ಕನ್ನಡ ಪತ್ರಿಕಾ ಲೋಕ (ಭಾಗ ೧೨೭) - ಸೂತ್ರ

ಡಾ. ಟಿ ಆರ್ ಅನಂತರಾಮು ವಿಜ್ಞಾನ ಪ್ರತಿಷ್ಟಾನ (ರಿ.) ಬಳಗದಿಂದ ಹೊರಬರುತ್ತಿದ್ದ ಗಣಿತ-ವಿಜ್ಞಾನ ಮಾಸಿಕವೇ “ಸೂತ್ರ". ಈ ಪತ್ರಿಕೆಯ ಸಂಪಾದಕರಾಗಿದ್ದವರು ಖ್ಯಾತ ಗಣಿತ-ವಿಜ್ಞಾನ ಬರಹಗಾರರಾದ ರೋಹಿತ್ ಚಕ್ರತೀರ್ಥ ಇವರು. ಸುಧಾ/ತರಂಗ ಪತ್ರಿಕೆಯ ಆಕಾರದ ೫೨ ಪುಟಗಳು. ರಕ್ಷಾಪುಟ ಬಣ್ಣದಲ್ಲೂ, ಒಳಪುಟಗಳು ಕಪ್ಪು ಬಿಳುಪು ಮುದ್ರಣದಲ್ಲೂ ಪ್ರಕಟವಾಗುತ್ತಿದ್ದವು.
ಕನ್ನಡದಲ್ಲಿ ಗಣಿತ ಮತ್ತು ವಿಜ್ಞಾನಕ್ಕಾಗಿ ಮೀಸಲಾಗಿರುವ ಪತ್ರಿಕೆಗಳು ಬಹಳ ಕಡಿಮೆ. ಇಲ್ಲವೇ ಇಲ್ಲ ಎನ್ನಲೂ ಬಹುದು. ಈ ಕೊರತೆಯನ್ನು ನಿವಾರಿಸಲು ಹೊರ ಬಂದ ಪತ್ರಿಕೆ ‘ಸೂತ್ರ'. ಆಗಸ್ಟ್ ೨೦೨೧ರಲ್ಲಿ ಮೊದಲ ಸಂಚಿಕೆ ಹೊರ ಬಂದಿತು. ಆ ಸಮಯದಲ್ಲಿ ಪತ್ರಿಕೆಯ ಬೆಲೆ ರೂ. ೨೦.೦೦ ಆಗಿತ್ತು. ಪತ್ರಿಕೆಯಲ್ಲಿ ಜಾಹೀರಾತು ಅಬ್ಬರವಿರದೇ ಶುದ್ಧ ಮಾಹಿತಿಗಳ ಆಗರವಾಗಿತ್ತು. ಪತ್ರಿಕೆಯಲ್ಲಿ ತಿಂಗಳ ವಿಜ್ಞಾನಿ, ವಿಜ್ಞಾನಿ ಮತ್ತು ಗಣಿತಜ್ಞರ ರಸ ಪ್ರಸಂಗಗಳು, ಗಣಿತದ ಮತ್ತು ವಿಜ್ಞಾನದ ಆಟಗಳು, ಮಿದುಳಿಗೆ ಮುದ ನೀಡುವ ಪಝಲ್ ಪೇಜ್, ಬಾಲ ವಿಜ್ಞಾನ, ಕೃತಕ ಬುದ್ಧಿವಂತಿಕೆ, ಬಾನಂಗಳದ ದರ್ಶನ, ಜಗತ್ತನ್ನು ಬದಲಿಸಿದ ಜಾಡ್ಯಗಳು, ಪ್ರಶ್ನಾವಳಿಗಳು, ಬಿಟ್ ಕಾಯಿನ್ ಬಗ್ಗೆ ಮಾಹಿತಿ, ಅಸಾಧಾರಣ ಸಾಗರ ಮುಂತಾದ ಅತೀ ಅಪರೂಪದ ಮಾಹಿತಿಗಳು ಇದ್ದವು.
