ಓ ಸೋಲೇ, ಥ್ಯಾಂಕ್ಯೂ...! (ಭಾಗ 2)

ಓ ಸೋಲೇ, ಥ್ಯಾಂಕ್ಯೂ...! (ಭಾಗ 2)

ಆತ್ಮಹತ್ಯೆಗೂ ಕಾರಣಗಳು ಕಠೋರವಾಗಿಯೇ ಇರುತ್ತವೆ. ಒಬ್ಬ ವ್ಯಕ್ತಿ ಸೋತಾಗ ಅವನ ಜೊತೆ ಯಾರೂ ಇರುವುದಿಲ್ಲ, ಆತನನ್ನು ಮಾತನಾಡಿಸುವುದೂ ಇಲ್ಲ,ಮನೆಯವರನ್ನೂ ಸೇರಿಸಿ, ಆತನಿಗೆ ನಿಂದಿಸಿ,ಅವಮಾನಿಸಿ, ಯಾವುದಕ್ಕೂ ಪ್ರಯೋಜನವಿಲ್ಲದವನು/ಳು  ಮತ್ತೆ ನಿನ್ನಿಂದ ಅಥವಾ ನಿನ್ನ ಕೈಯ್ಯಿಂದ ಏನೂ ಆಗುವುದಿಲ್ಲ, ಇದ್ದರೂ ಅಷ್ಟೇ ಭೂಮಿಗೆ ಭಾರ ಕೂಳಿಗೆ ದಂಡ, ಎಲ್ಲಾದರೂ ದನ ಮೇಯಿಸುವುದಕ್ಕೆ ಹೋಗು ಎಂಬಿತ್ಯಾದಿ ಮನೆಯವರ,ಊರಿನವರ,ಗೆಳೆಯ/ಗೆಳತಿಯರ, ನೆಂಟರಿಷ್ಟರ ಕಠೋರ ಮಾತುಗಳು ಚುಚ್ಚಿ ಕೊಲ್ಲುವಂತೆ ಮಾಡುತ್ತವೆ.

ಇದರಿಂದ ಸೋತ ಮನಸ್ಸು ಇನಷ್ಟು ದು:ಖಕ್ಕೆ ಒಳಗಾಗುವುದು ಸಹಜ, ಹೀಗಾಗಿಯೇ ಹಿಡಿತಕ್ಕೆ ಅಥವಾ ತನ್ನ ನಿಯಂತ್ರಣದಲ್ಲಿರಿಸಲಾಗದ ಮನಸ್ಸು ಕೊನೆಯ ನಿರ್ಧಾರಕ್ಕೆ ಅಣಿಯಾಗುತ್ತದೆ. ಅದುವೆ ಸೋಲು ಸಾವಿನಲ್ಲಿ ಅಂತ್ಯ ಕಾಣುವುದು ಸಹಜವಾಗಿ ಕಂಡುಬರುತ್ತದೆ. ಇದು ನಿತ್ಯ ಬದುಕಿನಲ್ಲಿ ಸೋತವರ ಕೊನೆಯ‌ ಅಸ್ತ್ರ. ಇಲ್ಲಿ  ಕೆಲಸಕ್ಕೆ ಬಂದ ಮೇಲೆ ಕೆಲಸ ಕಲಿಯುವವರೆಗೆ ಅದು ನಮ್ಮ ಕೈಗೆ ಹಿಡಿಯುವವರೆಗೆ ಅದೆಷ್ಟು ತಪ್ಪು ಮಾಡಿದ್ದೇವೆ. ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಕೆಲಸಗಳನ್ನು ಸರಿಯಾಗಿ ಕಲಿಯಲಿಲ್ಲವೇ ಆ ಕೆಲಸವನ್ನು ಸಲೀಸಾಗಿ ಮಾಡುತ್ತಿಲ್ಲವೇ ,ನೀವೇ ಹೇಳಿ.

ಗೆಲ್ಲುವುದಕ್ಕೆ ಬಂದಮೇಲೆ ಸೋಲನ್ನು ಸ್ವೀಕರಿಸಿ ಅದರ ಜೊತೆಯಲ್ಲಿಯೇ ಕುಳಿತು ಊಟ ಮಾಡಿ ಅರಗಿಸಿಕೊಂಡು ಗಟ್ಟಿಯಾಗಿ ಮತ್ತೆ ಗುಡುಗಿನಂತೆ ಆರ್ಭಟಿಸುತ್ತಾ ಎದ್ದು ನಿಂತರೆ ಮಿಂಚಿನ ವೇಗದ ಓಟ ನಿಮ್ಮದಾಗಿರುತ್ತದೆ. ಅದೂ ಸಹ ಸ್ವಲ್ಪ ಸಮಯ ಮತ್ತದೇ ತಿಳಿಯಾಯಿತಲ್ಲವೇ ನಿಮ್ಮ ಗುಡುಗುಡಿಸುವ ಗೆಲುವಿನ ಧ್ವನಿ. ಅಲ್ಲಿಯೂ ಸೋಲು ಬಂದು ಆಲಂಗಿಸಿತೇ?

