ಕಂದು ಬಣ್ಣದ ಹತ್ತಿ ತಳಿಗಳು - ದಶಕಗಳ ಸಂಶೋಧನೆಯ ಫಲ


ಭಾರತದಲ್ಲಿ ಕಂದು ಬಣ್ಣದ ಹತ್ತಿ ತಳಿಗಳನ್ನು ವಾಣಿಜ್ಯ ಬೆಳೆಯಾಗಿ ಬೆಳೆಸಲು ಬಿಡುಗಡೆ ಮಾಡಿದ ಹೆಗ್ಗಳಿಕೆ ಕರ್ನಾಟಕದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ್ದು. 2020ರಲ್ಲೇ ಈ ಎರಡು ತಳಿಗಳನ್ನು ಬಿಡುಗಡೆ ಮಾಡಲಾಯಿತು: ಗಾಢ ಕಂದು ಬಣ್ಣದ ಹತ್ತಿ ತಳಿ ಡಿಡಿಸಿಸಿ-1(ಧಾರವಾಡ ದೇಸಿ ಕಲರ್ಡ್ ಕಾಟನ್-1) ಮತ್ತು ಮಧ್ಯಮ-ಕಂದು ಬಣ್ಣದ ಹತ್ತಿ ತಳಿ ಡಿಎಮ್ಬಿ-225 (ಧಾರವಾಡ ಮೀಡಿಯಮ್ ಕಾಟನ್-225).
ಆದರೆ, ಎರಡು ವರುಷಗಳ ನಂತರವೂ ಕರ್ನಾಟಕದಲ್ಲಿ ಈ ಪರಿಸರಸ್ನೇಹಿ ಬಣ್ಣದ ಹತ್ತಿ ತಳಿಗಳನ್ನು ಕೇವಲ ಒಂದು ನೂರು ಎಕರೆಯಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ, ಈ ಹತ್ತಿ ತಳಿಗಳ ಬೀಜಗಳಿಗಾಗಿ ರೈತರು ಕೃಷಿ ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕಾದ ದುಬಾರಿ ಶುಲ್ಕ: ಗಾಢ ಕಂದು ಬಣ್ಣದ ಹತ್ತಿ ತಳಿಗೆ ರೂ.3 ಲಕ್ಷ ಮತ್ತು ಮಧ್ಯಮ-ಕಂದು ಬಣ್ಣದ ಹತ್ತಿ ತಳಿಗೆ ರೂ.5 ಲಕ್ಷ. ಸದ್ಯ, ಬೆಂಗಳೂರಿನ ಎರಡು ಕಂಪೆನಿಗಳು ಕೃಷಿ ವಿಶ್ವವಿದ್ಯಾಲಯದಿಂದ ಈ ಹತ್ತಿ ತಳಿಗಳ ಬೀಜಗಳನ್ನು ಖರೀದಿಸಿ, ಅವನ್ನು ರೈತರಿಗೆ ಒದಗಿಸಿವೆ - "ಒಪ್ಪಂದ ಕೃಷಿ” ಅನ್ವಯ ಹತ್ತಿ ಕೃಷಿಗಾಗಿ.
ಭಾರತದಲ್ಲಿ ಬಣ್ಣದ ಹತ್ತಿ ತಳಿಗಳ ಅಭಿವೃದ್ಧಿಯ ಪೈಲೆಟ್ ಪ್ರಾಜೆಕ್ಟನ್ನು ಇಸವಿ 2000ದಲ್ಲೇ ಶುರು ಮಾಡಲಾಗಿತ್ತು. ಇಪ್ಪತ್ತು ವರುಷಗಳ ನಂತರ ಎರಡು ಹತ್ತಿ ತಳಿಗಳ ಕ್ಷೇತ್ರ ಪ್ರಯೋಗಗಳು ಅಂತಿಮ ಹಂತಕ್ಕೆ ಬಂದವು. ಅವು: 16301-ಡಿಬಿ ಮತ್ತು ಡಿಡಿಸಿಸಿ-1(ಧಾರವಾಡ ದೇಸಿ ಕಲರ್ಡ್ ಕಾಟನ್). ಇವನ್ನು ಭಾರತೀಯ ಕೃಷಿ ಸಂಶೋಧನಾ ಮಂಡಲಿಯ ಪರಿಣತರ ಸಮಿತಿ 2021ರಲ್ಲಿ ಮೌಲ್ಯಮಾಪನ ಮಾಡಿತು - ಅವನ್ನು ವಾಣಿಜ್ಯ ಬೆಳೆಯಾಗಿ ಬೆಳೆಸಲು ಬಿಡುಗಡೆ ಮಾಡವುದಕ್ಕೆ ಪೂರ್ವಭಾವಿಯಾಗಿ. ಇವೆಲ್ಲ ಭಾ.ಕೃ.ಸ. ಮಂಡಲಿಯ ಅಖಿಲ ಭಾರತ ಸಂಯೋಜಿತ ಹತ್ತಿ ಸಂಶೋಧನಾ ಯೋಜನೆಯ ಅನುಸಾರ ನಡೆದ ಪ್ರಕ್ರಿಯೆಗಳು (ಇದರ ಕಚೇರಿ ತಮಿಳ್ನಾಡಿನ ಕೊಯಂಬತ್ತೂರಿನಲ್ಲಿದೆ.)
