ಕನ್ನಡ ಪತ್ರಿಕಾ ಲೋಕ (ಭಾಗ ೨೧೦) - ಥಿಯಾಸಫಿ ವಾಣಿ

ಕನ್ನಡ ಪತ್ರಿಕಾ ಲೋಕ (ಭಾಗ ೨೧೦) - ಥಿಯಾಸಫಿ ವಾಣಿ

ಕರ್ನಾಟಕ ಥಿಯಸಾಫಿಕಲ್ ಫೆಡರೇಷನ್ನಿನ ಮಾಸಪತ್ರಿಕೆ "ಥಿಯಾಸಫಿ ವಾಣಿ"

1875, ನವೆಂಬರ್ 17ರಂದು ನ್ಯೂಯಾರ್ಕ್ ನಲ್ಲಿ ಸ್ಥಾಪನೆಗೊಂಡ ಥಿಯಸಾಫಿಕಲ್ ಸೊಸೈಟಿಯ ಅಂಗ ಸಂಸ್ಥೆಯಾದ ಥಿಯಸಾಫಿಕಲ್ ಫೆಡರೇಷನ್ ಕರ್ನಾಟಕ ಘಟಕವು ಪ್ರಕಟಿಸುತ್ತಿರುವ ಮಾಸಪತ್ರಿಕೆಯಾಗಿದೆ "ಥಿಯಾಸಫಿ ವಾಣಿ".

1910ರಿಂದ ಥಿಯಸಾಫಿಕಲ್ ಫೆಡರೇಷನ್ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿದೆ. ಈ ಸಂಸ್ಥೆಯು  2008ರಲ್ಲಿ "ಥಿಯಾಸಫಿ ವಾಣಿ"ಯನ್ನು ಆರಂಭಿಸಿತು. ಈಗಲೂ ಪ್ರಕಟವಾಗುತ್ತಿದೆ. ಫೆಡರೇಷನ್ನಿನ ಕಾರ್ಯಕಾರಣಿ ಸಮಿತಿಯಲ್ಲಿ ಸಹಜವಾಗಿ ಬದಲಾವಣೆಗಳಾದಾಗ, ಮಾಸಪತ್ರಿಕೆಯನ್ನು ಮುನ್ನಡೆಸುವವರೂ ಸಹಜವಾಗಿಯೇ ಬದಲಾಗಿಕೊಂಡು ಬಂದಿದ್ದಾರೆ.

ಈ ಹಿಂದೆ ಬಿ. ವಿ. ತಿಪ್ಪೇಸ್ವಾಮಿ ಸಂಪಾದಕರಾಗಿಯೂ, ಕೆ. ಪಾರ್ವತಮ್ಮ ಸಹ ಸಂಪಾದಕರಾಗಿಯೂ, ಎಂ. ವಿ. ರುದ್ರಪ್ಪ, ಕೆ. ಮಹಾದೇವಪ್ಪ ಹಾಗೂ ಎಂ. ಎಸ್. ಶ್ರೀಧರ್ ಉಪ ಸಂಪಾದಕರಾಗಿಯೂ ಇದ್ದರು. ಈಗ  ಎಂ. ವಿ. ರುದ್ರಪ್ಪ ಸಂಪಾದಕರಾಗಿಯೂ, ಎಂ. ಎಸ್. ಶ್ರೀಧರ್ ಸಹ ಸಂಪಾದಕರಾಗಿಯೂ,  ಕೆ. ಮಹಾದೇವಪ್ಪ ಹಾಗೂ ಹೆಚ್. ಬಿ. ಪರಮೇಶ್ವರಪ್ಪ ಉಪ ಸಂಪಾದಕರಾಗಿಯೂ ಇದ್ದಾರೆ.

ಬೆಂಗಳೂರು ಬಸವನಗುಡಿಯ  ಶ್ರೀ ಕೃಷ್ಣ ರಾಜೇಂದ್ರ ರಸ್ತೆಯಲ್ಲಿರುವ ಫೆಡರೇಷನಿನ ಕಾರ್ಯಾಲಯದಲ್ಲಿಯೇ ಪತ್ರಿಕಾ ಕಚೇರಿ ಕಾರ್ಯನಿರ್ವಹಿಸುತ್ತಿರುವ ಈ ಪತ್ರಿಕೆಯ ಪ್ರಕಾಶಕರು ಎಂ. ಎಸ್ ಶ್ರೀಧರ್ ಅವರಾದರೆ, ಮುದ್ರಕರು ಎನ್. ಆರ್. ರಾಮಕೃಷ್ಣ. ಹನುಮಂತನಗರದ ಪ್ರತಿಭಾ ಪ್ರಿಂಟರ್ಸ್ ಅಂಡ್ ಪಬ್ಲಿಷ್ರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. 44 ಪುಟಗಳ " ಥಿಯಾಸಫಿ ವಾಣಿ"ಯ ಬಿಡಿ ಪ್ರತಿಯ ಬೆಲೆ ಒಂಭತ್ತು ರೂಪಾಯಿಗಳು. ವಾರ್ಷಿಕ ಚಂದಾ ವ್ಯವಸ್ಥೆಯೂ ಇದೆ.

ಪತ್ರಿಕೆಯಲ್ಲಿ ಅಧ್ಯಾತ್ಮಿಕ, ವೈಜ್ಞಾನಿಕ, ವೈಚಾರಿಕ ಲೇಖನಗಳಲ್ಲದೆ ಥಿಯಾಸಫಿಗೆ ಸಂಬಂಧಿಸಿದಂತೆ ಅನೇಕ ಮಂದಿ ಬರೆಹಗಾರರು ಬರೆದ, ಅನುವಾದಿಸಿದ ವೈವಿಧ್ಯಮಯ, ಮೌಲಿಕ ಬರೆಹಗಳು ಮತ್ತು ಫೆಡರೇಷನಿನ ವಿವಿಧ ಘಟಕಗಳ ಕಾರ್ಯಕ್ರಮಗಳ ವರದಿಗಳು ಪ್ರಕಟವಾಗುತ್ತವೆ.

~ ಶ್ರೀರಾಮ ದಿವಾಣ