ಒಮ್ಮೆ ಅಪ್ಪಿಕೊಂಡುಬಿಡಿ ಆದಷ್ಟು ಸಮಾಧಾನವಾಗುವವರೆಗೂ ಅತ್ತು ಬಿಡಿ, ಸೋಲಿನ ಮೇಲೆ ತಲೆಯೊರಗಿಸಿ ಹಾಯಾಗಿ ಮಾತನಾಡಿ  ಮತ್ತೆ ಆ ಸೋಲು ನಿಮ್ಮನ್ನು ಬಿರುಗಾಳಿಯಂತೆ ಎಬ್ಬಿಸಿ ಬಿಡುತ್ತದೆ. ನೋಡಿ ನಿಮ್ಮದೇ ಹಾವಳಿ,ನಿಮ್ಮದೇ ದೀಪಾವಳಿ ಗೆಲುವಿನ ದೀಪ ಬೆಳಗಿಸಿ. ಆ ದೀಪ ಬೆಳಗಿಸಲು ಅದೆಷ್ಟು ದಿನ ಕತ್ತಲೆಯಲ್ಲಿ ಬದುಕಿದ್ದೀರಿ ಎಂದು ಗೆಲುವಿಗೆ ಪ್ರಶ್ನಿಸಿ. ಗೆಲುವು ಪಡೆದಿದ್ದು ಆಯಿತು ಎಲ್ಲವೂ ಮೊದಲಿನಂತೆ, ದೂರವಾದವರೆಲ್ಲ ಹತ್ತಿರಕ್ಕೆ ಬರಲಾರಂಭಿಸಿದರು.

ಬೇಡವೆಂದರೂ ಮತ್ತೇ ಬಯಕೆಗಳು,ಆಸೆಗಳು ಚಿಗುರೊಡೆಯಲು ಪ್ರಾರಂಭಿಸಿತು, ಸೋಲಿನಲ್ಲಿ ಪಡೆದ ಸು:ಖ ಗೆಲುವಿನಲ್ಲಿ ಪಡೆಯಲಾಗಲಿಲ್ಲ. ಸೋಲಿನಲ್ಲಿ ಯಾವಾಗಲೂ  ನನ್ನ ಜೊತೆಗಿದ್ದು ಸಮಾಧಾನ ಪಡಿಸುತ್ತಿದ್ದ ನನ್ನ ಅಳು ಎಂಬ ಆಪ್ತಮಿತ್ರನನ್ನು ಕಳೆದುಕೊಂಡೆ, ಸೋಲಿನಲ್ಲಿ ನಾನು ನನ್ನಂತೆ ಇರುತ್ತಿದ್ದೆ, ಯಾರ ಜೊತೆ ಹೇಗೆ, ಎಷ್ಟು ಬೇರೆಯ ಬೇಕೆಂದು ಚೆನ್ನಾಗಿ ಹೇಳಿಕೊಟ್ಟಿತ್ತು ಆ ನನ್ನ ಸೋಲು. ಗೆಲುವಿನಲ್ಲಿ ನನ್ನಿಷ್ಟದಂತೆ ಏನೂ ಇಲ್ಲ. ಗೆಲುವು ನನ್ನನ್ನು ಇತರರ  ಸೇವಕನನ್ನಾಗಿಸಿದೆ,

ಸೋಲು ನನ್ನನ್ನು ರಾಜನಂತೆ ನೋಡಿಕೊಂಡಿತು. ಸತತ ಸೋಲುಗಳೇ ನನ್ನನ್ನು ಅಪ್ಪಿಕೊಂಡಾಗ ಸಿಕ್ಕ ಪ್ರೀತಿ,ಸು:ಖ, ಗೆಲುವಿನ ಮುತ್ತು ಸಿಕ್ಕಾಗಲೂ ಹುಡುಕಿ ತಡಕಾಡಿದರೂ ಸು:ಖ ಸಿಗಲಿಲ್ಲ.

