ಕಗ್ಗ ದರ್ಶನ – 35 (2)

ಕಗ್ಗ ದರ್ಶನ – 35 (2)

ನಾಳೆಯೊಂದಿಹುದು ನಿನ್ನೆಯವೊಲೆ ಬಾಳಿನಲಿ
ಬೀಳಾಯ್ತು ನಿನ್ನೆಯದೆಂದಳುವುದೇಕೆ?
ಮೇಲು ಮಾಡಲ್ಕಂದು ಸಮಯವದಕಾಣೆಯೇಂ
ಪಾಳೊಂದುಮಿಲ್ಲವೆಲೊ – ಮರುಳ ಮುನಿಯ
ನಿನ್ನೆ ಮುಗಿದಿದೆ. ಆದರೆ ನಾಳೆ ಕಾದಿದೆ ಎಂಬುದು ನೆನಪಿರಲಿ. ಬಾಳಿನಲ್ಲಿ ನಿನ್ನೆಯ ದಿನ ಹಾಳಾಗಿ ಹೋಯಿತು ಎಂದು ಅಳುವುದೇಕೆ? ಅದನು ಮೇಲು ಮಾಡಲಿಕ್ಕೆ, ಅಂದರೆ ಅದರಿಂದ ಒಳಿತು ಮಾಡಲಿಕ್ಕೆ, ಸೂಕ್ತ ಸಮಯಕ್ಕಾಗಿ ವಿಧಿ ಕಾಯುತ್ತಿದೆ ಎಂಬುದು ನಿನಗೆ ಕಾಣಿಸುತ್ತಿಲ್ಲವೇ? ಈ ಜಗತ್ತಿನಲ್ಲಿ ಹಾಳು ಎಂಬುದು ಯಾವುದೂ ಇಲ್ಲ ಎಂದು ಈ ಮುಕ್ತಕದಲ್ಲಿ ತಿಳಿಸುವ ಡಿವಿಜಿಯವರು ನಮ್ಮನ್ನು ಗಹನವಾದ ಚಿಂತನೆಗೆ ಒಡ್ಡುತ್ತಾರೆ.
೨೦೧೭ಕ್ಕೆ ಕಾಲಿಟ್ಟ ಈ ಹೊತ್ತಿನಲ್ಲಿ ೨೦೧೬ನೇ ವರುಷವೇ ಕಳೆದು ಹೋಯಿತೆಂದು ನಾವು ಚಿಂತಿಸಬೇಕಾಗಿಲ್ಲ. ಒಳ್ಳೆಯ ಕೆಲಸಗಳನ್ನು ಆರಂಭಿಸಲು ಯಾವುದೇ ದಿನ ಸೂಕ್ತ. ಈ ಕ್ಷಣವೇ ಸುಮುಹೂರ್ತ. ಪ್ರತಿ ದಿನದ ನಡಿಗೆ ಅಥವಾ ವ್ಯಾಯಾಮ ಇಂದೇ ಶುರು ಮಾಡೋಣ. ನಾಳೆಗೆ ಮುಂದೂಡಿದರೆ, ನಮ್ಮ ಆರೋಗ್ಯ ಸುಧಾರಿಸುವ ಕಾಯಕವನ್ನೇ ಒಂದು ದಿನ ತಡ ಮಾಡಿದಂತೆ, ಅಲ್ಲವೇ? ಸಮುದಾಯದ ಕೆಲಸಗಳಿಗೂ ಇದೇ ನಿಯಮ ಅನ್ವಯ. ನಮ್ಮೂರನ್ನು ಅಥವಾ ನಮ್ಮ ಬೀದಿಯನ್ನು ಸ್ವಚ್ಛವಾಗಿಡುವ ಕೆಲಸ. ಇದಕ್ಕಾಗಿ ಮನೆಮನೆಯವರನ್ನು ವಠಾರ ಸ್ವಚ್ಛವಾಗಿಡಲು ಆಗ್ರಹಿಸುವುದು, ವಿದ್ಯಾರ್ಥಿಗಳನ್ನು ಹುರಿದುಂಬಿಸುವುದು, ಸಂಘಸಂಸ್ಥೆಗಳ ಸಹಕಾರದಿಂದ ಸ್ವಚ್ಛತಾ ಆಂದೋಲನ ಮುನ್ನಡೆಸುವುದು – ಇಂತಹ ಜನಪರ ಕೆಲಸಗಳನ್ನು ಯಾರೂ ಸಂಘಟಿಸಬಹುದು. ಕಳೆದ ವರುಷ ಇದನ್ನು  ಮಾಡಲಿಲ್ಲ ಎಂಬ ನಿರಾಶೆ ಬೇಡ. ಈ ವರುಷವಾದರೂ ಇದನ್ನು ಮಾಡೋಣ ಎಂಬ ಹುಮ್ಮಸ್ಸು ಬೇಕು.
೮ ನವಂಬರ್ ೨೦೧೬ರಂದು ರೂ.೫೦೦ ಮತ್ತು ರೂ.೧,೦೦೦ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ, ನಮ್ಮ ದೇಶದಲ್ಲಿ ಕಡಿಮೆ ಮೌಲ್ಯದ ನೋಟುಗಳಿಗಾಗಿ ಜನರು ಕಾಯಬೇಕಾಯಿತು. ಬ್ಯಾಂಕಿನ ಬ್ರಾಂಚುಗಳಲ್ಲಿ ಹಾಗೂ ಎಟಿಎಂಗಳಲ್ಲಿ ತಮ್ಮದೇ ಹಣ ಪಡೆಯಲಿಕ್ಕಾಗಿ ಸರತಿಸಾಲಿನಲ್ಲಿ ಸಾವಿರಾರು ಜನರು ನಿಲ್ಲಬೇಕಾಯಿತು. ಇದೆಲ್ಲ ಬೇಕಾಗಿರಲಿಲ್ಲ; ಇದರಿಂದ ತೊಂದರೆಯಾಯಿತು ಎಂದು ಒಮ್ಮೆ ಅನಿಸಿತು. ಆದರೆ “ಹಾಳು ಎಂಬುದು ಇಲ್ಲ” ಎಂಬುದು ಈ ಸನ್ನಿವೇಶದಲ್ಲಿಯೂ ಸಾಬೀತಾಯಿತು. ಇದರಿಂದಾಗಿ, ಈ ವರೆಗೆ ಬ್ಯಾಂಕಿಗೆ ಜಮೆಯಾಗದಿದ್ದ ಕೋಟಿಗಟ್ಟಲೆ ರೂಪಾಯಿ ಹಣ ಬ್ಯಾಂಕುಗಳಿಗೆ ಬಂತು. ಈ ಅಗಾಧ ಹಣ ಬಳಸಿ, ಜನಸಾಮಾನ್ಯರಿಗೆ ಮನೆ ಕಟ್ಟಲು ಕಡಿಮೆ ಬಡ್ಡಿಯ ಸಾಲ ನೀಡುವುದಾಗಿ ಕೆಲವು ಬ್ಯಾಂಕುಗಳು ಈಗಾಗಲೇ ಘೋಷಿಸಿವೆ. ಅಂದರೆ, ಹಾಳು ಎಂದು ತೋರಿದ ಕ್ರಮದಿಂದಾಗಿ ಸೂಕ್ತ ಸಮಯ ಬಂದಾಗ ಒಳಿತಾಗಿದೆ, ಅಲ್ಲವೇ?