ಕಂದು ಬಣ್ಣದ ಹತ್ತಿ ತಳಿಗಳ ಸಂಶೋಧನೆಯ ಹಿನ್ನೆಲೆ
ಸಹಜವಾಗಿ ಕಂದು ಬಣ್ಣದ ಹತ್ತಿಯ ಫಸಲು ನೀಡುವ ಗೊಸ್ಸಿಪಿಯಮ್ ಹಿರ್ಸುಟಮ್ ಸ್ಪೀಷೀಸಿನ ಐದು ತಳಿಗಳ ಮೌಲ್ಯಮಾಪನ ನಡೆಸಿ, 16301-ಡಿಬಿ ತಳಿಯನ್ನು ಅಭಿವೃದ್ಧಿ ಪಡಿಸಿದ್ದು ನಾಗಪುರದ ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ. ಇದು ಜಗತ್ತಿನಲ್ಲಿ ಅತಿ ವ್ಯಾಪಕವಾಗಿ ಬೆಳೆಸುತ್ತಿರುವ ಹತ್ತಿ ಸ್ಪಿಷೀಸ್. ಡಿಡಿಸಿಸಿ-1 ಹತ್ತಿ ತಳಿಯನ್ನು ಅಭಿವೃದ್ಧಿ ಪಡಿಸಿದ್ದು ಧಾರವಾಡದ ಕೃಷಿ ವಿಶ್ವವಿದ್ಯಾಲಯ. ಇದಕ್ಕಾಗಿ ಗೊಸ್ಸಿಪಿಯಮ್ ಅರ್ಬೊರಿಯಮ್ ಸ್ಪಿಷೀಸಿನ ಭಾರತ ಮೂಲದ ಆರು ತಳಿಗಳನ್ನು ಕೃಷಿ ವಿಶ್ವವಿದ್ಯಾಲಯ ಮೌಲ್ಯಮಾಪನ ಮಾಡಿತ್ತು. ಇನ್ನೂ 15 ಹತ್ತಿ ತಳಿಗಳ ಬಗ್ಗೆ ನಮ್ಮ ದೇಶದ ವಿವಿಧ ಕ್ಷೇತ್ರಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ ಎಂದು ಸಂಯೋಜಿತ ಹತ್ತಿ ಸಂಶೋಧನಾ ಯೋಜನೆಯ ಮುಖ್ಯಸ್ಥ ಪ್ರಕಾಶ್ ತಿಳಿಸುತ್ತಾರೆ.
ಈ ಎರಡು ಕಂದು ಬಣ್ಣದ ಹತ್ತಿ ತಳಿಗಳು ಮೂರು ದಶಕಗಳಿಗೂ ಅಧಿಕ ಅವಧಿಯ ಸಂಶೋಧನೆಯ ಫಲ. ಭಾರತದಲ್ಲಿ 5,000 ವರುಷಗಳ ಹಿಂದೆ ಬೆಳೆಸುತ್ತಿದ್ದ ಕಂದು ಬಣ್ಣದ ಹತ್ತಿ ತಳಿಗಳ ಪುನರುಜ್ಜೀವನ ಈ ಸಂಶೋಧನೆಯ ಉದ್ದೇಶವಾಗಿದೆ. ಸಿಂಧೂ ನಾಗರಿಕತೆಯ ಕಾಲದಲ್ಲೇ ಬಣ್ಣದ ಹತ್ತಿ ತಳಿಗಳನ್ನು ಬಳಸಲಾಗುತ್ತಿತ್ತು ಎಂದು ವಿಜ್ನಾನಿಗಳು ನಂಬುತ್ತಾರೆ.
ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಮತ್ತು ಸ್ವತಂತ್ರ ಭಾರತದ ಆರಂಭದ ಕೆಲವು ವರುಷಗಳಲ್ಲಿ, ಆಂಧ್ರ ಪ್ರದೇಶದ ಕರಾವಳಿಯ ಮಳೆಯಾಶ್ರಿತ ಪ್ರದೇಶಗಳಲ್ಲಿ ಗೊ. ಅರ್ಬೊರಿಯಮ್ ಸ್ಪಿಷೀಸಿನ ಕೊಕನಾಡಾ-1 ಮತ್ತು ಕೊಕನಾಡಾ-2 ಎಂಬ ಕಂದು ಬಣ್ಣದ ಹತ್ತಿ ತಳಿಗಳನ್ನು ಬೆಳೆಯಲಾಗುತ್ತಿತ್ತು. ಅದರ ಕಂದು ಬಣ್ಣದ ಹತ್ತಿ ಪ್ರೀಮಿಯಮ್ ಉತ್ಪನ್ನವೆಂದು ಜಪಾನಿಗೆ ರಫ್ತಾಗುತ್ತಿತ್ತು. ಅಸ್ಸಾಮ್ ಮತ್ತು ಕರ್ನಾಟಕದಲ್ಲಿಯೂ 19 ಮತ್ತು 20ನೇ ಶತಮಾನದಲ್ಲಿ ಬಣ್ಣದ ಹತ್ತಿ ಬೆಳೆಯಲಾಗುತ್ತಿತ್ತು.
ಆದರೆ, ಕೇವಲ 100 ವರುಷಗಳ ಮುಂಚೆ ಭಾರತದಲ್ಲಿ ಬೆಳೆಯಲು ಶುರು ಮಾಡಿದ ಬಿಳಿ ಬಣ್ಣದ ಹತ್ತಿಯ ಕೃಷಿ ಬೇಗನೇ ನಮ್ಮ ದೇಶದ ಉದ್ದಗಲದಲ್ಲಿ ವ್ಯಾಪಿಸಿತು. ಯಾಕೆಂದರೆ, ಆಧುನಿಕ ಜವುಳಿ ಕಾರ್ಖಾನೆಗಳಿಗೆ ಅದರ ಉದ್ದವಾದ ಮತ್ತು ದೃಢವಾದ ಹತ್ತಿಯ ನೂಲು ಬೇಕಾಗಿತ್ತು. ಭಾರತದ ಪಾರಂಪರಿಕ ತಳಿಗಳ ಹತ್ತಿಯ ನೂಲಿಗೆ ಈ ಗುಣಗಳು ಇರಲಿಲ್ಲ. ರಾಸಾಯನಿಕ ಬಣ್ಣ ಹಾಕುವ ಪ್ರಕ್ರಿಯೆಯಲ್ಲಾದ ಪ್ರಗತಿಯಿಂದಾಗಿ ನಮ್ಮ ಪಾರಂಪರಿಕ ತಳಿಗಳ ಹತ್ತಿಗೆ ಬೇಡಿಕೆ ಇನ್ನಷ್ಟು ಕಡಿಮೆಯಾಯಿತು.
ಈಗ, ರಾಷ್ಟ್ರೀಯ ಹತ್ತಿ ಜೀನ್ ಬ್ಯಾಂಕಿನಲ್ಲಿ ಸುಮಾರು 6,000 ಹತ್ತಿ ಸ್ಪಿಷೀಸ್ಗಳನ್ನು ರಕ್ಷಿಸಲಾಗಿದೆ. ಇವುಗಳಲ್ಲಿ, ಸುಮಾರು 50 ತಳಿಗಳು ಬಣ್ಣದ ಹತ್ತಿ ತಳಿಗಳು. ಇವನ್ನು ನಮ್ಮ ದೇಶದಿಂದ ಹಾಗೂ ಮೆಕ್ಸಿಕೋ, ಈಜಿಪ್ಟ್, ಪೆರು, ಇಸ್ರೇಲ್, ರಷ್ಯಾ ಮತ್ತು ಯುಎಸ್ಎ ದೇಶಗಳಿಂದ ಸಂಗ್ರಹಿಸಲಾಗಿದೆ. ಅದೇನಿದ್ದರೂ, ಈಗ ನಮ್ಮ ದೇಶದಲ್ಲಿ ಕೆಲವು ಬುಡಕಟ್ಟು ಸಮುದಾಯಗಳು ಮಾತ್ರ ಬಣ್ಣದ ಹತ್ತಿಯ ಕೆಲವು ತಳಿಗಳನ್ನು ಬೆಳೆಯುತ್ತಿವೆ.
