ಕನ್ನಡ ಭಾಷೆಯ ರುಚಿಯನ್ನು ಸವಿದವನೇ ಬಲ್ಲ…

ಕನ್ನಡ ಭಾಷೆಯ ರುಚಿಯನ್ನು ಸವಿದವನೇ ಬಲ್ಲ…

ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹಾಗೆ ನೋಡ ಹೋದರೆ ಕನ್ನಡಿಗರಿಗೆ ವರ್ಷದ ೩೬೫ ದಿನಗಳೂ ರಾಜ್ಯೋತ್ಸವವೇ. ಆದರೆ ನವೆಂಬರ್ ೧ ಕರ್ನಾಟಕ (ಮೈಸೂರು) ರಾಜ್ಯವು ಏಕೀಕರಣಗೊಂಡ ದಿನ. ೧೯೫೬ ನವೆಂಬರ್ ೧ ರಂದು ಮೈಸೂರು ರಾಜ್ಯ ಎಂದು ನಾಮಕರಣಗೊಂಡಿತು. ನಂತರದ ದಿನಗಳಲ್ಲಿ ೧೯೭೩ರಲ್ಲಿ ಕರ್ನಾಟಕ ರಾಜ್ಯ ಎಂದು ಮರುನಾಮಕರಣವಾಯಿತು. ಕರ್ನಾಟಕವು ರಾಜ್ಯವು ಯಾವ ದೃಷ್ಟಿಯಿಂದ ನೋಡಿದರೂ ಸಂಪದ್ಭರಿತ ರಾಜ್ಯ. ಭೌಗೋಳಿಕವಾಗಿ ಅಥವಾ ಪ್ರಾದೇಶಿಕವಾಗಿ ರಾಜ್ಯವು ಅಪಾರ ಖ್ಯಾತಿ ಹೊಂದಿದೆ. ನಾನು ಇಲ್ಲಿ ಕನ್ನಡ ಭಾಷೆಯು ನನ್ನ ಜೀವನದಲ್ಲಿ ವಹಿಸಿದ ಪಾತ್ರದ ಬಗ್ಗೆ ಸ್ವಲ್ಪ ಬರೆಯಲಿರುವೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ, ಜನರು, ಭಾಷೆ, ಸಂಸ್ಕೃತಿಯ ಬಗ್ಗೆ ಮಾಹಿತಿಯನ್ನು ಹಂತ ಹಂತವಾಗಿ ನಿಮ್ಮ ಜೊತೆ ಹಂಚಿಕೊಳ್ಳುತ್ತಾ ಹೋಗುವೆ.

ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿದ್ದು ಕನ್ನಡ ಮಾಧ್ಯಮದಲ್ಲಿ. ಆದರೆ ನಾನು ಪದವಿ ಪೂರ್ವ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ವಿಜ್ಞಾನವನ್ನು ನನ್ನ ಆಯ್ಕೆಯಾಗಿ ತೆಗೆದುಕೊಂಡಿದ್ದರಿಂದ ನನ್ನ ಕಲಿಕಾ ಮಾಧ್ಯಮ ಅನಿವಾರ್ಯವಾಗಿ ಇಂಗ್ಲಿಷ್ ಭಾಷೆಗೆ ಬದಲಾಯಿತು. ನಾನು ಅಂದು (೧೯೯೧) ಕಲಿಯುವ ಸಂದರ್ಭದಲ್ಲಿ ಯಾವುದೇ ಮೊಬೈಲ್ ಅಥವಾ ಅಂತರ್ಜಾಲದ ಪರಿಚಯ ನಮಗಿನ್ನೂ ಆಗಿರಲಿಲ್ಲ. ಆ ಸಮಯ ತರಗತಿಯಲ್ಲಿ ನಡೆಯುವ ಪಾಠಗಳು ನನಗೆ ಕಬ್ಬಿಣದ ಕಡಲೆಯಾಗಿದ್ದವು. ಕನ್ನಡ ಮಾಧ್ಯಮದಿಂದ ಬಂದ ನನಗೆ ಆಂಗ್ಲ ಭಾಷೆಯ ಪದಗಳು ಯಾವುದೂ ತಲೆಗೆ ಹೋಗುತ್ತಿರಲಿಲ್ಲ. ಈ ಕಾರಣದಿಂದ ನಾನು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣನಾದೆ. ನಂತರದ ದಿನಗಳಲ್ಲಿ ಹಾಗೂ ಹೀಗೂ ಮಾಡಿ ಪದವಿ ತಲುಪಿದೆ. ಪದವಿ ನಂತರದ ದಿನಗಳಲ್ಲಿ ಗಣಕ ಯಂತ್ರ (ಕಂಪ್ಯೂಟರ್) ದ ಜ್ಞಾನ ಅಗತ್ಯವೆಂದು ಒಂದು ಡಿಪ್ಲೋಮಾ ತರಗತಿಗೆ ಸೇರಿದ್ದೆ. ಆ ತರಗತಿಗಳು ಸಾಯಂಕಾಲ ಮಾತ್ರ ಇರುತ್ತಿದ್ದುವು. ಅದಕ್ಕಾಗಿ ನಾನು ಸುಜಾತ ಸಂಚಿಕೆ ಎಂಬ ಒಂದು ಕನ್ನಡ ಕೃಷಿ ಮಾಸ ಪತ್ರಿಕೆ ಸೇರಿದೆ. 

ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮದ ಬಗ್ಗೆ, ಲೇಖನ, ಕಥೆ ಬರೆಯುವ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ಗೆಳತಿಯೊಬ್ಬಳು ಒಂದು ದಿನ ನನಗೆ ‘ಬರಹ’ ಎಂಬ ಕನ್ನಡ ತಂತ್ರಾಂಶದ ಬಗ್ಗೆ ಪರಿಚಯ ಮಾಡಿಕೊಟ್ಟಳು. ಅದು ನನಗೆ ಒಂದು ಕನ್ನಡ ಬರಹಗಳ ವಿಶಾಲ ಜಗತ್ತನ್ನು ಪರಿಚಯಿಸಿತು. ನಾನು ಅದರಲ್ಲೇ ಲೇಖನಗಳನ್ನು ಬರೆಯಲು ಪ್ರಾರಂಭಿಸಿದೆ. ಹಲವಾರು ಕನ್ನಡ ಪತ್ರಿಕೆಗಳಲ್ಲಿ ನನ್ನ ಬರಹಗಳು ಬೆಳಕು ಕಂಡವು. ಕನ್ನಡ ಭಾಷೆಯಲ್ಲಿ ತಕ್ಕಮಟ್ಟಿಗೆ ಬರೆಯುತ್ತಿದ್ದುದರಿಂದ ಈ ಅವಕಾಶಗಳು ನನಗೆ ಬಾಗಿಲು ತೆರೆದವು. ಈ ವರ್ಷದ ಕೊರೋನಾ ಮಹಾಮಾರಿ ನನ್ನ ಪತ್ರಿಕೆಯ ಕೆಲಸಕ್ಕೂ ಸಂಚಕಾರ ತಂದಿತು. ಪತ್ರಿಕೆ ಮುಚ್ಚಿತು. ಆ ಸಮಯ ಪರಿಚಯವಾದದ್ದೇ ಸಂಪದ.ನೆಟ್ ಎಂಬ ಜಾಲ ತಾಣ.

