ಕನ್ನಡ ಪತ್ರಿಕಾ ಲೋಕ (ಭಾಗ ೯೨) - ಜನ ಸಂಪರ್ಕ

ಕನ್ನಡ ಪತ್ರಿಕಾ ಲೋಕ (ಭಾಗ ೯೨) - ಜನ ಸಂಪರ್ಕ

ಕಳೆದ ಆರು ವರ್ಷಗಳಿಂದ ಕುಂದಾಪುರ ತಾಲೂಕಿನಿಂದ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ - ‘ಜನ ಸಂಪರ್ಕ’. ಎಂ. ನಿತ್ಯಾನಂದ ಇವರು ಪತ್ರಿಕೆಯ ಸಂಪಾದಕರು. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೧೨ ಪುಟಗಳನ್ನು ಹೊಂದಿದೆ. ೮ ಪುಟಗಳು ವರ್ಣದಲ್ಲೂ, ೪ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ನವೆಂಬರ್ ೧೦, ೨೦೨೨ (ಸಂಪುಟ: ೬ ಸಂಚಿಕೆ: ೧). ಈ ಸಂಚಿಕೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಮುಖಪುಟ ಲೇಖನವಿದೆ. ಒಳಪುಟಗಳಲ್ಲಿ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ, ಪೈಲಾರು ಯಕ್ಷೋತ್ಸವ, ಹವ್ಯಾಸಿ ಯಕ್ಷರಂಗದ ಬಾಲ ಪ್ರತಿಭೆ ಶ್ರೀವತ್ಸ ಗುಡ್ದೇದಿಂಬ ಬಗ್ಗೆ ಮಾಹಿತಿ ನೀಡುವ ಲೇಖನಗಳಿವೆ.

ಪತ್ರಿಕೆಯ ಆರನೇ ವರ್ಷದ ಸಂಭ್ರಮದ ಬಗ್ಗೆ ಎಂ.ನಿತ್ಯಾನಂದ ಅವರ ಸಂಪಾದಕೀಯ ಬರಹವಿದೆ. ಪತ್ರಿಕೆಯಲ್ಲಿ ರಾಘವ್ ಪರಾಂಬಾ ಇವರು ಸಪ್ತಕ್ಷೇತ್ರ ವೈಭವ ಎಂಬ ಅಂಕಣ ಬರೆಯುತ್ತಿದ್ದಾರೆ. ವಾಸುದೇವ ಬಿ ಎಸ್, ಎ ಎಸ್ ಕಟಪಾಡಿ, ಡಾ. ಎಸ್ ಎನ್ ವಾದಿರಾಜ ಮೊದಲಾದವರು ಬರೆದ ಸೊಗಸಾದ ಲೇಖನಗಳಿವೆ. ಪತ್ರಿಕೆಯಲ್ಲಿ ಹಲವಾರು ಜಾಹೀರಾತುಗಳಿವೆ. 

ಪತ್ರಿಕೆಯು ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿ ಕಚೇರಿಯನ್ನು ಹೊಂದಿದ್ದು, ಮಂಗಳೂರಿನ ಯೆಯ್ಯಾಡಿಯಲ್ಲಿರುವ ದಿಗಂತ ಮುದ್ರಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಮುಖಬೆಲೆ ರೂ.೧೦.೦೦, ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಣವಾಗಿ ಮಾರುಕಟ್ಟೆಗೆ ಬರುತ್ತಿದೆ ಎಂಬ ಸುದ್ದಿ ಇದೆ.