ಕನ್ನಡ ಪತ್ರಿಕಾ ಲೋಕ (ಭಾಗ ೧೩೩) - ತುಷಾರ

ಕನ್ನಡ ಪತ್ರಿಕಾ ಲೋಕ (ಭಾಗ ೧೩೩) - ತುಷಾರ

ಕಳೆದ ಐದು ದಶಕಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಅಪರೂಪದ ಮಾಸಿಕ ‘ತುಷಾರ’. ಇದು ಉದಯವಾಣಿ, ತರಂಗ ಪತ್ರಿಕಾ ಬಳಗದ ಸಹೋದರಿ ಪತ್ರಿಕೆಯಾಗಿ ಜನಮನದಲ್ಲಿ ನೆಲೆ ನಿಂತಿರುವ ಪತ್ರಿಕೆ. ಕಳೆದ ೫೦ ವರ್ಷಗಳಿಂದ ಕಥೆ, ಕವನ, ವಿಶೇಷ ಲೇಖನಗಳ ರಸದೌತಣವನ್ನು ಉಣಬಡಿಸುತ್ತಿರುವ ಈ ಪತ್ರಿಕೆಯು ಮಣಿಪಾಲ ಮೀಡಿಯ ನೆಟ್ ವರ್ಕ್ ಲಿ. ಇವರ ಕೂಸು. ೧೬೪ ಪುಟಗಳನ್ನು ಹೊಂದಿರುವ ತುಷಾರ ಪತ್ರಿಕೆಯ ಒಳಪುಟಗಳಲ್ಲಿ ಕಾಲು ಭಾಗದಷ್ಟು ಪುಟಗಳು ವರ್ಣರಂಜಿತವಾಗಿಯೂ, ಮತ್ತೆ ಉಳಿದ ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣವಾಗುತ್ತಿವೆ.

ಪತ್ರಿಕೆಯ ಸಂಪಾದಕರಾಗಿ ಟಿ ಸತೀಶ್ ಯು ಪೈ ಹಾಗೂ ಕಾರ್ಯನಿರ್ವಾಹಕ ಸಂಪಾದಕರಾಗಿ ಡಾ॥ ಸಂಧ್ಯಾ ಎಸ್ ಪೈ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೨೦೨೩ರ (ಸಂಪುಟ ೫೧, ಸಂಚಿಕೆ ೭) ಇತ್ತೀಚಿನ ಸಂಚಿಕೆ. ತುಷಾರದ ಪ್ರತೀ ಸಂಚಿಕೆಯಲ್ಲಿ ೫-೬ ಕಥೆಗಳು, ಪ್ರಬಂಧಗಳು, ಕವಿತೆಗಳು, ವಿಶೇಷ ಲೇಖನಗಳು, ಕ್ರೀಡಾ ಲೇಖನ, ತಿಂಗಳ ಓದು, ರಾಶಿ ಭವಿಷ್ಯ, ಮಕ್ಕಳ ಕಥೆ ಇರುತ್ತದೆ. ಪುಟಗಳ ನಡುವೆ ನವಿರಾದ ಹಾಸ್ಯ ಚೆಲ್ಲುವ ನಗೆಹನಿಗಳು, ವ್ಯಂಗ್ಯ ಚಿತ್ರಗಳು ಇರುತ್ತವೆ. ಕೆಲವೊಮ್ಮೆ ಅಪರೂಪದ ಝೆನ್ ಕಥೆಗಳು, ಸೂಫಿ ಕಥೆಗಳು, ಓಶೋ ಕಥೆಗಳಿರುತ್ತವೆ. ವರ್ಷದಲ್ಲಿ ಒಂದು ಬಾರಿ ಪತ್ತೇದಾರಿ ಕಥೆಗಳ ವಿಶೇಷಾಂಕ, ಸಣ್ಣ ಕಥೆಗಳ ವಿಶೇಷಾಂಕ ಹೊರಬರುತ್ತದೆ. ಕರ್ನಾಟಕದ ದೇಗುಲಗಳನ್ನು ಪರಿಚಯಿಸುವ ವಿಶೇಷ ಮಾಲಿಕೆ ಹಲವಾರು ಸಮಯಗಳಿಂದ ಪ್ರಕಟವಾಗುತ್ತಿದೆ. ಪತ್ರಿಕೆಯಲ್ಲಿ ಜಾಹೀರಾತುಗಳಿಗೆ ಸ್ಥಾನ ಇದೆ.

ಪತ್ರಿಕೆಯು ಮಣಿಪಾಲದ ಪ್ರೆಸ್ ಕಾರ್ನರ್ ನಲ್ಲಿ ಕಚೇರಿಯನ್ನು ಹೊಂದಿದ್ದು, ಉದಯವಾಣಿ ಕಟ್ಟಡದಲ್ಲಿರುವ ಮುದ್ರಣಾಲಯದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಈಗಿನ ಬಿಡಿ ಪ್ರತಿ ಬೆಲೆ ರೂ ೧೫.೦೦ ಆಗಿದ್ದು ವಾರ್ಷಿಕ ಚಂದಾ ರೂ ೧೯೦.೦೦ ಆಗಿದೆ. ಪತ್ರಿಕೆಯು ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಿತವಾಗಿ ಓದುಗರ ಕೈಸೇರುತ್ತಿದೆ,