ಸಂಪದ ಜಾಲ ತಾಣವು ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಕನ್ನಡ ಭಾಷೆಯ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದೆ. ಸುಮಾರು ಐವತ್ತು ಸಾವಿರದಷ್ಟು ವಿವಿಧ ಲೇಖಕರ ಬರಹಗಳು ಸಂಪದದಲ್ಲಿವೆ. ಇಲ್ಲಿ ಲೇಖಕರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಕನ್ನಡ ಭಾಷೆಯಲ್ಲಿ ಬರೆದ ಯಾವುದೇ ವಿಷಯಗಳ ಲೇಖನ ಬರೆಯ ಬಹುದು. ನಾನು ಈಗ ಸಂಪದಕ್ಕೆ ನಿರಂತರ ಬರೆಯುತ್ತಿದ್ದೇನೆ. ಕನ್ನಡ ಭಾಷೆಯ ಬಗ್ಗೆ ತಕ್ಕಷ್ಟು ಹಿಡಿತ ಮತ್ತು ಪರಿಚಯ ಇರುವುದರಿಂದ ಕನ್ನಡ ಭಾಷೆ ನನಗೆ ಅನ್ನ ಕೊಡುತ್ತಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಕಳೆದ ೪ -೫ ತಿಂಗಳಿಂದ ಸಂಪದದಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೂ ಅಧಿಕ ಲೇಖನಗಳನ್ನು ಬರೆದಿರುವೆ. ಸಂಪದ ಜಾಲತಾಣದ ಬಗ್ಗೆ ಇನ್ನಷ್ಟು ಹೇಳುವುದಾದರೆ, ಇದರಲ್ಲಿ ಬರುವ ಲೇಖನಗಳು ಬಹಳಷ್ಟು ಮಾಹಿತಿ ಪೂರ್ಣವಾಗಿಯೂ, ವ್ಯಾಕರಣ ಶುದ್ಧವಾಗಿಯೂ ಇರುತ್ತದೆ. ನಾನು ಕನ್ನಡ ಅಕ್ಷರಗಳನ್ನೇ ಇಲ್ಲಿನ ಲೇಖನದಲ್ಲಿ ಬಳಸುತ್ತಾ ಬಂದಿದ್ದೇನೆ. ಈ ಮೂಲಕ ಕನ್ನಡ ಭಾಷೆಯ ಜೊತೆ ಕನ್ನಡ ಅಕ್ಷರಗಳೂ ಓದುಗರಿಗೆ ಪರಿಚಯವಾಗುತ್ತದೆ ಎಂಬ ನಂಬಿಕೆ ನನ್ನದು. ದಕ್ಷಿಣ ಭಾರತದ ಭಾಷೆಗಳಲ್ಲಿ  ತನ್ನವೇ ಆದ ಅಂಕಿಗಳನ್ನು  ಹೊಂದಿರುವ ಏಕೈಕ ಭಾಷೆ ಎಂದರೆ ಕನ್ನಡ. ಈ ಬಗ್ಗೆ ನಾವು ಹೆಮ್ಮೆ ಪಡಲೇ ಬೇಕು. ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಭಾಷೆಗಳು ಹಲವಾರು. ಆದರೂ ಕನ್ನಡದ ಬೆಳವಣಿಗೆ ಸಾಧ್ಯ. ಏಕೆಂದರೆ ಬಹುತೇಕ ಪ್ರಾದೇಶಿಕ ಭಾಷೆಗಳಿಗೆ ಲಿಪಿ ಇಲ್ಲ (ಇತ್ತೀಚೆಗೆ ತುಳು ಭಾಷೆಯ ಲಿಪಿ ಮುನ್ನಲೆಗೆ ಬರುತ್ತಿದೆ) . ಕೊಂಕಣಿ, ಬ್ಯಾರಿ, ಕೊಡವ ಹೀಗೆ ಹಲವಾರು ಪ್ರಾದೇಶಿಕ ಭಾಷೆಗಳನ್ನು ಬರೆಯಲು ಕನ್ನಡ ಲಿಪಿಯನ್ನೇ ಬಳಸುತ್ತಾರೆ. ಆದುದರಿಂದ ಕನ್ನಡ ಭಾಷೆಯ ಬೆಳವಣಿಗೆಯೂ ಆಗುತ್ತಿದೆ. 

ಕನ್ನಡ ಭಾಷೆ ಸಂಕಷ್ಟದಲ್ಲಿದೆ ಎಂಬ ಕೂಗು ಸದಾ ಕಾಲ ಕೇಳಿ ಬರುತ್ತಿದೆ. ಆದರೂ ಈಗಲೂ ಕನ್ನಡ ಭಾಷೆಯ ನೂರಾರು ಚಿತ್ರಗಳು ಬಿಡುಗಡೆಯಾಗುತ್ತಿವೆ. ನೂರಾರು ಕನ್ನಡ ಪುಸ್ತಕಗಳು, ಹಾಡುಗಳು, ಕವನಗಳು, ಧಾರವಾಹಿಗಳು ಹೊರ ಬರುತ್ತಲೇ ಇವೆ. ಕನ್ನಡದ ಕಂಪು ಹರಡುತ್ತಲೇ ಇದೆ. ಕನ್ನಡ ಭಾಷೆ, ನಾಡು ನುಡಿಗೆ ನಿಮ್ಮಿಂದ ಏನು ಕೊಡುಗೆ ನೀಡಲು ಸಾಧ್ಯವೋ ಅದನ್ನು ನೀಡಿ. ಕನ್ನಡ ಭಾಷೆಯನ್ನೇ ಮಾತನಾಡಿ. ಹಾಗೆಂದು ಬೇರೆ ಭಾಷೆಯನ್ನು ವಿರೋಧಿಸಬೇಡಿ. ಪರಭಾಷಿಕರು ಕರ್ನಾಟಕದಲ್ಲಿ ವಾಸ ಮಾಡುತ್ತಿದ್ದರೆ ನಮ್ಮ ಭಾಷೆಯ ಸೊಗಡನ್ನು ತಿಳಿಸಿ, ಅವರಲ್ಲಿ ಕನ್ನಡವನ್ನು ಕಲಿಯುವ ಆಸಕ್ತಿಯನ್ನು ಬೆಳೆಸೋಣ..     