ಬಣ್ಣದ ಹತ್ತಿ ತಳಿ ಸಂಶೋಧನೆಯ ಹಂತಗಳು
ಬಣ್ಣದ ಹತ್ತಿ ತಳಿಗಳು ಅಳಿದು ಹೋಗುವುದನ್ನು ತಪ್ಪಿಸಬೇಕಾದರೆ, ಅವುಗಳ ತಳಿಗಳ ಹತ್ತಿಯ ಎಳೆಗಳು ಹೆಚ್ಚು ಉದ್ದ ಮತ್ತು ದೃಢ ಆಗುವಂತೆ ಮಾಡುವುದೊಂದೇ ದಾರಿ ಎಂಬುದು ವಿಜ್ನಾನಿಗಳ ಅಭಿಮತ. ಆದರೆ ಹತ್ತಿಯ ಸಂಕರ ತಳಿಗಳ ಅಭಿವೃದ್ಧಿ ದೀರ್ಘಾವಧಿಯ ಮತ್ತು ಶ್ರಮದ ಕೆಲಸ. ಅಪೇಕ್ಷಿತ ಗುಣಗಳಿರುವ ಬಿಳಿ ಬಣ್ಣದ ಮತ್ತು ಬೇರೆ ಬಣ್ಣದ ಹತ್ತಿಯ ತಳಿಗಳನ್ನು ತಳಿವರ್ಧನೆಗಾಗಿ ಗುರುತಿಸುವುದು ಮೊದಲನೆಯ ಹಂತ. ಅನಂತರ, ಸಣ್ಣ ಕುಂಡಗಳಲ್ಲಿ ಬೆಳೆಸಿದ ಹತ್ತಿ ಗಿಡಗಳನ್ನು ಸಂಕರಗೊಳಿಸಿ, ಹೊಸ ಸಂಕರ ತಳಿಗಳನ್ನು ಪಡೆಯಲಾಗುತ್ತದೆ. ಇವುಗಳಲ್ಲಿ ಕೆಲವದಕ್ಕೆ ಅಪೇಕ್ಷಿತ ಗುಣಗಳಿದ್ದರೆ, ಇನ್ನು ಕೆಲವಕ್ಕೆ ಅವು ಇರುವುದಿಲ್ಲ. ಅಪೇಕ್ಷಿತ ಗುಣಗಳಿರುವ ಹತ್ತಿ ಗಿಡಗಳನ್ನು ಮತ್ತೆಮತ್ತೆ ಸಂಕರ ಮಾಡಿ, ಹಲವಾರು ವರುಷ ತಳಿವರ್ಧನೆ ಮಾಡಲಾಗುತ್ತದೆ - ಎಲ್ಲ ಅಪೇಕ್ಷಿತ ಗುಣಗಳೂ ಒಂದು ಸಂಕರ ತಳಿಯಲ್ಲಿ ಮೂಡಿ ಬರುವ ತನಕ. ತದನಂತರ ಈ ತಳಿಯನ್ನು ಪುನಃ ಬೆಳೆಸಿ, “ಸ್ಥಿರತೆ"ಗಾಗಿ ಪರೀಕ್ಷಿಸಲಾಗುತ್ತದೆ; ಅಂದರೆ, ಅಪೇಕ್ಷಿತ ಗುಣಗಳನ್ನು ಈ ತಳಿಯ ಗಿಡಗಳು ಮುಂದಿನ ತಲೆಮಾರಿಗೂ ದಾಟಿಸುವ ಸಾಮರ್ಥ್ಯ ಪಡೆದಿವೆಯೇ ಎಂಬುದನ್ನು.
ಮುಂದಿನ ಹಂತದ ಅವಧಿ ಮೂರು ವರುಷಗಳು. ಈ ಹಂತದಲ್ಲಿ, ಹೊಸ ಸಂಕರ ತಳಿಯ ಫಸಲಿನ ಪ್ರಮಾಣ, ಹತ್ತಿಯ ಎಳೆಗಳ ಉದ್ದ, ದೃಢತೆ ಮತ್ತು ಬಣ್ಣವನ್ನು ವಿಜ್ನಾನಿಗಳು ಸೂಕ್ಷ್ಮವಾಗಿ ಪರೀಕ್ಷಿಸುತ್ತಾರೆ. ಕೊನೆಯ ಹಂತದಲ್ಲಿ ಬೇರೆಬೇರೆ ಪ್ರದೇಶಗಳಲ್ಲಿರುವ ರೈತರ ಹೊಲಗಳಲ್ಲಿ ಹೊಸ ಸಂಕರ ತಳಿ ಬೆಳೆದು ಗುಣಮಟ್ಟ ಪರೀಕ್ಷೆ.
ಭಾರತದಲ್ಲಿ ಕೆಸಿ-94-2 ಎಂಬ ಮೊತ್ತಮೊದಲ ಬಣ್ಣದ ಹತ್ತಿಯ ಸಂಕರ ತಳಿಯನ್ನು 1996ರಲ್ಲಿ ಕಾಂಡ್ವಾದ ಜವಾಹರಲಾಲ್ ನೆಹರೂ ಕೃಷಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿತು. ಅದರ ಇಳುವರಿ ಕಡಿಮೆಯಾಗಿದ್ದ ಕಾರಣ ಅದು ಜನಪ್ರಿಯವಾಗಲಿಲ್ಲ. ಮುಂದಿನ ದಶಕದಲ್ಲಿ ಅನೇಕ ಬಣ್ಣದ ಹತ್ತಿ ಸಂಕರ ತಳಿಗಳನ್ನು ಅಭಿವೃದ್ಧಿ ಪಡಿಸಿದರೂ, ಜವುಳಿ ಉದ್ಯಮಕ್ಕೆ ಅಗತ್ಯವಾದ ಉದ್ದ ಮತ್ತು ದೃಢತೆ ಅವುಗಳ ಹತ್ತಿಯಲ್ಲಿ ಇರಲಿಲ್ಲ.
ಹೊಸ ಬಣ್ಣದ ಹತ್ತಿ ತಳಿಗಳ ಅನುಕೂಲಗಳು
ಬಿಡುಗಡೆಯಾಗಿರುವ ಎರಡೂ ತಳಿಗಳ ಹತ್ತಿ ಜವುಳಿ ಉದ್ಯಮಕ್ಕೆ ಬೇಕಾದ ಉದ್ದ ಮತ್ತು ದೃಢತೆ ಹೊಂದಿದೆ. ಆಧುನಿಕ ಜವುಳಿ ಉದ್ಯಮಕ್ಕೆ 25 - 29 ಮಿಮೀ ಉದ್ದದ ಹತ್ತಿಯೆಳೆ ಅತ್ಯುತ್ತಮ. 16301-ಡಿಬಿ ಮತ್ತು ಡಿಡಿಸಿಸಿ-1 ಸಂಕರ ತಳಿಗಳ ಹತ್ತಿಯೆಳೆಯ ಸರಾಸರಿ ಉದ್ದ 23 - 24 ಮಿಮೀ. ಇದು ಮಧ್ಯಮ ಗುಣಮಟ್ಟದ ಹತ್ತಿಯೆಳೆ. ಈ ಹತ್ತಿಯೆಳೆಯ ದೃಢತೆ 1,000 ಮೀಟರಿಗೆ 20 - 23 ಗ್ರಾಮ್. ಇದು ಜವುಳಿ ಉದ್ಯಮಕ್ಕೆ ಸೂಕ್ತ. ಅದಲ್ಲದೆ, ಈ ಎರಡು ತಳಿಗಳ ಇಳುವರಿ ಹೆಕ್ಟೇರಿಗೆ 1,200ರಿಂದ 1,800 ಕಿಗ್ರಾ. ಇದು, ಬಿಳಿ ಹತ್ತಿ ತಳಿ ನೀಡುವ ಹೆಕ್ಟೇರಿಗೆ 466 ಕಿಗ್ರಾ ಇಳುವರಿಗಿಂತ ಜಾಸ್ತಿ.
