ಕನ್ನಡ ಪತ್ರಿಕಾ ಲೋಕ (೨೦) - ದಾಸ ಬಂಧು

ಕನ್ನಡ ಪತ್ರಿಕಾ ಲೋಕ (೨೦) - ದಾಸ ಬಂಧು

ಭದ್ರಗಿರಿ ದಾಸ ಸಹೋದರರ "ದಾಸ ಬಂಧು"
" ದಾಸಬಂಧು" , ಭಾರತೀಯ ಸಂತ ಸಾಹಿತ್ಯ ಹಾಗೂ ಅದ್ಯಾತ್ಮ ಪ್ರಚಾರಕ್ಕಾಗಿ ಮೀಸಲಾದ ತ್ರೈಮಾಸಿಕವಾಗಿತ್ತು. ಭದ್ರಗಿರಿ ಅಚ್ಯುತ ದಾಸರು ಹಾಗೂ ಭದ್ರಗಿರಿ ಕೇಶವ ದಾಸರು ಪ್ರಧಾನ ಸಂಪಾದಕರುಗಳಾಗಿದ್ದರು. ಭದ್ರಗಿರಿ ಸರ್ವೋತ್ತಮ ಪೈ ಪ್ರಕಾಶಕರು ಮತ್ತು ಮುದ್ರಕರಾಗಿದ್ದರು.

೧೯೬೦ರಲ್ಲಿ ಆರಂಭವಾದ "ದಾಸಬಂಧು" ವಿನ ಬಿಡಿ ಸಂಚಿಕೆಯ ಬೆಲೆ ಒಂದು ರೂಪಾಯಿ ಮತ್ತು ವಾರ್ಷಿಕ ಚಂದಾ ೪ ರೂಪಾಯಿ ಆಗಿತ್ತು. 

ಶ್ರೀಪಾದ ರಾಜರು, ಸೂರದಾಸರು, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು, ವಿಜಯದಾಸರು, ಭಿಷಗ್ರತ್ನ ಪಂಡಿತ ಕಾರ್ಕಳ ಪದ್ಮನಾಭ ಪುರಾಣಿಕ, ತುಕರಾಮರು, ಕಬೀರರು, ಕವಿ ಪಿಂಬಳಕಿಯ ಪೆರುಮಾಳ್ ಜೀಯರ್, ಶ್ರೀಮತಿ ನಾಗರತ್ನ ಶ್ರೀನಿವಾಸ್, ವೈದ್ಯಗುರು ಎಂ. ಆರ್. ಭಟ್, ಕೆ. ವೆಂಕಟರಾಮಾಚಾರ್ಯ, ರಾಘವೇಂದ್ರ ಕೃಷ್ಣ ಭಟ್ಟ, ರಾಮಾನುಜರು, ವೈ. ಕೆ. ಆಚಾರ್ಯ, ಭದ್ರಗಿರಿ ಸರ್ವೋತ್ತಮ ಪೈ, ಕೀರ್ತನ ಕೇಸರಿ ಅನಂತ ಪದ್ಮನಾಭ ಭಾಗವತ್ ಮೊದಲಾದವರ ಅದ್ಯಾತ್ಮಿಕ ಸಾಹಿತ್ಯದ ಬರಹಗಳನ್ನು "ದಾಸಬಂಧು" ವಿನಲ್ಲಿ ಪ್ರಕಟಿಸಲಾಗುತ್ತಿತ್ತು.

ನೂರು ಪುಟಗಳ, ಪುಸ್ತಕ ರೂಪದಲ್ಲಿ ಬರುತ್ತಿದ್ದ "ದಾಸಬಂಧು", ಕೆಲ ವರ್ಷಗಳ ಬಳಿಕ ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು. ಈ ನಡುವೆ, ಭದ್ರಗಿರಿ ಕೇಶವ ದಾಸರು "ದಾಸವಾಣಿ" ಎಂಬ ದೈನಿಕವನ್ನು ಆರಂಭಿಸಿ, ಬಳಿಕ ಮಾಸಿಕವಾಗಿ ಬದಲಾಯಿಸಿ ನಡೆಸಿಕೊಂಡು ಬಂದದ್ದೂ ಇದೆ.

~ ಶ್ರೀರಾಮ ದಿವಾಣ, ಉಡುಪಿ

ಸೂಚನೆ: ‘ದಾಸ ಬಂಧು' ಪತ್ರಿಕೆಯು ಹಳೆಯದಾಗಿರುವುದರಿಂದ ಅದರ ಮುಖಪುಟ ಕಳೆದುಹೋಗಿದೆ. ಯಾರ ಬಳಿಯಲ್ಲಾದರೂ ಇದರ ಪ್ರತಿ ಇದ್ದರೆ ನಮ್ಮ ಗಮನಕ್ಕೆ ತರಬೇಕಾಗಿ ವಿನಂತಿ.