ಓ ಸೋಲೇ, ಥ್ಯಾಂಕ್ಯೂ...! (ಭಾಗ 1)

ಬದುಕಿರುವ ಉಸಿರಿನ ಕೊನೆತನಕ ಸದಾಕಾಲ ಗೆಲುವಿನೊಂದಿಗೆ ಬದುಕಬೇಕು,ಗೆಲುವೇ ನನ್ನ ಸಂಗಾತಿಯಾಗಬೇಕು, ಗೆಲುವನ್ನು ತನ್ನದಾಗಿಸಿಕೊಳ್ಳಲು ಸೆಕೆಂಡ್ ಗಿಂತ ಹೆಚ್ಚು ವೇಗವಾಗಿ ಧಾವಿಸುತ್ತಿರುವ ಕೋಟ್ಯಾಂತರ ಜನರು ಈ ಜಗತ್ತಿನಲ್ಲಿ,ಅದರೊಳಗೆ ನನ್ನನ್ನೂ ಸೇರಿಸಿ. ಸೋತಾಗ ಸಾಯುವವರೇ ಅತೀ ಹೆಚ್ಚಾಗಿ ಕಂಡುಬರುವ ಈ ಸಮಾಜದಲ್ಲಿ ಸೋಲನ್ನು ಸಮಾಧಾನದಿಂದ ಸ್ವೀಕರಿಸಿ ಎಲ್ಲವನ್ನೂ ತಾಳ್ಮೆಯಿಂದ ಸರಿ ಮಾಡಿಕೊಂಡರಾಯಿತಲ್ಲವೇ.?
ಸರಿ ಮಾಡಿಕೊಳ್ಳುವವರೆಗೆ ಈ ಸಮಾಜ/ಜನರು,ಸಂಬಂಧಿಕರು, ಉಳಿಯಲು ಬಿಡುತ್ತದೆಯೋ, ಬಿಡುತ್ತಾರೆಯೋ, ಇಲ್ಲ ಮಾನಸಿಕವಾಗಿ ಹಿಂಸಿಸಿ ಬಿಡುತ್ತಾರೆ. ಇವುಗಳನ್ನೆಲ್ಲ ಸಹಿಸಿಕೊಂಡು,ಎದುರಿಸಿಕೊಂಡು ಹೋಗಲಾದಿತೇ, ಅಂತಹ ಗಟ್ಟಿ ಮನಸ್ಸುಳ್ಳವರಿಂದ ಮಾತ್ರ ಸಾಧ್ಯ. ಸೋತಾಗ ಹೇಗೆ, ಎಲ್ಲಿ ಸೋತಿದ್ದು ಎಂಬುದನ್ನು ಅರಿತು ಸೋಲನ್ನು ಸಮಾಧಾನವಾಗಿ ಸ್ವೀಕರಿಸಿ ಅದನ್ನು ಮತ್ತೆ ಸರಿ ಮಾಡಿಕೊಂಡು ಮುನ್ನಡೆಯುವುದು ಅಷ್ಟೇ ನಮ್ಮ ಯೋಚನೆಯಲ್ಲಿರಬೇಕು.