ಎಲ್ಲದಕ್ಕಿಂತ ಮುಖ್ಯವಾಗಿ, ಈ ಎರಡು ಹೊಸ ತಳಿಗಳ ಕೃಷಿಉತ್ಪಾದನಾ ವೆಚ್ಚ ಬಹಳ ಕಡಿಮೆ. ಯಾಕೆಂದರೆ, ಇವುಗಳನ್ನು ಬೆಳೆಸುವಾಗ ಬೆಳೆರಕ್ಷಣೆಗಾಗಿ ಕಡಿಮೆ ರಾಸಾಯನಿಕ ಪೀಡೆನಾಶಕಗಳನ್ನು ಪ್ರಯೋಗಿಸಿದರೆ ಸಾಕು. ಗಮನಿಸಿ: ಭಾರತದಲ್ಲಿ ಪ್ರತಿ ವರುಷ ಕೃಷಿಯಲ್ಲಿ ಬಳಕೆಯಾಗುವ ಏಳು ಸಾವಿರ ಟನ್ನಿಗಿಂತ ಅಧಿಕ ರಾಸಾಯನಿಕ ಪೀಡೆನಾಶಕಗಳಲ್ಲಿ ಶೇಕಡಾ 50ರಷ್ಟು ಹತ್ತಿ ಬೆಳೆಯ ಕೃಷಿಗೆ ಬಳಕೆಯಾಗುತ್ತಿದೆ! ಈ ಎರಡು ಸಂಕರ ತಳಿಗಳು ಪಾರಂಪರಿಕ ತಳಿಗಳ ಮೂಲದಿಂದ ಅಭಿವೃದ್ಧಿ ಪಡಿಸಿದವುಗಳು; ಆದ್ದರಿಂದ, ಪೀಡೆಕೀಟಗಳಿಗೆ ಪ್ರತಿರೋಧ ಹೊಂದಿವೆ. ಜೊತೆಗೆ, ಇವುಗಳಿಗೆ ಬಣ್ಣ ಹಾಕುವ ಕೆಲಸವಿಲ್ಲ; ಜವುಳಿ ಉದ್ಯಮದಲ್ಲಿ ಬಿಳಿ ಹತ್ತಿಗೆ ಬಣ್ಣ ನೀಡಲಿಕ್ಕಾಗಿ ದೊಡ್ಡ ಪ್ರಮಾಣದಲ್ಲಿ 100ರಷ್ಟು ವಿಷಭರಿತ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಅದಲ್ಲದೆ, ಈ ಪ್ರಕ್ರಿಯೆಗೆ ಭಾರೀ ಪ್ರಮಾಣದ ನೀರು ಅವಶ್ಯ: ಒಂದು ಕಿಗ್ರಾ ಹತ್ತಿಗೆ ಬಣ್ಣ ನೀಡಲಿಕ್ಕೆ 150 - 170 ಲೀಟರ್ ನೀರು ಬೇಕು! ಈ ಸಂಕರ ತಳಿಗಳ ಬಣ್ಣದ ಹತ್ತಿ ಬಳಸಿದಾಗ, ಜವುಳಿ ಉದ್ಯಮಕ್ಕೆ ಈ ವೆಚ್ಚ ಉಳಿತಾಯ.
ಮಾತ್ರವಲ್ಲ, ಈ ಬಣ್ಣದ ಹತ್ತಿಯ ಸಂಕರ ತಳಿಗಳು, “ಬಿಟಿ ಹತ್ತಿಯ" ಮೇಲಿನ ರೈತರ ಅವಲಂಬನೆಯನ್ನು ತಪ್ಪಿಸಬಲ್ಲವು. ಜಗತ್ತಿನಲ್ಲಿ ಹತ್ತಿ ಕೃಷಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತದಲ್ಲಿ, “ಬಿಟಿ ಹತ್ತಿ”ಯಿಂದಾದ ಅವಾಂತರಗಳು ಮತ್ತು ದುರಂತಗಳು ಎಲ್ಲರಿಗೂ ಗೊತ್ತು. ಆ ಸಮಸ್ಯೆಗೆ, ಈ ಬಣ್ಣದ ಹತ್ತಿಯ ಸಂಕರ ತಳಿಗಳು ಪರಿಹಾರ ಒದಗಿಸ ಬಲ್ಲವು.
