ಕನ್ನಡ ಪತ್ರಿಕಾ ಲೋಕ (ಭಾಗ ೮೪) - ಆತ್ಮಧರ್ಮ

ಕನ್ನಡ, ಹಿಂದಿ, ಗುಜರಾತಿ ಭಾಷೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಸಾರವಾಗುತ್ತಿರುವ ಜೈನ ಸಮಾಜದ ಏಕೈಕ ಮಾಸ ಪತ್ರಿಕೆಯೇ ‘ಆತ್ಮಧರ್ಮ'. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಜೂನ್ ೨೦೦೩ (ಸಂಪುಟ: ೨೭ ಸಂಚಿಕೆ: ೦೫) ತಿಂಗಳ ಸಂಚಿಕೆಯಾಗಿದೆ. ಪತ್ರಿಕೆಯ ಆಕಾರ ‘ಸುಧಾ’ ಪತ್ರಿಕೆಗಿಂತ ಗಾತ್ರದಲ್ಲಿ ಸ್ವಲ್ಪ ಸಣ್ಣಗಿದ್ದು. ೨೬ ಪುಟಗಳನ್ನು ಹೊಂದಿದೆ. ಮುಖಪುಟ ಏಕವರ್ಣವಾಗಿದ್ದು, ಒಳಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ.
ಎಂ.ಬಿ. ಪಾಟೀಲ ಇವರು ಪತ್ರಿಕೆಯ ಸಂಪಾದಕರಾಗಿಯೂ, ಭಭೂತ್ ಮಲ್ ಭಂಡಾರಿ ಇವರು ಪ್ರಕಾಶಕರು ಮತ್ತು ಮುದ್ರಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೆಯ ಕಾರ್ಯಾಲಯವು ಬೆಂಗಳೂರಿನ ರಂಗಸ್ವಾಮಿಗುಡಿ ಬೀದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ಗಿರಿನಗರದಲ್ಲಿರುವ ಕೀರ್ತಿ ಪ್ರಿಂಟರ್ಸ್ ಇಲ್ಲಿ ಪ್ರತೀ ತಿಂಗಳು ಮುದ್ರಿತವಾಗುತ್ತಿದೆ.
ನಮ್ಮಲ್ಲಿರುವ ಪತ್ರಿಕೆಯ ಒಳಪುಟಗಳಲ್ಲಿ ‘ಪರಮಾಗಮಸಾರ' ಲೇಖನ, ಸಮಯಸಾರ, ಪಂಚಾಸ್ತಿಕಾಯ, ಆರು ಗುರಾಣಿಗಳು, ಚರ್ಚಾ ಕೂಟ ಹಾಗೂ ಜೈನ ಸಿದ್ಧಾಂತದ ಪ್ರಶ್ನೋತ್ತರ ಮಾಲೆಗಳಿವೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ.೨.೦೦ ಆಗಿದ್ದು ವಾರ್ಷಿಕ ಚಂದಾ ರೂ.೨೦.೦೦ ಆಗಿತ್ತು. ಅಜೀವ ಶುಲ್ಕ ರೂ ೨೦೧.೦೦ ಆಗಿದ್ದು, ಪತ್ರಿಕೆಯು ಈಗಲೂ ಮುದ್ರಣವಾಗುತ್ತಿದೆಯೇ ಎನ್ನುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ.