ಕಗ್ಗ ದರ್ಶನ – 48 (2)

ಕಗ್ಗ ದರ್ಶನ – 48 (2)

ಜೀವಿತವೆ ನಾಟಕವೊ ಜೀವವೇ ಸೂತ್ರಧರ
ನಾವು ನೀವವರೆಲ್ಲ ಪಾತ್ರಗಳು ವಿವಿಧ
ಭೂವಿಲಾಸವೆ ರಂಗ ಮನುಜ ಕಥೆಯೇ ದೃಶ್ಯ
ದೇವನಾ ಲೀಲೆಯಿದು – ಮರುಳ ಮುನಿಯ
ನಮ್ಮ ಜೀವನವೇ ಒಂದು ನಾಟಕ. ನಮ್ಮ ಜೀವವೇ ಇದರ ಸೂತ್ರಧಾರ. ಈ ನಾಟಕದಲ್ಲಿ ನಾವು, ನೀವು ಮತ್ತು ಇತರರೆಲ್ಲರೂ ವಿವಿಧ ಪಾತ್ರಧಾರಿಗಳು. ಭೂಮಿಯ ವಿಲಾಸವೇ ರಂಗಮಂದಿರವಾದರೆ, ಪ್ರತಿಯೊಬ್ಬ ಮನುಷ್ಯನ ಕಥೆಯೂ ಈ ನಾಟಕದ ಒಂದು ದೃಶ್ಯ. ಇವೆಲ್ಲವೂ ದೇವನ ಲೀಲೆ ಎಂದು ಮಾನ್ಯ ಡಿವಿಜಿಯವರು ಚಿತ್ರಿಸುತ್ತಾರೆ.
ಜನಸಾಮಾನ್ಯರ ಬದುಕು ಹಾಗಿರಲಿ. ಮಾನವ ಜನಾಂಗಕ್ಕೆ ಹೊಸ ದಿಕ್ಕು ತೋರಿಸಿದ, ಜಗತ್ತಿನ ಚರಿತ್ರೆಯನ್ನೇ ಬದಲಾಯಿಸಿದ ಕೆಲವು ಮಹಾನ್ ವ್ಯಕ್ತಿಗಳನ್ನು ನೆನೆಯೋಣ. ವಿಶ್ವವಿಖ್ಯಾತ ತತ್ವಶಾಸ್ತ್ರಜ್ನ ಸಾಕ್ರೆಟಿಸ್ ಹೊಸ ಚಿಂತನೆಗಳನ್ನು ನೀಡಿದವರು; ಅವರನ್ನು ಧರ್ಮವಿರೋಧಿ ಎಂದು ಪರಿಗಣಿಸಿ, ಸೆರೆಮನೆಯಲ್ಲಿ ವಿಷ ಕುಡಿಸಿ ವಧಿಸಲಾಯಿತು. ರೋಮನ್ ಸಾಮ್ರಾಜ್ಯದ ಅಧಿಪತಿ ಜೂಲಿಯಸ್ ಸೀಸರ್ ಮಹಾ ಪರಾಕ್ರಮಿ; ಆತ ತನ್ನ ಬಂಟ ಮಾರ್ಕಸ್ ಜ್ಯೂನಿಯಸ್ ಬ್ರೂಟಸನಿಂದ ರಾಜಸಭೆಯಲ್ಲೇ ಹತನಾದ. ಕೊಲಂಬಸ್ ನೌಕೆಯಲ್ಲಿ ಸಾಗರಯಾನ ಆರಂಭಿಸಿದ್ದು ಏಷ್ಯಾ ಖಂಡ ತಲಪಲಿಕ್ಕಾಗಿ; ಆದರೆ ಆತ ೬ ಸಪ್ಟಂಬರ್ ೧೪೯೫ರಂದು ತಲಪಿದ್ದು ವೆಸ್ಟ್ ಇಂಡೀಸಿನ ಸಾನ್ಸಾಲ್ವಡಾರ್ ದ್ವೀಪವನ್ನು; ಮುಂದೆ ಇದುವೇ ಅಮೇರಿಕಾ ಖಂಡದ ಪತ್ತೆಗೆ ನಾಂದಿಯಾಯಿತು. ೧ ಜನವರಿ ೧೮೬೩ರಲ್ಲಿ ಅಮೇರಿಕಾದಲ್ಲಿ ಗುಲಾಮಗಿರಿ ರದ್ದು ಪಡಿಸಿದ ಖ್ಯಾತಿ ಅಧ್ಯಕ್ಷ ಅಬ್ರಹಾಂ ಲಿಂಕನ್ನರದು; ಅವರನ್ನು ೧೫ ಎಪ್ರಿಲ್ ೧೮೬೫ರಲ್ಲಿ ವಾಷಿಂಗ್ಟನಿನ ಫೋರ್ಡ್ಸ್ ಥಿಯೇಟರಿನಲ್ಲಿ ಕೊಲೆ ಮಾಡಲಾಯಿತು. ಅಮೇರಿಕಾದ ಸುಪ್ರಸಿದ್ಧ ಅಧ್ಯಕ್ಷ ಜಾನ್.ಎಫ್. ಕೆನೆಡಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಾರ್ಟಿನ್ ಲೂಥರ್ ಕಿಂಗ್ – ಇಬ್ಬರೂ ಕೊಲೆಗಡುಕರ ಗುಂಡಿಗೆ ಬಲಿಯಾದರು. ಏಸುಕ್ರಿಸ್ತನಂತಹ ಮಹಾನ್ ಶಾಂತಿದೂತರನ್ನೇ ಶಿಲುಬೆಗೇರಿಸಲಾಯಿತು. ಕೋಟಿಗಟ್ಟಲೆ ಭಾರತೀಯರಿಗೆ ಆತ್ಮವಿಶ್ವಾಸ ತುಂಬಿ, ಭಾರತದ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿ, ಭಾರತಕ್ಕೆ ಸ್ವಾತಂತ್ರ್ಯ ತಂದಿತ್ತ ಮಹಾತ್ಮ ಗಾಂಧಿಯವರೂ ೩೦ ಜನವರಿ ೧೯೪೮ರಂದು ಗುಂಡೇಟಿಗೆ ಬಲಿಯಾದರು. ಇವರೆಲ್ಲರ ಬದುಕನ್ನು ಅವಲೋಕಿಸಿದಾಗ, ಈ ಮುಕ್ತಕದ ಸಂದೇಶ ಸ್ಪಷ್ಟವಾಗುತ್ತದೆ: ಭೂಮಿಯ ರಂಗಮಂದಿರದಲ್ಲಿ ಕೋಟಿಗಟ್ಟಲೆ ಮನುಜರ ಕಥೆಗಳ ದೃಶ್ಯಾವಳಿಗಳ ನಿರಂತರ ನಾಟಕ ನಡೆಯುತ್ತಲೇ ಇದೆ.