ಕಗ್ಗ ದರ್ಶನ – 34 (1)

ಕಗ್ಗ ದರ್ಶನ – 34 (1)

ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ?
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ
ಜೀರ್ಣಿಸದ ಋಣಶೇಷ - ಮಂಕುತಿಮ್ಮ
“ನಾನೀಗ ಉಣ್ಣುತ್ತಿರುವ ಊಟ ನನ್ನದೇ ಬೆವರಿನ ದುಡಿಮೆಯಿಂದ ಗಳಿಸಿದ್ದೋ? ಅಥವಾ ಈ ಊಟ ಇತರರನ್ನು ಕಣ್ಣೀರು ಹಾಕಿಸಿ ಸಂಪಾದಿಸಿದ್ದೋ?” ಈ ಪ್ರಶ್ನೆಯನ್ನು ಪ್ರತಿ ದಿನವೂ ಊಟ ಮಾಡುವಾಗ ನಿನಗೆ ನೀನೇ ಕೇಳಿಕೋ ಎಂದು ಈ ಮುಕ್ತಕದಲ್ಲಿ ನಮ್ಮನ್ನು ಬಡಿದೆಬ್ಬಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಈ ಜಗತ್ತಿನ ಜನರಿಗೆ ತಿನ್ನಲು ಏನಾದರೂ ಕೊಟ್ಟಿದ್ದೀಯಾ? ಅಥವಾ ಇತರರ ಹಸಿವು ನೀಗಲು ಏನಾದರೂ ದಾನ ಮಾಡಿದ್ದೀಯಾ? ಹಾಗೆ ಕೊಟ್ಟಿದ್ದರೆ, ಅಷ್ಟನ್ನು ಮಾತ್ರ ಉಣ್ಣುವ ಹಕ್ಕು ನಿನಗುಂಟು ಎಂದು ಅವರು ಎಚ್ಚರಿಸುತ್ತಾರೆ. ಮಿಕ್ಕೂಟ ಅಂದರೆ ಅದಕ್ಕಿಂತ ಮಿಗಿಲಾಗಿ ನೀನು ತಿಂದದ್ದೆಲ್ಲಾ “ಜೀರ್ಣಿಸದ ಋಣಶೇಷ” ಎಂಬುದು ಅವರು ನೀಡುವ ಅಂತಿಮ ಎಚ್ಚರಿಕೆ. ಆ ಋಣಶೇಷ ನಿನ್ನ ಬೆಂಬಿಡದು; ಇಂದಲ್ಲದಿದ್ದರೆ ನಾಳೆ ನೀನು ಅದನ್ನು ತೀರಿಸಲೇ ಬೇಕು ಎಂದು ಸ್ಪಷ್ಟಪಡಿಸುತ್ತಾರೆ ಡಿ.ವಿ.ಜಿ.ಯವರು
ಎಂತಹ ಮಹಾನ್ ಸತ್ಯ! ಈ ಸತ್ಯವನ್ನು ಒಪ್ಪದವರು ಮೋಸದಿಂದ, ಅಕ್ರಮದಿಂದ ಹಾಗೂ ಅನೈತಿಕವಾಗಿ ರಾಶಿರಾಶಿ ಹಣ ಲೂಟಿ ಮಾಡಿ ಶೇಖರಿಸಿಟ್ಟರು. ಉದಾಹರಣೆಗೆ, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ೨೦೦೯ರಿಂದ ೨೦೧೩-೧೪ರ ವರೆಗೆ ಐದು ವರುಷಗಳಲ್ಲಿ ೧೦೬ ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ ರೂಪಾಯಿ ೧೦,೦೦೦ ಕೋಟಿ ಲೂಟಿಯಾಗಿದೆ. ಇದು ಪುರಾವೆಗಳ ಸಹಿತ ಸಾಬೀತಾಗಿದೆ. ಇದನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದವರು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು.
ಗಮನಿಸಿ, ಒಂದೆರಡಲ್ಲ ೧೦,೦೦೦ ಕೋಟಿ ರೂಪಾಯಿ ಲೂಟಿ! ಹಾಗಾದರೆ, ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಈ ವರೆಗೆ ಅದೆಷ್ಟು ಕೋಟಿ ರೂಪಾಯಿ ಲೂಟಿಯಾಗಿದೆ? ಬೇರೆ ರಾಜ್ಯಗಳಲ್ಲಿ, ಕೇಂದ್ರ ಸರಕಾರದ ಮಂತ್ರಾಲಯಗಳಲ್ಲಿ, ಸಾವಿರಾರು ನಿಗಮ-ಮಂಡಲಿಗಳಲ್ಲಿ ಅದೆಷ್ಟು ಲಕ್ಷಲಕ್ಷ ಕೋಟಿ ರೂಪಾಯಿ ಲೂಟಿಯಾಗಿದೆ?
ಕೋಟಿಗಟ್ಟಲೆ ಜನರಿಗೆ ಅನ್ಯಾಯ ಮಾಡಿ, ಅವರ ಕಣ್ಣೀರು ಹಾಕಿಸಿ ಕೊಳ್ಳೆ ಹೊಡೆದ ಈ ಕೋಟಿಕೋಟಿ ರೂಪಾಯಿ “ಕಪ್ಪುಹಣ” ಲೂಟಿಕೋರರಿಗೆ ದಕ್ಕೀತೇ? ೮ ನವಂಬರ್ ೨೦೧೬ರಂದು ಭಾರತದಲ್ಲಿ ರೂ.೫೦೦ ಮತ್ತು ರೂ.೧೦೦೦ ಮುಖಬೆಲೆಯ ನೋಟುಗಳನ್ನು ಪ್ರಧಾನಮಂತ್ರಿ ರದ್ದು ಮಾಡಿದಾಗ, ಈ ಕಪ್ಪುಹಣದ ಬಹುಪಾಲು ಕೇವಲ ಕಾಗದದ ಕಸವಾಯಿತು, ಅಲ್ಲವೇ? ಪೆರರ ಕಣ್ಣೀರು ಹಾಕಿಸಿ, ಶೇಖರಿಸಿದ ಸಂಪತ್ತನ್ನು ದಕ್ಕಿಸಿಕೊಳ್ಳುವೆನೆಂಬ ಭ್ರಮೆಯಲ್ಲಿ ಇರುವವರು ಇನ್ನಾದರೂ “ಆ ಸಂಪತ್ತು ಜೀರ್ಣಿಸದ ಋಣಶೇಷ” ಎಂಬ ಮಹಾನ್ ಸತ್ಯಕ್ಕೆ ಶರಣಾಗಲಿ.