ಯಾರೋ ಏನೋ ಹೇಳುತ್ತಾರೆಂದು ಜೀವ ಕಳೆದುಕೊಳ್ಳಲಾದಿತೇ, ಇಲ್ಲ ಬದುಕಲೇ ಬೇಕು. ಗೆಲುವಿನ ಸ್ಟಾರ್ ಪಟ್ಟ ಕಟ್ಟಿ ಕೊಳ್ಳಬೇಕೆಂದುಕೊಂಡು ಬಂದ ಕೋಟ್ಯಾಂತರ ಕನಸುಗಳನ್ನು ಅಪ್ಪಿಕೊಂಡಿದ್ದು ಮಾತ್ರ ಸೋಲು, ಯಾರೂ ಸಹ ಇಷ್ಟಪಡದ ಈ ಸೋಲು ಬಹುತೇಕ ಎಲ್ಲರ ಜೊತೆ ಸುಲಭವಾಗಿ ಬೆರೆತು ಅವರನ್ನೂ ಎಂದಿಗೂ ಬಿಡದೇ ಜೀವನ ಸಂಗಾತಿಯಾಗಿಬಿಡುತ್ತದೆ. ಇರಲಿ ಬಿಡಿ, ತಲೆ ಕೆಡಿಸಿಕೊಳ್ಳದಿರಿ ಎಷ್ಟು ದಿನ ಇರುತ್ತೆ ಅಲ್ಲವೇ,ನೋಡಿಯೇ ಬಿಡೋಣ. ಈ ಸೋಲು ಜೀವನದ ಪ್ರತೀ ಮಜಲುಗಳ ಏರಿಳಿತಗಳನ್ನು ಇಂಚು-ಇಂಚಾಗಿ ತೋರಿಸಿಕೊಡುತ್ತದೆ. ಆದರೆ ಈ ಸೋಲಿಗೆ ಹೆದರಿ ಓಡುವವರೇ ಹೆಚ್ಚು. ನಾನೂ ಸಹ ಸೋಲೆಂದರೆ ಭಯಪಡುತ್ತಿದ್ದವನು. ಈಗೀಗ ಸೋಲಿನಲ್ಲೇ ಅದೇನೋ ಹೇಳಲಾಗದ ಸು:ಖ ಅನುಭವಿಸುತ್ತಿದ್ದೇನೆ.
ಸೋತಾಗ ಹೆದರುವವರುಂಟು,ಭಯಪಡುವವರುಂಟು, ಮರುಗುವವರುಂಟು, ಅಳುವವರುಂಟು, ಸಂಕಟ, ಯಾತನೆ ಪಡುವವರುಂಟು, ಕೊನೆಗೆ ಸಾಯುವವರೂ ಉಂಟು, ಆದರೆ ಸೋತಾಗ ನನ್ನಷ್ಟು ಖುಷಿಪಡುವವರ್ಯಾರುಂಟು?
ಓ ಸೋಲೇ ನನ್ನ ಜೊತೆಯಾಗಿದ್ದಕ್ಕೆ ಥ್ಯಾಂಕ್ಯೂ,
ಓ ಸೋಲೇ ಆಯ್ ಹಗ್ ಯೂ,
ಓ ಸೋಲೇ ನೀನು ನನ್ನ ಕ್ಲೋಸ್ ಫ್ರೆಂಡ್,
ನನ್ನ ಬೆಸ್ಟ್ ಫ್ರೆಂಡ್,
ಅಲ್ಲಾ,ಅಲ್ಲಾ ಅದಕ್ಕಿಂತಲೂ ಹೆಚ್ಚಾಗಿ ,ಓ ಸೋಲೇ ನೀನೇ ನನ್ನ ಪ್ರಪಂಚ,ನೀನೇ ನನ್ನ ಪ್ರೀತಿ,
ನೀನಿರುವುದೇ ನನಗಾಗಿ,
ನೀನೇ ನನ್ನ ಪ್ರಪಂಚವಾಗಿ,
ನಿನ್ನ ಜೊತೆಗೇ ಬದುಕುವ ಆಸೆಯಾಗಿ ಯಾವಾಗಲೂ ನಿನ್ನ ಕೈ ಹಿಡಿದೇ ನಡೆಯುತ್ತಿದ್ದೇನೆ.
ನೀನೂ ಸಹ ಯಾಕಿಷ್ಟು ನನ್ನನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದೀಯಾ, ನಾನೆಂದರೆ ಅಷ್ಟು ಇಷ್ಟಾನಾ.