ಓ ನನ್ನ ಆತ್ಮೀಯ ಸೋಲೇ,

ಬದುಕಲು ಅನುಭವ ಕಲಿಸಿದ ಓ ನನ್ನ ಸೋಲೇ, ಯಾವುದರಲ್ಲಿ, ಯಾರಲ್ಲಿ ಪ್ರೀತಿ, ವಿಶ್ವಾಸ,ನಂಬಿಕೆ ಇಡಬೇಕೆಂದು ಹೇಳಿ ಕೊಟ್ಟ ಓ ಸೋಲೇ ನಿನಗೆ ನನ್ನದೊಂದು ಸಲಾಂ... ಸೋಲು ಹೇಳುತ್ತೆ ನನ್ನನ್ನು ಸಾವಿನಲ್ಲಿ ಕೊನೆಯಾಗಿಸಬೇಡ, ನಾನು ನಿನ್ನ ಜೊತೆಗಿರುವತನಕ ಧೈರ್ಯದಿಂದ ಹೋರಾಡು ನಾನು ಶ್ರೀಕೃಷ್ಣನಂತೆ ಎಂದಿಗೂ ನಿನ್ನ ಪರವಾಗಿಯೇ ಇರುತ್ತೇನೆ, ಗುರಿಯೆಂಬ ಗೆಲುವನ್ನು ಗೆದ್ದು ಜಯಶಾಲಿಯಾಗೋಣ, ಎಲ್ಲರೂ ಸೋಲನ್ನು ಪ್ರೀತಿಸುವಂತೆ ಮಾಡಿ ಅನುಭವ ನೀಡಿ ಸೋಲಿನ ಪತಾಕೆಯನ್ನು  ಎತ್ತರಕ್ಕೆ ಏರಿಸೋಣ.

ನನಗಂತು ಸೋಲುಗಳೇ  ಸವಾಲು, ಸೋತಾಗ ಅನುಭವಗಳದ್ದೇ ಸರತಿ ಸಾಲು, ಸೋತಾಗ ಕಂಗಾಲು ಆಗದೇ ಮನಸ್ಸನ್ನು ಹಿಡಿತದಲ್ಲಿರಿಸಲು, ಭಯವ ಬಿಟ್ಟು ಹಿಂಜರಿಯದೇ ಮತ್ತೆ  ಧೈರ್ಯದಿಂದ ಪ್ರಯತ್ನಿಸಿ ಸತ್ಯ, ಒಳ್ಳೆಯತನ,ಪ್ರಾಮಾಣಿಕತೆಯಿಂದ  ಮುಂದುವರೆದರೆ ಗೆದ್ದೇ ಗೆಲ್ಲುವೆ, ನಿನ್ನ ತನ ತೋರುವೆ. ಸೋತಾಗಲೇ ಅನುಭವವು, ಸೋತು-ಸೋತು ಸುತ್ತು ಮತ್ತೆ ಹುಟ್ಟಿ ಬದುಕುವೆವು, ಸೋತಾಗಲೇ ಆತ್ಮಸಾಕ್ಷಿಗೆ ದು:ಖವು, ಸೋತಾಗಲೇ ಬರುವುದು ಗೆಲ್ಲಬೇಕೆಂಬ ಉತ್ಸಾಹವು...

ಒಮ್ಮೆಲೆ ಗೆದ್ದರೆ ಇವ ನಮ್ಮವ, ಸೋತಾಗಲೇ ಯಾರಿವ, ಸೋತು-ಸೋತು ಗೆದ್ದವನೇ ಇತಿಹಾಸ  ಸೃಷ್ಪಿಸುವವ, ಗೆದ್ದವರಿಗೆ ಹಾರ-ತುರಾಯಿ ಸನ್ಮಾನ, ಸೋತವನಿಗೆ ಅವಮಾನ-ಅಪಮಾನ, ಇದೇ ಸೋತವನು ಮತ್ತೆ ಗೆದ್ದಾಗ ಪುಸ್ತಕದ ಪುಟಗಳಲಿ ಅಚ್ಚಾಗಿ ಉಳಿಯುವಂತೆ ಅಕ್ಷರಗಳಿಂದ ಗುಣಗಾನ, ಇಂತಹ ಸೋತು ಗೆದ್ದವರೇ ನಮ್ಮಂತವರಲ್ಲಿ ಹುಟ್ಟಿಸುವರು ಅಸಾಧ್ಯವಾದುದ್ದನ್ನು ಸಾಧ್ಯವಾಗಿಸುವ ಕನಸುಗಳನ್ನ... "ಸೋತು ಗೆದ್ದವರು ಇತಿಹಾಸದ ಪುಟಗಳಲ್ಲಿ ಎಂದಿಗೂ ಅಮರರು".

-ಶಾಂತಾರಾಮ ಹೊಸ್ಕೆರೆ, ಶಿರಸಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