ರಾಜ್ಯೋತ್ಸವದ ಸಂದರ್ಭದಲ್ಲಿ ಹಲವಾರು ಸಂಘ ಸಂಸ್ಥೆಗಳು ಆಸಕ್ತಿಯಿಂದ ನಮ್ಮ ರಾಜ್ಯದ ನಾಡು ನುಡಿಗಳ ಬಗ್ಗೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ತಾಯಿ ಭುವನೇಶ್ವರಿಯನ್ನು ಭಯ ಭಕ್ತಿಯಿಂದ ಪೂಜಿಸುತ್ತಾರೆ. ಕನ್ನಡಕ್ಕೆ ದುಡಿದವರನ್ನು ಗುರುತಿಸಿ ಸನ್ಮಾನ ಮಾಡುತ್ತಾರೆ. ಇದೆಲ್ಲವೂ ಪ್ರಶಂಸನೀಯ. ಆದರೆ ಕೆಲವು ಮಂದಿಗೆ ನವೆಂಬರ್ ಬಂತು ಎಂದ ಕೂಡಲೇ ಕನ್ನಡದ ನೆನಪಾಗುತ್ತದೆ. ಅದರ ಹೆಸರಿನಲ್ಲಿ ಚಂದಾ ಎತ್ತುತ್ತಾರೆ. ಏನೇನೋ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಬೇಸರದ ಸಂಗತಿ ಎಂದರೆ ನೈಜ ಕನ್ನಡವನ್ನು ಮರೆತೇ ಬಿಡುತ್ತಾರೆ. ಅವರ ಹೊಟ್ಟೆಪಾಡನ್ನೇ ನೋಡಿಕೊಳ್ಳುತ್ತಾರೆ. ಮುಂಬರುವ ದಿನಗಳು ಹಾಗೆ ಆಗದಿರಲಿ. ಕನ್ನಡ ಭಾಷೆಗೆ, ನಾಡು ನುಡಿಗೆ ಕೆಲಸ ಮಾಡಿದವರನ್ನು (ಅವರು ಅನ್ಯ ಭಾಷಿಕರೇ ಆಗಿರಲಿ) ಗುರುತಿಸಿ, ಗೌರವಿಸೋಣ. ಭಾಷೆಯ ವಿಷಯದಲ್ಲಿ ಅನಗತ್ಯ ವಿವಾದ, ಗಲಾಟೆ ಮಾಡಿಕೊಳ್ಳುವುದು ಬೇಡ. ಸೌಹಾರ್ದದಿಂದ ಬದುಕೋಣ.

ಕೊನೇ ಮಾತು: ಜಯ ಭಾರತ ಜನನಿಯ ತನುಜಾತೇ, ಜಯಹೇ ಕರ್ನಾಟಕ ಮಾತೆ.. ಇದು ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ಅವರು ೧೯೨೪ರಲ್ಲಿ ಬರೆದ ಕವಿತೆ. ಇದನ್ನು ಕುವೆಂಪು ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ (೨೦೦೪) ಕರ್ನಾಟಕ ರಾಜ್ಯದ ನಾಡಗೀತೆಯಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಈ ನಾಡಗೀತೆಯೂ ವಿವಾದಗಳಿಂದ ಹೊರತಾಗಿರಲಿಲ್ಲ. ಗೀತೆ ತುಂಬಾ ದೀರ್ಘವಾಗಿದ್ದು ಹಾಡಲು ಬಹು ಸಮಯ ಹಿಡಿಯುತ್ತದೆ ಎಂದು ಅದನ್ನು ಸಣ್ಣದು ಮಾಡುವ ಪ್ರಯತ್ನವೂ ಆಗಿತ್ತು. 

ಚಿತ್ರ ಕೃಪೆ: ಅಂತರ್ಜಾಲ