ಕನ್ನಡ ಪತ್ರಿಕಾ ಲೋಕ (ಭಾಗ ೧೪೪) - ಇದು ನಿಮ್ಮ ಮುಕುಟ

ಕನ್ನಡ ಪತ್ರಿಕಾ ಲೋಕ (ಭಾಗ ೧೪೪) - ಇದು ನಿಮ್ಮ ಮುಕುಟ

೯೦ರ ದಶಕದಲ್ಲಿ ಚುಟುಕ ಎಂಬ ಜ್ಞಾನಾಭಿವೃದ್ಧಿಯ ಪತ್ರಿಕೆ ಪ್ರಾರಂಭವಾದ ಬಳಿಕ ಅದರ ಜನಪ್ರಿಯತೆಯನ್ನು ಗಮನಿಸಿ ಅದೇ ಬಗೆಯ ಕೆಲವೊಂದು ಪತ್ರಿಕೆಗಳು ಹುಟ್ಟಿಕೊಂಡವು. ಸುದ್ದಿ ಸ್ವಾರಸ್ಯಗಳ ಚುಟುಕ, ಇದು ನಿಮ್ಮ ಮುಕುಟ ಇತ್ಯಾದಿ. ೧೯೯೬ರ ಮೇ ತಿಂಗಳಲ್ಲಿ ಪ್ರಾರಂಭವಾದ ‘ಇದು ನಿಮ್ಮ ಮುಕುಟ' ಎನ್ನುವ ಪಾಕ್ಷಿಕ ಪತ್ರಿಕೆಯು ಮಯೂರ/ತುಷಾರ ಆಕೃತಿಯಲ್ಲಿತ್ತು. ಏಕವರ್ಣದಲ್ಲಿ ೧೬ ಪುಟಗಳೊಂದಿಗೆ ಮುದ್ರಿತವಾಗುತ್ತಿದ್ದ ಈ ಪತ್ರಿಕೆ ಚಂದಾದಾರರಿಗೆ ಮಾತ್ರ ಲಭ್ಯವಿತ್ತು ಎಂದು ನನ್ನ ನೆನಪು.

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಮೇ ೧೯೯೭ರದ್ದು (ಸಂಪುಟ ೨, ಸಂಚಿಕೆ ೧). ಈ ಸಂಚಿಕೆಯಲ್ಲಿ ಮೊಹಮ್ಮದ್ ಆಲಿ ಬಗ್ಗೆ ಲೇಖನ, ಶಂಕರ್ ವೈ ಪಟೀಲ ಇವರ ಕ್ರೀಡಾ ಲೋಕ ಅಂಕಣ, ವಿಶ್ವ ಸುದ್ದಿ, ಕುತೂಹಲಕರ ಸಂಗತಿ, ಅನುಭವಿಕರ ಮಾತು, ಚಿತ್ರರಂಗ, ವಿಶೇಷ ಸುದ್ದಿ ಮೊದಲಾದ ಅಂಕಣಗಳಿವೆ. ಪ್ರತೀ ಪುಟದಲ್ಲಿ ಕ್ವಿಝ್ ಪ್ರಶ್ನಾವಳಿಗಳಿವೆ. ಇದು ಪುಟ್ಟ ಪುಸ್ತಕವಾದರೂ ಜ್ಞಾನಾಭಿವೃದ್ಧಿಯ ಪಾಕ್ಷಿಕವಾಗಿತ್ತು.

ಕ್ರಮೇಣ ಜುಲೈ ೧೯೯೭ರ ಸಂಚಿಕೆಯಿಂದ ಸಮಗ್ರ ಜ್ಞಾನಾಭಿವೃದ್ಧಿಗೆ ಮೀಸಲಾಗಿದ್ದ ಪತ್ರಿಕೆಯು ಧಾರವಾಹಿಯಾಧಾರಿತ ಮಾಸಿಕವಾಗಿ ಪರಿವರ್ತನೆಯಾಯಿತು. ಪತ್ರಕರ್ತ ನಾರಾಯಣ ಮಾಳ್ಕೋಡ್ ಅವರ ಕಾದಂಬರಿ ‘ಪ್ರೇಮದ ಸುಳಿ' ಧಾರವಾಹಿ ರೂಪದಲ್ಲಿ ಪ್ರಕಟವಾಗತೊಡಗಿತು. ಫೆಬ್ರವರಿ ೧೯೯೮ರಿಂದ ಮತ್ತೆ ಹಳೆಯ ರೂಪದ ಪತ್ರಿಕೆ ಹೊರ ಬರುತ್ತದೆ ಎಂಬ ಸುದ್ದಿಯ ಪ್ರಕಟಣೆಯನ್ನು ಸಂಪಾದಕರು ಜುಲೈ ಮತ್ತು ಆಗಸ್ಟ್ ೧೯೯೭ರ ಸಂಚಿಕೆಯಲ್ಲಿ ನೀಡಿದ್ದರು. ಆದರೆ ನಂತರದ ದಿನಗಳಲ್ಲಿ ಪತ್ರಿಕೆಯ ಪ್ರಕಟಣೆ ಅನಿವಾರ್ಯ ಕಾರಣಗಳಿಂದ ಸ್ಥಗಿತವಾಗಿರಬೇಕು ಎಂದು ನನ್ನ ಅನಿಸಿಕೆ.

ಪತ್ರಿಕೆಯ ಸಂಪಾದಕ, ಮುದ್ರಕ ಮತ್ತು ಪ್ರಕಾಶಕರಾಗಿ ನಾಗರಾಜ್ ಎಂಬವರು ಕಾರ್ಯನಿರ್ವಹಿಸುತ್ತಿದ್ದರು. ಪತ್ರಿಕೆಯು ಕಾಳಿದಾಸ ಬಡಾವಣೆ, ಬೆಂಗಳೂರಿನಿಂದ ಮುದ್ರಿತವಾಗಿ ಹೊರಬರುತ್ತಿತ್ತು. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ ೨.೦೦ ಆಗಿದ್ದು ವಾರ್ಷಿಕ ಚಂದಾ ರೂ ೨೫.೦೦ ಆಗಿತ್ತು. ಅಜೀವ ಸದಸ್ಯತ್ವ ರೂ ೬೦೦.೦೦ ಆಗಿತ್ತು.