ಕನ್ನಡ ನಾಡು-ನುಡಿ (೪) : ಸರ್ವಜ್ಞನ ವಚನಗಳು

ಕನ್ನಡ ನಾಡು-ನುಡಿ (೪) : ಸರ್ವಜ್ಞನ ವಚನಗಳು

*ವಚನ* ಎಂದರೆ ಮಾತು-ಹೇಳಿದ್ದು, ಹೇಳಿದ ಹಾಗೆ *ನಡೆದು ಕೊಳ್ಳುವುದು* ಎಂದು ನಾವೆಲ್ಲರೂ ತಿಳಿದ ಸಂಗತಿ. ಇನ್ನೊಂದರ್ಥದಲ್ಲಿ *ಗದ್ಯ ರೂಪವಾದ ಉಕ್ತಿಗಳು, ನೈತಿಕತೆ, ಧಾರ್ಮಿಕ ಭಾವನೆಗಳನ್ನೊಳಗೊಂಡ ನುಡಿಗಳು* ಎಂಬ ಅರ್ಥವೂ ಇದೆ.

ಧರ್ಮ ಪ್ರಾಧಾನ್ಯವಾದ ನಮ್ಮ ಭಾರತ ದೇಶದಲ್ಲಿ, *ಪಾಪ, ಪುಣ್ಯ, ಸ್ವರ್ಗ, ನರಕ, ದೇವರು, ದೈವೀಶಕ್ತಿ, ಪರಲೋಕ* ಇವುಗಳಲ್ಲಿ ನಂಬಿಕೆಯಿಟ್ಟವರು.ಗದ್ಯ ವಚನಗಳಿಗಿಂತ *ಪ್ರಾಸಬದ್ಧವಾಗಿ, ರಚನೆಯಾದ, ಅರ್ಥವತ್ತಾದ್ದೇ, ತ್ರಿಪದಿಗಳು* ಸೊಗಸಾಗಿ, ರಾಗವಾಗಿ ಹಾಡಲು ಇಷ್ಟವಾಗಿ, ಸಮಾಜದಲ್ಲಿ ನೆಲೆಯೂರಿತು. ಜನ ಮೆಚ್ಚಿ ಒಪ್ಪಿಕೊಂಡರು. ಮನಸ್ಸಿಗೆ ನಾಟುವಂತೆ, ತಿದ್ದುವಂತೆ ಈ ತ್ರಿಪದಿಗಳ ಸಾರವಿತ್ತು. 'ಅಜ್ಞಾನವೆಂಬುದು ಬೆಟ್ಟದಷ್ಟಿದ್ದರೂ, ಜ್ಞಾನ ಸಂಪಾದನೆ ಮಾಡಿ ಪರಿವರ್ತನೆ ಆದಾಗ ಮಂಜಿನಂತೆ, ಅಜ್ಞಾನ ಕರಗಿ ಹೋಗುತ್ತದೆ.

ಆ ಭಗವಂತ ಸರ್ವವ್ಯಾಪಿ,ಎಲ್ಲೆಡೆಯೂ ಇದ್ದಾನೆ.

*ಸಣ್ಣನೆಯ ಮಹಲೊಳಗೆ ನುಣ್ಣನೆಯ ಶಿಲೆಯೊಳಗೆ

ಬಣ್ಣಿಸಿ ಬರೆವ ಪಟದೊಳಗೆ ಇರುವಾತ

ತನ್ನೊಳಗೆ ಇರನೆ ಸರ್ವಜ್ಞ//

ಎಷ್ಟು ಸಾರವಿದೆ ಕೇವಲ ಮೂರು ಸಾಲುಗಳಲ್ಲಿ.

ಕಲ್ಲಿನಲಿ ದೇವರನು ಕಾಣುತಿಹರಲ್ಲ,ತನ್ನಲ್ಲೇ ಪರಮಾತ್ಮ ಅಡಕವಾಗಿದ್ದಾನೆಂದು ಅಲ್ಪಮತಿ ಮಾನವಗರಿಯದೇ?