ನಾನು ಅದೆಷ್ಟೇ ಬಾರಿ ನಿನ್ನನ್ನು ದೂರ ಮಾಡಿದರೂ ಮತ್ತೆ ಬಂದು ಕಡಲಲೆಗಳು ದಡವ ಅಪ್ಪಿಕೊಳ್ಳುವಂತೆ ಆಗಾಗ ಬಂದು ಬಿಗಿದಪ್ಪುವೆ.
ನನ್ನನ್ನು ಹೆಚ್ಚಾಗಿ ಹಚ್ಚಿಕೊಂಡ ನಿನಗೆ ಬಿಟ್ಟು ಹೋಗಲು ಸಾಧ್ಯವೇ ಇಲ್ಲವೇನು, ಇಷ್ಟು ವಿಶಾಲ ಭುವಿಯಲ್ಲಿ ಕೋಟ್ಯಾಂತರ ಜನರಲ್ಲಿ ಪ್ರೀತಿಸಲು ನಾನೇ ಬೇಕಿತ್ತಾ?
ನನ್ನಲ್ಲಿ ಅಂತದ್ದೇನಿದೆ ಎಂದು ನನ್ನ ಕೈ ಹಿಡಿದು ಜೊತೆಯಾಗಿರುವೆ ಒಮ್ಮೆ ಹೇಳು.
ಯಾರಾದರೂ ಹೀಗೆ ಹೇಳಿದವರುಂಟೆ,
ಏನೂ ಸಹ ಇಲ್ಲದಿದ್ದಾಗ
ನನ್ನ ಜೊತೆಗೆ ನಿಂತ ಸೋಲನ್ನು ನಾನು ಆಗಾಗ ಪ್ರಶ್ನಿಸುತ್ತಲೇ ಇರುತ್ತೇನೆ.
ನಮ್ಮಿಬ್ಬರ ನಡುವಿನ ಮಾತುಕತೆ ಯಾವಾಗಲೂ ಅಂತ್ಯ ಕಾಣದ್ದು.
ಆಗ ಸೋಲು ಸಮಾಧಾನದಿಂದ ನನಗೆ ಉತ್ತರಿಸಲು ಶುರುಮಾಡಿತು.
ನಾನು ನಿನಗೆ ಅಷ್ಟೊಂದು ಭಾರವಾದನಾ, ನನ್ನ ಜೊತೆಗಿರಲು ನಿನಗೆ ಇಷ್ಟವಿಲ್ಲವಾ,ನಾನು ಅಷ್ಟು ನತದೃಷ್ಟಳಾ/ನಾ, ಯಾರೂ ಸಹ ನನ್ನನ್ನು ಇಷ್ಟಪಡುವುದಿಲ್ಲ. ಯಾಕೆ ನಾನು ಏನು ತಪ್ಪು ಮಾಡಿದ್ದೇನೆ, ಯಾರ ಜೊತೆಯೂ ನಾನು ಇರಬಾರದೇ, ಯಾರ ಜೊತೆಯೂ,ಗೆಳೆತನ,ಪ್ರೀತಿಯಿಂದ ಇರಬಾರದೇ, ಎಲ್ಲರೂ ಏಕೆ ನನ್ನನ್ನು ದ್ವೇಷಿಸುವರು ಹೇಳಿಬಿಡು ಒಮ್ಮೆ.
ನೀನು ಸಹ ಎಲ್ಲರಂತೆ ನನ್ನನ್ನು ದೂರ ಮಾಡುವೆಯಾ?
