ಕನ್ನಡದಲ್ಲಿ ಹಿನ್ನೆಲೆ ಗಾಯಕರ ಕೊರತೆಯೆ?
ಧ್ವನಿ ಮುದ್ರಣಕ್ಕಾಗಿ ಮೊದಲು ಸಂಗೀತ ನಿರ್ದೇಶಕರು ಟ್ರ್ಯಾಕ್ ಸಿಂಗರ್ ಗಳನ್ನು ಬಳಸಿಕೊಳ್ಳುತ್ತಾರೆ. ಇದು ಬಿಡುಗಡೆಯಾಗುವ ಹಾಡಿನ ಮೊದಲ ಕರಡು ಪ್ರತಿ. ಈ ಗಾಯಕರು ಕನ್ನಡಿಗರೇ ಆಗಿರುವುದರಿಂದ ಅಪಭ್ರಂಶ ಆಗುವ ಸಾಧ್ಯತೆ ಕಡಿಮೆ. ಈ ಹಾಡನ್ನು ಪ್ರಸಿದ್ಧ ಗಾಯಕರಿಗೆ ಕೇಳಿಸುತ್ತಾರೆ. ನಂತರ ಈ ಹೆಸರಾನ್ವಿತ ಹಿನ್ನೆಲೆ ಗಾಯಕರು ಅದೇ ರೀತಿ ತಮ್ಮ ಧ್ವನಿಯಲ್ಲೇ ಹಾಡುತ್ತಾರೆ. ಇದು ಕೊನೆಯ ಹಾಡಿನ ಕೊನೆಯ ಆವೃತ್ತಿ. ಕೊನೆಯ ಮುದ್ರಣವನ್ನೇ ನಾವು ಕ್ಯಾಸೆಟ್ ಗಳಲ್ಲಿ ಕೇಳುವುದು.
ಈಗೀಗ ಕನ್ನಡದ ಗಂಧವೂ ಅರಿಯದ ಹಾಗೂ ಅರಿಯಲು ಎಳ್ಳಷ್ಟೂ ಆಸಕ್ತಿಯಿಲ್ಲದ ಕನ್ನಡ ಚಿತ್ರ ಹಿನ್ನೆಲೆ ಗಾಯಕರ ಸಂಖ್ಯೆ ಹೆಚ್ಚುತ್ತಿದೆ! ಹಾಗಾಗಿ ಈ ಟ್ರ್ಯಾಕ್ ಸಿಂಗರ್ ಗಳ ಬಳಕೆ ಅನಿವಾರ್ಯವಾಗಿದೆ.
ಈ ಘಟನೆ ನಡೆದಿದ್ದು 'ಪ್ರೀತ್ಸೆ ಪ್ರೀತ್ಸೆ' ಚಿತ್ರದ ಹಾಡಿನ ಧ್ವನಿ ಮುದ್ರಣ ನಡೆಯುತ್ತಿದ್ದ ಸಂದರ್ಭದಲ್ಲಿ.
ಮೊದಲು ಹೇಮಂತ್ ಎಂಬವರನ್ನು ಟ್ರ್ಯಾಕ್ ಸಿಂಗರ್ ಆಗಿ ಬಳಸಿಕೊಳ್ಳಲಾಗಿತ್ತು. ಈ ಹಾಡಿಂದಲೇ ಅವರು ಮನೆಮಾತಾದರು ಬಿಡಿ. ನಂತರ ಹಿಂದಿಯ ಪ್ರಸಿದ್ಧ ಗಾಯಕರೊಬ್ಬರನ್ನು (ಹೆಸರು ಮುಖ್ಯವಲ್ಲ) ಅಂತಿಮ ಸುತ್ತಿನ ಮುದ್ರಣಕ್ಕೆ ಬಳಸಿಕೊಳ್ಳಲಾಯಿತು.
ಆದರೆ ಈ ಎರಡೂ ಆವೃತ್ತಿಯನ್ನು ಕೇಳಿದ ಉಪೇಂದ್ರರಿಗೆ ಮೊದಲ ಹಾಡೇ ಇಷ್ಟವಾಯಿತು. ಕಾರಣ ಅದರಲ್ಲಿರುವ ಆವೇಶ, ಆವೇಗ, ಉತ್ಕಟತೆ, ಸರಿಯಾದ ಉಚ್ಛಾರಣೆ, ಮತ್ತು ಧ್ವನಿಯ ಏರಿಳಿತ (ಈ ಹಾಡನ್ನು ಇನ್ನೊಮ್ಮೆ ಕೇಳಿ ನೋಡಿ ನಿಮಗೇ ತಿಳಿಯುವುದು). ಇವೆಲ್ಲವನ್ನೂ ಯಾರಾದರೂ ಯಥಾವತ್ತಾಗಿ ನಕಲು ಹೊಡೆಯಲು ಸಾಧ್ಯವೇ ಇಲ್ಲ. ಅದಕ್ಕೆ ಉಪ್ಪಿ ಸಾರ್ ಗೆ ಆ ಮುಖ್ಯ ಗಾಯಕನ ಪ್ರಯತ್ನವೆಲ್ಲಾ ಕೃತ್ರಿಮ ಎನಿಸಿರಲೂಬಹುದು.
ಹೀಗೆ ಹೇಮಂತ್ ಟ್ರ್ಯಾಕ್ ಸಿಂಗರ್ ಹಿನ್ನೆಲೆ ಗಾಯಕರಾಗಿ ಬಡ್ತಿ ಹೊಂದಿದರು. ಒಮ್ಮೊಮ್ಮೆ ನನ್ನಲ್ಲಿ ಒಂದು ಪ್ರಶ್ನೆ ಏಳುತ್ತದೆ. ನಿಜವಾಗಿ ಯಾರೋ ಹಿಂದಿ ಗಾಯಕರ ಧ್ವನಿಯಲ್ಲಿ ಈ ಹಾಡು ಮಾರುಕಟ್ಟೆಗೆ ಬಂದರೆ ಜನರು ಈ ಮಟ್ಟಿಗೆ ಇಷ್ಟಪಡುತ್ತಿದ್ದರೆ?