*ಕಲ್ಲುಕಲ್ಲನೆ ಒಟ್ಟಿ ಕಲ್ಲಿನಲಿ ಮನೆಕಟ್ಟಿ

ಕಲ್ಲ ಮೇಲ್ಕಲ್ಲ ಕೊಳುವ ಮಾನವರೆಲ್ಲ

ಕಲ್ಲಿನಂತಿಹರು ಸರ್ವಜ್ಞ//*

ಬರೇ ತೋರಿಕೆಯ ,ಆಡಂಬರದ ಪೂಜೆ  ಸಲ್ಲದು. ಭಕ್ತಿ, ಶೃದ್ಧೆ, ನಿಷ್ಠೆ, ಏಕಾಗ್ರತೆ, ದೃಢತೆ, ಚಿತ್ತಶುದ್ಧಿಯಲಿ ಭಜಿಸದ, ಬಾಹ್ಯಾಚಾರಗಳಿಂದೇನು ಪ್ರಯೋಜನ,ಇವೆಲ್ಲವೂ ವ್ಯರ್ಥ.

*ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು

ಎತ್ತು ಗಾಣವನು ಹೊತ್ತು ತಾ ನಿತ್ಯದಿ

ಸುತ್ತಿ ಬಂದಂತೆ ಸರ್ವಜ್ಞ//*

ಕೆಲವು ಮಂದಿಯ ಸ್ವಭಾವ *ಬಾಯಿ ಬಿಟ್ಟರೆ ಬಣ್ಣ ಗೇಡು*ಎಂಬಂತೆ.

ಮಾತಿನಾ ಬೊಮ್ಮವು ತೂತಾದ ಮಡಕೆಯೂ

ಪಾತಕದ ನೆರೆಯ ಇವು ಮೂರು ಲೋಕದೊ

ಳೇತಕ್ಕು ಬೇಡ ಸರ್ವಜ್ಞ//

ತಾನೇ ಎಲ್ಲವನ್ನೂ ತಿಳಿದವನು ಎಂಬ ಅಹಂ ಯಾಕೆ?

ಬಲ್ಲೆನೆಂಬುವ ಮಾತು ಎಲ್ಲವೂ ಹುಸಿ ಕಾಣೊ

ಬಲ್ಲರೆ ಬಲ್ಲೆನೆನಬೇಡ ಸುಮ್ಮನಿರು

ಬಲ್ಲವನೆ ಬಲ್ಲ ಸರ್ವಜ್ಞ//

ತನ್ನನ್ನೇ ಎಲ್ಲರೂ ನೋಡಬೇಕು,ತನ್ನ ಮಾತುಗಳನ್ನೇ ಕೇಳಬೇಕು,ನಾನೇ ಎಲ್ಲರನ್ನೂ ಉದ್ಧಾರ ಮಾಡುವವ ಈ ಭಾವನೆ ಸಲ್ಲದು.

*ತನ್ನ ನೋಡಲಿ ಎಂದು ಕನ್ನಡಿಯು ಕರೆವುದೇ?

ತನ್ನಲ್ಲಿ ಜ್ಞಾನವುದಿಸಿದ ಮಹಾತ್ಮನು

ಕನ್ನಡಿಯಂತೆ ಸರ್ವಜ್ಞ//*

ಹೀಗೆ ನೂರಾರು *ತ್ರಿಪದಿ*ಗಳ ಮೂಲಕ ಜನರಿಗೆ ಉತ್ತಮ ಸಂದೇಶಗಳನ್ನು, ಜೀವನ ಮಾರ್ಗವನ್ನು ನೀಡಿದ ಸರ್ವಜ್ಞನ ತ್ರಿಪದಿಗಳು ಯಾವಕಾಲಕ್ಕೂ ಸತ್ಯಾಂಶಗಳನ್ನು ಬಿತ್ತರಿಸುವ *ತುಂಬಿದ ಕೊಡ*.

-ರತ್ನಾಭಟ್ ತಲಂಜೇರಿ

ಆಧಾರ:ಸರ್ವಜ್ಞ ಕವಿ (ಒಂದಾಣೆ ಮಾಲೆ ಪುಸ್ತಕ)