'ಕಚೇರಿ ಸಲ್ಲಾಪ' - ಕಕ್ಷಿಗಾರ ಉವಾಚ

ನಿಮ್ಮಣ್ಣ ನಿಮ್ಮ ಅಪ್ಪನ ಜಾಗದಲ್ಲಿ ಮನೆ ಕಟ್ಟಿದ್ದಕ್ಕೆ ಬೇಸರವಿಲ್ಲ ಅಂತೀರಿ, ಅವರಿಗೆ ಪಾಲು ಕೊಡುವುದಕ್ಕೂ ಆಕ್ಷೇಪ ಇಲ್ಲ ಅಂತೀರಿ! ಹಾಗಿರುವಾಗ ನಿಮ್ಮ ನೋವಿಗೆ ಕಾರಣವೇನು?!
ಕಕ್ಷಿಗಾರ್ತಿ: "ಸರ್ ನಾನು ಮದುವೆಯಾದ ಮೇಲೆ ಮುಂಬೈಯಲ್ಲಿ ಸಂಸಾರ ಸಮೇತ ವಾಸವಿದ್ದೇನೆ! ನಾವು ಊರಿಗೆ ಬಂದಾಗಲೆಲ್ಲಾ ಅಪ್ಪ ಕಟ್ಟಿಸಿದ್ದ ಹಳೇ ಮನೆಗೇ ಬಂದು ಉಳಕೊಂಡು, ಮೂರ್ನಾಲ್ಕು ದಿವಸ ಇದ್ದು ವಾಪಾಸಾಗ್ತೇವೆ! ನನ್ನ ಬಾಲ್ಯದ ಸ್ನೇಹಿತರನ್ನೆಲ್ಲಾ ಭೇಟಿಯಾಗುವುದಕ್ಕೆಲ್ಲಾ ಒಳ್ಳೆಯದಾಗುತ್ತಿತ್ತು! ಆದ್ರೆ ಮೊನ್ನೆ ನಾವು ಊರಿಗೆ ಬಂದಾಗ ಅಪ್ಪ ಕಟ್ಟಿಸಿದ್ದ ಹಳೇ ಮನೆನೇ ಇಲ್ಲ ಸಾರ್! ನಮ್ಮಣ್ಣ ಆ ಮನೇನ ಪೂರ್ತಿ ಕಿತ್ತು ದೂರದ ಬೆಟ್ಟು ಗದ್ದೆಯಲ್ಲಿ ಮನೆ ಕಟ್ಟಿ ಕೂತಿದ್ದಾನೆ ಸರ್! ಅವ ಹೊಸ ಮನೆ ಕಟ್ಟಿದ್ದಕ್ಕೆ ಬೇಸರವಿಲ್ಲ! ಇದ್ದ ಒಂದು ಮನೆಯನ್ನೂ ಯಾಕೆ ಕೆಡಿಬೇಕಿತ್ತು ಸರ್?! ಕೆಡವಿದ ಮೇಲೆ ಆ ಜಾಗದಲ್ಲೇ ಮನೆ ಕಟ್ ಬಹುದಿತ್ತಲ್ಲಾ?! ದೂರ ಹೋಗಿ ಕಟ್ಟಿದ್ದಾನೆ! ಬೇರೆ ಕಡೆ ಮನೆ ಕಟ್ಟುವವ ಇದ್ದ ಮನೆ ಕೆಡವಿದ್ಯಾಕೆ ಸರ್?! ಅಂದ್ರೆ ನಾವು ಊರಿಗೆ ಬಂದ್ರೆ ಮನೆಗೆ ಬರ್ಬಾರ್ದು ಅಂತ ಅಲ್ವಾ ಸರ್?! ಊರಿಗೆ ಬಂದಾಗ ಮನೆಯಿಲ್ಲದ್ದು ನೋಡಿ ಕಣ್ಣೀರ್ ಬಂತು ಸಾರ್?! ಇಂತವ್ರೆಲ್ಲಾ ಒಳ್ಳೇದಾಗ್ತಾರಾ ಸರ್?!" (ದುಃಖ ಉಮ್ಮಳಿಸಿ ಅಳು....).
*ವಕೀಲಿ ವೃತ್ತಿಯು ಹಚ್ಚಿದ ಜ್ಯೋತಿಯು ಸಮಾಜದ ಕತ್ತಲೆಯ ಮೂಲೆ ಮೂಲೆಗೂ ತನ್ನಗ್ನಿ ದೇಹದಿಂದ ಬೆಳಕನ್ನು ಹರಿಸಿ ನಿತ್ಯ ಹೊಸ ಹೊಸತನ್ನು ತೋರಿಸುತ್ತಲೇ ಇರುತ್ತದೆ!*
- ‘ಮೌನಮುಖಿ’ ಆತ್ರಾಡಿ ಪೃಥ್ವಿರಾಜ್ ಹೆಗ್ಡೆ ,ನ್ಯಾಯವಾದಿ & ನೋಟರಿ, ಉಡುಪಿ