನೊಬ್ಬ ಅವನ ಭುಜ ಹಿಡಿದು,

'ನೀನು ಪತ್ನಿಯನ್ನು ಇಷ್ಟು ಪ್ರೀತಿಸುತ್ತಿ ಎಂದು ಗೊತ್ತೇ ಇರಲಿಲ್ಲ' ಎಂದು ಸಮಾಧಾನಿಸಿದ.

ಅದಕ್ಕೆ ನಟನೆಂದ, 'ಅಯ್ಯೋ, ಇದೇನೂ ಅಲ್ಲ. ನನ್ನ ಮೊದಲ ಪತ್ನಿ ತೀರಿಕೊಂಡಾಗ ನೀನು ನನ್ನನ್ನು ನೋಡಬೇಕಿತ್ತು!'

***

ಅಂತ್ಯಸಂಸ್ಕಾರ

ಸಾಕ್ರಟಿಸ್‌ ಸಾಯುವವನಿದ್ದ. ಅವನ ಶಿಷ್ಯರೆಲ್ಲರೂ ಅಂತ್ಯಸಂಸ್ಕಾರ ವಿಧಿವಿಧಾನದ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಎಲ್ಲರಲ್ಲೂ ಇದೇ ಚರ್ಚೆ. ಎಲ್ಲರನ್ನೂ ನೋಡುತ್ತ ಸಾಕ್ರಟಿಸ್ ಹೇಳಿದ, 'ನನ್ನ ಶತ್ರುಗಳು ನನಗೆ ವಿಷವಿಕ್ಕಿ ಕೊಲ್ಲಲು ನೋಡುತ್ತಿದ್ದರೆ, ನೀವು ನನ್ನ ಅಂತ್ಯಸಂಸ್ಕಾರದ ಬಗ್ಗೆ ತಲೆಕೆಡಿಸಿಕೊಂಡಿದ್ದೀರಿ. ಈಗಲೂ ನನಗೆ ನನ್ನ ಮಿತ್ರರು ಯಾರು, ಶತ್ರುಗಳು ಯಾರು ಎಂಬುದೇ ತಿಳಿಯುತ್ತಿಲ್ಲ. ಎಲ್ಲರೂ ನನ್ನ ಸಾವಿನ ಬಗ್ಗೆಯೇ ಹೆಚ್ಚು ಆಸಕ್ತಿಯಿಂದಿದ್ದಾರೆಯೇ ವಿನಃ ನನ್ನ ಬದುಕಿನ ಬಗ್ಗೆ ಅಲ್ಲ!'

***

ಮೂರು ಹಡಗುಗಳು

ಒಬ್ಬ ರಾಜನಿದ್ದ. ಅವನಿಗೆ ತನ್ನ ಸೀಮೆಯನ್ನು ನೋಡಬೇಕೆನ್ನಿಸಿತು. ಮಂತ್ರಿಯ ಜೊತೆಗೆ ಬೆಟ್ಟದ ತುದಿಗೆ ತೆರಳಿ ಕಡಲಿನತ್ತ ನೋಡಿದ. ಹಲವಾರು ಹಡಗುಗಳು ಸಮುದ್ರದಲ್ಲಿ ಹೋಗುತ್ತಿದ್ದವು. ರಾಜ ಹೇಳಿದ 'ಎಷ್ಟೊಂದು ಹಡಗುಗಳು ಬರುತ್ತಿವೆ, ಹೋಗುತ್ತಿವೆ..'. ಮಂತ್ರಿ ಹೇಳಿದ, 'ರಾಜ, ನಿಜವಾಗಿ ಹೇಳಬೇಕೆಂದರೆ ಕೇವಲ ಮೂರು ಹಡಗುಗಳು ಬರುತ್ತಿವೆ ಮತ್ತು ಮೂರು ಹೋಗುತ್ತಿವೆ'.

ರಾಜನಿಗೆ ಆಶ್ಚರ್ಯವಾಯಿತು. ಕೇಳಿದ, 'ಎಷ್ಟೊಂದು ಹಡಗುಗಳು ಹೋಗುತ್ತ, ಬರುತ್ತಲಿವೆ, ನಿನಗೆ ಕಾಣಿಸುತ್ತಿಲ್ಲವೇನು?'. ಮಂತ್ರಿ ಸಮಾಧಾನದಿಂದ ನುಡಿದ, 'ರಾಜಾ, ನನಗೆ ಕಾಣಿಸುತ್ತಿರುವುದು ಮೂರೇ ಹಡಗು, ಒಂದು ಹಣದ್ದು, ಇನ್ನೊಂದು ಯಶಸ್ಸಿನದು, ಮಗದೊಂದು ಕಾಮದ್ದು, ಎಲ್ಲರೂ ಈ ಮೂರು ಹಡಗುಗಳ ಮೇಲೆಯೇ ಎಲ್ಲರೂ ಯಾತ್ರೆ ಮಾಡುತ್ತಿರುವರು'.

***

ಒಂಟಿತನ

ಒಬ್ಬ ಸಾಧು ವನದಲ್ಲಿ ಒಂದು ಮರದ ಕೆಳಗೆ ಕುಳಿತಿದ್ದರು. ಅವರ ಕೆಲ ಮಿತ್ರರೂ ಕೂಡ ವನ ವಿಹಾರಕ್ಕಾಗಿ ಬಂದಿದ್ದರು. ಇವರು ಒಬ್ಬರೇ ಕುಳಿತಿರುವುದನ್ನು ಕಂಡು ಆ ಮಿತ್ರರು ಹತ್ತಿರ ಬಂದು ಹೇಳಿದರು, ಮಿತ್ರ, ನೀವೊಬ್ಬರೇ ಕೂತಿರುವುದನ್ನು ಕಂಡು ನಿಮ್ಮೊಂದಿಗೆ ಸೇರೋಣವೆಂದು ಬಂದೆವು. ಆ ವ್ಯಕ್ತಿ ನಸುನಕ್ಕು ನುಡಿದ, ಮಿತ್ರರೇ, ಇಷ್ಟು ಹೊತ್ತು ನಾನು ಪರಮಾತ್ಮನೊಂದಿಗಿದ್ದೆ ಆದರೆ ಈಗ ನೀವು ಬಂದು ನನ್ನನ್ನು ಒಂಟಿಯಾಗಿಸಿದಿರಿ.

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