ಕನ್ನಡ ಪತ್ರಿಕಾ ಲೋಕ (ಭಾಗ ೧೮೦) - ಸತ್ಯ ನ್ಯೂಸ್

ಕನ್ನಡ ಪತ್ರಿಕಾ ಲೋಕ (ಭಾಗ ೧೮೦) - ಸತ್ಯ ನ್ಯೂಸ್

ಪ್ರಕಾಶ್ ಪೂಜಾರಿಯವರ "ಸತ್ಯ ನ್ಯೂಸ್"

ಸಮಾಜಸೇವಕ, ರಂಗನಟ ಉಡುಪಿ ಕಾಡಬೆಟ್ಟುವಿನ ಪ್ರಕಾಶ್ ಪೂಜಾರಿಯವರ ಪಾಕ್ಷಿಕ ಪತ್ರಿಕೆಯಾಗಿದೆ "ಸತ್ಯ ನ್ಯೂಸ್". 2004 ರ ಡಿಸೆಂಬರ್ ನಲ್ಲಿ ಸತ್ಯ ನ್ಯೂಸ್ ಬಿಡುಗಡೆ ಸಮಾರಂಭ ನಡೆಯಿತು. ಹಿರಿಯ ಜನಪರ ಹೋರಾಟಗಾರ, ವಿಚಾರವಾದಿ ಸುರತ್ಕಲ್ ನ ಸಿ. ಎನ್. ಶೆಟ್ಟಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದರು. ದಸಂಸ ನಾಯಕ ಜಯನ್ ಮಲ್ಪೆ ಹಾಗೂ ಪತ್ರಕರ್ತ ಶ್ರೀರಾಮ ದಿವಾಣ ಉಪಸ್ಥಿತರಿದ್ದರು.

2004ರ ಡಿಸೆಂಬರ್ 1 - 15 ಸತ್ಯ ನ್ಯೂಸ್ ನ ಮೊದಲ ಸಂಚಿಕೆಯಾಗಿತ್ತು. ಸಂಪಾದಕ, ಪ್ರಕಾಶಕ, ಮಾಲಕ ಮತ್ತು ಮುದ್ರಕರು ಪ್ರಕಾಶ್ ಪೂಜಾರಿಯವರೇ ಆಗಿದ್ದರು. ಪತ್ರಿಕೆ ಆರಂಭವಾಗಿ ಎರಡು ತಿಂಗಳ ಬಳಿಕ ಗುರುಪ್ರಸಾದ್ ಭಟ್ ಸಂಪಾದಕರಾದರು. ಎರಡು ವರ್ಷಗಳ ಕಾಲ ಈ ಪತ್ರಿಕೆ ನಡೆದು ಬಳಿಕ ಸ್ಥಗಿತಗೊಂಡಿತು.

ಎಂಟು ಪುಟಗಳ ಟ್ಯಾಬ್ಲಾಯ್ಡ್ ಮಾದರಿಯ "ಸತ್ಯ ನ್ಯೂಸ್" ನ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿಗಳಾಗಿತ್ತು. ಅಂಬಲಪಾಡಿಯ ಅಶೋಕ್ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು.

~ ಶ್ರೀರಾಮ ದಿವಾಣ