ಬಣ್ಣದ ಹತ್ತಿ ತಳಿ ಬೆಳೆಸುವ ರೈತರ ಅನುಭವ
ಕಳೆದ 15 ವರುಷಗಳಿಂದ ಬಣ್ಣದ ಹತ್ತಿ ತಳಿಗಳನ್ನು ಬೆಳೆಸುತ್ತಿರುವ ಉಪ್ಪಿನ ಬೆಟಗೇರಿ ಗ್ರಾಮದ ರೈತ ಚನ್ನಬಸಪ್ಪ ಮೇಟಿ ಅವರ ಅನುಸಾರ ಈ ಕೃಷಿ ಲಾಭದಾಯಕ. ಅವರು ಹೀಗೆನ್ನುತ್ತಾರೆ: “ಬಣ್ಣದ ಹತ್ತಿ ತಳಿಯ ಸರಾಸರಿ ಇಳುವರಿ ಎಕರೆಗೆ 10 ಕ್ವಿಂಟಾಲ್. ಬಿಟಿ-ಹತ್ತಿ ತಳಿಯ ಇಳುವರಿ ಎಕರೆಗೆ 14 - 16 ಕ್ವಿಂಟಾಲ್. ಆದರೆ, ಬಣ್ಣದ ಹತ್ತಿಗೆ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ 15,000 ರೂಪಾಯಿ ಬೆಲೆ ಸಿಕ್ಕಿದರೆ, ಬಿಟಿ-ಹತ್ತಿಗೆ ಸಿಗುವ ಬೆಲೆ ಕ್ವಿಂಟಾಲಿಗೆ 9,000ದಿಂದ 11,000 ರೂಪಾಯಿ ಮಾತ್ರ. ಅದಲ್ಲದೆ, ಬಣ್ಣದ ಹತ್ತಿ ಕೃಷಿ ಮಾಡುವುದರಿಂದ ಮಣ್ಣಿನ ಆರೋಗ್ಯ ರಕ್ಷಣೆಯಾಗಿ, ಇಳುವರಿಯೂ ಹೆಚ್ಚುತ್ತದೆ.”
ಅದೇನಿದ್ದರೂ, ಜವುಳಿ ಉದ್ಯಮವು ಬಣ್ಣದ ಹತ್ತಿ ತಳಿಗಳನ್ನು ಬಟ್ಟೆಯ ಉತ್ಪಾದನೆಗೆ ಬಳಸುವ ಬಗ್ಗೆ ಇನ್ನೂ ಆಸಕ್ತಿ ವಹಿಸಿಲ್ಲ. ಆದರೆ, ಜಗತ್ತಿನಾದ್ಯಂತ ಜನರಲ್ಲಿ ಪರಿಸರ ಜಾಗೃತಿ ಹೆಚ್ಚುತ್ತಿದೆ. ಅದರಿಂದಾಗಿ, ಕೃಷಿಯಲ್ಲಿ ಮತ್ತು ಕಾರ್ಖಾನೆಗಳಲ್ಲಿ ರಾಸಾಯನಿಕಗಳನ್ನು ಬಳಸದ ಹತ್ತಿಯಿಂದ ಉತ್ಪಾದಿಸಿದ ಉತ್ಪನ್ನಗಳಿಗೆ ಗ್ರಾಹಕರ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ, ಮುಂದಿನ ವರುಷಗಳಲ್ಲಿ ಬಣ್ಣದ ಹತ್ತಿಗೆ ಜವುಳಿ ಉದ್ಯಮದಲ್ಲಿ ಬೇಡಿಕೆ ಹೆಚ್ಚುವುದೆಂಬ ನಿರೀಕ್ಷೆ.
ಫೋಟೋ 1: ಗಿಡದಲ್ಲಿ ಬಣ್ಣದ ಹತ್ತಿ … ಕೃಪೆ: ಜಾಗೃಣ್ ಜೋಷ್.ಕೋಮ್
ಫೋಟೋ 2: ಹೊಲದಲ್ಲಿ ಬಣ್ಣದ ಹತ್ತಿ ಗಿಡಗಳು … ಕೃಪೆ: ಇಂಡಿಯನ್ ಟೆಕ್ಸ್-ಟೈಲ್ ಜರ್ನಲ್.ಕೋಮ್