ನಾನು ನಿನಗೆ ನಿನ್ನ ಇರುವಿಕೆಯ ಗುರುತು ತೋರಿಸಿಕೊಟ್ಟೆ,
ಈ ಸಮಾಜದಲ್ಲಿ ನಿನ್ನವರು ಯಾರು,
ನಿನ್ನನ್ನು ಯಾರು ಹೇಗೆ ನೋಡುತ್ತಾರೆ,
ನಿನ್ನ ಜೊತೆ ಗೆಲುವಿದ್ದಾಗ ಎಲ್ಲರು ನಿನ್ನನ್ನೇ ಬಯಸುತ್ತಿದ್ದರಲ್ಲವೇ,
ಎಲ್ಲರೂ ನಿನ್ನ ಆಗಮನಕ್ಕಾಗಿ ಕಾಯುತ್ತಿದ್ದರಲ್ಲವೇ,
ಎಲ್ಲರೂ ನಿನ್ನ ಪ್ರೀತಿಯಿಂದ ಮಾತನಾಡಿಸುತ್ತಿದ್ದರಲ್ಲವೇ,
ಎಲ್ಲರೂ ನಿನ್ನ ಬಗ್ಗೆ ಹೊಗಳುವುದೇನು ಅದನ್ನು ನನ್ನಿಂದ ಹೇಳಲು ಸಾಧ್ಯವಿಲ್ಲ ನೀನೇ ನೋಡಿದ್ದಿಯಲ್ಲವೇ?
ಈಗ ನಾನು ಬಂದಿದ್ದೇನೆ ನಿನ್ನ ಬದುಕಲ್ಲಿ ಮೊದಲಿನಂತೆ ನಿನ್ನವರ್ಯಾರೂ ಈಗ ನಿನ್ನ ನೆನೆಯುವುದೂ ಇಲ್ಲ,
ಯಾವ ಜನರು ನಿನ್ನನ್ನು ಹೊಗಳುತ್ತಿದ್ದರೋ ಅದೇ ಜನರು ನಿನ್ನ ಬಗ್ಗೆ ಅದೆಷ್ಟು ಕೇವಲವಾಗಿ ,ಕೀಳಾಗಿ ಮಾತಾಡಿದ್ದು ನಿನ್ನ ಕಿವಿಯಾರೇ ಕೇಳಿದ್ದಿಯಲ್ಲವೇ?
ಈಗ ನಿನ್ನ ಪ್ರೀತಿಯನ್ನು ಬಯಸುವುದೂ ಇಲ್ಲ,ನಿನ್ನನ್ನು ಯಾರೂ ಕಾಯುವವರೂ ಇಲ್ಲ, ನೀನು ಇದ್ದೀಯಾ, ಸತ್ತಿದ್ದೀಯಾ ಅಂತಾ ಸಹ ಒಂದು ಮಾತು ಯಾರಾದರು ಕೇಳಿದರೆ ನನ್ನನ್ನು ನಾನೇ ಸಾಯಿಸಿಕೊಳ್ಳುವೆ. ಈಗ ಮಾತಾಡು ನಾನು ನಿನಗೆ ಜೀವನ ಪಾಠ,ಅನುಭವ ನೀಡಲು ನಿನ್ನ ಜೊತೆಗಿದ್ದೇನೆ, ಈ ಸಮಾಜದ ಮುಖವಾಡಗಳು ಹೇಗಿವೆ ಎಂದು ನಿನಗೆ ಅರಿವು ನೀಡಲು ನಿನ್ನ ಬಂಧ ಬೆಳಿಸಿರುವೆ. ಬಹುತೇಕ ,ಬಹುಪಾಲು ಜನರು ಸೋತಾಗ ಎಲ್ಲವೂ ಮುಗಿದು ಹೋಯಿತು, ಪ್ರಪಂಚವೇ ಮುಳುಗಿ ಹೋಯಿತು,ನನ್ನ ಜೀವನ ಇಲ್ಲಿಗೇ ಅಂತ್ಯವಾಯಿತು ಎಂದು ತಮ್ಮ ಜೀವವನ್ನೇ ತೆಗೆದುಕೊಳ್ಳುತ್ತಾರೆ.
(ಇನ್ನೂ ಇದೆ)
-ಶಾಂತಾರಾಮ ಹೊಸ್ಕೆರೆ, ಶಿರಸಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