ಸೂತ್ರ ಪತ್ರಿಕೆಯ ಮೊದಲ ಸಂಚಿಕೆಯ ಸಂಪಾದಕೀಯದ ಕೊನೆಯಲ್ಲಿ ರೋಹಿತ್ ಚಕ್ರತೀರ್ಥ ಇವರು ಬರೆಯುತ್ತಾರೆ “ ಎಲ್ಲಿಯವರೆಗೆ ಕನ್ನಡಿಗರಿಗೆ ಜ್ಞಾನದ ಬಯಕೆ ಇರುವುದೋ, ಎಲ್ಲಿಯವರೆಗೆ ಹೊಸ-ಹೊಸದನ್ನು ಕೊಡುವ ನಮ್ಮ ಶಕ್ತಿ-ಸಂಕಲ್ಪಗಳಿಗೆ ಬಲವಿರುವುದೋ ಅಲ್ಲಿಯವರೆಗೆ ‘ಸೂತ್ರ' ನಡೆಯುತ್ತದೆ. ಗುಣಮಟ್ಟವನ್ನು ಕಾಯ್ದುಕೊಳ್ಳಲು ಅಸಾಧ್ಯವಾದ ದಿನ ಯಾತ್ರೆ ನಿಲ್ಲುತ್ತದೆ. ಅಂಥ ದಿನ ಬೇಗ ಬರಲಾರದು; ಕನ್ನಡಿಗರು ಬರಗೊಡಲಾರರು ಎಂಬ ವಿಶ್ವಾಸ ನಮ್ಮದು.” ಎಂಬ ವಾಕ್ಯಗಳನ್ನು ಬರೆದಿದ್ದರು. ಆದರೆ ಕನ್ನಡಿಗರು ಉತ್ತಮ ಮಾಹಿತಿಪೂರ್ಣ ಪತ್ರಿಕೆಯನ್ನು ಉಳಿಸಿಕೊಳ್ಳಲಾರದೇ ಹೋದರು ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಪತ್ರಿಕೆ ಭರ್ತಿ ಒಂದು ವರ್ಷ ಪ್ರಕಟವಾಗಿ ಜುಲೈ ೨೦೨೨ಕ್ಕೆ ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು. ಇದು ನಿಜಕ್ಕೂ ದುಃಖಕರವಾದ ಸಂಗತಿ.
ಕನ್ನಡ ಭಾಷೆಯಲ್ಲಿ ಸರಳವಾಗಿ ವಿಜ್ಞಾನ ಮತ್ತು ಗಣಿತದ ಮಾಹಿತಿ ನೀಡುತ್ತಿದ್ದ ಪತ್ರಿಕೆಯನ್ನು ಮುಚ್ಚಿಹೋಗಲು ಬಿಡಬಾರದಾಗಿತ್ತು. ಪತ್ರಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದ್ದವರೂ ಕೈಕೊಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಭವಿಷ್ಯದಲ್ಲಿ ಆಸಕ್ತರು ಮುಂದೆ ಬಂದು ಪತ್ರಿಕೆಯನ್ನು ಮತ್ತೆ ಪ್ರಾರಂಭ ಮಾಡಿದರೆ ವಿಜ್ಞಾನ ಮತ್ತು ಗಣಿತದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾದರೂ ಪ್ರಯೋಜನವಾದೀತು.
ಸೂತ್ರ ಪತ್ರಿಕೆ ಪ್ರಾರಂಭವಾಗುವಾಗ ೨೦ ರೂ. ಮುಖಬೆಲೆ ಇದ್ದು, ಕೊನೆಯ ಸಂಚಿಕೆಯ ವೇಳೆಗೆ ೫೦.೦೦ ರೂ. ಆಗಿತ್ತು. ಪತ್ರಿಕೆಯು ಪತ್ರಿಕಾ ಸ್ಟಾಲ್ ಗಳಲ್ಲಿ ಲಭ್ಯವಿರಲಿಲ್ಲ. ಪತ್ರಿಕೆಯು ನೋಂದಾವಣೆಗೊಂಡಿರದ ಕಾರಣ ದುಬಾರಿ ಅಂಚೆ ವೆಚ್ಚವನ್ನು ಭರಿಸಬೇಕಾಗುತ್ತಿತ್ತು. ಪತ್ರಿಕೆಯ ವಾರ್ಷಿಕ ಚಂದಾ ರೂ ೬೦೦.೦೦ ಆಗಿತ್ತು. ಪತ್ರಿಕೆಯ ಸಂಪಾದಕೀಯ ಬಳಗದಲ್ಲಿ ಡಾ. ಗಣನಾಥ ಎಸ್ ಎನ್, ಡಾ. ಬಿ ಎಸ್ ಶೈಲಜಾ, ಡಾ. ಲಕ್ಷ್ಮೀಕಾಂತ್ ರಾವ್, ರೋಹಿತ್ ವಿ ಸಾಗರ್ ಮುಂತಾದ ಮಹನೀಯರಿದ್ದರು. ಗೌರವ್ ಕೃಷ್ಣ ಇವರು ಪುಟ ವಿನ್ಯಾಸ ಮಾಡುತ್ತಿದ್ದರು. ಪತ್ರಿಕೆಯು ಬೆಂಗಳೂರಿನಲ್ಲಿರುವ ಡಾ. ಟಿ ಆರ್ ಅನಂತರಾಮು ವಿಜ್ಞಾನ ಪ್ರತಿಷ್ಟಾನದ ಕಚೇರಿ ಮೂಲಕ ಪ್ರಕಾಶಿತವಾಗುತ್ತಿತ್ತು.