ಓ ಜನನಿ ಜಗವಂದ್ಯೆ

ಓ ಜನನಿ ಜಗವಂದ್ಯೆ

ಕವನ

ಮೂಡಣದಿ ಹೊಂಬಣ್ಣ

ಕಿರಣವದು ಉದಯಿಸಿತು

ಬಾ ತಾಯೆ ಬಾರೆ ಓ ಜನನಿ ಜಗವಂದ್ಯೆ

ಭವದೊಳಗೆ ರೋಗವದು

ಮನೆಮಾಡಿಕೊಂಡಿಹುದು

ದೀನ ನಾ ಬೇಡುವೆನು ಓ ಜನನಿ ಜಗವಂದ್ಯೆ

 

ಜ್ಞಾನವನು ನೀಡುತಲಿ

ಭವಕ್ಲೇಶ ಕಳೆಯುತಲಿ

ತಾಮಸವ ಕಳೆಯು ನೀ ಓ ಜನನಿ ಜಗವಂದ್ಯೆ

ಅರ್ಥ ಕಳೆದಿದೆ ಒಡಲು

ಪ್ರೀತಿ ತಪ್ಪಿದ ಬದುಕ

ಶೋಷಣೆಯ ತೊಡೆಯು ಓ ಜನನಿ ಜಗವಂದ್ಯೆ

 

ಧರ್ಮ ಕರ್ಮದ ನೆಲದಿ

ಗುಣದ ಸಂತತಿ ಅರಳಿ

ನ್ಯಾಯ ನೀತಿಯು ಬರಲಿ ಓ ಜನನಿ ಜಗವಂದ್ಯೆ

ನಿತ್ಯ ಜೀವನದೊಳಗೆ

ತನುವು ಗೆಲುವಲಿ ಸಾಗೆ 

ಹೃದಯವಂತರ ಹರಸು ಓ ಜನನಿ ಜಗವಂದ್ಯೆ

 

ಹುಸಿಯ ದೂಡುತ ಬಾರೆ

ಅಸಹ್ಯ ಅಳಿಸುತ ಸಾಗೆ

ಆತ್ಮ ಶುದ್ಧಿಯ ಮಾಡು ಓ ಜನನಿ ಜಗವಂದ್ಯೆ

ಸಾಂತ್ವನವ ಹೇಳುತಲಿ

ನೋವುಗಳ ಕಳೆಯುತಲೆ

ಬುದ್ಧಿಯನು ನೀಡು ಬಾ ಓ ಜನನಿ ಜಗವಂದ್ಯೆ

 

ಆಧುನಿಕ ಆಶಯಕೆ

ಪುಷ್ಟಿ ಕೊಡುತಲೆ ಸಾಗೆ

ಅನ್ಯಾಯ ತುಳಿಯು ನೀ ಓ ಜನನಿ ಜಗವಂದ್ಯೆ

ಹಂಗನೆಲ್ಲವ ತೊರೆದು

ಸತ್ಯದಲಿ ನಡೆವಂತೆ

ಅನವರತ ಪೇಳುತಿರು ಓ ಜನನಿ ಜಗವಂದ್ಯೆ

 

ಶಾಸ್ತ್ರ ಕಡಲೊಳು ಸಾಗಿ

ನಿಸ್ವಾರ್ಥ ಮನದೊಳಗೆ

ಇರುವಂತೆ ನೋಡು ಬಾ ಓ ಜನನಿ ಜಗವಂದ್ಯೆ

ಮಾಯೆ ಕಳೆಯುತ ಹೋಗು

ಆಸೆ ಕೊಲ್ಲುತ ಸಾಗು

ನಿಜವರ್ಥ ನೀಡು ಬಾ ಓ ಜನನಿ ಜಗವಂದ್ಯೆ

-ಹಾ ಮ ಸತೀಶ, ಬೆಂಗಳೂರು

 

ಚಿತ್ರ್