ಕಗ್ಗ ದರ್ಶನ – 29 (1)

ಕಗ್ಗ ದರ್ಶನ – 29 (1)

ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ
ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು
ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ
ಮುಗಿಲವೊಲು ದೈವಕೃಪೆ - ಮಂಕುತಿಮ್ಮ
ಬಿರುಬೇಸಗೆಯಲ್ಲಿ ಏನಾಗುತ್ತದೆ? ಆಕಾಶವು ಬೆಂಕಿಬಲೆಯಾಗಿ ಭೂಮಿಗೆ ಬಿಸಿಯಾದ ಮುಸುಕು (ಗವಸು) ಹಾಕಿದಂತೆ ಆವರಿಸಿಕೊಳ್ಳುತ್ತದೆ. ಕೆರೆಗಳು ಒಣಗಿ, ಕುಂಬಾರನು ಮಡಕೆ ಸುಡುವ ಒಲೆ(ಆವಿಗೆ)ಯಂತೆ ಬಿಸಿಲಿಗೆ ಬಿಸಿಬಿಸಿಯಾಗುತ್ತವೆ. ಜಗತ್ತಿನಲ್ಲಿ ಜನರು ಉಸಿರಾಡುವ ಗಾಳಿಯೆಲ್ಲ ಬೆಂಕಿಯ ಹೊಗೆಯಾಗಿ ಧಗಧಗಿಸುತ್ತದೆ.
ಇಂತಹ ರಣಬಿಸಿಲಿನ ದಾರುಣ ಬೇಸಗೆಯ ರಾತ್ರಿಯಲ್ಲಿ ಎಲ್ಲಿಂದಲೋ ಹುಟ್ಟಿ (ಒಗೆದು) ಬರುವ ಮುಗಿಲು ಮಳೆ ಸುರಿಸಿ ಭೂಮಿಗೆ ತಂಪೆರೆಯುತ್ತದೆ. ದೈವಕೃಪೆ ಎಂಬುದು ಆ ಮುಗಿಲಿನಂತೆ, ನಾವು ಕಷ್ಟಕಾರ್ಪಣ್ಯದಿಂದ ಬಸವಳಿದಾಗ ಬದುಕಿನಲ್ಲಿ ನೆರವಾಗಿ ತಂಪಾಗಿಸುತ್ತದೆ ಎಂದು ಮನಮುಟ್ಟುವಂತೆ ವಿವರಿಸಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಈ ವರುಷದ ಬೇಸಗೆ ಭರತಖಂಡವನ್ನೇ ಬೆಂಕಿಯಂತೆ ಬೇಯಿಸಿದೆ. ಮೈಸೂರು, ಬೀದರ್, ಗುಲ್ಬರ್ಗ ಇತ್ಯಾದಿ ನಗರಗಳಲ್ಲಿ ಕಳೆದ ಶತಮಾನದಲ್ಲೇ ಅತ್ಯಧಿಕ ಉಷ್ಣತೆ ೨೦೧೬ರಲ್ಲಿ ದಾಖಲಾಗಿದೆ. ಬಾವಿ, ಕೆರೆ, ಕೊಳ, ತೊರೆ, ನದಿ, ಸರೋವರ, ಜಲಾಶಯಗಳೆಲ್ಲ ನೀರಿಲ್ಲದೆ ಬತ್ತಿ ಹೋಗಿವೆ. ಕರ್ನಾಟಕದ ಒಂದು ಸಾವಿರ ಹಳ್ಳಿಗಳಿಗೆ ಟ್ಯಾಂಕರುಗಳಲ್ಲಿ ಕುಡಿಯುವ ನೀರಿನ ಸರಬರಾಜು. ಒಂದು ಕೊಡ ನೀರಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಅಸಹಾಯಕ ಪರಿಸ್ಥಿತಿ.
ಅರಬೀ ಸಮುದ್ರದ ತೀರದಲ್ಲಿರುವ ಮಂಗಳೂರು ಜಗತ್ತಿನಲ್ಲೇ ಅತ್ಯಧಿಕ ಮಳೆ ಬೀಳುವ ನಗರಗಳಲ್ಲಿ ಒಂದು. ಇಲ್ಲಿಯೂ ಮೇ ೨೦೧೬ರಲ್ಲಿ ಐದು ದಿನಕ್ಕೊಮ್ಮೆ ನಳ್ಳಿಯಲ್ಲಿ ನೀರು ಸರಬರಾಜು. ದೈವಕೃಪೆಯಿಂದಾಗಿ ಮೇ ೧೫ ಮತ್ತು ಮೇ ೧೭ರಂದು ಭಾರೀ ಮಳೆ ಸುರಿದ ಕಾರಣ ಬಚಾವ್. ಆದರೆ, ದೇವರನ್ನೇ ನಂಬಿ ಕೂತರೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆಯೇ? ಮನುಷ್ಯ ಪ್ರಯತ್ನ ಮಾಡುವುದು ಪ್ರತಿಯೊಬ್ಬನ ಕರ್ತವ್ಯ. ಮನೆಯ ಚಾವಣಿ ಮೇಲೆ ಬೀಳುವ ಮಳೆನೀರನ್ನು ಪ್ರತಿ ಮನೆಯವರೂ ಕೊಯ್ಲು ಮಾಡಬೇಕು – ಮನೆಬಳಕೆಗಾಗಿ ಮತ್ತು ನೆಲದಾಳಕ್ಕೆ ಇಂಗಿಸಲಿಕ್ಕಾಗಿ. ಪ್ರತಿಯೊಬ್ಬ ರೈತರೂ ತಮ್ಮ ಜಮೀನಿನಲ್ಲಿ ಕೃಷಿಹೊಂಡ ಮಾಡಿ ನೀರಿಂಗಿಸ ಬೇಕು. ಬೃಹತ್ ಪ್ರಮಾಣದ ನೀರು ಬೇಕಾದ ಕೈಗಾರಿಕೆಗಳು (ಮಳೆಗಾಲದ ನಂತರ) ನೀರಿಗಾಗಿ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ದೇವರು ಕೃಪೆದೋರಿ ಸಕಾಲದಲ್ಲಿ ಮಳೆ ಬಂದೀತು.